Homeಅಂಕಣಗಳುಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ - ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

- Advertisement -
- Advertisement -

ಜಾಗತಿಕ ಸಿನಿಮಾ/ ಗ್ರೀಸ್ ಸಿನಿಮಾ/ ಥಿಯೋಡೊರಸ್ ಅಂಜೊಲಾಪೊಲಸ್

1. ಎಟರ್ನಿಟಿ ಅಂಡ್ ಅ ಡೇ (1998) ಮೂವರು ಕವಿಗಳು, ನೂರಾರು ವರ್ಷಗಳ ಗ್ರೀಸ್‌ನ ಇತಿಹಾಸ, ಗಡಿಗಳನ್ನು ಮೀರಿದ ಮಾನವತಾವಾದ, ಕೊನೆಯಿಲ್ಲದ ಕಲ್ಪನೆ ಹೀಗೆ ಎಲ್ಲವನ್ನು ದೃಶ್ಯರೂಪದ ಕವಿತೆಯನ್ನಾಗಿಸಿದರೆ ಅದೇ ಈ ಸಿನಿಮಾ. ಆನಾರೋಗ್ಯದಿಂದ ಬಳಲುತ್ತಿರುವ ಐವತ್ತರ ಅಸುಪಾಸಿನ ಕವಿ ಅಲೆಕ್ಸಾಂಡ್ರೊಸ್ ಮರುದಿನ ಆಸ್ಪತ್ರೆಗೆ ಸೇರುವ ತಯಾರಿಯಲ್ಲಿರುತ್ತಾನೆ. ಮಗಳನ್ನು ಮಾತನಾಡಿಸಿ, ತನ್ನ ಸಾಕುನಾಯಿಯ ಪಾಲನೆಯ ಜವಾಬ್ದಾರಿಯನ್ನು ವರ್ಗಾಯಿಸುವ ಸಲುವಾಗಿ ಹೊರಟು, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿರುವಾಗ, ಹದಿಮೂರು ವಯಸ್ಸಿನ ಕೆಳಗಿರುವ ಅಲ್ಬೆನಿಯನ್ ಹುಡುಗರ ಗುಂಪೊಂದು ನಿಂತಿರುವ ಕಾರುಗಳ ಗಾಜುಗಳನ್ನು ಒರೆಸಿ ಹಣ ಕೇಳುತ್ತಿರುತ್ತಾರೆ. ಅದೇ ಸಮಯಕ್ಕೆ ಪೊಲೀಸರ ಪಡೆಯೊಂದು ಆ ನಿರಾಶ್ರಿತ ಹುಡುಗರ ಗುಂಪನ್ನು ಹಿಡಿಯಲು ಮುಂದಾದಾಗ, ಆರು ವರ್ಷದ ಬಾಲಕನನ್ನು ತನ್ನ ಕಾರಿಗೆ ಹತ್ತಿಸಿಕೊಂಡು ಅಲೆಕ್ಸಾಂಡ್ರೊಸ್ ಕಾಪಾಡುತ್ತಾನೆ.

ಪೊಲೀಸರಿಂದ ಕಾಪಾಡಲ್ಪಟ್ಟ ಪುಟ್ಟ ಬಾಲಕನಿಗೆ ಸುರಕ್ಷಿತ ನೆಲೆ ಹುಡುಕುತ್ತಾ ಸಿನಿಮಾ ಮುಂದೆ ಸಾಗುತ್ತದೆ. ಅಲ್ಬೆನಿಯಾಗೆ ವಾಪಸ್ ಕಳುಹಿಸಲು ಗಡಿಯ ಬಳಿಗೆ ಇಬ್ಬರು ಬಂದು ನಿಲ್ಲಲು ಗಡಿಯ ಇಪ್ಪತ್ತೈದು ಅಡಿ ಎತ್ತರದ ಬೇಲಿಯ ಮೇಲೆ ಅಲ್ಬೆನಿಯಾದಿಂದ ಗ್ರೀಸ್‌ಗೆ ಬರಲು ಪ್ರಯತ್ನಿಸಿ ಚಳಿಯ ಮಂಜಿಗೆ ಹತ್ತಾರು ಮಕ್ಕಳು ಮರಗಟ್ಟಿ ಸತ್ತ ದೃಶ್ಯ ಎದೆ ಕಲಕುವಂತೆ ಮಾಡುತ್ತದೆ. ಮತ್ತೆ ಬಾಲಕನನ್ನು ನಿರಾಶ್ರಿತರಿರುವ ಜಾಗಕ್ಕೆ ಬಿಟ್ಟಾಗ, ಅಲ್ಲಿಂದ ಮಕ್ಕಳನ್ನು ಕದ್ದು ಶ್ರೀಮಂತ ದಂಪತಿಗಳಿಗೆ ಮಾರುವ ಗುಂಪಿನ ಕೈಗೆ ಬಾಲಕ ಸಿಕ್ಕಿಕೊಳ್ಳುತ್ತಾನೆ. ಆ ಸನ್ನಿವೇಶದಲ್ಲಿ ಹೇಗೆ ಬಡರಾಷ್ಟ್ರಗಳಲ್ಲಿ ಅಗತ್ಯಕ್ಕೂ ಮೀರಿ ಮಕ್ಕಳಿರುತ್ತಾರೋ ಅದಕ್ಕೆ ತದ್ವಿರುದ್ಧವಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಮಕ್ಕಳಿಲ್ಲದ ದಂಪತಿಗಳನ್ನು ನೋಡಬಹುದು.

