ಕೆಜಿಎಫ್ ಸಿನಿಮಾದಿಂದ ಪ್ರೇರಿತನಾದ 19 ವರ್ಷದ ಯುವಕನೊಬ್ಬ ಐದು ಜನರನ್ನು ಸರಣಿಯಾಗಿ ಕೊಂದು ಹಾಕಿರುವ ಭೀಕರ ಘಟನೆ ಮಧ್ಯಪ್ರದೇಶದಲ್ಲಿ ಜರುಗಿದೆ. ಶಿವಪ್ರಸಾದ್ ಹೆಸರಿನ ಆ ಸರಣಿ ಕೊಲೆಗಾರ ನಾಲ್ಕು ಜನ ಸೆಕ್ಯುರಿಟಿ ಗಾರ್ಡ್ಗಳನ್ನು ಸೇರಿ ಐವರನ್ನು ಕೊಂದು ಹಾಕಿದ್ದು, ಅದರ ಸಿಸಿಟಿವಿ ವಿಡಿಯೋವೊಂದು ವೈರಲ್ ಆಗಿದೆ.
ಒಬ್ಬ ವ್ಯಕ್ತಿಯನ್ನು ಕೊಂದ ಬಳಿಕ ಆತನ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದರಿಂದ ಕೊಲೆಗಾರನನ್ನು ಪತ್ತೆ ಹಚ್ಚಿ ಭೋಪಾಲ್ ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ವೈರಲ್ ಸಿಸಿಟಿವಿ ದೃಶ್ಯವೊಂದರಲ್ಲಿ ಮಂಚದ ಮೇಲೆ ಮಲಗಿರುವ ವ್ಯಕ್ತಿಯ ಮೇಲೆ ಕಲ್ಲಿನಿಂದ ಹೊಡೆದು ಸಾಯಿಸುವುದನ್ನು ನೋಡಬಹುದು. ಆನಂತರ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು 19 ವರ್ಷದ ಸರಣಿ ಕೊಲೆಗಾರ ತಪ್ಪಿಸಿಕೊಳ್ಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಆತ ಮೂರು ರಾತ್ರಿಗಳಲ್ಲಿ ಮೂವರು ಸೆಕ್ಯುರಿಟಿ ಗಾರ್ಡ್ಗಳನ್ನು ಕೊಂದಿದ್ದಾನೆ ಎನ್ನಲಾಗಿದೆ. ಎಲ್ಲರನ್ನು ಕಲ್ಲಿನಿಂದ ಹೊಡೆದು ಕೊಲ್ಲಲಾಗಿದೆ. ಮಲಗಿದ ಸೆಕ್ಯುರಿಟಿ ಗಾರ್ಡ್ಗಳ ಆತನ ಟಾರ್ಗೆಟ್ಗಳಾಗಿದ್ದರು ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.
महज़ 19-20 साल की उम्र में नाम हासिल करने के लिये आरोपी ने 5 सिक्योरिटी गार्ड को पत्थर से कुचलकर मार डाला ऐसा पुलिस का कहना है. सीसीटीवी फुटेज में वो बेरहमी से कत्ल करता दिख रहा है @ndtv @ndtvindia https://t.co/vupRSULQIj pic.twitter.com/pTKcV4jSDk
— Anurag Dwary (@Anurag_Dwary) September 2, 2022
ಆರೋಪಿಯು ಕೆಜಿಎಫ್ ಸಿನಿಮಾದಿಂದ ಸ್ಪೂರ್ತಿ ಪಡೆದು ಕೊಲೆಗಳನ್ನು ಮಾಡುತ್ತಿದ್ದ. ದಿಢೀರ್ ಪ್ರಚಾರಕ್ಕಾಗಿ ಆತ ಈ ಕೆಲಸಗಳನ್ನು ಮಾಡಿದ್ದಾನೆ. ಆತನ ಮುಂದಿನ ಟಾರ್ಗೆಟ್ ಪೊಲೀಸರಾಗಿದ್ದರು ಎನ್ನಲಾಗಿದೆ.
ಮೇ ತಿಂಗಳಿನಿಂದ ಆತ ಕೊಲೆ ಮಾಡಲು ಆರಂಭಿಸಿದ್ದ. ಬ್ರಿಡ್ಜ್ ಕಾಮಗಾರಿ ನೋಡಿಕೊಳ್ಳುತ್ತಿದ್ದ ಸೆಕ್ಯುರಿಟಿಯನ್ನು ಕೊಂದಿದ್ದ. ಆನಂತರ ಮಾರ್ಬಲ್ ಶಾಪ್ನಲ್ಲಿ ಸೆಕ್ಯುರಿಟಿಯಾಗಿದ್ದ ಸೋನು ವರ್ಮಾ ಎಂಬಾತನನ್ನು ಸಹ ಕೊಂದಿದ್ದ. ಆಗಸ್ಟ್ 28 ರಂದು ಕಾಲೇಜಿನಲ್ಲಿ ಸೆಕ್ಯುರಿಟಿಯಗಿದ್ದ 60 ವರ್ಷದ ಶಂಭು ನಾರಾಯಣ್ ದುಬೆ ಎಂಬುವವರನ್ನು ಸಹ ಕೊಲ್ಲಲಾಗಿದೆ. ಎಲ್ಲರನ್ನು ಕಲ್ಲಿನಿಂದ ಕೊಲ್ಲುತ್ತಿದ್ದ ಈತನನ್ನು ಜನರು ಸ್ಟೋನ್ ಕಿಲ್ಲರ್ ಎಂದು ಕರೆಯುತ್ತಿದ್ದರು ಎನ್ನಲಾಗಿದೆ.
ಮುಂಚಿನ ಪ್ರಕರಣಗಳಲ್ಲಿ ಈತ ಕೊಂದ ನಂತರ ತಪ್ಪಿಸಿಕೊಳ್ಳುತ್ತಿದ್ದನೆ ಹೊರತು ಕಳ್ಳತನ ಮಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಕೊಂದ ನಂತರ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಅದರ ಲೊಕೇಶನ್ ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತಾನು ರಾತ್ರೋ ರಾತ್ರಿ ಫೇಮಸ್ ಆಗಬೇಕೆಂಬ ಏಕೈಕ ಕಾರಣದಿಂದ ಕೊಲ್ಲುತ್ತಿದ್ದೆ, ಇತ್ತೀಚಿಗೆ ಬಿಡುಗಡೆಯಾಗಿದ್ದ ಕೆಜಿಎಫ್ ಚಿತ್ರದಿಂದ ಪ್ರೇರಣೆ ಪಡೆದಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತರುಣ್ ನಾಯಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರನ್ನು ಬೆಂಗಳೂರು ಆಸ್ಪತ್ರೆಗೆ ರವಾನೆ ವಿಚಾರಕ್ಕೆ ಕಿಡಿಕಾರಿದ ನ್ಯಾಯಾಲಯ