ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಮತ್ತು ಕಾವಲ್ ಬೈರಸಂದ್ರದಲ್ಲಿ ನಿನ್ನೆ ರಾತ್ರಿ ನಡೆದ ಗಲಭೆಯನ್ನು ಖಂಡಿಸಿರುವ ಮುಸ್ಲಿಂ ಸಂಘಟನೆಗಳು, ಕಾನೂನನ್ನು ಕೈಗೆತ್ತಿಕೊಂಡು ಪೋಲೀಸರ ವಿರುಧ್ಧ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು ಪ್ರವಾದಿಯ ಹಿಂಬಾಲಕರ ಶೈಲಿಯಲ್ಲ ಎಂದು ಹೇಳಿದ್ದು ಸಮಸ್ಯೆಯನ್ನು ಕಾನೂನು ಮೂಲಕ ಬಗೆಹರಿಸಬೇಕು ಎಂದು ಹೇಳಿದ್ದಾರೆ.
ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಎನ್ನಲಾದ ನವೀನ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರೆ ಎಂದು ಆರೋಪಿಸಿ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಮತ್ತು ಕಾವಲ್ ಬೈರಸಂದ್ರದಲ್ಲಿ ನಿನ್ನೆ ರಾತ್ರಿ ಭುಗಿಲೆದ್ದ ಘರ್ಷಣೆಯಲ್ಲಿ ಇದುವರೆಗೂ ಮೂವರು ಮೃತಪಟ್ಟಿದ್ದು, 110 ಜನರನ್ನು ಬಂಧಿಸಲಾಗಿದೆ.
ಘಟನೆಯ ಬಗ್ಗೆ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯಾದರ್ಶಿ ಮೌಲಾನಾ ಶಾಪಿ ಸಅದಿ, “ಜಗತ್ತಿಗೆ ಮಾನವೀಯತೆ ಮತ್ತು ಸುಸಂಸ್ಕೃತಿಯ ಸಂದೇಶ ನೀಡಿದ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಜಾಗತಿಕ ಮುಸಲ್ಮಾನರ ಹೃದಯ ಸಿಂಹಾಸನದ ರಾಜಕುಮಾರ. ಅವರನ್ನು ನಿಂದನೆ ಮಾಡಿದ ಕಿಡಿಗೇಡಿಗೆ ಗರಿಷ್ಠ ಶಿಕ್ಷೆಯಾಗಲಿ ಎಂದು ಆಗ್ರಹಿಸಿರುವ ಅವರು, ಕಾನೂನು ಕೈಗೆತ್ತಿಕೊಳ್ಳುವುದು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದನ್ನು ಖಂಡಿಸಿದ್ದಾರೆ. ಕಾನೂನಾತ್ಮಕ ಹೋರಾಟದಲ್ಲಿ ನಂಬಿಕೆಯುಳ್ಳವರಾಗಬೇಕು ಎಂದಿರುವ ಅವರು ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಜೊತೆಗೆ ಕಾನೂನನ್ನು ಕೈಗೆತ್ತಿಕೊಂಡು ಪೋಲೀಸರ ವಿರುಧ್ಧ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು ಪ್ರವಾದಿಯ ಹಿಂಬಾಲಕರಾದ ನಮ್ಮ ಶೈಲಿಯಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಾತ್ಮಕ ಹೋರಾಟದಲ್ಲಿ ನಂಬಿಕೆಯುಳ್ಳವರಾಗಬೇಕು.#Bangalore
— Moulana Shafi Saadi (@shafi_saadi) August 11, 2020
ಘಟನೆಯನ್ನು ಖಂಡಿಸಿರುವ ಜಮಾತೆ ಇಸ್ಲಾಮಿ ಹಿಂದ್ ನ ರಾಜ್ಯಾಧ್ಯಕ್ಷ ಡಾ.ಬೆಲಗಾಮಿ ಪ್ರವಾದಿಯನ್ನು ನಿಂದನೆ ಮಾಡಿರುವ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಸಿದೆ. ಶಾಂತಿ ಸ್ಥಾಪನೆಗೆ ನಾವು ಕಟಿಬದ್ದರಾಗಿದ್ದೇವೆ, ಪೊಲೀಸರು ನಿಷ್ಪಕ್ಷವಾಗಿ ಕೆಲಸ ಮಾಡಬೇಕು ಅಲ್ಲದೆ ಮಾಧ್ಯಮಗಳು ಕೂಡಾ ಇದನ್ನು ಪ್ರಚೋದನೆ ಮಾಡಬಾರದು, ಸಂವೇಶನಶೀಲವಾಗಿ ವರದಿ ಮಾಡಬೇಕು. ಮುಸ್ಲಿಂ ಯುವಕರು ಶಾಂತಿಯಿಂದ ವರ್ತಿಸಬೇಕು ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.