PC : EUFORIA (ಎಟರ್ನಿಟಿ ಅಂಡ್ ಅ ಡೇ)

ಹೀಗೆ ಒಂದೇ ದಿನದ ಅವಧಿಯಲ್ಲಿ, ತೀರಿಹೋದ ಹೆಂಡತಿಯ ನೆನಪಿನಲ್ಲಿರುವ ಕವಿ, ನೆಲೆ ಹುಡುಕುತ್ತಿವ ನಿರಾಶ್ರಿತ ಪುಟ್ಟ ಬಾಲಕನ ನಡುವೆ ನಡೆಯುವ ’ಪದಗಳ ವ್ಯವಹಾರ’ದ ಕಥೆಯ ಜೊತೆಗೆ, ಹತ್ತೊಂಬತ್ತನೆ ಶತಮಾನದಲ್ಲಿದ್ದ ಗ್ರೀಸ್ ರಾಷ್ಟ್ರೀಯ ಕವಿ ಡಿಯೊನಿಸಿಯೊಸ್ ಸೋಲೊಮೊಸ್ ಕಥೆಯೂ ಬಂದು ಸೇರಿಕೊಳ್ಳುತ್ತದೆ. ಕವಿ ಸೋಲೋಮೊಸ್ ಗ್ರೀಸ್‌ನಲ್ಲಿ ಹುಟ್ಟಿದರೂ, ವಿದ್ಯಾಭ್ಯಾಸಕ್ಕಾಗಿ ಇಟಲಿಗೆ ಹೋಗಿ ಅಲ್ಲೇ ನೆಲಿಸಿ ಇಟಲಿ ಭಾಷೆಯಲ್ಲಿಯೇ ಕವಿತೆ ಬರೆಯುತ್ತಿರುತ್ತಾನೆ. ತಿರುಗಿ ಗ್ರೀಸ್‌ಗೆ ಮರಳಿದಾಗ ತನ್ನ ತಾಯ್ನುಡಿಯಲ್ಲಿ ಕವಿತೆ ಬರೆಯುವ ಉದ್ದೇಶದಿಂದ ಜನಗಳ ನಡುವಿನಲ್ಲಿದ್ದು, ಪ್ರತಿ ಪದಕ್ಕಿಷ್ಟು ಹಣ ಎಂಬಂತೆ ನಿಗದಿ ಮಾಡಿ, ಕೊಟ್ಟು ಗ್ರೀಸ್ ಭಾಷೆ ಕಲಿತು, ಅನೇಕ ಕವಿತೆಗಳನ್ನು ಬರೆದಿರುತ್ತಾನೆ. ಹಾಗೆ ಬರೆದ ಪದ್ಯದ ಮೊದಲ ಎರಡು ಚರಣಗಳು ಇಂದಿನ ಗ್ರೀಸ್ ದೇಶದ ರಾಷ್ಟ್ರ ಗೀತೆ.

