ಪಂಜಾಬ್-ಹರಿಯಾಣ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಮಾವೋವಾದಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳದ 1,200 ಕಿಲೋ ಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಅರಣ್ಯದಲ್ಲಿ ಮಾವೋವಾದಿಗಳ ಕರಪತ್ರ, ಬ್ಯಾನರ್ ಪತ್ತೆಯಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಮಧ್ಯಪ್ರದೇಶದಲ್ಲಿ ಭದ್ರತಾ ಪಡೆಗಳು-ಮಾವೋವಾದಿಗಳ ನಡುವೆ ಸಂಘರ್ಷ ಉಲ್ಬಣಗೊಂಡಿರುವ ನಡುವೆ ಈ ಬೆಳವಣಿಗೆ ನಡೆದಿದೆ.
ಪೂರ್ವ ಮಧ್ಯಪ್ರದೇಶದ ಬಲಘಾಟ್ ಜಿಲ್ಲೆಯ (ರಾಜ್ಯದ ಮೂರು ಮಾವೋವಾದಿ ಪೀಡಿತ ಜಿಲ್ಲೆಗಳಲ್ಲಿ ಒಂದು) ದಟ್ಟಾರಣ್ಯದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು ರೂಪಜಾರ್ ಅರಣ್ಯ ಪ್ರದೇಶದಲ್ಲಿ ಎರಡು ಪುಟಗಳ ಕರಪತ್ರಗಳು ಮತ್ತು ಕೆಂಪು ಬ್ಯಾನರ್ ವಶಪಡಿಸಿಕೊಂಡಿವೆ.
“ಪ್ರಸ್ತುತ ನಡೆಯುತ್ತಿರುವ ರೈತರ ಆಂದೋಲನವು ಕೇವಲ ಪಂಜಾಬ್ ಮತ್ತು ಹರಿಯಾಣದ ರೈತರ ಆಂದೋಲನವಲ್ಲ. ಅದು ವಾಸ್ತವವಾಗಿ ಮೋದಿ ಸರ್ಕಾರದ ರೈತ ವಿರೋಧಿ ನೀತಿಗಳಿಂದ ಈಗಾಗಲೇ ನಾಶವಾಗಿರುವ ಅಥವಾ ನಾಶವಾಗುವ ಅಂಚಿನಲ್ಲಿರುವ ದೇಶದ ಪ್ರತಿಯೊಬ್ಬ ರೈತರ ಚಳವಳಿಯಾಗಿದೆ” ಎಂದು ನಿಷೇಧಿತ ಸಿಪಿಐ (ಮಾವೋವಾದಿ) ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್ಗಢ ವಿಶೇಷ ವಲಯ ಸಮಿತಿಯ ಹೆಸರಿನಲ್ಲಿ ಹೊರಡಿಸಲಾದ ಕರಪತ್ರದಲ್ಲಿ ಬರೆಯಲಾಗಿದೆ ಎಂದು ವರದಿಗಳು ಹೇಳಿವೆ.
“ನಾವು ಮೂರು ರಾಜ್ಯಗಳ (ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ) ಮಿತ್ರ ಸಂಘಟನೆಗಳು, ಪರಿಸರವಾದಿಗಳು ಮತ್ತು ಬುದ್ಧಿಜೀವಿಗಳು ಮಾತ್ರವಲ್ಲದೆ ಜನರು, ರೈತರು ಮತ್ತು ಕಾರ್ಮಿಕರಿಗೆ ಎಲ್ಲಾ ರೀತಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ಬೆಂಬಲಿಸಲು ಮನವಿ ಮಾಡುತ್ತೇವೆ. ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರತಿಭಟನೆ, ರಸ್ತೆ ತಡೆ, ಉಪವಾಸ ಸತ್ಯಾಗ್ರಹಗಳನ್ನು ನಡೆಸಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಪ್ರಚಾರ ಮಾಡಲು ಎಲ್ಲರಿಗೂ ಮನವಿ ಮಾಡುತ್ತೇವೆ. ಸಾಧ್ಯವಾದರೆ, ‘ಶಂಭು ಮತ್ತು ಕನೌರಿ ಗಡಿ ಚಲೋ’ ಎಂಬ ಘೋಷಣೆಯೊಂದಿಗೆ ದೆಹಲಿ ಮತ್ತು ಪಂಜಾಬ್ಗೆ ಮೆರವಣಿಗೆ ನಡೆಸಿ” ಎಂಬುವುದಾಗಿ ಕರಪತ್ರದಲ್ಲಿ ಬರೆಯಲಾಗಿದೆ ಎಂದು ವರದಿಗಳು ವಿವರಿಸಿವೆ.
