HomeUncategorizedಲಾಕ್‌ಡೌನ್‌ನಿಂದ ರೈತರಿಗೆ ಸಮಸ್ಯೆ: ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ರೈತ ಹೋರಾಟಗಾರರು & ಕೃಷಿ ತಜ್ಞರು

ಲಾಕ್‌ಡೌನ್‌ನಿಂದ ರೈತರಿಗೆ ಸಮಸ್ಯೆ: ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ರೈತ ಹೋರಾಟಗಾರರು & ಕೃಷಿ ತಜ್ಞರು

ಸಭೆ ನಡೆಸಿ ಯಡಿಯೂರಪ್ಪನವರು ಮುಂದಿಟ್ಟ ಪರಿಹಾರ ಕ್ರಮಗಳ ಬಗ್ಗೆ ಯಾರಿಗೂ ಸಹಮತವಿದ್ದಂತಿಲ್ಲ. ಇದ್ದುದರಲ್ಲಿ ಹಾಲಿನ ವಿಚಾರಕ್ಕೆ ಒಳ್ಳೆಯ ಕ್ರಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದನ್ನು ಬಿಟ್ಟರೆ ರೈಲೇ ಓಡದಿದ್ದಾಗ, ರೈಲಿನಲ್ಲಿ ಸಾಗಿಸುತ್ತೇವೆ ಎನ್ನುವುದು ಹಾಸ್ಯಾಸ್ಪದ ಎನ್ನುವುದು ಕೇಳಿ ಬಂದಿದೆ.

- Advertisement -
- Advertisement -

ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರಾಜ್ಯದ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪನವರು ಸರ್ಕಾರ ರೈತರ ನೆರವಿಗಿದೆ ಎಂದು ಹೇಳಿ ಹಲವು ಅಂಶಗಳ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಹಲವು ಕೃಷಿ ಕ್ಷೇತ್ರದ ತಜ್ಙರು ಹಾಗೂ ಗಣ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ನಿಂದ ಆದ ರೈತರ ಸಮಸ್ಯೆಗಳಿಗೆ ಸರಕಾರ ನೆರವಾಗುತ್ತೇವೆ- ಯಡಿಯೂರಪ್ಪ

ಕರ್ನಾಟಕ ಪ್ರಾಂತ ರೈತ ಸಂಘದ ಬಯ್ಯಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದು “ಇವೆಲ್ಲವು ಕಾಗದದಲ್ಲೇ ಉಳಿಯುತ್ತವೆ, ಪ್ರಾಕ್ಟಿಕಲ್ಲಾಗಿ ಜಾರಿಯಾಗುವ ಬಗ್ಗೆ ಸಿಕ್ಕಾಪಟ್ಟೆ ಸಮಸ್ಯೆಗಳಿವೆ. ವಾಸ್ತವವಾಗಿ ನಮ್ಮ ಸರ್ಕಾರ ರೈತರಿಂದಲೇ ನೇರವಾಗಿ ಖರೀದಿ ಮಾಡಿದ್ದರೆ ರೈತರಿಗೂ ಸ್ವಲ್ಪ ಅನುಕೂಲವಾಗುತ್ತಿತ್ತು. ಈಗಾಗಲೇ ನಾವು ಅದನ್ನು ಪ್ರಾರಂಭಿಸಿದ್ದೇವೆ ಎಂದು ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬರಲು ಸಾಕಷ್ಟು ಸಮಸ್ಯೆಗಳಿವೆ. ಹೇಗೆಂದರೆ ಉದಾಹರಣೆಗೆ ಕೋಲಾರದ ರೈತರ ಬೆಳೆಗಳು ಮಾರಾಟವಾಗಬೇಕಾದರೆ ಆಂಧ್ರಪ್ರದೇಶದಿಂದ ಹಾಗು ತಮಿಳುನಾಡಿನಿಂದ ವ್ಯಾಪಾರಿಗಳು ಬರಬೇಕಾಗುತ್ತದೆ, ಆದರೆ ಲಾಕ್‌ಡೌನ್‌ನಿಂದ ಅವರು ವ್ಯಾಪಾರಕ್ಕೆ ಬರುತ್ತಿಲ್ಲ. ಆದರೆ ಇಲ್ಲಿಂದ ಅಲ್ಲಿಗೆ ಸಾಗಿಸಲು ಗಡಿಗಳು ತೆರೆದಿದೆಯೆ ಇಲ್ಲವೆ ಎಂಬ ಅನಿಶ್ಚಿತತೆ ಇದೆ. ಆದ್ದರಿಂದ ಸರ್ಕಾರ ಇಲಾಖೆಗಳ ಮೂಲಕ ಏನಾದರು ಮಾಡಿರುತ್ತಿದ್ದರೆ ರೈತರಿಗೆ ಉಪಯೋಗ ಆಗುತ್ತಿತ್ತು” ಎಂದು ಹೇಳಿದ್ದಾರೆ.