ಅಲೆಕ್ಸಾಂಡ್ರೊಸ್ ಕೂಡ ಬಾಲಕನಿಗೆ ಹಣ ನೀಡಿ ಜನರ ರೂಢಿ ಪದಗಳನ್ನು ಕಲಿಯುತ್ತಾನೆ. ದಿನವೆಲ್ಲ ಒಂದಲ್ಲ ಒಂದು ಸನ್ನಿವೇಶಗಳಲ್ಲಿ ಸಿಕ್ಕಿಹಾಕಿಕೊಂಡು, ರಾತ್ರಿಯಾಗುತ್ತಲೇ ಬಾಲಕ ’ನನಗೆ ಭಯವಾಗುತ್ತಿದೆ’ ಎಂದಾಗ, ಅಲೆಕ್ಸಾಂಡ್ರೊಸ್ ಕೂಡ ’ನನಗೂ ಭಯವಾಗುತ್ತಿದೆ’ ಎಂದು ಪರಸ್ಪರ ಅಪ್ಪಿಕೊಳ್ಳುವ ದೃಶ್ಯ ಮಾನವ ಸಂಬಂಧಗಳ ಸರಳತೆಯನ್ನು ಮತ್ತು ಅಗತ್ಯತೆಯನ್ನು ತೋರಿಸುತ್ತದೆ.

ಥಿಯೋ ಸಿನಿಮಾಟಿಕ್ ಸೂಕ್ಷ್ಮತೆಗಳಲ್ಲಿ ಮಾಸ್ಟರ್. ಪದೇ ಪದೇ ಸರಳವಾದ ಒಂದೇ ರಾಗವನ್ನು ಹಿನ್ನೆಲೆ ಸಂಗೀತವಾಗಿ ಬಳಸಿರುವ ವಿನ್ಯಾಸಕ್ಕೆ ಮೈದೂಗುತ್ತಾ, ಮತ್ತೇರಿದವರಂತೆ ಮೂಕವಿಸ್ಮಿತರಾಗಿ ಕೂರುವರಂತೆ ಮಾಡುತ್ತದೆ.

ದೃಶ್ಯವಿನ್ಯಾಸದಲ್ಲಿ ಥಿಯೋರಿಗೆ ಬೇರೆ ಯಾರು ಸಾಟಿಯಿಲ್ಲ. ಅಲೆಕ್ಸಾಂಡ್ರೊಸ್ ಮತ್ತು ಬಾಲಕ ನದಿಯ ಬದಿಯಲ್ಲಿ ನಡೆದು ಬರುವ ದೃಶ್ಯದಿಂದ ಪ್ಯಾನ್ ಮಾಡಲು ಅದೇ ನದಿಯ ಬದಿಯಲ್ಲಿ ಕವಿ ಸೋಲೊಮೊಸ್ ಬರೆಯುತ್ತಾ ನಿಂತಿರುವುದು ನೋಡಿದರೆ, ಭೂತ, ವರ್ತಮಾನ, ಭವಿಷ್ಯದ ಘಟನೆಗಳೆಲ್ಲ ನಿರಂತರವಾಗಿ ನಡೆಯುತ್ತಿವೆ ಎನ್ನುವುದು ನಿರ್ದೇಶಕನ ವಾದ ಅಥವಾ ದರ್ಶನವೆನಿಸುತ್ತದೆ.

ಅಲೆಕ್ಸಾಂಡ್ರೊಸ್ ಪದೇಪದೇ ತನ್ನ ಪ್ರೀತಿಯ ಮಡದಿಯನ್ನು ಭೇಟಿಯಾಗುವ ಕನಸಿನ ದೃಶ್ಯಗಳು ಎಷ್ಟು ಸುಂದರವಾಗಿರುತ್ತದೆಯೋ ಹಾಗೆಯೇ ನಿರಾಶ್ರಿತರ ಬದುಕಿನ ಭೀಕರ ದೃಶ್ಯಗಳು ವೀಕ್ಷಕನ ಮನಸ್ಸನ್ನು ಹಿಡಿದಿಡುತ್ತವೆ.

