ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ (BIMS) ನವೆಂಬರ್ 10ರ ಬಳಿಕ ಮೃತಪಟ್ಟ ಬಾಣಂತಿಯರ ಸಂಖ್ಯೆ ಗುರುವಾರ (ಡಿ.5) ಐದಕ್ಕೆ ಏರಿಕೆಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸೂಚಿಸಿದೆ.
ನವೆಂಬರ್ 9ರಂದು ಜಿಲ್ಲಾಸ್ಪತ್ರೆಯಲ್ಲಿ 9 ಮಹಿಳೆಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಬಳಿಕ ಅವರಿಗೆ ಐವಿ ದ್ರಾವಣ (ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ) ನೀಡಲಾಗಿದೆ. ದ್ರಾವಣ ಪಡೆದ ಎರಡೇ ಗಂಟೆಯಲ್ಲಿ ಒಂಬತ್ತೂ ಬಾಣಂತಿಯರು ಅಸ್ವಸ್ಥರಾಗಿದ್ದರು.
ನಂದಿನಿ, ಲಲಿತಮ್ಮ, ಸುಮಯ್ಯಾ ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬವರಿಗೆ ಹೆರಿಗೆ ಬಳಿಕ ಐವಿ ದ್ರಾವಣ ನೀಡಲಾಗಿದೆ. ಈ ಪೈಕಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯ್ಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಐವಿ ದ್ರಾವಣ ಪಡೆದಿದ್ದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ಬಾಣಂತಿಯರ ಪೈಕಿ ಏಳು ಮಂದಿ ಕಿಡ್ನಿ ಮತ್ತು ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮ್ಸ್ನಲ್ಲಿ ಪರೀಕ್ಷಿಸಿದಾಗ ಏಳು ಮಂದಿಯಲ್ಲಿ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿತ್ತು.
ನವೆಂಬರ್ 10ರ ಬಳಿಕ 9 ಬಾಣಂತಿಯರ ಪೈಕಿ ನಾಲ್ವರು ( ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್) ಮೃತಪಟ್ಟಿದ್ದರು. ಕಿಡ್ನಿ ವೈಫಲ್ಯ ಮತ್ತು ಇಲಿ ಜ್ವರದಿಂದ ಬಳಲುತ್ತಿದ್ದ ಮತ್ತೊಬ್ಬರು ಬಾಣಂತಿ ಸುಮ್ಮಯ್ಯಾ ಅವರು ನವೆಂಬರ್ 12ರಿಂದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ (ಡಿ.5) ಚಿಕಿತ್ಸೆ ಫಲಿಸದೆ ಸುಮಯ್ಯಾ ಮೃತಪಟ್ಟಿದ್ದಾರೆ. ಮೃತ ಬಾಣಂತಿಯರೆಲ್ಲರೂ 25 ವರ್ಷದೊಳಗಿನವರು ಎಂದು ತಿಳಿದು ಬಂದಿದೆ.
ಐವಿ ಕಂಪನಿ ವಿರುದ್ದ ಕ್ರಮಕ್ಕೆ ಸೂಚನೆ
ಶುಕ್ರವಾರ (ಡಿ.6) ನಡೆದ ಸಚಿವ ಸಂಪುಟ ಸಭೆಗೆ ಬಾಣಂತಿಯರ ಸಾವಿನ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ವಿಷಯ ಅರಿತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಐವಿ ದ್ರಾವಣ ಪೂರೈಕೆ ಮಾಡಿದ ಕಂಪನಿ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ “ಔಷಧಿ ಸರಬರಾಜು ನಿಗಮಕ್ಕೆ ಕಾಯಕಲ್ಪದ ಅಗತ್ಯವಿದೆ. ಗುಣಮಟ್ಟದ ಔಷಧಿಗಳನ್ನು ಪೂರೈಸುವಂತಹ ದೊಡ್ಡ ಕಂಪನಿಗಳು ನಿಗಮ ಕರೆಯುವ ಟೆಂಡರ್ಗಳಲ್ಲಿ ಭಾಗಿಯಾಗುವಂತೆ ನಿಯಮಗಳಲ್ಲಿ ಬದಲಾವಣೆಗಳನ್ನು ಸೂಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ರಾಜೀನಾಮೆಗೆ ಸಿದ್ದ-ದಿನೇಶ್ ಗುಂಡೂರಾವ್
ಬಾಣಂತಿಯರ ಸಾವಿನ ಪ್ರಕರಣದಲ್ಲಿ ನನ್ನಿಂದ ಲೋಪವಾಗಿದ್ದರೆ, ಖಂಡಿತ ರಾಜೀನಾಮೆ ನೀಡಲು ಸಿದ್ದ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳು ಜೊತೆ ಸೇರಿ ಈ ಸಮಸ್ಯೆ ಪರಿಹರಿಸಬೇಕಿದೆ. ಪ್ರತಿಪಕ್ಷದವರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದಿದ್ದಾರೆ.
