“ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರು ಕೊಲೆಯಾಗಿದ್ದರ ಬಗ್ಗೆ ಇಲ್ಲಿಯ (ಕರಾವಳಿ) ಮುಖಂಡರು ಇದುವರೆಗೂ ಬಾಯಿ ತೆರೆದಿಲ್ಲ. ಇನ್ನು ಧರ್ಮಸ್ಥಳದ ದಲಿತ ವ್ಯಕ್ತಿ ದಿನೇಶ ಅವರು ಕೊಲೆಯಾಗಿರುವುದನ್ನು ಖಂಡಿಸುತ್ತಾರಾ?” ಎಂದು ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ ಪ್ರಶ್ನಿಸಿದ್ದಾರೆ.
‘ನಾನುಗೌರಿ.ಕಾಂ’ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, “ನಮ್ಮಲ್ಲಿ ಕೊಲೆಯಾದವರು ಮುಖ್ಯವಲ್ಲ, ಯಾರು ಕೊಲೆ ಮಾಡಿದ್ದೆನ್ನುವುದು ಮುಖ್ಯ. ಹಾಗಾಗಿ ಶರತ್ ಮಡಿವಾಳನ ಜೀವಕ್ಕಿರುವ ಬೆಲೆ ವಿನಾಯಕ ಬಾಳಿಗರ ಜೀವಕ್ಕಿಲ್ಲ. ಹರ್ಷನ ಜೀವಕ್ಕಿರುವ ಬೆಲೆ ದಿನೇಶರ ಜೀವಕ್ಕಿಲ್ಲ” ಎಂದು ವಿಷಾದಿಸಿದ್ದಾರೆ.
“ಅಷ್ಟೇ ಯಾಕೆ ಪಾಕ್ ಸೈನಿಕರಿಂದ ಹತರಾದ ಯೋಧರಿಗಿರುವ ಬೆಲೆ ಗಾಲ್ವಾನ್ನಲ್ಲಿ ಚೀನೀ ಸೈನಿಕರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗಿಲ್ಲ. ಅದೇ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಅಪಹರಿಸಿದ ಹತ್ತು ಮಂದಿ ಭಾರತೀಯ ಸೈನಿಕರ ಬಗ್ಗೆ ನಮ್ಮಲ್ಲಿ ಯಾವತ್ತಾದರೂ ಚರ್ಚೆ ನಡೆದಿದೆಯೇ? ಊಹುಂ! ನಮ್ಮಲ್ಲಿ ನೀರವ ಮೌನ” ಎಂದು ಹೇಳಿದ್ದಾರೆ.
“ನಮ್ಮ ದೇಶಭಕ್ತಿ ಉಕ್ಕಿ ಹರಿಯಬೇಕಾದರೆ, ನಮ್ಮ ಘೋಷಣೆಗಳು ಮುಗಿಲು ಮುಟ್ಟಬೇಕಾದರೆ, ನಮ್ಮ ಜನರ ಹಾಗೂ ನಾಯಕರ ಎದೆಯ ವಿಸ್ತೀರ್ಣ ಜಗತ್ತಿಗೆ ತಿಳಿಯಬೇಕಾದರೆ ನಮ್ಮ ಶತ್ರು ಮುಸ್ಲಿಮನಾಗಿರಬೇಕು ಇಲ್ಲವೇ ನಮ್ಮ ಸಂತ್ರಸ್ತರು ಸಮಾಜದ ಗಣ್ಯ ವರ್ಗದವರಾಗಿರಬೇಕು” ಎಂದು ಅವರು ಟೀಕಿಸಿದ್ದಾರೆ.
