ಮುರಕಲು ಮನೆ, ಸುತ್ತಲು ಹಬ್ಬಿದ ಗಿಡಗಂಟಿ. ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ. ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ ಮಗ ಕೊಲೆಯಾದ. ಸೊಸೆ ಸಾವಿಗೀಡಾದಳು. ಮಗಳು ಸತ್ತಳು. 12 ವರ್ಷದ ಮೊಮ್ಮಗನ ಶಿಕ್ಷಣ ಭಾರ ಹೊತ್ತ ಮುದುಕಿ, ಜೀವನಕ್ಕಾಗಿ ಆಯ್ದುಕೊಂಡಿದ್ದು ಚಿಂದಿ ಆಯುವ ಬದುಕು.- ಇದು ಶಿವಮೊಗ್ಗದ ಮೀನಾಕ್ಷಮ್ಮನ ನೋವಿನ ಕಥನ.
ಸಂಘಪರಿವಾರದ ರಾಜಕೀಯ ಮುಖಂಡರು ಬಡವರು, ದಲಿತಾದಿ ಶೂದ್ರರ ಮಕ್ಕಳನ್ನು ಹಿಂದುತ್ವದ ಗಲಭೆಗಳಿಗೆ ತಳ್ಳಿ, ಆ ಯುವಕರು ಅನ್ಯಕೋಮಿನಿಂದ ಕೊಲೆಯಾದಾಗ, ಆ ಸಾವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಾರೆಂಬ ಆರೋಪಗಳು ಸಾಮಾನ್ಯವಾಗಿವೆ. ಮಕ್ಕಳು ಬಲಿಪಶುಗಳಾದ ಮೇಲೆ ಪೋಷಕರು ಕಣ್ಣೀರಲ್ಲಿ ಕೈತೊಳೆಯುವಂತಾಗುತ್ತದೆ. ಇಂತಹದ್ದೇ ಮನಕಲಕುವ ಮತ್ತೊಂದು ಘಟನೆಗೆ ಶಿವಮೊಗ್ಗ ಜಿಲ್ಲೆ ಸಾಕ್ಷಿಯಾಗಿದೆ.
ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದನು. (ಕೊಲೆಯ ಕಾರಣ ಇನ್ನೂ ಬಹಿರಂಗವಾಗಿಲ್ಲ.) ನಿಷೇದಾಜ್ಞೆಯ ನಡುವೆ ಹರ್ಷನ ಮೃತ ಶರೀರವನ್ನು ಮೆರವಣಿಗೆ ಮಾಡಿದಾಗ ಹಲವು ಅಹಿತಕರ ಘಟನೆಗಳೂ ನಡೆದಿವೆ. ಕೆಲವು ಬಿಜೆಪಿ ನಾಯಕರು ಶವ ಮೆರವಣಿಗೆಯ ಮುಂದಾಳತ್ವ ವಹಿಸಿದ್ದರು. ಅಲ್ಲದೆ ಹರ್ಷ ಕೊಲೆಯನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳಾಗಿವೆ. ಹರ್ಷ ಸಾವನ್ನು ಕಾರಣವಾಗಿಟ್ಟುಕೊಂಡು ಮುಸ್ಲಿಂ ಸಮುದಾಯದ ವಿರುದ್ಧ ಕೆಲವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಹರ್ಷನ ಕುಟುಂಬಕ್ಕೆ ನೆರವು ಕೂಡ ಹರಿದು ಬರುತ್ತಿದೆ. ಆದರೆ 2015ರಲ್ಲಿ ಕೊಲೆಯಾದ ಹಿಂದುತ್ವ ಕಾರ್ಯಕರ್ತ ವಿಶ್ವನಾಥ ಶೆಟ್ಟಿಯ ಕುಟುಂಬ ಏನಾಯಿತೆಂದು ಯೋಚಿಸಿದ್ದಾರಾ? ವಿಶ್ವನಾಥ್ ಅವರ ತಾಯಿ ಮೀನಾಕ್ಷಮ್ಮ ಅನಾಥರಾಗಿ, ಚಿಂದಿ ಆಯುತ್ತ ಬದುಕುವಂತಾಯಿಲ್ಲತ್ತಲ್ಲ, ಇದಕ್ಕೆ ಹೊಣೆ ಯಾರು?
