ಪರಿಸರ ಹಾಗೂ ಮತ್ಸ್ಯ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಅಲ್ಲದೇ, ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಒತ್ತಾಯಿಸಿದರು.
ಮಂಗಳವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು), ಫ್ರೈಡೇಸ್ ಫಾರ್ ಫ್ಯೂಚರ್-ಕರ್ನಾಟಕ (ಎಫ್ಎಫ್ಎಫ್-ಕೆ) ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ವತಿಯಿಂದ ಹೊನ್ನಾವರ ಬಂದರು ಯೋಜನೆ ಕುರಿತ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
2023ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೊನ್ನಾವರ ಬಂದರು ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿದ್ದ ಮೀನುಗಾರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಕಾಳ ವೈದ್ಯ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಈಗ ಅವರು ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದ್ದಾರೆ. ಆದರೆ, ಈ ಯೋಜನೆಯನ್ನು ನಿಲ್ಲಿಸುವ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ? ಜನರ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಯೋಜನೆಗಳ ವಿರುದ್ಧ ಧ್ವನಿ ಎತ್ತಿದರೆ ನಮ್ಮನ್ನು ಅಭಿವೃದ್ಧಿ ವಿರೋಧಿಗಳು, ನಗರ ನಕ್ಸಲರು ಎನ್ನುತ್ತಾರೆ. ಅಭಿವೃದ್ಧಿ ಹೆಸರಿನಲ್ಲಿ ಬದುಕು ಕಳೆದುಕೊಳ್ಳುತ್ತಿದ್ದೇವೆ. ಹೊನ್ನಾವರ ಬಂದರು ಯೋಜನೆ ಇದಕ್ಕೆ ಉತ್ತಮ ಉದಾಹರಣೆ ಎಂದು ಮೇಧಾ ಪಾಟ್ಕರ್ ಹೇಳಿದರು.
ಈ ಯೋಜನೆಗೆ ಅಗತ್ಯವಿರುವ ಪರಿಸರ ಇಲಾಖೆಯ ಅನುಮತಿಯನ್ನು ಸಮರ್ಪಕವಾಗಿ ಪಡೆಯಲಾಗಿಲ್ಲ. ಅಲ್ಲದೇ, ಈ ಯೋಜನೆಯ ಅನುಷ್ಠಾನದಿಂದ ಸಾಮಾಜಿಕವಾಗಿ ಹಾಗೂ ಪರಿಸರದ ಮೇಲೆ ಆಗುವಂತಹ ಪರಿಣಾಮಗಳ ಕುರಿತು ವೈಜ್ಞಾನಿಕ ಮೌಲ್ಯಮಾಪನ ಮಾಡಿಲ್ಲ. ರಸ್ತೆ ನಿರ್ಮಾಣಕ್ಕಾಗಿ ನಡೆದ ಭೂಮಾಪನ ಕ್ರಿಯೆಯನ್ನು ವಿರೋಧಿಸಿದ ಕಾರಣಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ, 45 ಜನರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ ಎಂದರು.
