Homeಮುಖಪುಟರೈತ ಚಳವಳಿಗೆ ಹೊಸ ಭರವಸೆ ನೀಡಿದ ಕರ್ನಾಟಕದ ರೈತ ಮಹಾಪಂಚಾಯತ್‌ಗಳು

ರೈತ ಚಳವಳಿಗೆ ಹೊಸ ಭರವಸೆ ನೀಡಿದ ಕರ್ನಾಟಕದ ರೈತ ಮಹಾಪಂಚಾಯತ್‌ಗಳು

- Advertisement -
- Advertisement -

ಪಂಜಾಬ್, ಹರಿಯಾಣದ ರೈತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆ. ದೆಹಲಿಯನ್ನು ಸುತ್ತುವರೆದು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ರಾಜಸ್ಥಾನ, ಉತ್ತರಪ್ರದೇಶ ಮತ್ತು ಉತ್ತರಖಂಡ್‌ನ ರೈತರು ಅವರಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಾಗಲಿ, ಕರ್ನಾಟಕದಲ್ಲಾಗಲಿ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸುತ್ತಿಲ್ಲ ಎಂಬ ಕೊರಗು ಪ್ರಶ್ನೆಯ ರೀತಿಯಲ್ಲಿ ಹಲವರಲ್ಲಿತ್ತು. ಮಾರ್ಚ್ 20,21,22 ರಂದು ನಡೆದ ಕರ್ನಾಟಕದ ಮೊದಲ ಮಹಾಪಂಚಾಯತ್‌ಗಳು ಮತ್ತು ಬೆಂಗಳೂರಿನ ವಿಧಾನಸೌಧ ಚಲೋ ಕಾರ್ಯಕ್ರಮ ಆ ಕೊರಗನ್ನು ನಿವಾರಿಸಿದೆ. ಮಾತ್ರವಲ್ಲದೇ ಈ ರೈತ ಮಹಾಪಂಚಾಯತ್‌ಗಳು ಕರ್ನಾಟಕದ ರೈತ ಚಳವಳಿಗೆ ಹೊಸ ಭರವಸೆ ನೀಡಿವೆ.

ಮಾರ್ಚ್ 20ರಂದು ಶಿವಮೊಗ್ಗದ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ಕರ್ನಾಟಕದ ಮೊದಲ ರೈತ ಮಹಾಪಂಚಾಯತ್ ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾಯಿತು. ಶಿವಮೊಗ್ಗದಲ್ಲಿ 2003ರಲ್ಲಿ ನಡೆದ ಬಾಬಾಬುಡನ್ ಗಿರಿ ಹೋರಾಟದ 17 ವರ್ಷಗಳ ನಂತರದ ಬೃಹತ್ ಹೋರಾಟ ಇದಾಗಿತ್ತು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ನೂರಾರು ಸಂಘಟನೆಗಳು ಒಂದುಗೂಡಿ, ಹತ್ತಾರು ಸಾವಿರ ಜನರು ಭಾಗಿಯಾಗಿ ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದರು.

ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಸಮಾವೇಶ, ಒಂದು ಗಂಟೆ ತಡವಾಗಿ 5 ಗಂಟೆಗೆ ಆರಂಭವಾದರೂ ಯಾರೂ ವಿಚಲಿತರಾಗಲಿಲ್ಲ. ಮೈಸೂರಿನ ಜನಾರ್ಧನ್ ಜೆನ್ನಿ ಮತ್ತು ಚಿಂತನ್ ವಿಕಾಸ್‌ರವರ ಹೋರಾಟದ ಹಾಡುಗಳು ಜನರನ್ನು ಆಕರ್ಷಿಸಿದವು. ದೆಹಲಿ ರೈತ ಹೋರಾಟದ ಮುಖಂಡರಾದ ಡಾ.ದರ್ಶನ್ ಪಾಲ್, ಯುದುವೀರ್ ಸಿಂಗ್, ರಾಕೇಶ್ ಟಿಕಾಯತ್ ಮತ್ತು ಕುಲಬೀರ್ ಸಿಂಗ್‌ರವರು ವೇದಿಕೆಯೇರಿದೊಡನೆ ರೈತರು ಹರ್ಷೋದ್ಘಾರ ಮುಗಿಲುಮುಟ್ಟಿತು. ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಕೆ.ಟಿ ಗಂಗಾಧರ್, ಶಿವಮೊಗ್ಗ ಮಹಾ ಪಂಚಾಯತ್‌ನ ಸಂಚಾಲಕರಾದ ಎಂ ಶ್ರೀಕಾಂತ್, ’ಸೂಡ’ದ (ಶಿವಮೊಗ್ಗ ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ) ಮಾಜಿ ಅಧ್ಯಕ್ಷರಾದ ಎನ್ ರಮೇಶ್, ಸ್ವರಾಜ್ ಇಂಡಿಯಾದ ವಕ್ತಾರರಾದ ಕೆ ಪಿ ಶ್ರೀಪಾಲ್, ದ.ಸ.ಸಂದ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ ಹೆಚ್ ಹಾಲೇಶಪ್ಪ, ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಹೆಚ್. ಸಿ ಯೋಗೇಶ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್, ಮಧು ಬಂಗಾರಪ್ಪ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಯೊಬ್ಬರ ಭಾಷಣವನ್ನು ಸಮಾಧಾನದಿಂದ ಆಲಿಸಿದ ರೈತರು ಮತ್ತು ಸಾಮಾನ್ಯ ಜನರು ಜೋರಾದ ಚಪ್ಪಾಳೆ, ಜೈಕಾರಗಳೊಂದಿಗೆ ಪ್ರತಿಕ್ರಿಯಿಸಿದರು. ಮಹಾಪಂಚಾಯತ್ ನಿರ್ಣಯ ಮಂಡಿಸುವುದು ರಾತ್ರಿ 8 ಗಂಟೆಯಾದರೂ ರೈತರ್‍ಯಾರು ತಮ್ಮ ಕುರ್ಚಿಗಳಿಂದ ಕದಲಿರಲಿಲ್ಲ. ಅಷ್ಟರಮಟ್ಟಿಗೆ ರೈತರು ಮತ್ತು ನೆರೆದಿದ್ದವರೆಲ್ಲಾ ಈ ಹೋರಾಟದಲ್ಲಿ ಮಿಳಿತಗೊಂಡಿದ್ದರು.

“ದೆಹಲಿ ರೈತ ಹೋರಾಟ ಮತ್ತು ನಂತರದ ಕಿಸಾನ್ ಮಹಾಪಂಚಾಯತ್‌ಗಳಿಂದ ಸ್ಫೂರ್ತಿ ಪಡೆದು, ಸಮಾಜವಾದಿ ಹೋರಾಟದ ನೆಲವೆಂಬ ಹೆಗ್ಗಳಿಕೆಯ ಶಿವಮೊಗ್ಗದಲ್ಲಿ ಕರ್ನಾಟಕದ ಮೊದಲ ರೈತ ಮಹಾಪಂಚಾಯತ್ ನಡೆಸಬೇಕೆಂದುಕೊಂಡಾಗಲೇ ಇದು ಯಶಸ್ವಿಯಾಗುತ್ತದೆ ಎಂಬ ಖಾತ್ರಿ ನಮಗಿತ್ತು. ಈ ಕುರಿತು ಕರೆದ ಪೂರ್ವಭಾವಿ ಸಭೆಗೆ 200ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿ ಅಚ್ಚರಿ ಮೂಡಿಸಿದ್ದರು. ತದನಂತರ ಶಿವಮೊಗ್ಗದ 8 ಜನರ ತಂಡ ದೆಹಲಿ ಗಡಿಗಳಿಗೆ ಭೇಟಿ ನೀಡಿ ಅಲ್ಲಿನ ರೈತ ಮುಖಂಡರೊಂದಿಗೆ ಚರ್ಚಿಸಿ ಮಹಾಪಂಚಾಯತ್‌ಗಳಿಗೆ ಆಹ್ವಾನ ನೀಡಿದಾಗ ಅವರು ಭಾಗವಹಿಸಲು ಪ್ರೀತಿಯಿಂದಲೇ ಒಪ್ಪಿಕೊಂಡರು. 1980-90ರ ದಶಕದ ಕರ್ನಾಟಕದ ರೈತ ಚಳವಳಿಯ ನೇತಾರ ಪ್ರೊ.ನಂಜುಂಡಸ್ವಾಮಿ ಮತ್ತು ಉತ್ತರ ಪ್ರದೇಶದ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್‌ರವರ ಹೋರಾಟದ ಕಿಚ್ಚು ಹಾಗೂ ಅವರಿಬ್ಬರ ನಡುವಿನ ಗಳೆತನ ಅವರನ್ನು ಕರ್ನಾಟಕದೆಡೆಗೆ ತುಡಿಯವಂತೆ ಮಾಡಿದ್ದವು. ನಂತರ ಒಂದು ತಿಂಗಳ ಕಾಲ ಮಹಾಪಂಚಾಯತ್ ತಯಾರಿಯಲ್ಲಿ ಶಿವಮೊಗ್ಗದ ಎಲ್ಲಾ ಸಂಘಟನೆಗಳು ತಮ್ಮೊಳಗಿನ ಭಿನ್ನತೆ ಬದಿಗೊತ್ತಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಕೆಲಸ ಮಾಡಿದ್ದೇ ದೊಡ್ಡ ಯಶಸ್ಸು ಪಡೆಯಲು ಕಾರಣ” ಎನ್ನುತ್ತಾರೆ ಸಂಘಟಕರಲ್ಲೊಬ್ಬರಾದ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್.