“ಇಲ್ಲಿ ಮುಸ್ಲಿಮರ ಜೀವಕ್ಕೆ ಬೆಲೆಯಿಲ್ಲ. ಆದರೆ ಮುಸ್ಲಿಮರಿಂದ ಕೊಲೆಯಾದ ದೇಹಕ್ಕೆ ಬೆಲೆಯಿದೆ. ಇದು ಸಿರಿವಂತರ ಸಮಾಜ, ಇದು ಗಣ್ಯರ ಸಮಾಜ, ಇದು ಮೇಲ್ವರ್ಗದವರ ಸಮಾಜ. ಇಲ್ಲಿ ದೊಡ್ಡವರ, ಉಳ್ಳವರ ಪ್ರಾಣಕ್ಕೆ ಬೆಲೆಯೇ ಹೊರತು, ತಳವರ್ಗದ, ಬಡವರ ಪ್ರಾಣಕ್ಕಲ್ಲ. ಇದು ಇಂದಿನ ವಿದ್ಯಾಮಾನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಕರಾವಳಿಯ ಸಾಮಾನ್ಯರು ಬುದ್ಧಿವಂತರಾಗುತ್ತಿದ್ದಾರೆ’
“ನಮ್ಮ ಕರಾವಳಿ ಯಾಕೆ ಶಾಂತವಾಗಿದೆ? ಮಂಗಳೂರಿನಲ್ಲಿ ನಾಗವನ ದೇವಸ್ಥಾನಕ್ಕೆ ಅಪಚಾರವಾದರೂ ಕೂಡ ನಮ್ಮವರು ಶಾಂತವಾಗಿದ್ದಾರೆ. ದೂರದ ಶಿವಮೊಗ್ಗದಲ್ಲಿ ಸಂಘಟನೆಯ ಯುವಕರನ್ನು ಕೊಲೆ ಮಾಡಿದರೂ ನಮ್ಮ ಮಂಗಳೂರು ಶಾಂತವಾಗಿದೆ. ಕರಾವಳಿಯ ಜನ ಬುದ್ಧಿವಂತರು. ಇದಕ್ಕೆಲ್ಲ ಮುಖ್ಯ ಕಾರಣ- ಕರಾವಳಿ ಜನ ತಮ್ಮ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುತ್ತಿರುವುದು” ಎಂದು ಸುನಿಲ್ ಬಜಿಲಕೇರಿ ತಿಳಿಸಿದ್ದಾರೆ.
“ಒಂದು ಸಂದರ್ಭದಲ್ಲಿ ಕರಾವಳಿಯ ಹಿಂದುಳಿದ ವರ್ಗದ ಮನೆಗಳಲ್ಲಿ ಕಾರ್ಪೆಂಟರ್, ಮೆಕಾನಿಕ್, ಪ್ಲಂಬರ್ ಪೇಂಟರ್ ಮತ್ತು ಕೂಲಿ ಕೆಲಸ, ಮೇಸ್ತ್ರಿ ಕೆಲಸ ಮಾಡುವವರೇ ಹೆಚ್ಚಾಗಿದ್ದರು. ಈ ಹಿಂದುಳಿದ ವರ್ಗದ ಇಂಥ ಯುವಕರನ್ನು ಪ್ರಚೋದಿಸಲು ಸುಲಭವಾಗುತ್ತಿತ್ತು. ಸುರತ್ಕಲ್ ಪ್ರದೇಶದಲ್ಲಿ ಸತ್ಯಜಿತ್ ಹಿಡಿತವಿದ್ದು ಅವರು ತನ್ನ ಯುವಕರನ್ನು ಯಾವುದೇ ಗಲಭೆಗೆ ಹೋಗದಂತೆ ನಿಯಂತ್ರಿಸಿದ್ದಾರೆ. ಕಾರಣ ಅವರಿಗೆ ಬಿಜೆಪಿಯ ಕುತಂತ್ರ ತಿಳಿದದ್ದು, ಕುದ್ರೋಳಿ ಬಜಿಲಕೇರಿ ಇವತ್ತು ತುಂಬಾ ಶಾಂತವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಧರ್ಮಸ್ಥಳ: ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ – ಪ್ರಕರಣ ದಾಖಲು