ಆರ್ಎಸ್ಎಸ್ ಮತ್ತು ಗೋವಾ ಬಿಜೆಪಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜಮ್ಮು ಕಾಶ್ಮೀರ ಮತ್ತು ಗೋವಾದ ಮಾಜಿ ರಾಜ್ಯಪಾಲ ಹಾಗೂ ಮೇಘಾಲಯದ ಹಾಲಿ ರಾಜ್ಯಪಾಲರಾದ ಸತ್ಯ ಪಾಲ್ ಮಲ್ಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಆಹಾರ ವಿತರಿಸುವ ವೇಳೆ ಕೋಟ್ಯಾಂತರ ರೂ ಗುಳುಂ ಮಾಡಿದ್ದಾರೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸತ್ಯ ಪಾಲ್ ಮಲ್ಲಿಕ್ ಆರೋಪಿಸಿದ್ದಾರೆ.
ನಾನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲನಾಗಿದ್ದ ವೇಳೆ ಎರಡು ಕಡತಗಳು ನನ್ನ ಮುಂದೆ ಬಂದಿದ್ದವು. ಒಂದು ಮುಖೇಶ್ ಅಂಬಾನಿಗೆ ಸೇರಿದ್ದರೆ ಮತ್ತೊಂದು ಆರ್ಎಸ್ಎಸ್ ನಾಯಕನಿಗೆ ಸೇರಿತ್ತು. ಅದಕ್ಕೆ ಸಹಿ ಹಾಕಿದರೆ 300 ಕೋಟಿ ಲಂಚ ಕೊಡುವುದಾಗಿ ಆಮಿಷವೊಡ್ಡಿದ್ದರು. ಆದರೆ ನಾನು ಆ ಕೆಲಸ ಮಾಡಲಿಲ್ಲ ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯ ತಿಳಿಸಿದ್ದೆ ಎಂದು ಮಲ್ಲಿಕ್ ಹೇಳಿದ್ದಾರೆ.
ಬಿಜೆಪಿ ಭ್ರಷ್ಟಾಚಾರದ ರಾಜ್ಯಪಾಲರ ಹೇಳಿಕೆ ಬಂದ ನಂತರ ಗೋವಾ ಕಾಂಗ್ರೆಸ್ ಮತ್ತು ಟಿಎಂಸಿ ಪಕ್ಷಗಳು ಸಿಎಂ ಪ್ರಮೋದ್ ಸಾವಂತ್ ರಾಜೀನಾಮೆಗೆ ಪಟ್ಟು ಹಿಡಿದಿವೆ. ಸಿಎಂ ಸಾವಂತ್ ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಟಿಎಂಸಿ ಮುಖಂಡರು ಗೋವಾ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
EXPLOSIVE revelations by (BJP apptd) former Governor of Goa who is current Governor of Meghalaya. Openly exposing the CORRUPTION of Goa govt & CM.
Trinamool demands:
? Resignation of Goa CM in 72 hrs
? Judicial Enquiry with retd. SC Judge into corruption#SawantMustResign pic.twitter.com/th1EMYv7se— Derek O'Brien | ডেরেক ও'ব্রায়েন (@derekobrienmp) October 25, 2021
ಒಬ್ಬ ರಾಜ್ಯಪಾಲರೆ ಪ್ರಧಾನಿಯವರ ಸ್ನೇಹಿತ ಅಂಬಾನಿ ಮತ್ತು ಆರ್ಎಸ್ಎಸ್ ಮುಖಂಡನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಇಷ್ಟು ದೊಡ್ಡ ಭ್ರಷ್ಟಾಚಾರದ ಪ್ರಕರಣವನ್ನು ಬಿಜೆಪಿ ಹತ್ತಿಕ್ಕಲು ಸಾಧ್ಯವಿಲ್ಲ, ಈ ಬಗ್ಗೆ ಉತ್ತರ ನೀಡಲೇಬೇಕು ಎಂದು ಕಾಂಗ್ರೆಸ್ ಹೇಳಿದೆ.