2. ಲ್ಯಾಂಡ್‌ಸ್ಕೇಪ್ ಇನ್ ದಿ ಮಿಸ್ಟ್ (1988)

ಕೇವಲ ತಾಯಿಯ ಮಾತುಗಳನ್ನು ಕೇಳಿ ಐದು ವರ್ಷದ ಬಾಲಕ ಹಾಗೂ ಹನ್ನೆರಡು ವರ್ಷದ ಅಕ್ಕ, ಇಬ್ಬರೂ ಸೇರಿ ತಂದೆಯನ್ನು ಹುಡುಕುತ್ತಾ ಗ್ರೀಸ್‌ನಿಂದ ಜರ್ಮನಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಭೇಟಿಯಾಗುವ ಜನಗಳು ಮತ್ತು ಬರುವ ಸನ್ನಿವೇಶಗಳೇ ಈ ಸಿನಿಮಾ.

ಅತಿ ಮುಗ್ಧವಾಗಿ ಪ್ರಯಾಣ ಆರಂಭಿಸುವ ಮಕ್ಕಳು, ಟಿಕೆಟ್ ಇಲ್ಲದೆ ಸಿಕ್ಕಿಹಾಕಿಕೊಂಡು, ಸಂಬಂಧಿಯ ಬಳಿಗೆ ಹೋದಾಗ, ಆ ಸಂಬಂಧಿ ಪೊಲೀಸರ ಬಳಿ, ಈ ಮಕ್ಕಳಿಗೆ ತಂದೆ ಇಲ್ಲವೆಂದೂ, ತಂದೆ ಇರುವುದಾಗಿ ತಾಯಿ ಸುಮ್ಮನೆ ಹೇಳಿದ್ದಾಳೆಂಬ ಮಾಹಿತಿ ತಿಳಿಯುತ್ತದೆ. ಆದರೆ ಮಕ್ಕಳು ಅವನ ಮಾತುಗಳನ್ನು ಒಪ್ಪದೆ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ.

ಪ್ರಯಾಣದ ದಾರಿಯಲ್ಲಿ ನಾಟಕ ತಂಡದ ಯುವಕನೊಬ್ಬ ಇವರಿಬ್ಬರಿಗೂ ಸ್ವಲ್ಪ ದೂರದವರೆಗೂ ಬಿಡುತ್ತಾರೆ. ಮುಂದಿನ ಪ್ರಯಾಣದಲ್ಲಿ ಮಕ್ಕಳಿಗೆ ಟ್ರಕ್ ಡ್ರೈವರ್ ಒಬ್ಬನ ಪರಿಚಯವಾಗುತ್ತದೆ. ಮೊದಲಿಗೆ ಅವನು ಇಬ್ಬರಿಗೂ ತಿನ್ನಲು ತಿಂಡಿ-ತಿನಿಸುಗಳನ್ನು ಕೊಡಿಸಿ, ತುಸು ದೂರದ ಪ್ರಯಾಣದ ನಂತರ ಹುಡುಗಿಯನ್ನು ಟಾರ್‌ಪಾಲ್ ಮುಚ್ಚಿದ ಟ್ರಕ್ಕಿನೊಳಗೆ ಎತ್ತಿಕೊಂಡು ಹೋಗಿ, ಅತ್ಯಾಚಾರವೆಸಗುತ್ತಾನೆ. ಇಲ್ಲಿ ನಿರ್ದೇಶಕ ಯಾವುದೇ ಹಿಂಸೆಯನ್ನು ವೈಭವೀಕರಿಸದೆ ರಸ್ತೆಯಲ್ಲಿ ಹಾದುಹೋಗುವ ವಾಹನಗಳ ಶಬ್ದಗಳಲ್ಲೇ ಕ್ರೌರ್ಯವನ್ನು ಮನಸ್ಸಿಗೆ ಮುಟ್ಟಿಸುತ್ತಾನೆ.

ಮೊದಮೊದಲು ಅತಿ ಮಾತನಾಡುತ್ತಿದ್ದ ಬಾಲಕ ಗಂಭೀರವಾಗುತ್ತಾನೆ. ಹುಡುಗಿಯೂ ನಾಟಕ ತಂಡದ ಯುವಕನನ್ನು ಮತ್ತೆ ಭೇಟಿಯಾದಾಗ ಅವನ ಮೇಲೆ ಪ್ರೀತಿಯ ಭಾವನೆಗಳನ್ನು ತೋರಿಸುತ್ತಾಳೆ. ಆದರೆ ಅವನು ಮತ್ತೊಬ್ಬ ಬೈಕ್ ಕೊಳ್ಳಲು ಬಂದವನ ಜೊತೆ ನಿಕಟವಾಗಿರುವುದನ್ನು ನೋಡಿ, ಕೋಪದಿಂದ ಮತ್ತೆ ಇಬ್ಬರೇ ಪ್ರಯಾಣವನ್ನು ಮುಂದುವರಿಸುತ್ತಾರೆ.

