Homeಮುಖಪುಟರೈತ ಚಳವಳಿಗೆ ಹೊಸ ಭರವಸೆ ನೀಡಿದ ಕರ್ನಾಟಕದ ರೈತ ಮಹಾಪಂಚಾಯತ್‌ಗಳು

ರೈತ ಚಳವಳಿಗೆ ಹೊಸ ಭರವಸೆ ನೀಡಿದ ಕರ್ನಾಟಕದ ರೈತ ಮಹಾಪಂಚಾಯತ್‌ಗಳು

- Advertisement -
- Advertisement -

ಪಂಜಾಬ್, ಹರಿಯಾಣದ ರೈತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆ. ದೆಹಲಿಯನ್ನು ಸುತ್ತುವರೆದು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ರಾಜಸ್ಥಾನ, ಉತ್ತರಪ್ರದೇಶ ಮತ್ತು ಉತ್ತರಖಂಡ್‌ನ ರೈತರು ಅವರಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಾಗಲಿ, ಕರ್ನಾಟಕದಲ್ಲಾಗಲಿ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸುತ್ತಿಲ್ಲ ಎಂಬ ಕೊರಗು ಪ್ರಶ್ನೆಯ ರೀತಿಯಲ್ಲಿ ಹಲವರಲ್ಲಿತ್ತು. ಮಾರ್ಚ್ 20,21,22 ರಂದು ನಡೆದ ಕರ್ನಾಟಕದ ಮೊದಲ ಮಹಾಪಂಚಾಯತ್‌ಗಳು ಮತ್ತು ಬೆಂಗಳೂರಿನ ವಿಧಾನಸೌಧ ಚಲೋ ಕಾರ್ಯಕ್ರಮ ಆ ಕೊರಗನ್ನು ನಿವಾರಿಸಿದೆ. ಮಾತ್ರವಲ್ಲದೇ ಈ ರೈತ ಮಹಾಪಂಚಾಯತ್‌ಗಳು ಕರ್ನಾಟಕದ ರೈತ ಚಳವಳಿಗೆ ಹೊಸ ಭರವಸೆ ನೀಡಿವೆ.

ಮಾರ್ಚ್ 20ರಂದು ಶಿವಮೊಗ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ಕರ್ನಾಟಕದ ಮೊದಲ ರೈತ ಮಹಾಪಂಚಾಯತ್ ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾಯಿತು. ಶಿವಮೊಗ್ಗದಲ್ಲಿ 2003ರಲ್ಲಿ ನಡೆದ ಬಾಬಾಬುಡನ್ ಗಿರಿ ಹೋರಾಟದ 17 ವರ್ಷಗಳ ನಂತರದ ಬೃಹತ್ ಹೋರಾಟ ಇದಾಗಿತ್ತು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ನೂರಾರು ಸಂಘಟನೆಗಳು ಒಂದುಗೂಡಿ, ಹತ್ತಾರು ಸಾವಿರ ಜನರು ಭಾಗಿಯಾಗಿ ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದರು.

ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಸಮಾವೇಶ, ಒಂದು ಗಂಟೆ ತಡವಾಗಿ 5 ಗಂಟೆಗೆ ಆರಂಭವಾದರೂ ಯಾರೂ ವಿಚಲಿತರಾಗಲಿಲ್ಲ. ಮೈಸೂರಿನ ಜನಾರ್ಧನ್ ಜೆನ್ನಿ ಮತ್ತು ಚಿಂತನ್ ವಿಕಾಸ್‌ರವರ ಹೋರಾಟದ ಹಾಡುಗಳು ಜನರನ್ನು ಆಕರ್ಷಿಸಿದವು. ದೆಹಲಿ ರೈತ ಹೋರಾಟದ ಮುಖಂಡರಾದ ಡಾ.ದರ್ಶನ್ ಪಾಲ್, ಯುದುವೀರ್ ಸಿಂಗ್, ರಾಕೇಶ್ ಟಿಕಾಯತ್ ಮತ್ತು ಕುಲಬೀರ್ ಸಿಂಗ್‌ರವರು ವೇದಿಕೆಯೇರಿದೊಡನೆ ರೈತರು ಹರ್ಷೋದ್ಘಾರ ಮುಗಿಲುಮುಟ್ಟಿತು. ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ ಗಂಗಾಧರ್, ಶಿವಮೊಗ್ಗ ಮಹಾ ಪಂಚಾಯತ್‌ನ ಸಂಚಾಲಕರಾದ ಎಂ ಶ್ರೀಕಾಂತ್, ’ಸೂಡ’ದ (ಶಿವಮೊಗ್ಗ ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ) ಮಾಜಿ ಅಧ್ಯಕ್ಷರಾದ ಎನ್ ರಮೇಶ್, ಸ್ವರಾಜ್ ಇಂಡಿಯಾದ ವಕ್ತಾರರಾದ ಕೆ ಪಿ ಶ್ರೀಪಾಲ್, ದ.ಸ.ಸಂದ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ ಹೆಚ್ ಹಾಲೇಶಪ್ಪ, ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್. ಸಿ ಯೋಗೇಶ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್, ಮಧು ಬಂಗಾರಪ್ಪ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಯೊಬ್ಬರ ಭಾಷಣವನ್ನು ಸಮಾಧಾನದಿಂದ ಆಲಿಸಿದ ರೈತರು ಮತ್ತು ಸಾಮಾನ್ಯ ಜನರು ಜೋರಾದ ಚಪ್ಪಾಳೆ, ಜೈಕಾರಗಳೊಂದಿಗೆ ಪ್ರತಿಕ್ರಿಯಿಸಿದರು. ಮಹಾಪಂಚಾಯತ್ ನಿರ್ಣಯ ಮಂಡಿಸುವುದು ರಾತ್ರಿ 8 ಗಂಟೆಯಾದರೂ ರೈತರ್‍ಯಾರು ತಮ್ಮ ಕುರ್ಚಿಗಳಿಂದ ಕದಲಿರಲಿಲ್ಲ. ಅಷ್ಟರಮಟ್ಟಿಗೆ ರೈತರು ಮತ್ತು ನೆರೆದಿದ್ದವರೆಲ್ಲಾ ಈ ಹೋರಾಟದಲ್ಲಿ ಮಿಳಿತಗೊಂಡಿದ್ದರು.

“ದೆಹಲಿ ರೈತ ಹೋರಾಟ ಮತ್ತು ನಂತರದ ಕಿಸಾನ್ ಮಹಾಪಂಚಾಯತ್‌ಗಳಿಂದ ಸ್ಫೂರ್ತಿ ಪಡೆದು, ಸಮಾಜವಾದಿ ಹೋರಾಟದ ನೆಲವೆಂಬ ಹೆಗ್ಗಳಿಕೆಯ ಶಿವಮೊಗ್ಗದಲ್ಲಿ ಕರ್ನಾಟಕದ ಮೊದಲ ರೈತ ಮಹಾಪಂಚಾಯತ್ ನಡೆಸಬೇಕೆಂದುಕೊಂಡಾಗಲೇ ಇದು ಯಶಸ್ವಿಯಾಗುತ್ತದೆ ಎಂಬ ಖಾತ್ರಿ ನಮಗಿತ್ತು. ಈ ಕುರಿತು ಕರೆದ ಪೂರ್ವಭಾವಿ ಸಭೆಗೆ 200ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿ ಅಚ್ಚರಿ ಮೂಡಿಸಿದ್ದರು. ತದನಂತರ ಶಿವಮೊಗ್ಗದ 8 ಜನರ ತಂಡ ದೆಹಲಿ ಗಡಿಗಳಿಗೆ ಭೇಟಿ ನೀಡಿ ಅಲ್ಲಿನ ರೈತ ಮುಖಂಡರೊಂದಿಗೆ ಚರ್ಚಿಸಿ ಮಹಾಪಂಚಾಯತ್‌ಗಳಿಗೆ ಆಹ್ವಾನ ನೀಡಿದಾಗ ಅವರು ಭಾಗವಹಿಸಲು ಪ್ರೀತಿಯಿಂದಲೇ ಒಪ್ಪಿಕೊಂಡರು. 1980-90ರ ದಶಕದ ಕರ್ನಾಟಕದ ರೈತ ಚಳವಳಿಯ ನೇತಾರ ಪ್ರೊ.ನಂಜುಂಡಸ್ವಾಮಿ ಮತ್ತು ಉತ್ತರ ಪ್ರದೇಶದ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್‌ರವರ ಹೋರಾಟದ ಕಿಚ್ಚು ಹಾಗೂ ಅವರಿಬ್ಬರ ನಡುವಿನ ಗಳೆತನ ಅವರನ್ನು ಕರ್ನಾಟಕದೆಡೆಗೆ ತುಡಿಯವಂತೆ ಮಾಡಿದ್ದವು. ನಂತರ ಒಂದು ತಿಂಗಳ ಕಾಲ ಮಹಾಪಂಚಾಯತ್ ತಯಾರಿಯಲ್ಲಿ ಶಿವಮೊಗ್ಗದ ಎಲ್ಲಾ ಸಂಘಟನೆಗಳು ತಮ್ಮೊಳಗಿನ ಭಿನ್ನತೆ ಬದಿಗೊತ್ತಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಕೆಲಸ ಮಾಡಿದ್ದೇ ದೊಡ್ಡ ಯಶಸ್ಸು ಪಡೆಯಲು ಕಾರಣ” ಎನ್ನುತ್ತಾರೆ ಸಂಘಟಕರಲ್ಲೊಬ್ಬರಾದ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್.