ಪೊಲೀಸರ ದೌರ್ಜನ್ಯ ಖಂಡಿಸಿ ಸುಮಾರು 40 ಮಂದಿ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಒಂದು ದಶಕದಿಂದ ಬಂದರು ವಿರೋಧಿಸಿ ಹೋರಾಟ ನಡೆಯುತ್ತಿದೆ. ಮೀನು ಒಣಗಿಸುವ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ. ವಿಶೇಷವಾಗಿ ಮಹಿಳೆಯರು ಒಣ ಮೀನು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 2019ರಿಂದ ಮೀನು ಒಣಗಿಸುವ ಭೂಮಿಗೆ ಬೇಲಿ ಹಾಕಲಾಗಿದೆ. ಅವರ ಪರಿಸ್ಥಿತಿ ಹೇಳಲು ಆಗುವುದಿಲ್ಲ ಎಂದು ಮೇಧಾ ಪಾಟ್ಕರ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಮಗೆ ವಿಶ್ವಾಸವಿದೆ. ಈ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಗಣಿಸಿ, ಹೊನ್ನಾವರ ಬಂದರು ಯೋಜನೆಯನ್ನು ಕೈ ಬಿಟ್ಟು, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಅವರಿಗೆ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸತ್ಯಶೋಧನಾ ವರದಿಯ ಮುಖ್ಯಾಂಶಗಳು
2010 ರಲ್ಲಿ ಹೊನ್ನಾವರ ಪೋರ್ಟ್ ಪ್ರೈವೆಟ್ ಲಿಮಿಟೆಡ್ (ಹೆಚ್ಪಿಪಿಎಲ್) ಗೆ ಕಾಸರಕೋಡ್ ವಾಣಿಜ್ಯ ಬಂದರನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡಿದಾಗಿನಿಂದಲೂ, ಈ ಪ್ರದೇಶದಲ್ಲಿ ವಿರೋಧಗಳು ವ್ಯಕ್ತವಾಗುತ್ತಿದ್ದು, ಮೀನುಗಾರರೇ ಹೆಚ್ಚಿರುವ ಟೋಂಕಾ-1, ಟೋಂಕಾ-2, ಪಾವಿನ್ ಕುರ್ವ, ಮಲ್ಲುಕುರ್ವ ಮತ್ತು ಹೊನ್ನಾವರ ಗ್ರಾಮೀಣ-ಈ ಐದು ಗ್ರಾಮಗಳಿಗೆ ಸೇರಿದ 44 ಹೆಕ್ಟೇರ್ ಭೂಮಿಯಲ್ಲಿ ಈ ಬಂದರು ಸ್ಥಾಪಿಸಲು ಯೋಜಿಸಲಾಗಿದೆ. ಸ್ಥಳೀಯ ಸಮುದಾಯಗಳಿಂದ ಒಪ್ಪಿಗೆ ಪಡೆದುಕೊಳ್ಳದೆಯೇ ಮತ್ತು ಸಂವಿಧಾನದಡಿಯಲ್ಲಿ ಪಾಸಲಿಬೇಕಿರುವ ಪರಿಸರ ಸುರಕ್ಷತಾ ಕ್ರಮಗಳನ್ನು ಪ್ರಸ್ತುತ ಯೋಜನೆಯು ಗಾಳಿಗೆ ತೋರಿದೆ ಎಂದು ಸತ್ಯಶೋಧನಾ ವರದಿ ಹೇಳಿದೆ.
ಪ್ರಸ್ತಾವಿತ ಬಂದರಿನಲ್ಲಿ ಎರಡು ಮುಖ್ಯ ಘಟಕಗಳಿವೆ. ಒಂದು 44 ಎಕರೆಯಲ್ಲಿ ಬಂದರು ನಿರ್ಮಿಸುವುದು, ಎರಡನೆಯದ್ದು ಅದಕ್ಕೆ ರಾಷ್ಟ್ರೀಯ ಹೆದ್ದಾರಿ 66ರಿಂದ ಸಂಪರ್ಕ ಕಲ್ಪಿಸಲು ಚತುಷ್ಪತ ರಸ್ತೆ ನಿರ್ಮಿಸುವುದು. ಬಂದರು ನಿರ್ಮಾಣದ ವಿರುದ್ದ ಸ್ಥಳೀಯ ಮೀನುಗಾರ ಸಮುದಾಯ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಿದ ನಂತರವಷ್ಟೇ ರಸ್ತೆ ಯೋಜನೆಯ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಸಮೀಕ್ಷೆಯ ಹಿಂದಿನ ದಿನ ರಾತ್ರಿ ಬಿಎನ್ಎಸ್ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮರುದಿನ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿ, ಅಧಿಕಾರಿಗಳು ಸಮೀಕ್ಷೆಗೆ ಮುಂದಾದರು. ಈ ವೇಳೆ ಪ್ರತಿಭಟಿಸಿದ ಸ್ಥಳೀಯರನ್ನು ಪೊಲೀಸರು ಹಿಂಸಿಸಿದರು, ಮಾತ್ರವಲ್ಲ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದರು. ಹೀಗೆ ಪೊಲೀಸರ ದೌರ್ಜನ್ಯದಿಂದ ಗಾಯಗೊಂಡಿದ್ದ ಜನರು ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯಲ್ಲಿ ಪೊಲೀಸರು ಹಾಜರಿದ್ದರು. ಪೊಲೀಸ್ ದೌರ್ಜನ್ಯದಿಂದ ಗಾಯಗಳಾಗಿವೆ ಎಂದು ದಾಖಲಿಸಲು ವೈದ್ಯರು ನಿರಾಕರಿಸಿದರು. ಪೊಲೀಸರ ದೌರ್ಜನ್ಯ ಈಗಲೂ ಮುಂದುವರಿದಿದ್ದರು, ಹೆಚ್ಚಿನ ಪೊಲೀಸರನ್ನು ನೇಮಿಸಿ ಸ್ಥಳೀಯರ ಚಲನವಲನಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ವರದಿ ವಿವರಿಸಿದೆ.