PC : Cinemascope – blogger (ಲ್ಯಾಂಡ್‌ಸ್ಕೇಪ್ ಇನ್ ದಿ ಮಿಸ್ಟ್)

ಸಿನಿಮಾದ ಕೊನೆಯ ಭಾಗದಲ್ಲಿ ಹುಡುಗಿ ರೈಲ್ವೇ ನಿಲ್ದಾಣದಲ್ಲಿ ಮಿಲಿಟರಿ ಬಟ್ಟೆಗಳನ್ನು ಧರಿಸಿರುವ ವ್ಯಕ್ತಿಯನ್ನು ಹಣ ಕೇಳಿದಾಗ, ಅವನು ಲೈಂಗಿಕ ದೌರ್ಜನ್ಯದ ದೃಷ್ಟಿಯಲ್ಲೇ ಆಕೆಯನ್ನು ಕಂಡು ರೈಲುಗಳ ನಡುವೆ ಹೋಗಿ ನಿಲ್ಲುತ್ತಾನೆ. ಹುಡುಗಿಯೂ ಅವನ ಮುಂದೆ ಬಂದು ನಿಲ್ಲುತ್ತಾಳೆ. ಮುಗ್ದವಾಗಿದ್ದ ಹುಡುಗಿಯ ಮನಸ್ಸು, ಗಂಡು-ಹೆಣ್ಣಿನ ದೈಹಿಕ ವಹಿವಾಟನ್ನು ಅರಿತಂತೆ, ಆಕೆ ನಿಂತಿರುವುದನ್ನು ನೋಡಿದರೆ, ದೌರ್ಜನ್ಯದ ಕ್ರೌರ್ಯ ಪ್ರತಿಫಲಿಸುತ್ತದೆ.

ಯಾವುದೇ ಸಿನಿಮಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತೋರಿಸಿದರೆ ಸಾಕು ನಿರಾತಂಕವಾಗಿ ವೀಕ್ಷಕರ ಮನಸ್ಸನ್ನು ಕರಗಿಸಬಹುದು, ಆದರೆ ಈ ಸಿನಿಮಾದ ಶೈಲಿಯನ್ನು ಗಮನಿಸಿದರೆ, ಪಾತ್ರಗಳಿಗೂ ಮತ್ತು ಕ್ಯಾಮರಾಕ್ಕೂ ಸದಾ ಅಂತರವನ್ನು ಉಳಿಸಿಕೊಂಡು ಪ್ರೇಕ್ಷಕನ ಮನಸ್ಸನ್ನು ಮ್ಯಾನಿಪುಲೇಟ್ ಮಾಡದೆ, ಸಮಾಜದ ವಾಸ್ತವತೆ ಮತ್ತು ಮಕ್ಕಳ ಮುಗ್ಧತೆಯನ್ನು ಯಥಾವತ್ತಾಗಿ ಕಟ್ಟುವ ಪ್ರಯತ್ನವನ್ನು ಮಾತ್ರ ಮಾಡಲಾಗಿದೆ.

ಸಾಯುತ್ತಿರುವ ಕುದುರೆಯನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವ ಮಕ್ಕಳ ಹಿಂದೆಯೇ ಮದುವೆ ಸಂಭ್ರಮದ ಗುಂಪಿನ ಹಾಡು ನೃತ್ಯದ ದೃಶ್ಯ, ಅಕ್ಕನನ್ನು ಹುಡುಕುತ್ತಿರುವ ಪುಟ್ಟ ಬಾಲಕ ಮುಂದೆ ಹಾದುಹೋಗುವ ಸೈನಿಕರ ಪೆರೇಡಿನ ದೃಶ್ಯಗಳಲ್ಲಿ, ಇಡೀ ನಾಗರಿಕತೆಯ ಮತ್ತು ಅದರ ಸುತ್ತಲಿನ ವೈಭವ ಹಾಗೂ ಸಂಭ್ರಮಗಳ ಟೊಳ್ಳುತನನ್ನು ಮಾರ್ಮಿಕವಾಗಿ ಕಾಣಬಹುದು.

