Homeಮುಖಪುಟಗಲಭೆಕೋರರು ಹಚ್ಚಿದ ಬೆಂಕಿ ಮತ್ತು ಮಾಧ್ಯಮಗಳು ಹಚ್ಚುತ್ತಿರುವ ಬೆಂಕಿ

ಗಲಭೆಕೋರರು ಹಚ್ಚಿದ ಬೆಂಕಿ ಮತ್ತು ಮಾಧ್ಯಮಗಳು ಹಚ್ಚುತ್ತಿರುವ ಬೆಂಕಿ

ಗಲಭೆಕೋರರು ಬೆಂಕಿ ಹಚ್ಚುವುದನ್ನು ನಿಭಾಯಿಸುವ ಸಂದರ್ಭದಲ್ಲಿ ಮಾಧ್ಯಮಗಳು ಬೆಂಕಿ ಹಚ್ಚುವುದನ್ನು ನಿಭಾಯಿಸಲೂ ಸರ್ಕಾರ ಹಾಗೂ ಸಮಾಜ ಕಾರ್ಯಪ್ರವೃತ್ತವಾಗಬೇಕಿದೆ.

- Advertisement -
- Advertisement -

ಡಿ.ಜೆ.ಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಪೊಲೀಸ್ ಸ್ಟೇಷನ್, ಶಾಸಕರ ಮನೆ ಮೇಲೆ ಕಲ್ಲು ತೂರಿದವರು, ವಾಹನಗಳಿಗೆ ಬೆಂಕಿ ಹಚ್ಚಿದವರು ಮತ್ತು ಬೀದಿಯಲ್ಲಿ ದಾಂಧಲೆ ನಡೆಸಿದವರ (ಅವರ ಆಕ್ರೋಶಕ್ಕೆ ಕಾರಣವೇನೇ ಇದ್ದರೂ) ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಖಂಡನಾ ವಾಕ್ಯಕ್ಕೆ ಹಿಂದೆ ಅಥವಾ ಮುಂದೆ ಫೇಸ್‌ಬುಕ್ ಪೋಸ್ಟ್ ಬರೆದ ವ್ಯಕ್ತಿಯನ್ನು ಇನ್ನೂ ಹೆಚ್ಚು ಖಂಡಿಸಿರಬಹುದು. ಜೊತೆಗೆ ಪೊಲೀಸರು ದೂರು ಸ್ವೀಕರಿಸಿದಾಗ 2 ಗಂಟೆ ಬಿಟ್ಟು ಬನ್ನಿ ಎಂದಿದ್ದೇಕೆ, ಗಲಭೆ ಶುರುವಾದ 3 ಗಂಟೆಗಳ ಕಾಲ ಪರಿಣಾಮಕಾರಿ ಕ್ರಮಕ್ಕೇಕೆ ಮುಂದಾಗಲಿಲ್ಲ ಇತ್ಯಾದಿ ಮಾತುಗಳನ್ನೂ ಹೇಳಿರಬಹುದು. ಆದರೆ, ಗಲಭೆಕೋರರ ಕೃತ್ಯವನ್ನು ಯಾವುದೇ ಸಂಘಟನೆ/ಪಕ್ಷ/ಪ್ರಜ್ಞಾವಂತರಾದವರು ಸಮರ್ಥಿಸಲಿಲ್ಲ.

ಇನ್ನು ಮುಸ್ಲಿಂ ಸಮುದಾಯದ ವಿವೇಕಯುತ ದನಿಗಳ ವಿಚಾರಕ್ಕೆ ಬರುವುದಾದರೆ, ಪ್ರವಾದಿಯವರನ್ನೇ ಉಲ್ಲೇಖಿಸಿ ಇದು ಅಧರ್ಮದ ಕೃತ್ಯ ಎಂದು ಹಲವಾರು ಜನರು ಹೇಳಿದ್ದಾರೆ. ಮಂಗಳೂರಿನ ಸನ್ಮಾರ್ಗ ಪತ್ರಿಕೆಯ ಕುಕ್ಕಿಲ ಅವರಿಂದ ಹಿಡಿದು ಇತಿಹಾಸಕಾರ ಇರ್ಫಾನ್ ಹಬೀಬ್‌ರವರೆಗೆ ನೂರಾರು ಹೇಳಿಕೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗಲಭೆಗಳು ಅಧಾರ್ಮಿಕವೆಂದೂ, ಇದು ಕೋಮುವಾದಿಗಳಿಗೆ ಮಾತ್ರ ಅನುಕೂಲಕರವೆಂದೂ ಹೇಳಿದ್ದಾರೆ. ಇನ್ನೂ ಕೆಲವು ಮುಸ್ಲಿಮರು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದಾರೆ.


