ಉನ್ನಾವೊ ಜಿಲ್ಲೆಯ ಮೂವರು ದಲಿತ ಬಾಲಕಿಯರಿಗೆ ವಿಷಪ್ರಾಶನ ಮಾಡಿಸಿದ ಆರೋಪದಲ್ಲಿ 28 ವರ್ಷದ ಯುವಕನನ್ನು ಬಂಧಿಸಿ, ಅವನ ಜೊತೆಗಿದ್ದ ಇನ್ನೊಬ್ಬ ಅಪ್ರಾಪ್ತ ವಯಸ್ಕನನ್ನು ವಶಕ್ಕೆ ಪಡೆದಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಹೇಳಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನೀರಿನಲ್ಲಿ ಕೀಟನಾಶಕವನ್ನು ಬೆರೆಸಿದ್ದಾಗಿ ಆರೋಪಿ ವಿನಯ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಬಾಲಕಿಯರಲ್ಲಿ ಹಿರಿಯಳಾದ 17 ವರ್ಷದ ಬಾಲಕಿಯನ್ನು ಗುರಿಯಾಗಿಸಿಕೊಂಡು ನೀರಿನಲ್ಲಿ ಕ್ರಿಮಿನಾಶಕ ಬೆರಸಿ ನೀಡಿದ್ದಾಗಿ ವಿನಯ್ ಹೇಳಿದ್ದಾನೆ. ಅವಳು ತನ್ನ ಪ್ರೀತಿಯನ್ನು ನಿರಾಕರಿಸಿ, ಮೊಬೈಲ್ ನಂಬರ್ ಕೊಡಲೂ ಒಪ್ಪದಿದ್ದಾಗ ಸಿಟ್ಟು ಬಂದು ಈ ಕೃತ್ಯ ಎಸಗಿದ್ದಾಗಿ ವಿನಯ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.. ಉಳಿದ ಇಬ್ಬರು ಬಾಲಕಿಯರೂ ಅದೇ ನೀರನ್ನು ಕುಡಿದಿದ್ದರು ಎನ್ನಲಾಗಿದೆ.
13 ಮತ್ತು 16 ವರ್ಷದ ದಲಿತ ಬಾಲಕಿಯರು ಬುಧವಾರ ಸಂಜೆ ಶವವಾಗಿ ಪತ್ತೆಯಾಗಿದ್ದರೆ, 17 ವರ್ಷದ ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಂಬಂಧಿಕರ ಪ್ರಕಾರ ಮೂವರೂ ಮೇವು ಸಂಗ್ರಹಿಸಲು ಕುಟುಂಬದ ಜಮೀನುಗಳಿಗೆ ಹೋಗಿದ್ದರು.
ಬಾಲಕಿಯರ ಪಕ್ಕದ ಹಳ್ಳಿಯವನಾದ ವಿನಯ್ ಜಮೀನು ಬಾಲಕಿಯರ ಜಮೀನಿನ ಪಕ್ಕದಲ್ಲೇ ಇದೆ. ಲಾಕ್ಡೌನ್ ಸಮಯದಿಂದ ವಿನಯ್ ಬಾಲಕಿಯರ ಜೊತೆ ಸ್ನೇಹ ಬೆಳೆಸಿದ್ದ. ಆಗಾಗ ಜಮೀನಿನಲ್ಲಿ ಅವರನ್ನು ಭೇಟಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿನಯ್ ಮತ್ತು ಇನ್ನೊಬ್ಬ ಅಪ್ರಾಪ್ತ ಆರೋಪಿ ಕೂಡ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಶುಕ್ರವಾರ ಸಂಜೆ ಉನ್ನಾವೊದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಲಕ್ನೋ ರೇಂಜ್ ಇನ್ಸ್ಪೆಕ್ಟರ್ ಜನರಲ್ (ಐಜಿ) ಲಕ್ಷ್ಮಿ ಸಿಂಗ್, “ಆರೋಪಿಗಳನ್ನು ಹತ್ತಿರದ ಕ್ರಾಸ್ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಲ್ಲಿ ಒಬ್ಬರು ವಿನಯ್ ಅಲಿಯಾಸ್ ಲಂಬು ಮತ್ತು ಇನ್ನೊಬ್ಬರು ಮೈನರ್. ವಿಚಾರಣೆಯ ನಂತರ, ವಿನಯ್ ಅಪರಾಧವನ್ನು ಒಪ್ಪಿಕೊಂಡ ಮತ್ತು ಘಟನೆಗಳ ಸಂಪೂರ್ಣ ಅನುಕ್ರಮವನ್ನು ನಮಗೆ ತಿಳಿಸಿದ” ಎಂದಿದ್ದಾರೆ.