ಪುಟ್ಟ ಬಾಲಕ ’ಗಡಿ ರೇಖೆ ಎಂದರೇನು’ ಎಂದು ಪ್ರಶ್ನಿಸಿದಾಗ, ದೇಶಗಳ ಕಲ್ಪನೆಯ ಸಂಕೀರ್ಣತೆಯನ್ನು ಮಕ್ಕಳು ಅರ್ಥಮಾಡಿಕೊಳ್ಳಲಾಗದೆ, ಬೇರೊಂದು ದೇಶಕ್ಕೆ ಹೋಗಲು ಕಾಗದಪತ್ರಗಳಿಲ್ಲದೆ, ಸೈನಿಕರ ಕಣ್ತಪ್ಪಿಸಿ ಗಡಿ ದಾಟಿ ರಾತ್ರಿಯನ್ನು ಭಯದಲ್ಲೇ ಕಳೆದು ಬೆಳಕಿನಲ್ಲಿ ಮರವನ್ನು ಅಪ್ಪಿಕೊಂಡು ನಿಟ್ಟುಸಿರು ಬಿಡುವುದೇ ಅಂತ್ಯ.

ಥಿಯೋಡೊರಸ್ ಅಂಜೊಲಾಪೊಲಸ್

ಜಾಗತಿಕ ಸಿನಿಮಾದಲ್ಲಿ ಅತಿ ಮುಖ್ಯವಾದ ನಿರ್ದೇಶಕ ಥಿಯೋಡೊರಸ್ ಅಂಜೊಲಾಪೊಲಸ್. ಆತನ ಸಿನಿಮಾಗಳಲ್ಲಿ ಒಳಗೊಳ್ಳುವ ವಿಶಾಲವಾದ ಫ್ರೇಮ್, ಆಕಾಶ, ಮಂಜು ಮುಸುಕಿದ ಬೆಟ್ಟಗಳು, ಎತ್ತರವಾದ ಮರಗಳು, ಹಚ್ಚಹಸುರಿನ ಹುಲ್ಲಿನ ನಡುವೆ ನಡೆದುಬರುತ್ತಿರುವ ಪಾತ್ರಗಳು ಇವುಗಳನ್ನೆಲ್ಲಾ ಸಾವಿರ ಪದಗಳ ವಿವರಣೆಯಲ್ಲಿ ಒಳಗೊಳ್ಳಲು ಅಸಾಧ್ಯ.

ವಾಣಿಜ್ಯ ಮತ್ತು ಮನರಂಜನಾ ಉದ್ದೇಶಗಳಿಗಾಗಿಯೇ ನಿರ್ದೇಶಿಸುವ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಅತಿವೇಗದ ಎಡಿಟಿಂಗ್‌ಗೆ ಹೊಂದಿಕೊಂಡಿರುತ್ತಾರೆ. ಅದೇ ದೃಷ್ಟಿಕೋನದಲ್ಲಿ ಥಿಯೋರ ಸಿನಿಮಾ ನೋಡಲು ಮೊದಲಿಗೆ ಕಸಿವಿಸಿಯಾಗಿ, ನಿಧಾನವೆನಿಸುವುದು ಅತಿ ಸಹಜ.

ಥಿಯೋರ ಫ್ರೇಮ್ ಸಂಯೋಜನೆ ಚಿತ್ರಕಲೆಯಂತೆ. ಪ್ರೇಕ್ಷಕನ ಕಣ್ಣುಗಳನ್ನು ಒಂದು ಕಡೆಗೆ ನಿರ್ಬಂಧಿಸದೆ, ಫ್ರೇಮ್‌ನ ಎಲ್ಲ ಭಾಗಗಳನ್ನು ತನ್ನಿಚ್ಛೆಯಂತೆ ನೋಡುವ ಅವಕಾಶ ಮಾಡಿಕೊಡುತ್ತಾ, ವೇಗದ ಕೃತಕತೆಯಿಲ್ಲದೆ ಧ್ಯಾನಸ್ಥ ಸ್ಥಿತಿಯಲ್ಲಿ ಚಲಿಸುವ ಕ್ಯಾಮರಾ, ಸುದೀರ್ಘವಾದ ಶಾಟ್ಸ್, ಮಿತವಾದ ಸಂಭಾಷಣೆ, ಯಾವುದೇ ರೀತಿಯ ಉದ್ವೇಗಗಳಿಲ್ಲದ ನಟನೆ ನೋಡಸಿಗುವುದೇ ಅತಿ ಅಪರೂಪ. ಇವುಗಳೇ ಥಿಯೋರ ಸಿನಿಮಾಗಳ ಗಟ್ಟಿತನ.