DJ Halli incident. Kannada statement of Dr. Belgami Muhammad Saad, State President, Jamaat e Islami Hind Karnataka.
Posted by Jamaat-e-Islami Hind Karnataka on Wednesday, August 12, 2020
ಕರ್ನಾಟಕ ಮುಸ್ಲಿಂ ಮುತ್ತಹಿದಾ ಮಹಾಝ್ ಇದರ ಅಬ್ದುಲ್ ಖಾದಿರ್, “ಪ್ರವಾದಿ ಮೊಹಮ್ಮದ್ರ ಅವಹೇಳನವನ್ನು ಸಾಮಾನ್ಯವಾಗಿ ಯಾವ ಮುಸ್ಲಿಂ ಕೂಡಾ ಸಹಿಸಿಕೊಳ್ಳುವುದಿಲ್ಲ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಕೂಡಾ ತುಸು ತಡಮಾಡಿದ್ದಾರೆ, ಇದು ಸೇರಿರುವ ಜನರಿಗೆ ಇನ್ನಷ್ಟು ಕೋಪ ಉಂಟು ಮಾಡಿದೆ ಎನ್ನಲಾಗುತ್ತಿದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪೇ ಆಗಿದೆ. ಏನೇ ಸಮಸ್ಯೆಗಳಿದ್ದರು ಕಾನೂನಿನ ಮೂಲಕವೆ ಬಗೆಹರಿಸಬೇಕು. ಈಗ ಪ್ರವಾದಿಯನ್ನು ಅವಹೇಳನ ಮಾಡಿದ ವ್ಯಕ್ತಿಯನ್ನು ಶಿಕ್ಷಿಸುವುದರ ಜೊತೆಗೆ ಗಲಭೇಕೋರರನ್ನು ಕೂಡಾ ಪತ್ತೆ ಹಚ್ಚಿ ಶಿಕ್ಷಿಸಬೇಕಾಗಿದೆ, ಈ ಹೆಸರಲ್ಲಿ ಅಮಾಯಕರು ಬಲಿಯಾಗದಿರಲಿ” ಎಂದು ಹೇಳಿದ್ದಾರೆ.
ಅಲ್ಅನ್ಸಾರ್ ವಾರಪತ್ರಿಕೆಯ ಸಂಪಾದಕ ಕೆ. ಎಂ. ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ಪ್ರವಾದಿ ನಿಂದನೆಯ ವಿರುದ್ಧ ಹಿಂಸೆಗಿಳಿಯುವುದೂ ಪ್ರವಾದಿ ನಿಂದನೆಯೆ ಆಗಿದೆ ಎಂದು ಹೇಳಿದ್ದಾರೆ.
ಪ್ರವಾದಿ ನಿಂದನೆಯ ವಿರುದ್ಧ ಹಿಂಸೆಗಿಳಿದವರು ಮಾಡಿದ್ದು ಕೂಡ ಪ್ರವಾದಿ ನಿಂದನೆಯೆ?
Posted by Km Siddeeq on Wednesday, August 12, 2020
“ಮುಸ್ಲಿಮರು ಅತ್ಯಂತ ಗೌರವಿಸುವ ಪ್ರವಾದಿಗಳನ್ನು ನಿಂದಿಸಿ ಜಾಲತಾಣಗಳಲ್ಲಿ ವಿಕೃತಿ ಮೆರೆದವರನ್ನು ಬಂಧಿಸುವಂತೆ ಪ್ರಜಾಸತ್ತಾತ್ಮಕ ಹೋರಾಟ ನಡೆಸುವುದು ಬಿಟ್ಟು ಹಿಂಸಾತ್ಮಕ ಪ್ರತಿಭಟನೆಗಳಿಗೆ ಇಳಿದಿರುವುದನ್ನು ಸಮುದಾಯ ಎಂದೂ ಕ್ಷಮಿಸುವುದಿಲ್ಲ. ಪ್ರವಾದಿಯ ನಿಂದನೆ ಹಿಂದಿನಿಂದಲೂ ನಡೆಯುತ್ತ ಬಂದಿದೆ. ಸೈದ್ಧಾಂತಿಕವಾಗಿ ಅವರ ಸಿದ್ಧಾಂತಗಳನ್ನು ಎದುರಿಸಲಾಗದವರು ಮಾತ್ರ ನಿಂದನೆಗಿಳಿಯುತ್ತಾರೆ. ಮುಸ್ಲಿಮರನ್ನು ಪ್ರಚೋದಿಸಿ ಅವರನ್ನು ಸಂಘರ್ಷಕ್ಕೆ ಹಚ್ಚುವ ಷಡ್ಯಂತ್ರ ನಡೆಯುತ್ತಲೇ ಇದೆ. ಇದನ್ನರಿತು ಸಮುದಾಯ ಸಂಯಮದಿಂದ ವರ್ತಿಸಬೇಕು. ಇದೀಗ ಮಾಧ್ಯಮಗಳು ಕೂಡ ಹಸಿದ ನಾಯಿಗೆ ಎಲುಬು ಸಿಕ್ಕಂತೆ ಸಂಭ್ರಮಿಸಿ ಪ್ರಕರಣವನ್ನು ದೀರ್ಘಕಾಲ ಜೀವಂತವಿಡಲು ಪ್ರಯತ್ನಿಸುತ್ತಿರುವುದು ವಿಷಾದನೀಯ” ಎಂದು ಸಿದ್ದೀಕ್ ಹೇಳಿದ್ದಾರೆ.
