Homeಮುಖಪುಟಕರ್ನಾಟಕದಲ್ಲಿ ಸಂಗೀತ ಮತ್ತು ಮೈಸೂರು ದಸರಾ - ಡಾ. ಶಶಿಕಾಂತ್ ಕೌಡೂರ್

ಕರ್ನಾಟಕದಲ್ಲಿ ಸಂಗೀತ ಮತ್ತು ಮೈಸೂರು ದಸರಾ – ಡಾ. ಶಶಿಕಾಂತ್ ಕೌಡೂರ್

ಕೃಷ್ಣರಾಜ ಒಡೆಯರ ಸಂಗೀತಾಸಕ್ತಿ ಬರೇ ಕರ್ನಾಟಕ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ಹಿಂದುಸ್ತಾನೀ, ಪಾಶ್ಚಾತ್ಯ ಸಂಗೀತ ಇತ್ಯಾದಿಗಳಿಗೂ ಹಬ್ಬಿತ್ತು ಮತ್ತು ದಸರಾ ಅದಕ್ಕೊಂದು ಸಂದರ್ಭವನ್ನೊದಗಿಸುತ್ತಿತ್ತು.

- Advertisement -
- Advertisement -

ಕರ್ನಾಟಕ ಸಂಗೀತಕ್ಕೂ ಹಾಗೂ ಕರ್ನಾಟಕವೆಂಬ ಭೂ-ರಾಜಕೀಯ ಪ್ರದೇಶಕ್ಕೂ ಸಮೀಕರಣ ಮಾಡುವಂಥ ಪ್ರವೃತ್ತಿ ಇಪ್ಪತ್ತನೇ ಶತಮಾನದ ಆದಿಭಾಗದಿಂದ ಬೆಳೆದುಬಂತೆಂದು ಕರ್ನಾಟಕ ಸಂಗೀತ ವಿಮರ್ಶಕ ದಿವಂಗತ ಶ್ರೀ ಬಿ.ವಿ.ಕೆ. ಶಾಸ್ತ್ರಿ ಹೇಳಿದ್ದಾರೆ. ಶಾಸ್ತ್ರಿ ಅವರ ಪ್ರಕಾರ ಈ ತಪ್ಪು ನೆಲೆನಿಲ್ಲಲು ಕಾರಣವೆಂದರೆ ಮದ್ರಾಸ್ ವಿ.ವಿ ಯಲ್ಲಿ ಸಂಗೀತದ ಪ್ರಾಧ್ಯಾಪಕರಾಗಿದ್ದ ಪ್ರೊ. ಸಾಂಬಮೂರ್ತಿ ಅವರು. ಸಾಂಬಮೂರ್ತಿ ಅವರು ತಮ್ಮ ಒಂದು ಬರಹದಲ್ಲಿ ಈ ಕೆಳಗಿನ ಶ್ಲೋಕವನ್ನು ಉದ್ಧರಿಸುತ್ತಾರೆ:

ತದಾಪಿ ದ್ವಿವಿಧಮ್ ಜ್ಞೇಯಮ್ ದಕ್ಷಿಣೋತ್ತರ ಭೇದತಃ
ಕರ್ನಾಟಕಮ್ ದಾಕ್ಷಿಣೇಸ್ಯಾತ್ ಹಿಂದುಸ್ತಾನಿ ತಥೋತ್ತರೇ

(ದಕ್ಷಿಣ ಮತ್ತು ಉತ್ತರದ ಭೇದದಿಂದ ಎರಡು ತರಹದ ಸಂಗೀತಗಳಿವೆಯೆಂದು ತಿಳಿಯತಕ್ಕದ್ದು: ಕರ್ನಾಟಕ[ಸಂಗೀತ]ವು ದಕ್ಷಿಣದಲ್ಲೂ, ಹಿಂದುಸ್ತಾನಿ[ಸಂಗೀತ]ವು ಉತ್ತರದಲ್ಲೂ ಇರುವುವು.) ಸಾಂಬಮೂರ್ತಿ ಅವರು ಈ ಶ್ಲೋಕ ‘ಸಂಗೀತ ಸುಧಾಕರ’ ಎಂಬ 15ನೇ ಶತಮಾನದ ಕೃತಿಯಲ್ಲೇ ಬಂದಿರುವುದರಿಂದ ಕರ್ನಾಟಕ ಹಾಗೂ ಹಿಂದುಸ್ತಾನೀ ಸಂಗೀತ ಎಂಬ ವಿಭಾಗ ಆಗಿಂದಲೇ ಇತ್ತು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಆದರೆ ಶಾಸ್ತ್ರಿಯವರ ಪ್ರಕಾರ ‘ಸಂಗೀತ ಸುಧಾಕರ’ ಎಂಬ ಹೆಸರಿನ ಇನ್ನೊಂದು ಕೃತಿಯು 1911ರಷ್ಟು ತಡವಾಗಿ ಹೈದರಾಬಾದಿನ ಕಾಶೀನಾಥ ಅಪ್ಪಾ ತುಳಸಿ ಎಂಬುವರಿಂದ ರಚಿತವಾಗಿತ್ತು ಹಾಗೂ ಸಾಂಬಮೂರ್ತಿಯವರು ತೆಗೆದುಕೊಂಡ ಶ್ಲೋಕ ಈ ಗ್ರಂಥದಲ್ಲಿ ಉಧ್ಧೃತವಾದದ್ದಾಗಿತ್ತು. ಆದರೆ ಸಾಂಬಮೂರ್ತಿಯವರ ಸ್ಕಾಲರ್‌ಶಿಪ್‍ಅನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲವಾದ್ದರಿಂದ ಅವರ ಅಭಿಪ್ರಾಯ ಹಾಗೇ ನೆಲೆಗೊಂಡಿತು.