ಇದನ್ನೂ ಓದಿ: ಡಿ.ಜೆ. ಹಳ್ಳಿ ಗಲಭೆ: ಹಿಂಸೆಗಿಳಿದವರು ಮಾಡಿದ್ದು ಕೂಡಾ ಪ್ರವಾದಿ ನಿಂದನೆಯೇ ಎಂದ ಮುಸ್ಲಿಂ ಧಾರ್ಮಿಕ ಮುಖಂಡರು.


ಅಂದರೆ ವಿಚಾರ ಸ್ಪಷ್ಟವಿದೆ. ಗಲಭೆ ನಡೆಸಿದವರನ್ನು ಸಮರ್ಥಿಸಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳ್ಯಾರೂ ಮಾತಾಡಿಲ್ಲ. ಪ್ರಚೋದನೆ ಉಂಟು ಮಾಡಿದ ಫೇಸ್‌ಬುಕ್ ಪೋಸ್ಟ್ಅನ್ನು ಹೆಚ್ಚಾಗಿ ಖಂಡಿಸಿದ್ದಾರೆ ಎಂಬುದು ನಿಜ. ಆ ಪ್ರದೇಶದಲ್ಲಿದ್ದ ಒಂದು ದೇವಸ್ಥಾನದ ಸುತ್ತ ಮಾನವಸರಪಳಿ ನಿರ್ಮಿಸಿದ ಮುಸ್ಲಿಂ ಯುವಕರು, ಅಲ್ಲಿ ಯಾರೂ ಗಲಭೆ ಮಾಡದಂತೆ ನೋಡಿಕೊಂಡಿದ್ದಾರೆ. ಅಂದರೆ ಇದೊಂದು ಕೋಮುಗಲಭೆಯಲ್ಲ. ಗಲಭೆಕೋರರು ಹಿಂದೂ ಜನರನ್ನು ಹುಡುಕಿಕೊಂಡು ಹೊಡೆದಿಲ್ಲ. ಅವರ ಟಾರ್ಗೆಟ್ ಪೊಲೀಸ್ ಠಾಣೆ ಮತ್ತು ಶಾಸಕರ ಮನೆಯಾಗಿದೆ. ಅದಲ್ಲದೇ ಬೀದಿಯಲ್ಲಿ ಬೆಂಕಿ ಹಚ್ಚಿದ್ದಾರೆ. ಅವರು ಬೆಂಕಿ ಹಚ್ಚಿದ ಬೈಕ್‌ಗಳನ್ನು ಇನ್ನೊಂದು ಕೋಮಿನವರದ್ದಾ, ಮುಸ್ಲಿಮರದ್ದಾ ಎಂದು ನೋಡಿಲ್ಲ. ಇವೆಲ್ಲವೂ ಅವರ ಆಕ್ರೋಶವನ್ನು ಅತ್ಯಂತ ತಪ್ಪಾದ, ಕಾನೂನು ವಿರೋಧಿಯಾದ ಮಾರ್ಗದಲ್ಲಿ ವ್ಯಕ್ತಪಡಿಸಿದ್ದಾರೆ ಮತ್ತು ಅದಕ್ಕಾಗಿ ಅವರು ಈ ನೆಲದ ಕಾನೂನಿನ ಪ್ರಕಾರ ವಿಚಾರಣೆಗೆ ಮತ್ತು ಶಿಕ್ಷೆಗೆ ಒಳಪಡಿಸಬೇಕು. ಆದರೆ, ಅದು ಹಿಂದೂ-ಮುಸ್ಲಿಂ ಗಲಭೆಯಲ್ಲ ಎಂಬುದು ಎದ್ದು ಕಾಣುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರುಗಳು, ಧಾರ್ಮಿಕ ಮುಖಂಡರು ಗಲಭೆಯನ್ನು ಹೆಚ್ಚು ಮಾಡಲು ಹೋಗಿಲ್ಲ.