‘ರಾಜ್ಯ ತಿರಸ್ಕರಿಸಿದ್ದ ದ್ರಾವಣಕ್ಕೆ ಕೇಂದ್ರ ಪುರಸ್ಕಾರ’
ಬಾಣಂತಿಯರ ಸಾವಿಗೆ ಐವಿ ದ್ರಾವಣ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ವರದಿಯಾಗಿದೆ. ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ ಎಂಬ ಕಂಪನಿ ಪೂರೈಸಿರುವ ಐವಿ ದ್ರಾವಣ ಕೊಟ್ಟ ಬಳಿಕ ಬಾಣಂತಿಯರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
“ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂಬುವುದು ರಾಜ್ಯದ ಪ್ರಯೋಗಾಲಯಗಳು ನಡೆಸಿದ ಪರೀಕ್ಷೆಗಳಲ್ಲಿ ಪತ್ತೆಯಾಗಿತ್ತು. ಆದರೆ, ಕೇಂದ್ರ ಸರ್ಕಾರದ ಔಷಧ ನಿಯಂತ್ರಕರು ಅದೇ ದ್ರಾವಣವನ್ನು ಪುರಸ್ಕರಿಸಿದ್ದಾರೆ” ಎಂದು ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವರದಿ ನೀಡಿದ್ದರೆ, ಸೆಂಟ್ರಲ್ ಡ್ರಗ್ ಲ್ಯಾಬ್ (CDL) ಪಾಸಿಟಿವ್ ವರದಿ ನೀಡಿದೆ. ಇದನ್ನು ಉಲ್ಲೇಖಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ.
ನಮ್ಮ ಸರ್ಕಾರ ಈ ಪ್ರಕರಣವನ್ನು… pic.twitter.com/sAneLVXVcI
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 6, 2024
“ಅಂತಹ ಕಂಪನಿಗಳು ಮತ್ತು ಅವುಗಳ ಉತ್ಪನ್ನಗಳು ಮಾರಾಟಕ್ಕೆ ಅರ್ಹ ಎಂದು ಕೇಂದ್ರದ ಸಂಸ್ಥೆಗಳು ವರದಿ ನೀಡುವ ಕಾರಣದಿಂದ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಸಾಧ್ಯವಾಗಿಲ್ಲ. ಅವುಗಳ ಉತ್ಪನ್ನಗಳನ್ನು ತಿರಸ್ಕರಿಸಲೂ ಆಗುವುದಿಲ್ಲ” ಎಂದಿದ್ದಾರೆ.
ಈ ಬಗ್ಗೆ ಕೇಂದ್ರ ಔಷಧ ನಿಯಂತ್ರಕರಿಗೆ ಪತ್ರ ಬರೆದಿದ್ದೇವೆ. ಅವರ ಕ್ರಮದಿಂದ ತೊಂದರೆ ಆಗುತ್ತಿದೆ ಎಂಬುವುದನ್ನು ವಿವರಿಸಿದ್ದೇವೆ. ಜೊತೆಗೆ ಉತ್ತಮ ಗುಣಮಟ್ಟದ ಔಷಧಗಳ ಪೂರೈಕೆಗೆ ಅನುಕೂಲವಾಗುವಂತೆ ಟೆಂಡರ್ ನಿಯಮಗಳನ್ನು ಕಠಿಣಗೊಳಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಇಂದು ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವೆಂದು ಶಂಕಿಸಲಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದೆ.
ಬಾಣಂತಿಯರ ಸಾವಿಗೆ ಐವಿ ದ್ರಾವಣ ಕೂಡ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿರುವ… pic.twitter.com/28ujwU7nLu
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 4, 2024
ಲೋಕಾಯುಕ್ತ ತನಿಖೆ ನಡೆಸಿ-ಆರ್.ಅಶೋಕ್
ಬಾಣಂತಿಯರ ಸಾವು ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕರ ಆರ್. ಅಶೋಕ್ ಆಗ್ರಹಿಸಿದ್ದಾರೆ. ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನ್ಯಾಯಾಂಗ ತನಿಖೆಗೆ ಬಿಜೆಪಿ ಮನವಿ
ಬಳ್ಳಾರಿ ಮತ್ತು ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ಶಿಶು ಮರಣದ ಪ್ರಕರಣಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ಘಟಕದ ನಿಯೋಗ ಲೋಕಾಯುಕ್ತರನ್ನು ಒತ್ತಾಯಿಸಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಶಾಸಕ ಸಿ.ಕೆ ರಾಮಮೂರ್ತಿ, ಸೇರಿದಂತೆ ಪ್ರಮುಖರು ಇದ್ದ ನಿಯೋಗ ಶುಕ್ರವಾರ (ಡಿ.6) ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರವೇ ಹೊಣೆ- ಬಿ.ವೈ ವಿಜಯೇಂದ್ರ
ಕಪ್ಪು ಪಟ್ಟಿಗೆ ಸೇರಿಸಲಾದ ಕಂಪನಿಯ ಐವಿ ದ್ರಾವಣ ಖರೀದಿಸಲಾಗಿದೆ. ಅದರಿಂದ ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರವೇ ಇದಕ್ಕೆ ನೇರ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | ಚಿಕ್ಕಮಗಳೂರು : ನರಸೀಪುರದಲ್ಲಿ ಪೂಜೆ ಪುನರಾರಂಭ : ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲ ಪ್ರವೇಶಿಸಿದ ದಲಿತರು