प्रधानमंत्री के मित्र और संघ के पदाधिकारी पर भ्रष्टाचार का आरोप लगाया जा रहा है, वह भी राज्यपाल द्वारा।
भाजपा भ्रष्टाचार के इतने बड़े मामले को दबा नहीं सकती, इस मामले पर जवाब देना पड़ेगा। pic.twitter.com/X0E5yLOkkU
— Congress (@INCIndia) October 26, 2021
ರಾಜ್ಯಪಾಲರ ಹೇಳಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಆದರೆ ಉಪ ಮುಖ್ಯಮಂತ್ರಿ ಮನೋಹರ್ ಅಜಗಾಂವ್ಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ರಾಜ್ಯಪಾಲರಾಗಿ ಆರಾಮ ಕುರ್ಚಿಯಲ್ಲಿ ಕೂತು ಆರೋಪ ಮಾಡುವುದು ಬಿಟ್ಟು ರಾಜೀನಾಮೆ ನೀಡಿ ಗೋವಾದಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.
ಚುನಾವಣೆಗೆ ಕೆಲವೇ ತಿಂಗಳು ಇರುವಾಗ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿರುವ ಪ್ರಮೋದ್ ಸಾವಂತ್ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ. ಬನ್ನಿ ಸಕ್ರಿಯ ರಾಜಕಾರಣ ಮಾಡಿ ಎಂದು ಕರೆ ನೀಡಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾದ ಸತ್ಯಪಾಲ್ ಮಲ್ಲಿಕ್ ರೈತ ಹೋರಾಟವನ್ನು ಸಹ ಬೆಂಬಲಿಸಿದ್ದರು. ಉತ್ತರ ಪ್ರದೇಶದಲ್ಲಿ ರೈತರ ಸಿಟ್ಟು ಮಡುಗಟ್ಟಿದೆ. ಹಾಗಾಗಿ ಕೆಲ ಜಿಲ್ಲೆಗಳಲ್ಲಿ ಬಿಜೆಪಿ ನಾಯಕರು ಓಡಾಡಬೇಡಿ ಎಂದು ಸಲಹೆ ನೀಡಿದ್ದರು. ಅಲ್ಲದೆ ರೈತ ಹೋರಾಟವನ್ನು ನರೇಂದ್ರ ಮೋದಿಯವರು ನಿರ್ವಹಿಸುತ್ತಿರುವ ರೀತಿಗೆ ಬೇಸರ ವ್ಯಕ್ತಪಡಿಸಿದ್ದ ಅವರು, ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆದು ಎಂಎಸ್ಪಿ ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು.
ಅವರು ರಾಜ್ಯಪಾಲರಿಗೆ ಯಾವ ಅಧಿಕಾರಿಗಳು ಇಲ್ಲ ಎಂದು ಸಹ ಆರೋಪಿಸಿದ್ದರು. ’ದೇಶದ ರಾಜ್ಯಪಾಲರುಗಳು ಅತ್ಯಂತ ದುರ್ಬಲರಾಗಿದ್ದಾರೆ. ಅವರಿಗೆ ಒಂದು ಪತ್ರಿಕಾಗೋಷ್ಠಿ ಕರೆಯುವಷ್ಟೂ ಅಧಿಕಾರ ಇಲ್ಲದಂತಾಗಿದೆ. ನನ್ನ ಮನಸ್ಸಿನಲ್ಲಿರುವ ಸತ್ಯವನ್ನು ಹೇಳಿಕೊಳ್ಳಲೂ ಸಹ ಸಾಧ್ಯವಾಗದ ಸ್ಥಿತಿ ಉಂಟಾಗಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: ನಾಯಿಯೊಂದಿಗೆ ಬಿಜೆಪಿ ನಾಯಕನ ಫೋಟೊ ಕೊಲಾಜ್ ಹಂಚಿಕೊಂಡ ಮಾಜಿ ರಾಜ್ಯಪಾಲ!