“ಹಾಲಿಗೆ ಸಂಬಂಧಿಸಿದಂತೆ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಇಲಾಖೆಗಳಲ್ಲೇ ಈಗ ಸುಮ್ಮನೆ ಬಿದ್ದಿರುವ ವಾಹನಗಳನ್ನೇ ಬಳಸಿ ರೈತರ ಬೆಳೆಗಳನ್ನು ಸಾಗಿಸಬಹುದಿತ್ತು. ಉತ್ತರ ಕರ್ನಾಟಕದ ಕಡೆ ಆಂಧ್ರದಿಂದ ಕಟಾವು ಯಂತ್ರಗಳು ಬರದೆ ಬೆಳೆಗಳು ಹಾಗೆ ಇದೆ, ಈ ಸಮಸ್ಯೆ ಹೋಗಲಾಡಿಸಲು ಹಳ್ಳಿಗಳಲ್ಲಿ ನಿರುದ್ಯೋಗದಿಂದ ಇರುವ ಕೂಲಿ ಕಾರ್ಮಿಕರನ್ನು ಬಳಸಿ ಕಟಾವು ಆಗದಿರುವ ಬೆಳೆಗಳನ್ನು ಕಟಾವು ಮಾಡಿಸಿ, ಉದ್ಯೋಗ ಖಾತರಿ ಯೋಜನೆಯನ್ನುಇದಕ್ಕೂ ವಿಸ್ತರಿಸಿ ಕಾರ್ಮಿಕರಿಗೂ ಉದ್ಯೋಗವನ್ನು ಕೊಡಬಹುದಿತ್ತು. ಆದ್ದರಿಂದ ಈಗಾಗಲೆ ಸರ್ಕಾರ ಹೇಳಿರುವ ಈ ಯಾವುದೇ ಅಂಶಗಳು ಕಾರ್ಯಸಾಧುವಲ್ಲ” ಎಂದು ಬಯ್ಯಾರೆಡ್ಡಿ ಹೇಳಿದ್ದಾರೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ತಜ್ಞ ಕೆ.ಪಿ. ಸುರೇಶ್ “ಸರ್ಕಾರ ಹೀಗೆ ಹೇಳಿದ ಮಾತ್ರಕ್ಕೆ ಕುಸಿದ ಮಾರುಕಟ್ಟೆಗಳೇನು ಎದ್ದು ನಿಲ್ಲುವುದಿಲ್ಲ. ಯಾಕೆಂದರೆ ಸಾಗಣೆ ಮತ್ತು ಪೂರೈಕೆಯಿಲ್ಲದೆ ಸಂಪೂರ್ಣ ಕುಸಿದು ಬಿದ್ದಿರುವ ಮಾರುಕಟ್ಟೆಯಲ್ಲಿ ಸರಕುಗಳನ್ನು ಖರೀದಿಸಿ, ದಾಸ್ತಾನು ಇಟ್ಟು ವಿಲೇವಾರಿ ಮಾಡುವ ಕಷ್ಟದ ಪ್ರಯತ್ನ ಯಾರೂ ಮಾಡುವುದಿಲ್ಲ. ಈ ಸತ್ಯ ಸರ್ಕಾರಕ್ಕೆ ಗೊತ್ತಿದೆ ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ. ರೈಲುಗಳ ಮೂಲಕ ಕಳುಹಿಸುತ್ತೇನೆ ಎನ್ನುವ ಸರಕಾರ ರೈಲುಗಳು ಸಂಪೂರ್ಣವಾಗಿ ಬಂದ್‌ ಆಗಿರುವಾಗ ಎಲ್ಲಿಗೆ ಕಳುಹಿಸುತ್ತಾರೆ? ಬೇರೆ ರಾಜ್ಯಗಳಲ್ಲಿ ಇದಕ್ಕಿಂತಲೂ ಕಷ್ಟಕರವಾದ ಪರಿಸ್ಥಿತಿಯಿದೆ” ಎಂದು ಹೇಳಿದರು.

“ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬೆಳೆಗಳನ್ನು ಕೊಂಡುಕೊಳ್ಳಬೇಕಾಗಿದೆ, ಇದಕ್ಕೆ ರೈತರ ಬಳಿಯಿರುವ ಸ್ಮಾರ್ಟ್‌ಫೋನುಗಳನ್ನು ಬಳಸಿಕೊಂಡು ತೋಟಗಾರಿಕಾ ಕೃಷಿ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಕ ಮಾರುಕಟ್ಟೆ ಮಧ್ಯಪ್ರವೇಶ ನೀತಿಯ ಅನ್ವಯ, ರೈತ ತನ್ನ ಬೆಳೆಯ ಬಗ್ಗೆ ಇಲಾಖೆಗೆ ಮಾಹಿತಿ ಕೊಟ್ಟರೆ, ಇಲಾಖೆ ವಾಟ್ಸಪ್ ಮೂಲಕ ಲೊಕೇಶನ್ ಕಳುಹಿಸಬೇಕು. ಅಲ್ಲಿಗೆ ರೈತ ತಲುಪಿಸಿದರೆ ಅದನ್ನು ಕೊಳ್ಳುವ ವ್ಯವಸ್ಥೆ ಇಲಾಖೆ ಮಾಡಬೇಕಾಗುತ್ತದೆ. ಸರಕಾರ ಹಾಲಿನ ಬಗ್ಗೆ ತೆಗೆದುಕೊಂಡ ನೀತಿಯಂತೆ ಹಾಳಾಗಿ ಹೋಗುತ್ತಿರುವ ಹಣ್ಣುಗಳನ್ನು ಇದೇ ರೀತಿ ಬಡವರಿಗೆ ಹಂಚಬಹುದು. ಕಟಾವು ಮಾಡುವ ಮೊದಲು ರೈತ ಸರಕಾರಕ್ಕೆ ತಿಳಿಸಿದರೆ ಸರ್ಕಾರ ಹೇಳುವ ಕಡೆಗೆ ರೈತನೇ ತಂದು ಕೊಡುವಂತೆ ನೀತಿಗಳನ್ನು ಕೈಗೊಳ್ಳಬೇಕು. ಇದನ್ನು ನಡೆಸಲು ಸರಕಾರ ಮಧ್ಯಪ್ರವೇಶ ಮಾಡಬೇಕು” ಎಂದು ಕೆ.ಪಿ.ಸುರೇಶ್ ಹೇಳಿದ್ದಾರೆ.

ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ಅವರು “ಈಗಾಗಲೇ ರೈತರು ತಾವು ಬೆಳೆಗಳನ್ನು ಬೆಳೆದು ಒದ್ದಾಡುತ್ತಿದ್ದಾರೆ. ರೈತರಿಗೆ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ಹಿಂದೆಯೆ ಸಮಸ್ಯೆಗಳಿದ್ದವು ಈಗ ಇನ್ನೂ ಸಮಸ್ಯೆಗಳು ಜಾಸ್ತಿಯಾಗಿವೆ. ಈ ನಿಷೇಧಗಳು ತೆಗೆದ ತಕ್ಷಣ ಸಮಸ್ಯೆಗಳು ಬಗೆಹರಿಯುವುದಿಲ್ಲ” ಎಂದು ಹೇಳಿದ್ದಾರೆ.

