ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ತ್ರಿಕೋನ ಸ್ಫರ್ದೆಯಿಂದ ರಂಗೇರಿದೆ. ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಬಿಜೆಪಿಯಿಂದ, ಕಾಂಗ್ರೆಸ್ನಿಂದ ಭೈರತಿ ಸುರೇಶ್ ಹೆಂಡತಿ ಪದ್ಮಾವತಿ ಮತ್ತು ಬಿಜೆಪಿಯಿಂದ ಬಂಡಾಯವೆದ್ದು ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ಎಂ.ಟಿ.ಬಿ ನಾಗರಾಜ್ಗೆ ಈ ಚುನಾವಣೆಯಲ್ಲಿ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್ ಪಕ್ಷವೂ ಸಹ ಗೆಲ್ಲಲೇಬೇಕೆಂದು ಜಿದ್ದಿಗೆಬಿದ್ದಿದ್ದು ಈಗಾಗಲೇ ಒಂದು ಸುತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿಹೋಗಿದ್ದಾರೆ. ಇತ್ತ ಶರತ್ ಬಚ್ಚೇಗೌಡ ಕುಟುಂಬದ ಪಾಳೆಯಪಟ್ಟನ್ನು ಉಳಿಸಿಕೊಳ್ಳಲು ಹೇಗಾದರೂ ಈ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಮೂವರೂ ಅಭ್ಯರ್ಥಿಗಳ ಘೋಷಿತ ಆಸ್ತಿ ತಲಾ 100 ಕೋಟಿಗಳಿಗೂ ಮೀರಿದೆ!!
ಕಾಂಗ್ರೆಸ್ ಪಕ್ಷದ ವತಿಯಿಂದ ಈಗಾಗಲೇ ಒಂದು ಸುತ್ತು ಆಮಿಷ ಒಡ್ಡಲು 35 ಸಾವಿರಕ್ಕೂ ಹೆಚ್ಚು ಕುಕ್ಕರ್ ಹಂಚಿದ್ದು, 5 ಸಾವಿರ ಕುಕ್ಕರ್ಗಳನ್ನು ಸೀಸ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಬಿಜೆಪಿಯ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಕೂಡ ಒಂದು ಸಾವಿರ ಹಣ ಮತ್ತು ಬೆಳ್ಳಿನಾಣ್ಯಗಳನ್ನು ಹಂಚುತ್ತಿದ್ದಾರೆ ಎಂದು ವಾಟ್ಸಪ್ಗಳಲ್ಲಿ ಹರಿದಾಡುತ್ತದೆ. ಅಷ್ಟೇ ಅಲ್ಲದೇ ಮತದಾರರಿಗೆ ಉಂಗುರಗಳನ್ನು ಹಂಚುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಶರತ್ ಬಚ್ಚೇಗೌಡ ಯಾರು ಏನೇ ಕೊಟ್ಟರೂ ತೆಗದುಕೊಳ್ಳಿ, ಆದರೆ ಮತವನ್ನು ಮಾತ್ರ ನಮಗೆ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬೇರೆಯವರು ಕುಕ್ಕರ್ ಹಂಚುತ್ತಿದ್ದು ಇವರ ಚಿಹ್ನೆಯೇ ಕುಕ್ಕರ್ ಬಂದಿರುವುದು ಕಾಕತಾಳೀಯವಾಗಿದ್ದು ಈತನಿಗೆ ಒಳಗೊಳಗೆ ಖುಷಿ ತಂದಿದೆ. ಜೆಡಿಎಸ್ ಸಹ ಶರತ್ ಬಚ್ಚೆಗೌಡರನ್ನು ಬೆಂಬಲಿಸುತ್ತಿದ್ದು ನಿಖಿಲ್ ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಮಗನ ಪರ ಕೆಲಸ ಮಾಡದಂತೆ ಬಿಜೆಪಿಯು ಬಚ್ಚೇಗೌಡರಿಗೆ ನೋಟೀಸ್ಗಳನ್ನು ಕೊಡುತ್ತಲೇ ಇದ್ದರೂ ಬಚ್ಚೇಗೌಡರು ಮನೆಯಿಂದಲೇ ಮಾಡಬಹುದಾದ್ದೆಲ್ಲವನ್ನೂ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹೋಸಕೋಟೆ ನಗರದ ಮತಗಳು ಮುಖ್ಯ ಪಾತ್ರ ವಹಿಸುತ್ತವೆ. 45 ಸಾವಿರಕ್ಕಿಂತ ಅಧಿಕ ಮತಗಳಿದ್ದು, ಅಂದಾಜು 50 ಬೂತುಗಳಿವೆ. ಇವುಗಳನ್ನು ಯಾರು ಅಧಿಕವಾಗಿ ಸೆಳೆಯುತ್ತಾರೋ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು ಲಿಂಗಾಯತ, ವೀರಶೈವ ಮುಖಂಡರ ಸಭೆ ಕರೆದಿದ್ದಾರೆ ಎನ್ನಲಾಗಿದೆ.