“ನಾವು ರೈತರಿಗೆ, ದಲಿತರಿಗೆ, ಕಾರ್ಮಿಕರಿಗೆ, ರಸ್ತೆ ಬದಿ ವ್ಯಾಪರಿಗಳಿಗೆ, ಆಟೋ ಚಾಲಕರಿಗೆ, ಮಹಿಳಾ ಸಂಘಗಳಿಗೆ ಮಹಾಪಂಚಾಯತ್‌ನಲ್ಲಿ ಭಾಗವಹಿಸುವಂತೆ ಕರೆ ನೀಡಿದೆವು. ಶಿವಮೊಗ್ಗದ ಎಲ್ಲಾ ತಾಲ್ಲೂಕುಗಳಲ್ಲಿ ಪ್ರಚಾರ ಸಭೆ ನಡೆಸಿದೆವು. ಆದರೆ ಅಲ್ಲಿ ಸ್ಥಳೀಯ ರೈತ ಮುಖಂಡರಲ್ಲಿ ಈ ಕಾಯ್ದೆಗಳ ಬಗ್ಗೆ ಸಿಟ್ಟು ಎಷ್ಟಿತ್ತೆಂದರೆ ಅವರು ತಮ್ಮ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಹೋರಾಟದ ವಿಚಾರ ಒಯ್ದರು. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ರೈತರು ಮತ್ತು ಜನಸಾಮಾನ್ಯರು ಹೋರಾಟಕ್ಕೆ ಅಣಿನೆರೆದರು ಮಾತ್ರವಲ್ಲ ಇಡೀ ರೈತ ಮಹಾಪಂಚಾಯತ್ ಮುಗಿಯುವವರೆಗೂ ತದೇಕಚಿತ್ತದಿಂದ ಭಾಗವಹಿಸಿದರು. ಮಹಾಪಂಚಾಯತ್ ನಂತರ ಎಲ್ಲಾ ರೈತ-ದಲಿತ-ಕಾರ್ಮಿಕ ಮುಖಂಡರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ನಾವು ರೈತ ವಿಚಾರ ಇಟ್ಟುಕೊಂಡು ಗ್ರಾಮಗಳಿಗೆ ಹೋದರೆ ರೈತರು ಹೋರಾಟಕ್ಕೆ ಬರುತ್ತಾರೆ ಎಂಬುದನ್ನು ಈ ಅಭೂತಪೂರ್ವ ಪ್ರತಿಕ್ರಿಯೆಯಿಂದ ಸಾಬೀತಾಗಿದೆ” ಎನ್ನುತ್ತಾರೆ ಕೆ.ಎಲ್ ಅಶೋಕ್.

ಒಟ್ಟಾರೆಯಾಗಿ ದೆಹಲಿ ರೈತ ಹೋರಾಟದ ಸ್ಫೂರ್ತಿ ಮತ್ತು ಅದಕ್ಕೆ ಸ್ಪಂದಿಸಿ ಹೋರಾಟವನ್ನು ದಕ್ಷಿಣಭಾರತಕ್ಕೆ ಕರೆತಂದಿರುವ ಶಿವಮೊಗ್ಗ ರೈತ ಮಹಾಪಂಚಾಯತ್ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರತಿ ಸಂಘಟನೆಗಳು ಹೊಸ ಹುಮ್ಮಸ್ಸಿನಿಂದ ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಒಗ್ಗಟ್ಟು ಕಾಪಾಡಿಕೊಂಡು ರೈತ ಚಳವಳಿ ವಿಸ್ತರಿಸುವುದು ಹೇಗೆ ಎಂದು ಎಲ್ಲಾ ಸಂಘಟನೆಗಳು ನಾಯಕರು ಆಲೋಚನೆಯಲ್ಲಿದ್ದಾರೆ. ಇದರ ಬೆನ್ನಿಗೆ ಹಾವೇರಿ ರೈತ ಮಹಾಪಂಚಾಯತ್ ನಡೆದಿದೆ. ಮಾರ್ಚ್ 30 ರಂದು ಬೆಳಗಾವಿಯಲ್ಲಿ ಮಹಾಪಂಚಾಯತ್ ನಡೆಸಲು ರೈತರು ತೀರ್ಮಾನಿಸಿದ್ದಾರೆ. ಹೋರಾಟದ ಕಿಡಿ ಎಲ್ಲೆಡೆ ಹರಡುತ್ತಿದೆ.