ಶಿವಮೊಗ್ಗ ನಗರದಲ್ಲಿ 2015ರಲ್ಲಿ ನಡೆದ ಪಿಎಫ್ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಕೆಲವರು ಗಾಜನೂರು ಬಳಿ ಆಲ್ಕೊಳದ ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಕೊಲೆಯಾದಾಗ ಹಿಂದುತ್ವ ಸಂಘಟನೆಗಳು ಶಿವಮೊಗ್ಗ ನಗರವನ್ನು ಬಂದ್ ಮಾಡಿದ್ದವು. ಭಾರೀ ಪ್ರತಿಭಟನೆ ನಡೆಸಿದ್ದವು. ವಿಶ್ವನಾಥ್ ಕುಟುಂಬವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.
“ನಿಮಗೆ ನಾವು ಮಕ್ಕಳಾಗಿ ಇರುತ್ತೇವೆ. ನಿಮ್ಮನ್ನು ಕಡೆಯವರೆಗೂ ನೋಡಿಕೊಳ್ಳುತ್ತೇವೆ” ಎಂದು ವೀರಾವೇಶದಿಂದ ಮಾತನಾಡಿದ ಯಾವ ಮುಖಂಡನೂ ಮೀನಾಕ್ಷಮ್ಮನ ಸಹಾಯಕಕ್ಕೆ ಬಂದಿಲ್ಲ. ಮೀನಾಕ್ಷಮ್ಮನವರು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಲ್ಲಿ ಇಲ್ಲಿ ಪುಳ್ಳೆ ಆಯ್ದು ತಂದು ಅಡುಗೆ ಮಾಡಿಕೊಳ್ಳುತ್ತಿದ್ದಾರೆ.
ವಿಶ್ವನಾಥ್ ಅವರ ಹೆಂಡತಿ ಕಾಯಿಲೆ ಬಿದ್ದರು. ಸರ್ಕಾರ ನೀಡಿದ್ದ ಐದು ಲಕ್ಷ ರೂ. ಪರಿಹಾರ ಹಣ ವಿಶ್ವನಾಥ್ ಅವರ ಪತ್ನಿಯ ಆಸ್ಪತ್ರೆಯ ಖರ್ಚಿಗಾಯಿತು. ಜಾಂಡೀಸ್ ಆಗಿ ಅವರು ತೀರಿಕೊಂಡ ಬಳಿಕ ಪುಟಾಣಿ ಆದಿತ್ಯನ ಭಾರ ಮೀನಾಕ್ಷಮ್ಮನ ಅವರ ಹೆಗಲ ಮೇಲೆ ಬಿತ್ತು. ಮಗಳು ಕೂಡ ತೀರಿಕೊಂಡ ಬಳಿಕ ಮೀನಾಕ್ಷಮ್ಮ ಅನಾಥೆಯಾದರು. ಮಗುವನ್ನು ಓದಿಸುವ ಭಾರಹೊತ್ತಿಕೊಂಡ ಅಜ್ಜಿ, ಚಿಂದಿ ಆಯುತ್ತ ಬದುಕು ಸವೆಸುತ್ತಿದ್ದಾರೆ.
ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ, ಮೃತನ ಪೋನ್ ನಾಪತ್ತೆ
“ಸರಕಾರದಿಂದ ಕೊಡುವ ಸಂಧ್ಯಾ ಸುರಕ್ಷಾ ಪಿಂಚಣಿ ಸಿಗುತ್ತಿಲ್ಲ. ಜೀವ ಇರುವವರೆಗೆ ಹೊಟ್ಟೆ ತುಂಬಿಸಿಕೊಳ್ಳಬೇಕಲ್ವಾ? ನ್ಯಾಯಬೆಲೆ ಅಂಗಡಿಯಿಂದ ತಿಂಗಳಿಗೆ 10 ಕೆ.ಜಿ. ಅಕ್ಕಿ ಕೊಡುತ್ತಾರೆ. ಪ್ರತಿದಿನ ಬೆಳಿಗ್ಗೆ ರಸ್ತೆ, ತಿಪ್ಪೆಗಳಲ್ಲಿ ಪ್ಲಾಸ್ಟಿಕ್ ಆಯುವುದರಿಂದ 10ರಿಂದ 20 ರೂಪಾಯಿ ಬರುತ್ತದೆ. ಅದರಲ್ಲಿ ತರಕಾರಿ, ದಿನಸಿ, ಮಾತ್ರೆ ಎಲ್ಲವನ್ನೂ ಸರಿದೂಗಿಸಬೇಕು ಎನ್ನುವಾಗ ಆ ತಾಯಿ ಕಣ್ಣೀರು ಸುರಿಸಿದರು” ಎಂದು ‘ವಿಜಯಕರ್ನಾಟಕ’ ವರದಿ ಮಾಡಿದೆ.