ಬಂದರು ಯೋಜನೆಗಾಗಿ ಸ್ಥಳೀಯರು ತಮ್ಮ ಭೂಮಿಯನ್ನು ಕಳೆದುಕೊಂಡಿರುವುದು ಮಾತ್ರವಲ್ಲದೆ, ಬಂದರು ನಿರ್ಮಾಣವು ಅವರ ಜೀವನೋಪಾಯಕ್ಕೂ, ಅಲ್ಲಿನ ಪರಿಸರ ಸಮತೋಲನಕ್ಕೂ ಅಪಾಯವನ್ನು ತಂದಿಟ್ಟಿದೆ. ಬ್ರೇಕ್ ವಾಟರ್ಗಳ ನಿರ್ಮಾಣವು ನಿಧಾನವಾಗಿ ಕರಾವಳಿಯ ಸವೆತಕ್ಕೆ ಕಾರಣವಾಗುತ್ತದೆ. ಶರಾವತಿ ನದಿಯು ವಿವಿಧ ಮೀನುಗಳ ಪ್ರಬೇಧಗಳಿಗೆ, ಅದರಲ್ಲೂ ಮುಖ್ಯವಾಗಿ ನದಿ ಮುಖದಲ್ಲಿ ಮಾತ್ರವೇ ಕಂಡು ಬರುವ ಮೀನು ಪ್ರಬೇಧಗಳಿಗೆ ನೆಲೆಯಾಗಿದೆ. ಅಲ್ಲದೆ, ಕಡಲ ತೀರ ಪ್ರದೇಶವು ಅಳಿವಿನಂಚಿನಲ್ಲಿರುವ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಶೆಡ್ಯೂಲ್ ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಪ್ರಬೇಧವಾದ ಆಲಿವ್ ರಿಡ್ಲೆ ಟರ್ಟಲ್ (ಆಮೆ) ಗಳು ಗೂಡುಗಳನ್ನು ಕಟ್ಟಿಕೊಳ್ಳುವ ತಾಣವಾಗಿದೆ. ಹೆಚ್ಪಿಪಿಎಲ್ ಅನುಮೋದನೆ ಮತ್ತು ಅನುಮತಿ ಪಡೆವ ಪ್ರಿಕ್ರಿಯೆಯನ್ನೂ ಗಾಳಿಗೆ ತೂರಿದೆ ಎಂದು ವರದಿ ತಿಳಿಸಿದೆ. ಎನ್ಜಿಟಿ ಮತ್ತು ಹೈಕೋರ್ಟ್ನಲ್ಲಿ ಇತ್ತೀಚೆಗೆ ನಡೆದ ಕಾನೂನು ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವರದಿ ಒದಗಿಸುತ್ತದೆ.
ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರ ಮೇಲೆ ಹಿಂಸಾಚಾರ ನಡೆಸಿದ ಪೊಲೀಸರಿಗೆ ಶಿಕ್ಷೆಯಾಗಬೇಕು. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲೆಂದೇ ದಾಖಲಿಸಲಾಗಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ಕೈಬಿಡಬೇಕು ಎಂದು ವರದಿ ಆಗ್ರಹಿಸಿದೆ. ಬಂದರು ಯೋಜನೆಯ ನಿರ್ಮಾಣಕ್ಕಾಗಿ ನೀಡಲಾಗಿರುವ ಅನುಮೋದನೆಗಳನ್ನೂ ಪರಿಸರ ಸಂಬಂಧಿತ ಅನುಮತಿಗಳನ್ನೂ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.
ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!