’ಈಗ ಸರ್ಕಾರ ಮಾಡಬೇಕಾಗಿರುವುದೇನೆಂದರೆ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರತಕ್ಕಂತಹ ಸಾಗಾಣಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಯಾಕೆಂದರೆ ದೇಶಕ್ಕೆ ಅನ್ನ ಹಾಕುವುದು ಸರ್ಕಾರದ ಜವಾಬ್ದಾರಿ. ಇದಕ್ಕೆಲ್ಲ ಹೆಚ್ಚೆಂದರೆ ಸರ್ಕಾರಕ್ಕೆ 200 ಕೋಟಿಯಷ್ಟು ಖರ್ಚಾಗುತ್ತದೆ. ಹಳ್ಳಿಗಳಲ್ಲಿ ಇರುವ ಎಲ್ಲಾ ವಾಹನಗಳನ್ನು ಇದಕ್ಕೆ ಬಳಸಬಹುದು, ಇದರಿಂದ ಅವರಿಗೂ ಆದಾಯವಾಗುತ್ತದೆ. ಬೆಂಬಲ ಬೆಲೆ ಇಲ್ಲದ ಹಣ್ಣು-ತರಕಾರಿಗಳಿಗೆ ಅವುಗಳನ್ನು ಬೆಳೆಯಲು ಖರ್ಚಾದ ಹಣವನ್ನಾದರು ನೀಡುವಂತಿರಬೇಕು. ಎಪಿಎಂಸಿಗಳಲ್ಲಿ ಶೀತಲಿಕರಣದ ವ್ಯವಸ್ಥೆ ಸರ್ಕಾರ ಮಾಡಬೇಕು. ಅಲ್ಲದೆ ಅಡಮಾನ ಸಾಲಗಳನ್ನು ಬಡ್ಡಿರಹಿತವಾಗಿ ನೀಡಬೇಕು. ಇದರಿದಾಗಿ ರೈತರಿಗೆ ಉಪಕಾರವಾಗುತ್ತದೆ” ಎಂದು ಪ್ರಕಾಶ್ ಕಮ್ಮರಡಿ ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಇವರು ಮಾತನಾಡಿ “ಒಂದು ಕಡೆ ಲಾಕ್‌ಡೌನಾಗಿ ಜನರು ಕಷ್ಟ ಪಡುತ್ತಿದ್ದಾರೆ. ಈಗ ಹಣ್ಣು ತರಕಾರಿ ನೇರ ಮಾರುಕಟ್ಟೆಗೆ ದಾಸ್ತಾನು ಮಾಡುವಂತೆ ಕೇಳಿಕೊಂಡಿದ್ದೇವೆ. ಇದನ್ನು ಸರ್ಕಾರ ಮಾಡಬಹುದಾಗಿದೆ. ಈ ತಾತ್ಕಾಲಿಕ ಸಮಸ್ಯೆಗಳನ್ನು ಬಗೆಹರಿಸಲು ಅದದೇ ಸ್ಥಳಗಳಲ್ಲಿ ಬೆಳೆಗಳನ್ನು ನೇರವಾಗಿ ಖರೀದಿ ಮಾಡಿ ಸರ್ಕಾರವೇ ಬೇಕಾದ ಕಡೆಗೆ ಸಾಗಿಸಬೇಕು. ಇರುವಂತಹ ಸಂಪನ್ಮೂಲವನ್ನು ಕ್ರೋಢೀಕರಿಸಿ ಅದನ್ನು ತಲುಪಿಸಬೇಕು. ಈಗ ಹೇಳಿರುವ ವಿಷಯಗಳೆಲ್ಲವೂ ಯಥಾಸ್ಥಿತಿವಾದವಾಗಿದೆ. ಇವೆಲ್ಲ ಪರಿಣಾಮಕಾರಿಯಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಗಡಿಗಳೆಲ್ಲಾ ಮುಚ್ಚಲ್ಪಟ್ಟಿರುವುದರಿಂದ ತುಂಬಾ ಸಮಸ್ಯೆಗಳಾಗಿವೆ. ಕೇರಳ ಸರ್ಕಾರದ ಮಾದರಿಯಲ್ಲಿ ನಮ್ಮ ಸರ್ಕಾರವು ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಕಾಳಜಿಯಿಂದ ಕೆಲಸ ಮಾಡಿದ್ದಾರೆ ಎಂದು ಕಾಣುತ್ತದೆ. ಆದರೆ ಸಮಸ್ಯೆಗಳು ಹಾಗೆಯೇ ಉಳಿಯುತ್ತದೆ” ಎಂದು ಹೇಳಿದ್ದಾರೆ.