ಹಲ್ಲೆ ನಡೆಸಿದ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ಪೊಲೀಸರು ಪುನರಾವರ್ತಿಸಿದರು. “ಶವಪರೀಕ್ಷೆಯ ವರದಿಯ ಪ್ರಕಾರ, ಹುಡುಗಿಯರ ಮೇಲೆ ಯಾವುದೇ ಬಾಹ್ಯ ಅಥವಾ ಆಂತರಿಕ ಗಾಯಗಳು ಕಂಡುಬಂದಿಲ್ಲ. ಹಲ್ಲೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ, ಮತ್ತು ಆರೋಪಿ ನೀಡಿದ ಹೇಳಿಕೆಯಲ್ಲಿ ಬಾಲಕಿಯರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಐಜಿ ಹೇಳಿದ್ದಾರೆ, ಕುಟುಂಬದ ಕೆಲವು ಸದಸ್ಯರು ಆರೋಪಿಸಿರುವಂತೆ ವಿನಯ್ ಹುಡುಗಿಯರ ಕೈಕಾಲು ಕಟ್ಟಿಹಾಕಿದ್ದನ್ನು ನಿರಾಕರಿಸಿದ್ದಾನೆ ಎಂದು ಹೇಳಿದರು.
“17 ವರ್ಷದ ಬಾಲಕಿಗೆ ಪ್ರೀತಿಸುವಂತೆ ವಿನಯ್ ಒತ್ತಾಯಿಸಿ ವಿಫಲನಾಗಿದ್ದ. ಅವನು ಕೋಪದಿಂದ ಅಪರಾಧ ಮಾಡಿದ್ದಾನೆ. ತನ್ನ ಜಮೀನಿನಲ್ಲಿ ಇಟ್ಟಿದ್ದ ಕೀಟನಾಶಕವನ್ನು ನೀರಿನಲ್ಲಿ ಬೆರೆಸಿ ಕೃತ್ಯ ಎಸಗಿದ್ದಾನೆ ಎಮದು ಐಜಿ ವಿವರಿಸಿದ್ದಾರೆ.
ಅಪ್ರಾಪ್ತ ವಯಸ್ಕನು ವಿನಯ್ಗೆ ಸಮೀಪದ ಅಂಗಡಿಯಿಂದ ತಿಂಡಿ ತಂದು ಕೊಟ್ಟಿದ್ದಾನೆ. ಹುಡುಗಿಯರು ಅಂಗಡಿಯಿಂದ ಕೆಲವು ತಿಂಡಿಗಳನ್ನು ತಂದಿದ್ದಾರೆ. ಅವರು ವಿನಯ್ ಜಮೀನಿನ ಬಳಿ ಭೇಟಿಯಾಗಿ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ತದನಂತರ ವಿನಯ್ 17 ವರ್ಷದ ಬಾಲಕಿಗೆ (ಕೀಟನಾಶಕದೊಂದಿಗೆ) ನೀರನ್ನು ನೀಡಿದ. ಅವಳು ನೀರು ಕುಡಿದ ನಂತರ, ಇತರ ಇಬ್ಬರು ಹುಡುಗಿಯರು ಬಾಟಲಿಯನ್ನು ಕಿತ್ತುಕೊಂಡು ತಾವೂ ಕುಡಿದರು. ವಿನಯ್ ಇತರ ಹುಡುಗಿಯರಿಗೆ ನೀರು ಕುಡಿಯದಿರಲು ಒತ್ತಾಯಿಸಿದ್ದಾನೆ. ಆದರೆ ಅವರು ಕೇಳಲಿಲ್ಲ…’ ಎಂದು ಐಜಿ ಹೇಳಿದ್ದಾರೆ.
“ನೀರನ್ನು ಕುಡಿದ ನಂತರ, ಅವರು ಪ್ರಜ್ಞಾಹೀನರಾದರು ಮತ್ತು ನೊರೆ ಪದಾರ್ಥವು ಅವರ ಬಾಯಿಯಿಂದ ಹೊರಬರಲು ಪ್ರಾರಂಭಿಸಿತು. ವಿನಯ್ ಮತ್ತು ಅವನ ಸಹಚರ ಭಯಭೀತರಾಗಿ ಓಡಿಹೋದರು” ಎಂದು ಐಜಿ ತಿಳಿಸಿದ್ದಾರೆ.
ಇತರ ಜನರು ಭಾಗಿಯಾಗಿರಬಹುದೇ ಎಂದು ಕೇಳಿದಾಗ, ಐಜಿ, “ಇಲ್ಲಿಯವರೆಗೆ, ನಾವು ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಸಮೀಪದ ಮನೆಗಳವರು ನಮಗೆ ನೀಡಿದ ಮಾಹಿತಿಯು ಈ ಇಬ್ಬರು ಮಾತ್ರ ಅಪರಾಧ ಎಸಗಿರುವುದನ್ನು ಸೂಚಿಸುತ್ತದೆ. ಅಲ್ಲದೆ, ಪ್ರಶ್ನಿಸುವಾಗ ಅವರು ಬೇರೆ ಯಾರನ್ನೂ ಹೆಸರಿಸಿಲ್ಲ’ ಎಂದಿದ್ದಾರೆ.
ಅಪರಾಧದ ಸ್ಥಳದಿಂದ ಕೆಲವು ಸ್ನ್ಯಾಕ್ ಪ್ಯಾಕೆಟ್, ಸಿಗರೇಟ್ ತುಂಡು ಮತ್ತು ನೀರಿನ ಬಾಟಲಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದವರು ಕ್ರಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಉನ್ನಾವೊದಲ್ಲಿ ಇಬ್ಬರು ದಲಿತ ಬಾಲಕಿಯರ ಶವ ಪತ್ತೆ: ಮತ್ತೊಬ್ಬಳ ಸ್ಥಿತಿ ಗಂಭೀರ