ಇದೇ ಸಂದರ್ಭದಲ್ಲಿ ಕನ್ನಡದ ಟಿವಿ ಚಾನೆಲ್‌ಗಳೇನು ಮಾಡಿದರು ಎಂಬುದನ್ನು ನೋಡಬೇಕು. ಈ ಲೇಖನ ಬರೆಯುವ ಹೊತ್ತಿಗೆ ‘ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು’ ಎಂದು ಮುಸ್ಲಿಂ ಮುಖಂಡರು ಟಿವಿಯಲ್ಲಿ ಹೇಳಿದರೆ, ‘ನೀವು ತಪ್ಪು ಮಾಡಿದವರನ್ನು ಸಮರ್ಥಿಸುತ್ತಿದ್ದೀರಿ’ ಎಂದು ಆಂಕರ್ ಕೂಗಾಡುತ್ತಿದ್ದರು. ಅದೇ ಆಂಕರ್ ಈಗಿನ ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟಿನಲ್ಲಿರುವ ಸಂಗತಿಯನ್ನೇ ಹಿಂದೊಮ್ಮೆ ಹೇಳಿದ್ದರು. ಜೊತೆಗೆ ತನ್ನ ಟಿವಿಯ ಚರ್ಚೆಯಲ್ಲಿ ಮಾತಾಡಿದ ವ್ಯಕ್ತಿಯ ಮಾತುಗಳನ್ನು ಖಂಡಿಸುತ್ತೇನೆ ಎಂದು ಸ್ವತಃ ಆಂಕರ್ ಹೇಳುವ ಚೋದ್ಯ ನಡೆಯುತ್ತದೆ.

ಇದು ಪಾದರಾಯನಪುರದ ಮುಂದುವರಿಕೆಯಾ, ಮಂಗಳೂರು ಗಲಭೆಯ ಮುಂದುವರಿಕೆಯಾ ಎಂಬ ಮಾತುಗಳನ್ನು ಗಲಭೆಯ ವರದಿಯಲ್ಲಿ ಸೇರಿಸಿ ರಿಪೋರ್ಟರ್ ಮಾತಾಡುತ್ತಾರೆ. ಬೆಂಗಳೂರಿಗೆ ಬೆಂಕಿ ಹಚ್ಚಿದ ಪುಂಡರು, ಬೆಂಗಳೂರು ಧಗಧಗ ಎಂಬ ಶೀರ್ಷಿಕೆಗಳನ್ನು ಕೊಟ್ಟು, ಬೆಂಗಳೂರಿನ ಉಳಿದ ಭಾಗದ ಜನರು ಅಚ್ಚರಿಗೊಳ್ಳುವಂತೆ ಮಾಡುತ್ತಾರೆ. ಬೆಂಗಳೂರಿನ ಬೀದಿ ಬೀದಿಯಲ್ಲಿ ಕೊರೊನಾದಿಂದ ಹೆಣ ಉರುಳುತ್ತಿದೆ ಎಂದು ಸುದ್ದಿ ಮಾಡಿ ದೂರದ ಊರುಗಳಲ್ಲಿನ ತಂದೆ ತಾಯಂದಿರು ಗಾಬರಿಯಾಗಿ ತಮ್ಮ ಮಕ್ಕಳಿಗೆ ಊರಿಗೆ ಬಂದು ಬಿಡಿ ಎಂದು ಹೇಳುವಂತೆ ಆಗಿತ್ತು. ಇಲ್ಲಿ ಗಲಭೆಯ ವಿಡಿಯೋಗಳನ್ನು ಪದೇ ಪದೇ ತೋರಿಸುತ್ತಾ, ಒಂದಿಡೀ ಸಮುದಾಯವೇ ಈ ಕೃತ್ಯದಲ್ಲಿ ತೊಡಗಿದೆ ಎಂಬಂತೆ ಬಿಂಬಿಸುವ ಕೆಲಸವನ್ನು ಒಂದೆರಡು ಟಿವಿ ಚಾನೆಲ್‌ಗಳು ಮಾಡಿದವು.

