ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನದ ವಶದಲ್ಲಿರುವ ‘ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)’ವನ್ನು ಮರಳಿ ಪಡೆಯುವುದಾಗಿ ಪ್ರತಿಪಾದಿಸಿದ್ದಾರೆ. ಪಾಕಿಸ್ತಾನ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ್ದು “ಭಾರತ ಪ್ರತಿ ನೆರೆಹೊರೆಯವರೊಂದಿಗೆ ಗಡಿ ವಿವಾದಗಳನ್ನು ಹುಟ್ಟುಹಾಕುತ್ತಿದೆ” ಎಂದು ಆರೋಪಿಸಿದೆ.
ಅವರು ಬಿಜೆಪಿಯ ಆನ್ ಲೈನ್ ಜನ-ಸಂವಾದ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಚೀನಾದೊಂದಿಗಿನ ಭಾರತದ ವಿವಾದಿತ ಗಡಿರೇಖೆ ಹಾಗೂ ನೇಪಾಳದೊಂದಿಗಿನ ತನ್ನ ಪ್ರಾದೇಶಿಕ ರೇಖೆಯ ಬಿಕ್ಕಟ್ಟು ಮುಂದುವರಿದಿದ್ದರೂ “ರಾಷ್ಟ್ರಾಭಿಮಾನದ” ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಆದರೆ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನನ್ನು ಮಾತುಕತೆಯ ಮೂಲಕ ಪರಿಹರಿಸಲಾಗುವುದು, ಚೀನಾ ಕೂಡಾ ಇದೇ ಆಶಯವನ್ನು ಹೊಂದಿದೆ ಎಂದರು.
“ಜಮ್ಮು ಕಾಶ್ಮೀರದ ಅಭಿವೃದ್ಧಿಯೇ ತನ್ನ ಆದ್ಯತೆ ಎಂಬ ಸಂದೇಶವನ್ನು ಕಳುಹಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ” ಎಂದು ರಕ್ಷಣಾ ಸಚಿವರು ಹೇಳಿದರು.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮರುಸಂಘಟಿಸಿದ ಕೇಂದ್ರ ಸರ್ಕಾರದ ನಿರ್ಧಾರವೂ ಅಲ್ಲಿನ ಅಭಿವೃದ್ದಿಗೆ ದಾರಿಮಾಡಿಕೊಟ್ಟಿದೆ ಎಂದ ಅವರು, ಮುಂದಿನ ಐದು ವರ್ಷಗಳಲ್ಲಿ ನಮ್ಮ ಪ್ರಯತ್ನದಿಂದ ಅಲ್ಲಿನ ಮುಖಚರ್ಯೆಯೆ ಬದಲಾಗಲಿದೆ, ಇದನ್ನು ಗಮನಿಸಿ ಪಿಒಕೆಯ ಜನರು ಕೂಡಾ ಭಾರತದ ಭಾಗವಾಗಲು ಬಯಸುತ್ತಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
“ಭವಿಷ್ಯದಲ್ಲಿ ಏನಾಗುತ್ತದೆ ಎಂದು ಕಾಯೋಣ. ಪಾಕಿಸ್ತಾನದ ಆಕ್ರಮಣದಿಂದ ಪಾರಾಗಲು ಹಾಗೂ ಭಾರತದೊಂದಿಗೆ ವಾಸಿಸಲು ಪಿಒಕೆ ಅವರಿಂದ ಬೇಡಿಕೆ ಬರುತ್ತದೆ. ಇದು ನಡೆದಾಗ ಸಂಸತ್ತಿನ ನಿರ್ಣಯ ಸಹ ಈಡೇರುತ್ತದೆ ”ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸಂಸತ್ತು ನಿರ್ಣಯವನ್ನು ಮಾಡಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ಚೀನಾದೊಂದಿಗೆ ಹಾಗೂ ನೇಪಾಳದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟನ್ನು ಉಲ್ಲೇಖಿಸಿ “ಭಾರತ ವಿಸ್ತರಣಾವಾದಿ ರಾಷ್ಟ್ರದಂತೆ ವರ್ತಿಸುತ್ತಿದೆ” ಎಂದು ಹೇಳಿದ್ದಾರೆ.
Perhaps with necessary introspection, the current Indian government would be less focussed on igniting border disputes with every neighbour, behaving like an expansionist nation, and more focused on serving the poor, downtrodden and minorities of India better. https://t.co/E90ErNcg7S
— Shah Mahmood Qureshi (@SMQureshiPTI) June 14, 2020
ಪೂರ್ವ ಲಡಾಕ್ನ ಪಂಗೊಂಗ್ ತ್ಸೋ ಸರೋವರದ ದಂಡೆಯಲ್ಲಿ ಮೇ 5 ರಂದು ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಭಾರತ-ಚೀನಾದ ಗಡಿಬಿಕ್ಕಟ್ಟು ಭುಗಿಲೆದ್ದಿತ್ತು. ಅಲ್ಲದೆ ನೇಪಾಳ ಕೂಡಾ ”ಭಾರತದ ವಶದಲ್ಲಿರುವ ತನ್ನ ಪ್ರದೇಶವನ್ನು ಬಿಟ್ಟು ಕೊಡಬೇಕು ಎಂದು ಹೇಳಿತ್ತಲ್ಲದೇ, ತನ್ನ ಸಂಸತ್ತಿನಲ್ಲಿ ಭಾರತದ ಭೂಪ್ರದೇಶವಿರುವ ನಕ್ಪೆಯನ್ನು ತನ್ನ ದೇಶದ ನಕ್ಷೆ ಎಂದು ಸಂಸತ್ತಿನಲ್ಲಿ ಅನುಮೋದನೆ ಮಾಡಿದೆ.