ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣ ಮಾಡಬೇಕೆಂದು ತೀರ್ಪು ನೀಡಿದೆ. ದಶಕಗಳ ಕಾಲದ ವಿವಾದಕ್ಕೆ ತೆರೆಬಿದ್ದಿದೆ. ಕೂಡಲೇ ಏಷ್ಯಾದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ರಾಮಮಂದಿರ ನಿರ್ಮಾಣಕ್ಕೆ 500 ಕೋಟಿ ರೂ ದೇಣಿಗೆ ಕೊಟ್ಟಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇಲಿನ ಚಿತ್ರ ನೋಡಿ. ಸಂತೋಷ್ ಸಿಂಹ ಮೋನು ಎಂಬುವವರು ಈ ರೀತಿಯ ಸಂದೇಶ ಹರಡಿದ್ದು ಅದು 8 ಸಾವಿರಕ್ಕೂ ಹೆಚ್ಚು ಬಾರಿ ಷೇರ್ ಆಗಿದೆ.
ವಾಸ್ತವವೇನು?
ಇದರ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಅವರು ರಾಮಮಂದಿರ ನಿರ್ಮಾಣಕ್ಕೆ ನಯಾಪೈಸೆಯನ್ನು ಸಹ ಕೊಟ್ಟಿಲ್ಲ. ಬದಲಿಗೆ ರಾಮಮಂದಿರ ನಿರ್ಮಾಣಕ್ಕೆ ಮೂರು ಟ್ರಸ್ಟ್ಗಳು ಪೈಪೋಟಿ ನಡೆಸುತ್ತಿದ್ದು ಅವುಗಳ ಬಳಿಯೇ ಈಗಾಗಲೇ ಜನರಿಂದ ಸಂಗ್ರಹಿಸಿರುವ ಕೋಟ್ಯಾಂತರ ರೂ ಹಣವಿದೆ.
ಇದನ್ನೂ ಓದಿ: ರಾಮಮಂದಿರ ನಿರ್ಮಾಣದ ಜವಾಬ್ದಾರಿಯನ್ನು ನಮಗೆ ಕೊಡಿ: ಮೂರು ಟ್ರಸ್ಟ್ಗಳ ನಡುವೆ ಪೈಪೋಟಿ
ಇನ್ನು ಮೇಲಿನ ಫೋಟೊ ಮತ್ತು ಫೇಸ್ಬುಕ್ ಪೋಸ್ಟ್ ಬಗ್ಗೆ ಹೇಳುವುದಾದರೆ, 2017ರಲ್ಲಿ ಮುಖೇಶ್ ಅಂಬಾನಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ರವರನ್ನು ಭೇಟಿ ಮಾಡಿದ್ದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಸುವ ಕುರಿತು ಉತ್ತರ ಪ್ರದೇಶದ ಸಿಎಂ ಜೊತೆ ನಡೆದ ಭೇಟಿ ಅದಾಗಿತ್ತು. ಅದೇ ಹಳೇ ಫೋಟೊ ಬಳಿಸಿಕೊಂಡ ಕಿಡಿಗೇಡಿಗಳು ಅವರು 500 ಕೋಟಿ ರೂ ದೇಣಿಗೆ ಕೊಟ್ಟಿದ್ದಾರೆ ಎಂಬ ಈ ಸುಳ್ಳು ಸುದ್ದಿ ಹರಡಿದ್ದಾರೆ.