ಥಿಯೋರ ಪೋಟೋಗ್ರಫಿಯಂತೂ ಅತಿ ಸಾಹಸಮಯವಾದದ್ದು. ಲ್ಯಾಂಡ್‌ಸ್ಕೇಪ್ ಪೋಟೋಗ್ರಫಿಯನ್ನು ನೋಡಿ ಮೈಮರೆಯಬೇಕಷ್ಟೇ ಮತ್ತು ಯಾವುದೇ ಕಾರಣಕ್ಕೂ ಕ್ಯಾಮರಾ ನಟರ ಕ್ಲೋಸ್‌ಅಪ್‌ಗೆ ಹೋಗುವುದೇ ಇಲ್ಲ. ಕ್ಲೋಸ್‌ಅಪ್‌ಅನ್ನು ಬಳಸದೆ ಸದಾ ಒಂದು ಅಂತರದಿಂದಲೇ ಸೆರೆ ಹಿಡಿಯುವುದು ಮತ್ತು ಎಡಿಟಿಂಗ್ ಕ್ಯಾಮರಾ ಚಿತ್ರೀಕರಣದ ಜೊತೆಗೇ ಆಗಿರುವುದು ಥಿಯೋರ ಕೌಶಲ್ಯ. ಹೀಗೆ ದೃಶ್ಯವನ್ನು ಪದೇಪದೇ ತುಂಡಾಗಿಸದೇ, ಒಂದೇ ಉಸಿರಿನಲ್ಲೇ ದೃಶ್ಯವನ್ನು ನೋಡುವಾಗ ವೀಕ್ಷಕ ಸಮಯದ ಪರಿಯನ್ನು ಕಳೆದುಕೊಳ್ಳುವುದು ವಿಸ್ಮಯ.

PC : Mubi (ಥಿಯೋಡೊರಸ್ ಅಂಜೊಲಾಪೊಲಸ್)

ಸ್ಲೋ ಸಿನಿಮಾ ಮೂವ್‌ಮೆಂಟ್‌ನಲ್ಲಿ ರಷ್ಯಾದ ಅಂಡ್ರೊವ್ ಟಾರ್ಕೊವ್‌ಸ್ಕಿ, ಇಟಲಿಯ ಮೈಕಲಾಂಜಿಲೋ ಅಂಟೋನಿಯೋನಿರ ಜೊತೆ ಥಿಯೋ ಅಂಜೊಲಪೊಲಾಸ್ ಕೂಡ ಅತಿ ಪ್ರಮುಖರು.

ಥಿಯೋರ ಕಥಾವಸ್ತುಗಳೆಂದರೆ ಗ್ರೀಸ್‌ನ ಇತಿಹಾಸ, ದೇಶಗಳ ನಡುವಿನ ಗಡಿಗಳು, ಬದುಕನ್ನು ಅರಸಿ ಅವುಗಳನ್ನು ದಾಟಿದ ನಿರಾಶ್ರಿತರು, ಎಲ್ಲೋ ಹೋಗುವ ಧಾವಂತದ ಪ್ರಯಾಣ, ಕನಸ್ಸುಗಳು, ನಿಶಬ್ದ.

ದಿ ಸಸ್ಪೆಂಡೆಡ್ ಸ್ಟೆಪ್ಸ್ ಆಫ್ ದಿ ಸ್ಟೊರ್ಟ್(1991) ಸಿನಿಮಾದಲ್ಲಿ ಗಡಿ ರೇಖೆಯಲ್ಲಿ ನಿಂತು ಒಂದು ಕಾಲನ್ನು ಗಾಳಿಯಲ್ಲಿಟ್ಟು, “ಇನ್ನೊಂದು ಹೆಜ್ಜೆ ಇಟ್ಟರೆ, ನಾನು ಮತ್ತೆಲ್ಲೋ ಇರುತ್ತೇನೆ, ಇಲ್ಲ ಸಾಯಬಹುದು”, ಎನ್ನುವ ಸಂಭಾಷಣೆ ಥಿಯೋರ ಮನಸ್ಸನ್ನು ಹಿಡಿದಿಡುತ್ತದೆ.