“ನಾವು ರೈತರಿಗೆ, ದಲಿತರಿಗೆ, ಕಾರ್ಮಿಕರಿಗೆ, ರಸ್ತೆ ಬದಿ ವ್ಯಾಪರಿಗಳಿಗೆ, ಆಟೋ ಚಾಲಕರಿಗೆ, ಮಹಿಳಾ ಸಂಘಗಳಿಗೆ ಮಹಾಪಂಚಾಯತ್‌ನಲ್ಲಿ ಭಾಗವಹಿಸುವಂತೆ ಕರೆ ನೀಡಿದೆವು. ಶಿವಮೊಗ್ಗದ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಚಾರ ಸಭೆ ನಡೆಸಿದೆವು. ಆದರೆ ಅಲ್ಲಿ ಸ್ಥಳೀಯ ರೈತ ಮುಖಂಡರಲ್ಲಿ ಈ ಕಾಯ್ದೆಗಳ ಬಗ್ಗೆ ಸಿಟ್ಟು ಎಷ್ಟಿತ್ತೆಂದರೆ ಅವರು ತಮ್ಮ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಹೋರಾಟದ ವಿಚಾರ ಒಯ್ದರು. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ರೈತರು ಮತ್ತು ಜನಸಾಮಾನ್ಯರು ಹೋರಾಟಕ್ಕೆ ಅಣಿನೆರೆದರು ಮಾತ್ರವಲ್ಲ ಇಡೀ ರೈತ ಮಹಾಪಂಚಾಯತ್ ಮುಗಿಯುವವರೆಗೂ ತದೇಕಚಿತ್ತದಿಂದ ಭಾಗವಹಿಸಿದರು. ಮಹಾಪಂಚಾಯತ್ ನಂತರ ಎಲ್ಲಾ ರೈತ-ದಲಿತ-ಕಾರ್ಮಿಕ ಮುಖಂಡರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ನಾವು ರೈತ ವಿಚಾರ ಇಟ್ಟುಕೊಂಡು ಗ್ರಾಮಗಳಿಗೆ ಹೋದರೆ ರೈತರು ಹೋರಾಟಕ್ಕೆ ಬರುತ್ತಾರೆ ಎಂಬುದನ್ನು ಈ ಅಭೂತಪೂರ್ವ ಪ್ರತಿಕ್ರಿಯೆಯಿಂದ ಸಾಬೀತಾಗಿದೆ” ಎನ್ನುತ್ತಾರೆ ಕೆ.ಎಲ್ ಅಶೋಕ್.

ಒಟ್ಟಾರೆಯಾಗಿ ದೆಹಲಿ ರೈತ ಹೋರಾಟದ ಸ್ಫೂರ್ತಿ ಮತ್ತು ಅದಕ್ಕೆ ಸ್ಪಂದಿಸಿ ಹೋರಾಟವನ್ನು ದಕ್ಷಿಣಭಾರತಕ್ಕೆ ಕರೆತಂದಿರುವ ಶಿವಮೊಗ್ಗ ರೈತ ಮಹಾಪಂಚಾಯತ್ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರತಿ ಸಂಘಟನೆಗಳು ಹೊಸ ಹುಮ್ಮಸ್ಸಿನಿಂದ ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಒಗ್ಗಟ್ಟು ಕಾಪಾಡಿಕೊಂಡು ರೈತ ಚಳವಳಿ ವಿಸ್ತರಿಸುವುದು ಹೇಗೆ ಎಂದು ಎಲ್ಲಾ ಸಂಘಟನೆಗಳು ನಾಯಕರು ಆಲೋಚನೆಯಲ್ಲಿದ್ದಾರೆ. ಇದರ ಬೆನ್ನಿಗೆ ಹಾವೇರಿ ರೈತ ಮಹಾಪಂಚಾಯತ್ ನಡೆದಿದೆ. ಮಾರ್ಚ್ 30 ರಂದು ಬೆಳಗಾವಿಯಲ್ಲಿ ಮಹಾಪಂಚಾಯತ್ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಹೋರಾಟದ ಕಿಡಿ ಎಲ್ಲೆಡೆ ಹರಡುತ್ತಿದೆ.

