ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ಸಂದರ್ಭದಲ್ಲಿ ರಾಜ್ಯದ ಶಸ್ತ್ರಾಸ್ತ್ರ ಸಂಗ್ರಹಾಲಯಗಳಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ತಂದೊಪ್ಪಿಸಲು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ನಿಗದಿಪಡಿಸಿದ ಗಡುವಿನ ಕೊನೆಯ ದಿನವಾದ ಗುರುವಾರ (ಫೆ.27) ಮೈತೇಯಿ ಗುಂಪಿನ ಆರಂಬೈ ತೆಂಗೋಲ್ ಇಂಫಾಲ್ನಲ್ಲಿ ಭದ್ರತಾ ಪಡೆಗಳ ಮುಂದೆ 246 ಶಸ್ತ್ರಾಸ್ತ್ರಗಳನ್ನು ಶರಣಾಗಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇಂಫಾಲ್ ಪಶ್ಚಿಮದಲ್ಲಿ 1ನೇ ಮಣಿಪುರ ರೈಫಲ್ಸ್ ಪಡೆಗೆ ಆರಂಬೈ ತೆಂಗೋಲ್ ಶಸ್ತ್ರಾಸ್ತ್ರಗಳನ್ನು ಶರಣಾಗಿಸಿದೆ. ರಾಜ್ಯದಾದ್ಯಂತ ಹಲವಾರು ಸ್ಥಳಗಳಲ್ಲಿ ಇನ್ನೂ 61 ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದ್ದು, ಒಟ್ಟು ಶರಣಾಗಿಸಿದ ಶಸ್ತ್ರಾಸ್ತ್ರಗಳ ಸಂಖ್ಯೆ 307ಕ್ಕೆ ತಲುಪಿದೆ.
“ಇಂತಹ ಸ್ವಯಂಪ್ರೇರಿತ ಶಸ್ತ್ರಾಸ್ತ್ರಗಳ ಶರಣಾಗತಿಯು ರಾಜ್ಯದಲ್ಲಿ ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ” ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
— Manipur Police (@manipur_police) February 27, 2025
ಮಣಿಪುರದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಶರಣಾಗಿಸಿದ ಅಕ್ರಮವಾಗಿ ಹೊಂದಿದ್ದ ಶಸ್ತ್ರಾಸ್ತ್ರಗಳ ಅತಿದೊಡ್ಡ ಸೆಟ್ ಇದಾಗಿದೆ.
ಎಲ್ಲಾ ಸಮುದಾಯಗಳ ಜನರು ಒಂದು ವಾರದೊಳಗೆ ಭದ್ರತಾ ಸಂಸ್ಥೆಗಳಿಗೆ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಫೆಬ್ರವರಿ 20ರಂದು ರಾಜ್ಯಪಾಲ ಭಲ್ಲಾ ಅವರು ಮನವಿ ಮಾಡಿದ್ದರು. ನಿಗದಿತ ಸಮಯದೊಳಗೆ ಶಸ್ತ್ರಾಸ್ತ್ರ ತಂದೊಪ್ಪಿಸುವವರ ಮೇಲೆ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರು. ಗಡುವಿನ ನಂತರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಮಣಿಪುರದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ರಾಜ್ಯದ ಶಸ್ತ್ರಾಗಾರಗಳಿಂದ ಸುಮಾರು 6,000 ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿತ್ತು. ಸೆಪ್ಟೆಂಬರ್ನಲ್ಲಿ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಒದಗಿಸಿದ ಮಾಹಿತಿ ಪ್ರಕಾರ, ಭದ್ರತಾ ಕಾರ್ಯಾಚರಣೆಗಳಲ್ಲಿ ಈ ಶಸ್ತ್ರಾಸ್ತ್ರಗಳ ಪೈಕಿ ಸುಮಾರು 1,200 ಅನ್ನು ವಶಪಡಿಸಿಕೊಳ್ಳಲಾಗಿದೆ.
ಫೆಬ್ರವರಿ 25ರಂದು, ಆರಂಬೈ ತೆಂಗೋಲ್ ರಾಜ್ಯಪಾಲ ಭಲ್ಲಾ ಅವರನ್ನು ಭೇಟಿಯಾಗಿ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಷರತ್ತುಗಳನ್ನು ವಿಧಿಸಿತ್ತು.