ಬಾಲಘಾಟ್ ಜಿಲ್ಲೆಯ ಮಾವೋವಾದಿಗಳ ಪೀಡಿತ ರೂಪಜಾರ್ ಅರಣ್ಯ ಪ್ರದೇಶದ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಸೈನ್ ಬೋರ್ಡ್ನಲ್ಲಿ ಹಾಕಿರುವ ಕೆಂಪು ಬ್ಯಾನರ್ನಲ್ಲಿಯೂ ಕರಪತ್ರದಲ್ಲಿರುವ ವಿಷಯವನ್ನೇ ಬರೆಯಲಾಗಿದೆ.
ಬಾಲಾಘಾಟ್ ಜಿಲ್ಲೆಯ ಲಾಂಜಿ ಕಾಡಿನಲ್ಲಿ 10-12 ಮಾವೋವಾದಿಗಳ ಗುಂಪು ಮತ್ತು ರಾಜ್ಯ ಪೊಲೀಸರ ಮಾವೋವಾದಿ ವಿರೋಧಿ ಕಾರ್ಯಾಚರಣೆ ಪಡೆಗಳ ನಡುವೆ ಮುಖಾಮುಖಿ ಏರ್ಪಟ್ಟ ಕೆಲ ದಿನಗಳ ಬಳಿಕ ಕರಪತ್ರ, ಬ್ಯಾನರ್ ಪತ್ತೆಯಾಗಿದೆ. ಮುಖಾಮುಖಿ ಏರ್ಪಟ್ಟ ಸ್ಥಳದ ಸುಮಾರು 50 ಕಿಮೀ ದೂರದ ಛತ್ತೀಸ್ಗಢ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕರಪತ್ರ, ಬ್ಯಾನರ್ ಕಂಡು ಬಂದಿವೆ.
ಕಾಡಿನಲ್ಲಿ ಕರಪತ್ರಗಳು ಮತ್ತು ಬ್ಯಾನರ್ ಪತ್ತೆಯಾಗಿರುವುದನ್ನು ದೃಢಪಡಿಸಿರುವ ಬಾಲಾಘಾಟ್ ವಲಯದ ಪೊಲೀಸ್ ಮಹಾನಿರೀಕ್ಷಕ ಸಂಜಯ್ ಕುಮಾರ್, “ಇಡೀ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ವಿವರವಾದ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಪೂರ್ವ ಮಧ್ಯಪ್ರದೇಶದ ಮಾವೋವಾದಿ ಪೀಡಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಕರಪತ್ರಗಳು ಪತ್ತೆಯಾಗಿರುವುದು ಇದೇ ಮೊದಲಲ್ಲ. ಏಪ್ರಿಲ್ 2021ರಲ್ಲೂ ರಾಷ್ಟ್ರೀಯ ರೈತರ ಚಳವಳಿಯನ್ನು ಬೆಂಬಲಿಸಿದ ಕರಪತ್ರ ಪತ್ತೆಯಾಗಿತ್ತು. ಡಿಸೆಂಬರ್ 2016ರಲ್ಲಿ, ಮೋದಿ ನೇತೃತ್ವದ ಆಡಳಿತದ ನೋಟು ಅಮಾನ್ಯೀಕರಣ ಕ್ರಮದ ವಿರುದ್ಧ ಕರಪತ್ರಗಳನ್ನು ಬಿಡುಗಡೆ ಮಾಡಿದ್ದರು.
ವರದಿ ಕೃಪೆ : newindianexpress.com