ಮಾಜಿ ಶಾಸಕರಾದ ಬಿ.ಆರ್‌.ಪಾಟಿಲ್ ಅವರು “ಸರ್ಕಾರ ಒಂದು ಕಡೆ ಹಣ್ಣು ತರಕಾರಿಗೆ ಬೇಡಿಕೆ ಕುಸಿದಿದೆ ಎಂದು ಹೇಳುತ್ತಿದೆ, ಆದರೆ ಸರಿಪಡಿಸಲು ಏನೂ ಮಾಡುತ್ತಿಲ್ಲ. ಅವರಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸುವ ಬಗ್ಗೆ ಎಲ್ಲಿಯು ಹೇಳುತ್ತಿಲ್ಲ. ರೈತರ ಬೆಳೆಗಳನ್ನು ರೈಲುಗಳಲ್ಲಿ ಕಳುಹಿಸುವ ಬಗ್ಗೆ ಸರ್ಕಾರ ಹೇಳುತ್ತಿದೆ ಆದರೆ ಈಗ ರೈಲು ಸಂಚಾರವೆ ಇಲ್ಲ. ಅಲ್ಲದೆ ದೊಡ್ಡ ಮಟ್ಟದಲ್ಲಿ ಖರೀದಿ ಮಾಡಿದರೆ, ಶೀತಲೀಕರಣ ಮಾಡುವ ವ್ಯವಸ್ಥೆ ಕೂಡಾ ಇಲ್ಲ. ಸರ್ಕಾರ ಹೇಳುವ ಯಾವುದೇ ವಿಷಯ ಕಾರ್ಯಸಾಧುವಲ್ಲ. ಟೊಮೆಟೊ ಸಂಸ್ಕರಣೆ ಬಗ್ಗೆ ಹೇಳಿದ್ದಾರೆ ಆದರೆ ಅದು ಒಂದು ಉದ್ದಿಮೆ, ಅದನ್ನು ಮಾಡುವವರು ಮಾಡೆ ಮಾಡುತ್ತಾರೆ. ಹಾಪ್‌ಕಾಮ್ಸ್ ಖರೀದಿ ಮಾಡುವ ಬಗ್ಗೆ ಹೇಳುತ್ತಾರೆ. ಆದರೆ ಹಾಪ್‌ಕಾಮ್ಸ್ ಹಳೆ ಮೈಸೂರು ಪ್ರದೇಶದಲ್ಲಿ ಮಾತ್ರ ಜಾಸ್ತಿ ಹಿಡಿತ ಹೊಂದಿದೆ ಮತ್ತು ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಹಾಪ್‌ಕಾಮ್ಸ್‌ ಇಲ್ಲ. ಆದರೆ ಇದರ ಬಗ್ಗೆ ಸರ್ಕಾರ ಮಾತನಾಡುವುದಿಲ್ಲ” ಎಂದು ಹೇಳಿದ್ದಾರೆ.

”ದಿನಸಿ ಅಂಗಡಿಗಳಲ್ಲಿ ಈಗಾಗಲೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ, ಆದರೆ ಅದರ ವಿರುದ್ದ ಇಲ್ಲಿವರೆಗು ಎಲ್ಲಿಯು ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಮುಖ್ಯವಾಗಿ ಸರ್ಕಾರ ಯಾವುದೆ ಹಣಕಾಸಿನ ತೊಂದರೆಯನ್ನು ತೆಗೆದುಕೊಂಡಿಲ್ಲ. ಬಿತ್ತನೆ ಬೀಜ,ರಸಗೊಬ್ಬರಗಳ ಬಗ್ಗೆ ಹೇಳಿದೆಯಾದರು ಅವೆಲ್ಲ ಪ್ರತೀ ವರ್ಷ ಇರುವಂತಹದ್ದು. ರೈಸ್ ಮಿಲ್ಲುಗಳನ್ನು ನಡೆಸುವಂತೆ ಸರ್ಕಾರ ಹೇಳಿದೆ. ಆದರೆ ಬೇಡಿಕೆ ಇದ್ದರೆ ಮಿಲ್ಲುಗಳು ಅದಾಗಿಯೆ ನಡೆಯುತ್ತವೆ. ಬೇಡಿಕೆ ಇಲ್ಲವೆಂದರೂ ಮಿಲ್ಲುಗಳನ್ನು ನಡೆಸಿ ನಾವು ಇದ್ದೇವೆ ಎಂದು ಸರ್ಕಾರ ಹೇಳುವುದಿಲ್ಲ. ಈಗಾಗಲೇ ಗುಲ್ಬರ್ಗಾದಲ್ಲಿ ಮುನ್ನೂರು ತೊಗರಿಬೇಳೆ ಮಿಲ್ಲುಗಳು ಬಂದ್ ಆಗಿವೆ, ಈ ಮಿಲ್ಲುಗಳ ಅಸೋಸಿಯೆಶನ್‌ಗಳು ಸರ್ಕಾರಕ್ಕೆ ಬೇಡಿಕೆಗೆ ಸಲ್ಲಿಸಿದ್ದರೂ ಸರ್ಕಾಕ್ಕೆ ಅದರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಇಲ್ಲಿಯೆ ಖರೀದಿ ಮಾಡಿ ಪಡಿತರ ಮೂಲಕ ಎರಡೆರಡು ಕೇಜಿ ಕೊಟ್ಟರೂ ಸಮಸ್ಯೆ ಪರಿಹಾರವಾಗುತ್ತದೆ. ಸರ್ಕಾರದ ಈ ನಿಲುವುಗಳಲ್ಲಿ ಯಾವುದೇ ವಿಶೇಷತೆ ಇಲ್ಲ” ಎಂದು ಬಿ.ಆರ್‌.ಪಾಟಿಲ್ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...