ಹಾವೇರಿ ರೈತ ಮಹಾಪಂಚಾಯತ್

2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 8 ದಿನಗಳಲ್ಲಿಯೆ ರಸಗೊಬ್ಬರಕ್ಕಾಗಿ ಪ್ರತಿಭಟಿಸಿದ ರೈತರ ಮೇಲೆ ಗೋಲಿಬಾರ್‌ಗೆ ಆದೇಶ ನೀಡಿತ್ತು. ಈ ಘಟನೆಯಲ್ಲಿ ಇಬ್ಬರನ್ನು ಕೊಂದು ಹಾಕಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರೆ ಇಂದು ಸಹ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ರೈತರು ಆ ಕರಾಳ ದಿನವನ್ನು ಮಾತ್ರ ಮರೆತಿಲ್ಲ. ಆ ಆಕ್ರೋಶ ಮಾರ್ಚ್ 21ರಂದು ಜರುಗಿದ ಹಾವೇರಿ ರೈತ ಮಹಾಪಂಚಾಯತ್‌ನಲ್ಲಿ ವ್ಯಕ್ತವಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾವಿರಾರು ಜನ ಒಟ್ಟುಗೂಡಿ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಮಾಡಿರುವ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಬೃಹತ್ ಮೆರವಣಿಗೆ ನಡೆಸಿ ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗಲಾಯಿತು. ರೈತ ಮುಖಂಡರಾದ ರಾಮಣ್ಣ ಕೆಂಚಳ್ಳಿ, ಮಲ್ಲಿಕಾರ್ಜುನ್ ಬಳ್ಳಾರಿ, ಬಾಬಾಗೌಡ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ ಗಂಗಾಧರ್ ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ರಾಕೇಶ್ ಟಿಕಾಯತ್ ಮತ್ತು ಯುದುವೀರ್ ಸಿಂಗ್ ಮಾತನಾಡಿದರು.

ಬೆಂಗಳೂರು ವಿಧಾನಸೌಧ ಚಲೋ

ಈ ಎರಡು ರೈತ ಮಹಾಪಂಚಾಯತ್‌ಗಳ ಸಮಾರೋಪದ ರೀತಿಯಲ್ಲಿ ಬೆಂಗಳೂರಿನಲ್ಲಿ ಮಾರ್ಚ್ 22ರಂದು ವಿಧಾನಸೌಧ ಚಲೋಗೆ ಕರೆ ನೀಡಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿ ಭೂಮಿ ಕೊಳ್ಳುವ ಮಿತಿ ಹೆಚ್ಚಳಕ್ಕೆ ಸಣ್ಣ ರೈತರು ಮತ್ತು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದಲೂ ಬೃಹತ್ ರೈತ ಹೋರಾಟ ನಡೆಯುತ್ತಿದೆ. ಆದರೆ ಸಿಎಂ ಯಡಿಯೂರಪ್ಪ ರೈತರನ್ನು ಕರೆದು ಸಭೆ ನಡೆಸುವ ಕನಿಷ್ಠ ಸೌಜನ್ಯ ಕೂಡ ತೋರಿಲ್ಲ. ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿಯೂ ಕೂಡ ರೈತರ ಹಕ್ಕೊತ್ತಾಯ ಪತ್ರ ಸ್ವೀಕರಿಸಲು ಸಿಎಂ ಬಾರದೆ, ರೈತರ ಬಗ್ಗೆ ಹಲವು ಬಾರಿ ಅನುಚಿತ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಟೀಕೆಗೆ ಗುರಿಯಾಗಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್‌ರನ್ನು ಕಳಿಸಿದ್ದಕ್ಕೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೋರಾಟ: ಮಾ.‌ 31 ಕ್ಕೆ ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...

ಕ್ಷುಲ್ಲಕ ಕಾರಣಕ್ಕೆ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಿರಿಯ ವಯಸ್ಕರು ಸೇರಿದಂತೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ದುಷ್ಕರ್ಮಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 15ರಂದು ಜಿಲ್ಲೆಯ ರುದಾಯನ್ ಪಟ್ಟಣದಲ್ಲಿ...

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...