ಐತಿಹಾಸಿಕ ರೈತ ಚಳವಳಿ ಗೆಲುವು ಸಾಧಿಸಿದೆ. ಕೃಷಿ ಕಾಯ್ದೆಗಳು ರದ್ದಾದ ನಂತರ ಎಂಎಸ್ಪಿ ಸೇರಿದಂತೆ ರೈತರ ಇತರ ಹಕ್ಕೊತ್ತಾಯಗಳ ಎದುರು ಮೋದಿ ಸರ್ಕಾರ ಮಂಡಿಯೂರಿದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ಮತ್ತು ಪಂಜಾಬ್ನ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ರೈತ ಹೋರಾಟಕ್ಕೆ ತೆರೆ ಎಳೆಯುವುದಾಗಿ ರೈತ ಹೋರಾಟದ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಆದರೆ ಎಂಎಸ್ಪಿ ಸಿಗುವವರೆಗೂ ಮತ್ತು ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ಚಳವಳಿ ನಿರಂತರವಾಗಿ ನಡೆಯಲಿದ್ದ, ಮುಂದಕ್ಕೂ ಕಿಸಾನ್ ಮೋರ್ಚಾ ದೇಶಾದ್ಯಂತ ಮುಂದುವರೆಯುತ್ತದೆ ಎಂದು ಎಸ್ಕೆಎಂ ತಿಳಿಸಿದೆ.
ದೆಹಲಿ ಗಡಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರ ಸ್ಥಳಗಳಲ್ಲಿನ ಪ್ರತಿಭಟನಾ ಧರಣಿಗಳನ್ನು ತೆರವುಗೊಳಿಸುವುದಾಗಿ ಎಸ್ಕೆಎಂ ಔಪಚಾರಿಕವಾಗಿ ಘೋಷಿಸುತ್ತದೆ. ಪ್ರಸ್ತುತ ಆಂದೋಲನವನ್ನು ಸ್ಥಗಿತಗೊಳಿಸಲಾಗಿದೆ, ಹೋರಾಟ ಗೆದ್ದಿದೆ; ರೈತರ ಹಕ್ಕುಗಳನ್ನು ಖಾತ್ರಿಪಡಿಸುವ ಹೋರಾಟ ಮುಂದುವರಿಯುತ್ತದೆ ಎಂದು ಎಸ್ಕೆಎಂ ಟ್ವೀಟ್ ಮಾಡಿದೆ.
ಕೇಂದ್ರ ಸರ್ಕಾರ ರೈತರಿಗೆ ಅಧಿಕೃತ ಪತ್ರ ಬರೆದಿದೆ. ಅದರಲ್ಲಿ ಎಂಎಸ್ಪಿಗೆ ಶಾಸನಬದ್ಧ ಮಾನ್ಯತೆ, ರೈತರ ಮೇಲಿನ ಎಲ್ಲಾ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವುದು, ಹುತಾತ್ಮ ರೈತ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ, ವಿದ್ಯುತ್ ಮಸೂದೆ ಹಿಂಪಡೆಯುವುದು ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ಅಪರಾಧೀಕರಿಸುವುದಕ್ಕೆ ತಡೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಸರ್ಕಾರಗಳು ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುತ್ತವೆ. ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೇಸುಗಳನ್ನು ಹಿಂಪಡೆಯುವುದಾಗಿ ಕೇಂದ್ರ ಏಜೆನ್ಸಿಗಳು ಒಪ್ಪಿಕೊಂಡಿವೆ. ರೈತರಿಗೆ ಪರಿಹಾರ ನೀಡಲು ಹರಿಯಾಣ, ಯುಪಿ ಸರ್ಕಾರಗಳು ಸಿದ್ಧವಾಗಿವೆ. ರೈತ ಸಂಘಟನೆಗಳೊಂದಿಗೆ ಚರ್ಚಿಸದೆ ವಿದ್ಯುತ್ ಬಿಲ್ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಚಳುವಳಿ ಮುಗಿದಿಲ್ಲ. ಎಂಎಸ್ಪಿ ಮತ್ತು ಲಖಿಂಪುರ ಮತ್ತಿತರ ಸಮಸ್ಯೆಗಳ ಕುರಿತು ಹೋರಾಟ ಮುಂದುವರಿಯಲಿದೆ. ಜನವರಿ 15 ರಂದು SKM ಮತ್ತೆ ಸಭೆ ಸೇರಲಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮುಂದುವರಿಯುತ್ತದೆ ಎಂದು ಘೋಷಿಸಿದೆ.
ಇದನ್ನೂ ಓದಿ; ದೆಹಲಿ ಗಡಿಗಳಲ್ಲಿನ ಹೋರಾಟಕ್ಕೆ ತೆರೆ: ವಿಜಯೀ ಮೆರವಣಿಗೆ ಮೂಲಕ ಪಂಜಾಬ್ಗೆ ತೆರಳಲಿರುವ ರೈತರು