ಯಾವ ಒಬ್ಬ ಟಿವಿ ಚಾನೆಲ್ಲೂ ಸಹಾ ಫೇಸ್‌ಬುಕ್ ಪೋಸ್ಟ್ನ ಕುರಿತು ಖಂಡನೀಯ ಧಾಟಿಯಲ್ಲಿ ಮಾತಾಡಿದ್ದು ಕಂಡುಬಂದಿಲ್ಲ. ಬದಲಿಗೆ ಇದೊಂದು ಯೋಜಿತ ಗಲಭೆಯೆಂದೂ, ನಿರ್ದಿಷ್ಟ ಸಂಘಟನೆಗಳು ಇದಕ್ಕೆ ಕಾರಣವೆಂದೂ ಬಿಂಬಿಸುವುದನ್ನು ವ್ಯವಸ್ಥಿತವಾಗಿ ಕೆಲವು ಚಾನೆಲ್ಲುಗಳು ಬಿತ್ತರಿಸಲಾರಂಭಿಸಿದವು. ಅದೇ ಸಂಘಟನೆಯು ನೀಡಿದ ಸ್ಪಷ್ಟೀಕರಣವನ್ನೂ ಪ್ರಕಟಿಸುವುದು ಕನಿಷ್ಠ ಪತ್ರಿಕಾ ಧರ್ಮ ಎಂತಲೂ ಅನಿಸಲಿಲ್ಲ. ಸದರಿ ಸಂಘಟನೆಯು (ಎಸ್‌ಡಿಪಿಐ) ನಡೆಸಿದ ಪತ್ರಿಕಾಗೋಷ್ಠಿಯ ವಿವರವನ್ನು ಪ್ರಸಾರ ಮಾಡಲಿಲ್ಲವಷ್ಟೇ ಅಲ್ಲ, ಪೊಲೀಸ್ ಠಾಣೆಯ ಮುಂದೆ ಮೈಕ್‌ನಲ್ಲಿ ಆ ಸಂಘಟನೆಯ ಮುಖಂಡರು ಮಾತನಾಡಿ ‘ನೆಲದ ಕಾನೂನನ್ನು ಪಾಲಿಸುವುದು ಎಲ್ಲರ ಕರ್ತವ್ಯ’ ಎಂದು ಹೇಳಿದ ವಿಡಿಯೋಗಳೂ ಇರುವುದನ್ನೂ ತಿರುಚಿದವು. ಮೊದಲೇ ತೀರ್ಮಾನಕ್ಕೆ ಬಂದಿರುವುದನ್ನು ಹೇಳಲು ಈ ವಿಡಿಯೋಗಳು ಅಡ್ಡಿಯಾಗುವುದರಿಂದ ‘ಬಾಯಲ್ಲಿ ಬೆಣ್ಣೆ ಮಾತು ಆಡಿ, ದೊಣ್ಣೆ ಬೀಸುತ್ತಿದ್ದಾರೆ’ ಎಂದು ತೀರ್ಪನ್ನೇ ನೀಡಿಬಿಟ್ಟವು.

ನೀವು ಧರ್ಮ ಒಪ್ಪುತ್ತೀರೋ, ಸಂವಿಧಾನ ಒಪ್ಪುತ್ತೀರೋ ಎಂದು ಆಂಕರ್ ಒಬ್ಬರು ಕೇಳಿದ್ದು ನಡೆಯಿತಂತೆ. ತನ್ನ ದೇಶದ ಸಂವಿಧಾನವು ತನ್ನ ಧರ್ಮವನ್ನು ಅನುಸರಿಸಲು ಅವಕಾಶ ಕೊಡುತ್ತದೆ ಎಂಬುದನ್ನು ಹೇಳಲು ಅಲ್ಲಿ ಅವಕಾಶವಿರುವುದಿಲ್ಲ. ಬಿಜೆಪಿ ಪಕ್ಷದ ಜನರು ಸಂವಿಧಾನವನ್ನು ನೇರವಾಗಿ ಅವಹೇಳನ ಮಾಡಿದಾಗ, ಸಂವಿಧಾನ ವಿರೋಧಿ ಮಾತುಗಳು, ಕೃತ್ಯಗಳು ನಡೆದಾಗ ಇಂತಹ ಚರ್ಚೆಯನ್ನು ಮಾಡುವುದನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಒಟ್ಟಿನಲ್ಲಿ ಇದನ್ನು ಒಂದು ಕೋಮುಗಲಭೆಯೆಂತಲೂ, ನಿರ್ದಿಷ್ಟ ಸಮುದಾಯವೊಂದು ನೆಲದ ಕಾನೂನನ್ನು ಒಪ್ಪದೇ (ಇಡೀ ಸಮುದಾಯ!) ಗಲಭೆಗಳಲ್ಲಿ ನಿರತವಾಗಿದೆಯೆಂತಲೂ ಬಿಂಬಿಸುವ ಪ್ರತ್ಯಕ್ಷ ಹಾಗೂ ಪರೋಕ್ಷ ಕೆಲಸವನ್ನು ಈ ಕೆಲವು ಟಿವಿ ಚಾನೆಲ್‌ಗಳು ಮಾಡಿದವು.

