‘‘ಪ್ರಧಾನಿ ಮೋದಿ ವಿಶ್ವದಾದ್ಯಂತ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ ಆದರೆ ಪ್ರತಿಭಟನಾ ನಿರತ ರೈತರ ‘ಕಣ್ಣೀರು ಒರೆಸಲು’ ಭೇಟಿ ಮಾಡಿಲ್ಲ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಕೃಷಿ ಕಾನೂನುಗಳ ವಿರುದ್ದ ಶನಿವಾರ ಮತ್ತೊಮ್ಮೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರೈತರು ದೆಹಲಿ ಬಳಿ 90 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಕನಿಷ್ಠ 215 ರೈತರು ಸಾವನ್ನಪ್ಪಿದ್ದಾರೆ, ಅವರಿಗೆ ವಿದ್ಯುತ್ ಮತ್ತು ನೀರಿನ ಸರಬರಾಜುಗಳನ್ನು ಕಡಿತಗೊಳಿಸಲಾಗಿದ್ದು ಮಾತ್ರವಲ್ಲದೆ, ಅವರ ಮೇಲೆ ಹಲ್ಲೆಯನ್ನೂ ನಡೆಸಲಾಗಿದೆ. ಅವರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಹೊರತಾಗಿಯು ದೆಹಲಿಯ ಗಡಿಗಳನ್ನು ಅಂತರರಾಷ್ಟ್ರೀಯ ಗಡಿಗಳಾಗಿ ಪರಿವರ್ತಿಸಲಾಯಿತು” ಎಂದು ಮುಜಫರ್ ನಗರದ ಕಿಸಾನ್ ಮಹಾಪಂಚಾಯತ್ನಲ್ಲಿ ಭಾಷಣ ಮಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಉನ್ನಾವೊ ದಲಿತ ಬಾಲಕಿಯರ ಸಾವು: ಪ್ರೀತಿ ನಿರಾಕರಿಸಿದ್ದಕ್ಕೆ ವಿಷಪ್ರಾಶನ ಮಾಡಿದವನ ಬಂಧನ
“ನಮ್ಮ ಗಡಿಗಳನ್ನು ರಕ್ಷಿಸಲು ತಮ್ಮ ಪುತ್ರರನ್ನು ಕಳುಹಿಸುವ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಪ್ರಧಾನ ಮಂತ್ರಿ ರೈತರನ್ನು ‘ಆಂದೋಲನ್ ಜೀವಿ’ ಎಂದು ಅಪಹಾಸ್ಯ ಮಾಡುತ್ತಾರೆ. ರೈತ ಮುಖಂಡ ರಾಕೇಶ್ ಟಿಕಾಯತ್ ಅತ್ತಾಗ ನಮ್ಮ ಪ್ರಧಾನಿ ತಮಾಷೆಯೆಂದು ಭಾವಿಸುತ್ತಾರೆ” ಎಂದು ಪ್ರಿಯಾಂಕ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ನಾಲ್ಕನೇ ತಿಂಗಳಿಗೆ ಕಾಲಿಡುತ್ತಿದೆ. ಈ ನಡುವೆ ರೈತರು ತಮ್ಮ ಹೋರಾಟವನ್ನು ತಳ ಮಟ್ಟದಿಂದಲೇ ತೀವ್ರಗೊಳಿಸಲು ಬೇಕಾಗಿ ಉತ್ತರ ಭಾರತರ ಹಲವು ರಾಜ್ಯಗಳ ಜಿಲ್ಲೆಗಳಲ್ಲಿ ರೈತ ಮಹಾಪಂಚಾಯತ್ ಸಭೆಯನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಕೂಡಾ ಇದಕ್ಕೆ ಕೈ ಜೋಡಿಸಿದ್ದು ಉತ್ತರ ಪ್ರದೇಶದ ಹತ್ತು ದಿನಗಳ ರೈತ ಮಹಾಪಂಚಾಯತ್ಗಳನ್ನು ಆಯೋಜಿಸಿದೆ.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ಜಾರಿಗೊಳಿಸಿದ ಪಶ್ಚಿಮ ಬಂಗಾಳ ನ್ಯಾಯಾಲಯ