“ಮಗನಿಲ್ಲ, ಮಗಳಿಲ್ಲ, ಸೊಸೆ ಇಲ್ಲ. ಮಗ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎರಡು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪಿಂಚಣಿ ಸಿಕ್ಕಿಲ್ಲ. ಕರೆಂಟ್ ಬಿಲ್ ಕಟ್ಟಿಲ್ಲವೆಂದು ಮೂರು ವರ್ಷದ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಮನೆಯಲ್ಲಿ ಬೆಳಕಿಲ್ಲ. ನೀರಿನ ಬಿಲ್ ಕಟ್ಟಿಲ್ಲವೆಂದು ನೀರಿನ ಸಂಪರ್ಕವಿಲ್ಲ”- ಹೀಗೆ ‘ಇಲ್ಲ’ಗಳ ಪಟ್ಟಿಯ ನಡುವೆ ಇಳಿಜೀವದ ಮೀನಾಕ್ಷಮ್ಮನ ಬದುಕು ಹಿಂಡಿ ಹಿಪ್ಪೆಯಾಗಿದೆ.
“ಹರ್ಷ ಕುಟುಂಬಕ್ಕೆ ಹಲವರು ನೆರವು ನೀಡಿದ್ದಾರೆ. ಒಂದು ಕೋಟಿ ರೂ. ಕುಟುಂಬಕ್ಕೆ ಹರಿದುಬಂದಿದೆ. ಆದರೆ ವಿಶ್ವನಾಥ್ ಅವರ ತಾಯಿ ಮಾತ್ರ ಪುಟ್ಟ ಮನೆಯಲ್ಲಿ ಕತ್ತಲೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ” ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.
ವಿಶ್ವನಾಥ್ ತಾಯಿಯವರನ್ನು ಭೇಟಿಯಾಗಿ ನೆರವು ನೀಡಿರುವ ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್ ಅವರು ‘ನಾನುಗೌರಿ.ಕಾಂ’ನೊಂದಿಗೆ ಮಾತನಾಡಿ, “ಮೀನಾಕ್ಷಮ್ಮನವರ ಸ್ಥಿತಿ ನೋಡಿದರೆ ಬಹಳ ನೋವಾಗುತ್ತದೆ. ಕುಡಿಯಲು ನೀರಿನ ಸಂಪರ್ಕವಿರಲಿಲ್ಲ. ಮನೆಯಂತೂ ಬಹಳ ದುಸ್ಥಿತಿಯಲ್ಲಿದೆ. ಕರೆಂಟ್ ಬಿಲ್ ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಕ್ರಮ ವಹಿಸಿದೆ. ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಮನೆಗೆ ಸುಣ್ಣ ಬಣ್ಣ ಬಳಿಸಲಾಗುವುದು. ವಿಷಯ ತಿಳಿದ ಅನೇಕ ಸಂಘಟನೆಗಳು ಮೀನಾಕ್ಷಮ್ಮನವರಿಗೆ ನೆರವು ನೀಡಲು ಮುಂದಾಗಿವೆ. 12 ವರ್ಷದ ಮೊಮ್ಮಗನನ್ನು ಸಾಕಲು ಆ ತಾಯಿ ಬಹಳ ಕಷ್ಟಪಡುತ್ತಿದ್ದಾರೆ. ಈ ಕಷ್ಟ ಯಾರಿಗೂ ಬರಬಾರದು” ಎಂದರು.
ಮೀನಾಕ್ಷಮ್ಮನವರಿಗೆ ನೆರವು ನೀಡಲು ಬಯಸುವವರು ಈ ಖಾತೆಗೆ ಹಣ ಕಳುಹಿಸಬಹುದು.
ಇದನ್ನೂ ಓದಿರಿ: ‘ಬಾಳಿಗ ಕೊಲೆಯ ಬಗ್ಗೆ ಬಾಯಿಬಿಡದವರು, ದಲಿತ ವ್ಯಕ್ತಿ ಕೊಲೆಯಾದದ್ದು ಖಂಡಿಸುತ್ತಾರಾ?’