ಡಿಜೆ ಹಳ್ಳಿಯ ಕಿಡಿಗೇಡಿಗಳು ಒಂದೆರಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಸಿದ ಗಲಭೆಯನ್ನು, ರಾಜ್ಯಾದ್ಯಂತ ಕೋಮುಗಲಭೆಯನ್ನಾಗಿ ಪರಿವರ್ತಿಸಲು ಬೇಕಾದ ಸರಕನ್ನಾಗಿ ಈ ಕೆಲವು ಮಾಧ್ಯಮಗಳು ಬಳಸಿಕೊಳ್ಳುತ್ತಿವೆ. ಇದನ್ನು ನೋಡಿದರೆ ಸ್ಪಷ್ಟವಾಗುವ ಒಂದು ಮಾತಿದೆ. ಡಿಜೆ ಹಳ್ಳಿಯ ಗಲಭೆಕೋರರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಮಾತ್ರವಲ್ಲದೇ, ಇಂತಹ ಘಟನೆಗಳು ಮತ್ತೆ ನಡೆಯದಂತೆ ಬೇಕಾದ ಕಾನೂನಾತ್ಮಕ, ಆಡಳಿತಾತ್ಮಕ ಕ್ರಮಗಳು ಮಾತ್ರವಲ್ಲದೇ, ಸಮುದಾಯದ ಮುಖಂಡರೂ ಜವಾಬ್ದಾರಿ ತೆಗೆದುಕೊಳ್ಳಲು ತಾಕೀತು ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಧಾರ್ಮಿಕ ನಿಂದನೆ ಮಾಡುವ (ಯಾವುದೇ ಸಮುದಾಯದ) ಕೃತ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತೇವೆ ಎಂಬ ಸಂದೇಶವನ್ನು ಪೊಲೀಸ್ ಇಲಾಖೆಯೂ ನೀಡಬೇಕು. ಸಂಬಂಧಪಟ್ಟವರು ಜವಾಬ್ದಾರಿ ವಹಿಸಿದರೆ ಇದು ಅಸಾಧ್ಯವೇನೂ ಅಲ್ಲ.

ಆದರೆ, ಇಡೀ ರಾಜ್ಯಕ್ಕೆ ಕೋಮುಗಲಭೆ ನಡೆದಿದೆ ಎನ್ನುವ ರೀತಿ, ಒಂದಿಡೀ ಸಮುದಾಯವೇ ಹೀಗೆ ಎಂಬ ಸಂದೇಶವನ್ನು ರವಾನಿಸಿದ ಕೆಲವು ಮಾಧ್ಯಮಗಳು ಹಚ್ಚುತ್ತಿರುವ ಕಿಡಿಗಳು, ಮುಂದೊಂದು ದಿನ ದೊಡ್ಡ ಬೆಂಕಿ ಹತ್ತಿಸುವುದನ್ನು ಹೇಗೆ ತಡೆಯುವುದು? ಇದು ನಿಜಕ್ಕೂ ಅಪಾಯಕಾರಿ ವಿದ್ಯಮಾನವಾಗಿದೆ. ಇದು ಹೊಸ ವಿದ್ಯಮಾನವೇನೂ ಅಲ್ಲ. ಈಗಾಗಲೇ ಕಳೆದ 10 ವರ್ಷಗಳಿಂದ ದೇಶದ ಮಾಧ್ಯಮಗಳ ಒಂದು ವಿಭಾಗ ವ್ಯವಸ್ಥಿತವಾಗಿ ನಡೆಸುತ್ತಿರುವ ಕಾರ್ಯಾಚರಣೆಯ ಹಿಂದೆ ಒಂದು ಅಜೆಂಡಾ ಇದೆ ಮತ್ತು ಅದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿ ಎಂಬುದು ಈಗಾಗಲೇ ಎಲ್ಲರ ಗಮನಕ್ಕೆ ಬಂದಿರುವ ಸಂಗತಿಯಾಗಿದೆ. ಅದಕ್ಕೆ ಡಿಜೆ ಹಳ್ಳಿಯ ಪ್ರಕರಣ ಮತ್ತೊಂದು ಉದಾಹರಣೆಯಾಗಿ ಒದಗಿ ಬಂದಿದೆ ಅಷ್ಟೇ.

ಗಲಭೆಕೋರರು ಬೆಂಕಿ ಹಚ್ಚುವುದನ್ನು ನಿಭಾಯಿಸುವ ಸಂದರ್ಭದಲ್ಲಿ ಮಾಧ್ಯಮಗಳು ಬೆಂಕಿ ಹಚ್ಚುವುದನ್ನು ನಿಭಾಯಿಸಲೂ ಸರ್ಕಾರ ಹಾಗೂ ಸಮಾಜ ಕಾರ್ಯಪ್ರವೃತ್ತವಾಗಬೇಕಿದೆ.


ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡಾ ವಾಸು ಅವರ ಲೇಖನ ನಿಜಕ್ಕೂ ಕಣ್ಣು ತೆರೆಸುವಂತಿದೆ. ಸೂಕ್ಷ್ಮ ಗ್ರಹಿಕೆ ಮತ್ತು ಕಾಳಜಿ ಪ್ರಶಂಸನೀಯ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...