ಹಾವೇರಿ ರೈತ ಮಹಾಪಂಚಾಯತ್

2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 8 ದಿನಗಳಲ್ಲಿಯೆ ರಸಗೊಬ್ಬರಕ್ಕಾಗಿ ಪ್ರತಿಭಟಿಸಿದ ರೈತರ ಮೇಲೆ ಗೋಲಿಬಾರ್‌ಗೆ ಆದೇಶ ನೀಡಿತ್ತು. ಈ ಘಟನೆಯಲ್ಲಿ ಇಬ್ಬರನ್ನು ಕೊಂದು ಹಾಕಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರೆ ಇಂದು ಸಹ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ರೈತರು ಆ ಕರಾಳ ದಿನವನ್ನು ಮಾತ್ರ ಮರೆತಿಲ್ಲ. ಆ ಆಕ್ರೋಶ ಮಾರ್ಚ್ 21ರಂದು ಜರುಗಿದ ಹಾವೇರಿ ರೈತ ಮಹಾಪಂಚಾಯತ್‌ನಲ್ಲಿ ವ್ಯಕ್ತವಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾವಿರಾರು ಜನ ಒಟ್ಟುಗೂಡಿ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಮಾಡಿರುವ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಬೃಹತ್ ಮೆರವಣಿಗೆ ನಡೆಸಿ ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗಲಾಯಿತು. ರೈತ ಮುಖಂಡರಾದ ರಾಮಣ್ಣ ಕೆಂಚಳ್ಳಿ, ಮಲ್ಲಿಕಾರ್ಜುನ್ ಬಳ್ಳಾರಿ, ಬಾಬಾಗೌಡ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ ಗಂಗಾಧರ್ ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ರಾಕೇಶ್ ಟಿಕಾಯತ್ ಮತ್ತು ಯುದುವೀರ್ ಸಿಂಗ್ ಮಾತನಾಡಿದರು.

ಬೆಂಗಳೂರು ವಿಧಾನಸೌಧ ಚಲೋ

ಈ ಎರಡು ರೈತ ಮಹಾಪಂಚಾಯತ್‌ಗಳ ಸಮಾರೋಪದ ರೀತಿಯಲ್ಲಿ ಬೆಂಗಳೂರಿನಲ್ಲಿ ಮಾರ್ಚ್ 22ರಂದು ವಿಧಾನಸೌಧ ಚಲೋಗೆ ಕರೆ ನೀಡಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿ ಭೂಮಿ ಕೊಳ್ಳುವ ಮಿತಿ ಹೆಚ್ಚಳಕ್ಕೆ ಸಣ್ಣ ರೈತರು ಮತ್ತು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದಲೂ ಬೃಹತ್ ರೈತ ಹೋರಾಟ ನಡೆಯುತ್ತಿದೆ. ಆದರೆ ಸಿಎಂ ಯಡಿಯೂರಪ್ಪ ರೈತರನ್ನು ಕರೆದು ಸಭೆ ನಡೆಸುವ ಕನಿಷ್ಠ ಸೌಜನ್ಯ ಕೂಡ ತೋರಿಲ್ಲ. ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿಯೂ ಕೂಡ ರೈತರ ಹಕ್ಕೊತ್ತಾಯ ಪತ್ರ ಸ್ವೀಕರಿಸಲು ಸಿಎಂ ಬಾರದೆ, ರೈತರ ಬಗ್ಗೆ ಹಲವು ಬಾರಿ ಅನುಚಿತ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಟೀಕೆಗೆ ಗುರಿಯಾಗಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್‌ರನ್ನು ಕಳಿಸಿದ್ದಕ್ಕೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೋರಾಟ: ಮಾ.‌ 31 ಕ್ಕೆ ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...