ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವುದರ ಹಿನ್ನೆಲೆಯಲ್ಲಿ ಮುರುಘಾ ಮಠ ನೀಡುವ ಬಸವಶ್ರೀ ಪ್ರಶಸ್ತಿಯನ್ನು ಖ್ಯಾತ ಪತ್ರಕರ್ತ, ಚಿಂತಕ ಪಿ ಸಾಯಿನಾಥ್ ಹಿಂದಿರುಗಿಸಿದ್ದಾರೆ.
ಈ ಪ್ರಕರಣದಲ್ಲಿನ ಹೋರಾಟದಲ್ಲಿ ನಾನು ಸಂತ್ರಸ್ತರ ಪರವಾಗಿ ನಿಲ್ಲುವುದಕ್ಕಾಗಿ ನನಗೆ ನೀಡಿದ ಪ್ರಶಸ್ತಿ ಮತ್ತು 5 ಲಕ್ಷ ರೂ ಹಣವನ್ನು ವಾಪಸ್ ಮಾಡುತ್ತೇನೆ ಎಂದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರಾಗಿರುವ ಸಾಯಿನಾಥ್ ಹೇಳಿದ್ದಾರೆ.
“ಚಿತ್ರದುರ್ಗದ ಶ್ರೀ ಮುರುಘಾಮಠದ ಮಠಾಧೀಶರಾದ ಶ್ರೀ ಶಿವಮೂರ್ತಿ ಮುರುಘಾ ಶರಣರ ಮೇಲಿನ ಆರೋಪಗಳನ್ನು ಮಾಧ್ಯಮ ವರದಿಗಳಿಂದ ತಿಳಿದು ನಾನು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೊ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಹೈಸ್ಕೂಲ್ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ಯಾವುದೇ ಪದಗಳು ಸಾಲುವುದಿಲ್ಲ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡುವುದಕ್ಕಾಗಿ 2017 ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಅದರೊಂದಿಗೆ ಬಂದ 5 ಲಕ್ಷ ರೂ. ಬಹುಮಾನದ ಮೊತ್ತವನ್ನು ಚೆಕ್ ಮೂಲಕ ಹಿಂದಿರುಗಿಸುತ್ತೇನೆ ಎಂದು ಅವರು ಘೋಷಿಸಿದ್ದಾರೆ.
ಇಂತಹ ಘೋರ ಘಟನೆಗಳನ್ನು ಬೆಳಕಿಗೆ ತರಲು ಶ್ರಮಿಸಿದ ಮೈಸೂರು ಮೂಲದ ಎನ್ಜಿಒ “ಒಡನಾಡಿ”ಯ ಪ್ರಯತ್ನಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧದ ಅವರ ದಶಕಗಳ ಹೋರಾಟಕ್ಕೆ ಮೆಚ್ಚುಗೆ ದಾಖಲಿಸುತ್ತೇನೆ. ಅದೇ ಸಂದರ್ಭದಲ್ಲಿ ಮುರುಘಾ ಶರಣ ಮೇಲಿನ ತನಿಖೆಯನ್ನು ತೀವ್ರವಾಗಿ ಮುಂದುವರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರನ್ನು ಬೆಂಗಳೂರು ಆಸ್ಪತ್ರೆಗೆ ರವಾನೆ ವಿಚಾರಕ್ಕೆ ಕಿಡಿಕಾರಿದ ನ್ಯಾಯಾಲಯ


