ಬೆಂಗಳೂರಿಗೆ ಬೇರೆ ಬೇರೆ ಭಾಗಗಳಿಂದ ಮಾರಕ ಆಯುಧಗಳು, ಮಾದಕ ವಸ್ತುಗಳು, ನಕಲಿ ನೋಟುಗಳು ಹರಿದು ಬರುವುದು ಸಾಮಾನ್ಯ ಸಂಗತಿ. ಕೆಲವು ಸಲ ಪೊಲೀಸರ ಕಾರ್ಯಾಚರಣೆ ವೇಳೆ ಇಂತಹ ಜಾಲಗಳು ಪತ್ತೆಯಾಗುತ್ತವೆ. ಬೆಂಗಳೂರಿನ ಪೊಲೀಸರು ಹಿಂದೆ ಉತ್ತರ ಪ್ರದೇಶ, ಬಿಹಾರ ಮೂಲದಿಂದ ಬರುತ್ತಿದ್ದ ದೇಸಿ ಗನ್ ಗಳು, ನಾಡಾ ಕೋವಿಗಳು, ಕಚ್ಚಾ ಬಾಂಬ್ಗಳನ್ನು ಸಾಕಷ್ಟು ಸಾರಿ ಹಿಡಿದಿದ್ದರು. ಭೀಮಾ ತೀರದಲ್ಲೂ ಆಗಾಗ ಇಂತಹ ಬಂಧನಗಳು ಬೆಳಕಿಗೆ ಬಂದಿದ್ದವು. ಈಗ ಮತ್ತೊಮ್ಮೆ ಸಿಸಿಬಿ ಪೊಲೀಸರು ಹೈದ್ರಾಬಾದ್ನಲ್ಲಿ ಅಂತಹದ್ದೇ ಕಾರ್ಯಚರಣೆ ನಡೆಸಿದ್ದಾರೆ. ಬೆಂಗಳೂರಿನ ಡಾನ್ಗಳಿಗೆ, ರೌಡಿಗಳಿಗೆ ಗನ್ಗಳನ್ನು ಪೂರೈಸುತ್ತಿದ್ದ ಆರೋಪಿಗಳನ್ನು ಹೈದ್ರಾಬಾದ್ನಲ್ಲಿ ಶನಿವಾರ, ಜೂನ್ 12 ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 3 ದೇಸಿ ಗನ್ಗಳು 15 ಸುತ್ತಿಗಾಗುವಷ್ಟು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಗನ್ ಪೂರೈಕೆಯಲ್ಲಿ ಆರೋಪಿಗೆ ಸಹಾಯ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳೂ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಡುಬೀಸನಹಳ್ಳಿ ರೋಹಿತ್ ಎಂಬ ರೌಡಿಶೀಟರ್ ನೀಡಿದ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಬೆಂಗಳೂರ-ಹೈದ್ರಾಬಾದ್ ಆಯುಧ ಪೂರೈಕೆ ಜಾಲವನ್ನು ಬೇಧಿಸಿದ್ದಾರೆ.
ಏಪ್ರಿಲ್ 8 ರಂದು ಸಿಸಿಬಿ ಪೊಲೀಸರು ಕಡುಬೀಸನಹಳ್ಳಿ ಸೋಮ ಎಂಬವನ ಮೇಲೆ ನಡೆದ ದಾಳಿ ಪ್ರಯತ್ನದಲ್ಲಿ ರೌಡಿಶೀಟರ್ ರೋಹಿತ್ ಸೇರಿ 11 ಜನರನ್ನು ಬಂಧಿಸಿದ್ದರು. ನಂತರ ರೋಹಿತ್ ಗೆ ಆಯುಧ ಪೂರೈಸುವವರ ಕುರಿತಾಗಿ ತನಿಖೆ ನಡೆಸಿದಾಗ ಕಲ್ಬುರ್ಗಿ ಮೂಲದ ಸುಂಕಾರಿ ಸತೀಶ ಅಲಿಯಾಸ್ ಮಾರ್ಕೆಟ್ ಸತೀಶ ಎಂಬ ವ್ಯಕ್ತಿಯ ಬಗ್ಗೆ ತಿಳಿದುಬಂದಿದೆ. ಮಾರ್ಕೆಟ್ ಸತೀಶ ರೌಡಿ ಶೀಟರ್ ಆಗಿದ್ದು ಕರ್ನಾಟಕ ಮತ್ತು ಹೈದ್ರಾಬಾದ್ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಶನಿವಾರ, 12 ಜೂನ್ ಅಂದು ಸಿಸಿಬಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಹೈದ್ರಾಬಾದ್ನ ಸೈದಾಬಾದ್ನಲ್ಲಿ ಅಡಗಿದ್ದ ಮಾರ್ಕೆಟ್ ಸತೀಶನನ್ನು ಬಂಧಿಸಿದ್ದಾರೆ. ಮಾರ್ಕೆಟ್ ಸತೀಶ್ ಈ ಹಿಂದೆ ಕರ್ನಾಟಕ ಗೂಂಡಾ ಖಾಯ್ದೆಯ ಅಂಡಿ ಬಂಧಿತನಾಗಿದ್ದ ವ್ಯಕ್ತಿ. ಆತ ಮಧ್ಯಪ್ರದೇಶದಿಂದ ಗನ್ ಮತ್ತು ಇತರ ಆಯುಧಗಳನ್ನು ತರಿಸಿ ಸುಮಾರು 2,00,000 ರೂ.ಗಳಿಗೆ ಬೆಂಗಳೂರಿನ ರೌಡಿಗಳಿಗೆ ಮಾರುತ್ತಿದ್ದ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಜಿ-7 ಶೃಂಗಸಭೆ: ’ಒಂದು ಭೂಮಿ, ಒಂದು ಆರೋಗ್ಯ’ ವಿಧಾನ ಅಳವಡಿಸಿಕೊಳ್ಳಲು ಪ್ರಧಾನಿ ಸಲಹೆ