ಮ್ಯಾನ್ಮಾರ್ -ಭಾರತದ ಗಡಿಯಲ್ಲಿ ಬೇಲಿ ನಿರ್ಮಾಣ, 1951 ಅನ್ನು ಮೂಲ ವರ್ಷವಾಗಿಟ್ಟುಕೊಂಡು ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್ಆರ್ಸಿ) ಅನುಷ್ಠಾನಗೊಳಿಸುವುದು, ಎಲ್ಲಾ ಅಕ್ರಮ ವಲಸಿಗರನ್ನು ಅವರ ಮೂಲ ಸ್ಥಳಗಳಿಗೆ ಗಡಿಪಾರು ಮಾಡುವುದು ಮತ್ತು ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ‘ಮರುಸ್ಥಾಪಿಸುವುದು’ ಈ ಷರತ್ತುಗಳಲ್ಲಿ ಸೇರಿವೆ.
ಮೈತೇಯಿಯನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಮಾರ್ಚ್ 2023ರಲ್ಲಿ ಮಣಿಪುರ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದಕ್ಕೆ ಕುಕಿ-ಝೋ ಬುಡಕಟ್ಟು ಗುಂಪು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಪ್ರಾರಂಭಿಸಿದ ಬಳಿಕ ಹಿಂಸಾಚಾರ ಉಂಟಾಗಿತ್ತು.
ಸುಮಾರು ಎರಡು ವರ್ಷಗಳ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 258 ಜನರು ಬಲಿಯಾಗಿದ್ದಾರೆ. ಸುಮಾರು 59,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಅಥವಾ ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ಹಿಂಸಾಚಾರ ತೀವ್ರಗೊಂಡಾಗ, ಫೆಬ್ರವರಿ 2024ರಲ್ಲಿ ಹೈಕೋರ್ಟ್ ತನ್ನ ನಿರ್ದೇಶನಗಳನ್ನು ಹೊಂದಿರುವ ಪ್ಯಾರಾಗ್ರಾಫ್ ಅನ್ನು ತೆಗೆದುಹಾಕಲು ಆದೇಶಿಸಿದೆ.
ಕುಕಿ-ಝೋ ಗುಂಪಿನ ಜೊತೆ ಮಾಡಿಕೊಂಡಿರುವ ಶಾಂತಿ ಒಪ್ಪಂದವನ್ನು ರದ್ದುಗೊಳಿಸಿ, ಅವರ ವಿರುದ್ದ ನೇರ ಕಾರ್ಯಾಚರಣೆ ನಡೆಸುವಂತೆ ಫೆಬ್ರವರಿ, 25 2025ರಂದು ರಾಜ್ಯಪಾಲರನ್ನು ಭೇಟಿಯಾದ ವೇಳೆ ಮೈತೇಯಿ ಗುಂಪು ಆಗ್ರಹಿಸಿದೆ.
2008ರಲ್ಲಿ ಕೇಂದ್ರ ಸರ್ಕಾರ, ಮಣಿಪುರ ಸರ್ಕಾರ ಮತ್ತು ಕುಕಿ ಗುಂಪಿನ ಎರಡು ಸಂಘಟನೆಗಳಾದ ಕುಕಿ ನ್ಯಾಷನಲ್ ಆರ್ಗನೈಸೇಷನ್ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ ಜೊತೆ ಕಾರ್ಯಾಚರಣೆ ಸ್ಥಗಿತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.
ಒಪ್ಪಂದದ ಪ್ರಕಾರ, ಭದ್ರತಾ ಪಡೆಗಳು ಮತ್ತು ಕುಕಿ ಗುಂಪುಗಳು ಪರಸ್ಪರ ಯಾವುದೇ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದನ್ನು ನಿಷೇಧಿಸಲಾಗಿದೆ. ಕುಕಿ ಗುಂಪುಗಳು ನೆಲದ ಕಾನೂನುಗಳನ್ನು ಪಾಲಿಸಬೇಕು ಮತ್ತು ಕೇಂದ್ರ ಸರ್ಕಾರ ಗೊತ್ತುಪಡಿಸಿದ ಶಿಬಿರಗಳಿಗೆ ಸೀಮಿತವಾಗಿರಬೇಕು.
ಮಣಿಪುರ ರೈಫಲ್ಸ್ ಕಾಂಪ್ಲೆಕ್ಸ್ನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರಂಬೈ ತೆಂಗೋಲ್ ಮತ್ತು ಅದರ ಮುಖ್ಯಸ್ಥ ಕೊರೌಂಗನ್ಬಾ ಖುಮಾನ್ ಅವರ ವಿರುದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
ಮೇ 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ಮೈತೇಯಿ ಗುಂಪೇ ಕುಕಿ-ಝೋ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಸಂಘಟಿಸಿದೆ ಎಂದು ಆರೋಪಿಸಲಾಗಿದೆ.
26/11ರ ಮುಂಬೈ ದಾಳಿ ಪ್ರಕರಣ: ಖುಲಾಸೆಗೊಂಡ ವ್ಯಕ್ತಿ ಜೀವನೋಪಾಯಕ್ಕಾಗಿ ಹೈಕೋರ್ಟ್ ಮೊರೆ