ಪ್ರವಾದಿ ನಿಂದನೆಯ ಫೇಸ್ಬುಕ್ ಪೋಸ್ಟ್ ಹಾಗೂ ಹಿಂಸಾಚಾರಗಳೆರಡೂ ಖಂಡನಾರ್ಹ ಎಂದಿರುವ ಸುನ್ನಿ ಸ್ಟೂಡೆಂಟ್ ಫಡರೇಷನ್ (ಎಸ್ಸೆಸ್ಸೆಫ್) ಕರ್ನಾಟಕ ರಾಜ್ಯ ಸಮಿತಿ, “ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಪೋಸ್ಟ್ ಹಂಚುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾರೇ ಆದರೂ ಶಿಕ್ಷಾರ್ಹರು. ಅದೇ ರೀತಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರಕ್ಕಿಳಿಯುವುದು ಕೂಡ ವಿಶ್ವ ಪ್ರವಾದಿಯವರ ಬೋಧನೆಗೆ ಮಸಿಬಳಿಯುವ ಪ್ರಯತ್ನವಾಗಿದೆ” ಎಂದು ಅಭಿಪಪ್ರಾಯ ಪಟ್ಟಿದೆ.
“ಯಾವುದೇ ಪ್ರಚೋದನಾತ್ಮಕ ಹೇಳಿಕೆಗಳಿಗೆ ವಿವೇಕಯುತವಾಗಿ ಪ್ರತಿಕ್ರಿಯಿಸಬೇಕು. ಹಿಂಸಾತ್ಮಕವಾಗಿ ವರ್ತಿಸಿದರೆ ಪ್ರಚೋದಿಸಿದರ ದುರುದ್ದೇಶ ಈಡೇರುತ್ತದೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು ಎಂದು ಎಸ್ಸೆಸ್ಸೆಫ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ಹಿಂದೆಯೂ ಕೆಲವು ದುಷ್ಕರ್ಮಿಗಳು ಅನಗತ್ಯವಾಗಿ ಪ್ರವಾದಿಯವರನ್ನು ಅವಮಾನಕರವಾಗಿ ಚರ್ಚೆಗೆ ಎಳೆದು ತರುವ ಪ್ರಯತ್ನವನ್ನು ಮಾಡಿದ್ದರು. ಅಂತಹ ದುಷ್ಕರ್ಮಿಗಳ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದು ಖೇದಕರ. ಇನ್ನು ಇಂತಹ ದುಷ್ಕೃತ್ಯಗಳು ಪುನರಾವರ್ತನೆಯಾಗದಂತೆ ರಾಜ್ಯ ಗೃಹ ಇಲಾಖೆಯು ಎಚ್ಚರ ವಹಿಸಬೇಕು” ಎಂದು ಎಸ್ಸೆಸ್ಸೆಫ್ ಪ್ರಕಟನೆಯಲ್ಲಿ ಆಗ್ರಹಿಸಿದೆ.
ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್(ಎಸ್ಐಒ), ” ಕೋಟ್ಯಾಂತರ ಮುಸ್ಲಿಮರು ಗೌರವಯುತವಾಗಿ ಕಾಣುವ ಪ್ರವಾದಿಯ ನಿಂದನೆ ಖಂಡನಾರ್ಹ, ಆದರೆ ಇಂತಹ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ಹುಡುಕಬೇಕೆ ವಿನಃ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನೆಲದ ಕಾನೂನಿಗೆ ಗೌರವ ನೀಡುವುದು ನಮ್ಮ ಮೊದಲ ಆದ್ಯತೆಯಾಗಬೇಕು. ನಿನ್ನೆ ಗಲಭೆಯಲ್ಲಿ ಭಾಗಿಯಾದವನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: ಕೇವಲ ವಾಸ್ತವಾಂಶಗಳನ್ನು ಮಾತ್ರ ವರದಿ ಮಾಡಿ: ಮಾಧ್ಯಮಗಳಿಗೆ ‘ನಾವು ಭಾರತೀಯರು’ ಮನವಿ