ಥಿಯೋರ ಸೃಷ್ಟಿಯಲ್ಲಿ ಭೂತಕಾಲ, ಕನಸಿನ ಲೋಕ, ವಾಸ್ತವಗಳೆಂದು ಯಾವುದೇ ವಿಭಜನೆಗಳಿರುವುದಿಲ್ಲ. ಯುಲಿಸಿಸ್ ಗೇಸ್ (1995) ಸಿನಿಮಾದಲ್ಲಿ ನಲವತ್ತು ವಯಸ್ಸಿನ ಪಾತ್ರ ರೈಲ್ವೇ ಸ್ಟೇಷನ್ ಇಳಿದಕೂಡಲೇ ಮೂವತ್ತರ ಆಸುಪಾಸಿನ ಹೆಣ್ಣಿನ ಕೈಹಿಡಿದು ತಾಯಿಯಂತೆ ಮಾತಾಡಿಸುವುದು, ಅವಳು ಮಗನಂತೆ ನಡೆಸಿಕೊಂಡು ಮನೆಗೆ ಹೋದಾಗ, ಭೂತಕಾಲದಲ್ಲಿದ್ದ ಎಲ್ಲರೂ ಇವನನ್ನು ನೋಡಿ ಮಾತಾಡಿಸುವುದೇ ಮ್ಯಾಜಿಕಲ್ ಅನಿಸುತ್ತದೆ.

ಥಿಯೋ ಕವಿಯಾಗ ಬೇಕೆಂದುಕೊಂಡವರು. ಅವರು ಕ್ಯಾಮರಾದಿಂದ ಕಟ್ಟಿದ ಕವಿತೆಗಳೇ ಸಿನಿಮಾಗಳು. ಅವರ ಸಿನಿಮಾಗಳನ್ನು ಒಮ್ಮೆ ನೋಡಿ ಅರ್ಥವಾಗಲಿಲ್ಲವೆನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಹೇಗೆ ಕವಿತೆಯನ್ನು ಪದೇಪದೇ ಓದಿದಾಗ ಹೊಸ ಅನುಭವಗಳು, ಅರ್ಥಗಳು ಹುಟ್ಟುತ್ತವೆಯೋ, ಹಾಗೆಯೇ ಇವರ ಸಿನಿಮಾಗಳು ಕೂಡ.

ಕಲೆ ಅರ್ಥಕ್ಕೆ ದೂರ, ಅನುಭವಕ್ಕೆ ಹತ್ತಿರದ ಮಧ್ಯಮ. ಅರ್ಥಮಾಡಿಕೊಳ್ಳುವುದನ್ನು ಬಿಟ್ಟು ಕೇವಲ ಅನುಭವಿಸದಾಗ ಮಾತ್ರ ಕಲೆಯ ಸಾರ್ಥಕತೆಯಾಗುತ್ತದೆ, ಅರ್ಥವಾಗದೇ ಅನುಭವಿಸುವುದೇ ಹೇಗೆಂಬ ಪ್ರಶ್ನೆ ಕೂಡ ಇದ್ದೇ ಇದೆ. ಹೌದು, ಬದುಕಿನ ಎಷ್ಟೋ ವಿಷಯಗಳು ಅರ್ಥವಾಗದೇ ಹೋದರೂ ಅನುಭವಕ್ಕೆ ಬರುತ್ತದೆ.

ಥಿಯೋರ ಸಿನಿಮಾಗಳನ್ನು ಕಥೆಗಳಂತೆ ನೋಡದೆ, ಕವಿತೆಗಳಂತೆ ಪದೇ ಪದೇ ನೋಡಿದಾಗ ಅನುಭವದ ಪರಿಧಿಯು ವಿಶಾಲವಾಗುತ್ತಾ, ಬದುಕನ್ನು ನೋಡುವ ದೃಷ್ಟಿಕೋನದಲ್ಲಿ ಮಾನವೀಯತೆ, ಅನುಭೂತಿ ತುಂಬುವುದು ನಿಶ್ಚಿತ.


ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...