ಇದರೊಂದಿಗೆ ಬಹಳಷ್ಟು ಜನ ಕರ್ನಾಟಕ ಸಂಗೀತವೆಂದರೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಸಂಗೀತವೆಂಬ ಅಭಿಪ್ರಾಯಕ್ಕೆ ಬಂದಿದ್ದರು. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕನ್ನಡ ರಾಷ್ಟ್ರೀಯವಾದಿಗಳೂ ಕೂಡಾ ಈ ಅಭಿಪ್ರಾಯವನ್ನು ತಮ್ಮ ರಾಜಕೀಯ ಚಳುವಳಿಯಲ್ಲಿ ಉಪಯೋಗಿಸಿಕೊಂಡರು. ಇಂಥವರಲ್ಲಿ ‘ಕರ್ನಾಟಕ ಪಿತಾಮಹ’ರಾದ ಆಲೂರು ವೆಂಕಟರಾಯರು ಪ್ರಮುಖರು. ಕನ್ನಡದ ರಾಷ್ಟ್ರೀಯವಾದಿಗಳಿಗೆ ಕನ್ನಡವೇ ಹೆಚ್ಚಾಗಿ ಆಡುಮಾತಾಗಿದ್ದ ಬೇರೆ ಬೇರೆ ಪ್ರದೇಶಗಳನ್ನು ಸೇರಿಸಿ ಕರ್ನಾಟಕವೆಂಬ ಭೂ-ರಾಜಕೀಯ ಪ್ರದೇಶವನ್ನು ನಿರ್ಮಿಸುವುದು ಉದ್ದೇಶವಾಗಿತ್ತು. ಹೀಗಿರುವಾಗ ಯಾವುದೇ ಸಾಂಸ್ಕೃತಿಕ ಪ್ರಕಾರಕ್ಕೆ ಕರ್ನಾಟಕವೆಂಬ ಹೆಸರಿದ್ದರೆ ಅದು ಬಹಳ ಉಪಯೋಗದ್ದೇ ಆಗಿದ್ದಿತು. ಕರ್ನಾಟಕ ಸಂಗೀತವೆಂಬುದು ಇಡೀ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಬಹುದೆಂಬ ಆಲೋಚನೆ ವೆಂಕಟರಾಯರದ್ದಾಗಿತ್ತು. ಆದರೆ ಸಂಗೀತಕ್ಕೆ ಈ ಭೂ-ರಾಜಕೀಯ ಪ್ರದೇಶದಲ್ಲಿ ಅಂಥ ಒಂದು ಏಕರೂಪತೆ ಇರಲಿಲ್ಲ. ಇದು ನಮಗೆ ಕೆಲವು ಲೇಖಕರ ಬರಹಗಳಲ್ಲಿ ಗೊತ್ತಾಗುತ್ತದೆ.

ಕನ್ನಡದ ಒಬ್ಬ ಪ್ರಮುಖ ಲೇಖಕರಾದ ಬೆಟಗೇರಿ ಕೃಷ್ಣಶರ್ಮ ಅವರು 1920ರ ದಶಕದಲ್ಲಿ ಬೆಳಗಾಮ್‍ನಲ್ಲಿ ಜರುಗಿದ ಕಾಂಗ್ರೆಸ್‍ನ ರಾಷ್ಟ್ರೀಯ ಅಧಿವೇಶನದ ಬಗ್ಗೆ ಅಂದಿನ ಪತ್ರಿಕೆ ‘ಜಯಕರ್ನಾಟಕ’ದಲ್ಲಿ ಬರೆದ ಮಾಹಿತಿ ಆಸಕ್ತಿದಾಯಕವಾಗಿದೆ. ಆ ಅಧಿವೇಶನದಲ್ಲಿ ವೀಣೆಯನ್ನು ನುಡಿಸಲು ವೀಣೆ ಶೇಷಣ್ಣ ಬಂದಿದ್ದರಂತೆ. ಆದರೆ ಉತ್ತರ ಕರ್ನಾಟಕದ ಜನರಿಗೆ ಕರ್ನಾಟಕ ಸಂಗೀತದ ಸರಿಯಾದ ರುಚಿ ಇಲ್ಲ ಎನ್ನುತ್ತಾ ಕೃಷ್ಣಶರ್ಮ ಹೀಗೆನ್ನುತ್ತಾರೆ: “ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸಂಗೀತವನ್ನು ಹೇಳುವ ಕಂಠಗಳಿಲ್ಲ; ಕೇಳಿ ಆನಂದಿಸುವ ಕಿವಿಗಳಿಲ್ಲ. ಕತ್ತೆ ಕುದುರೆಗಳ ಮಧ್ಯದ ಜಾತಿಯ ಪ್ರಾಣಿಯಂತೆ, ಹಿಂದುಸ್ತಾನಿ-ಕರ್ನಾಟಕ ಸಂಗೀತಗಳ ಮಧ್ಯದ ಮಿಶ್ರಜಾತಿಯ ಸಂಗೀತ ಇಲ್ಲಿಯವರ ಕಿವಿಗಳನ್ನು ಕಿಲುಬುಗಟ್ಟಿಸಿಬಿಟ್ಟಿದೆ.” (ಕರ್ನಾಟಕ ಸಂಗೀತದ ಬಗೆಗಿನ ತಮ್ಮ ಮುಂಚಿನ ಅಜ್ಞಾನವನ್ನೂ ಅವರು ನಿವೇದಿಸಿಕೊಳ್ಳುತ್ತಾರೆ: ಕೃಷ್ಣಶರ್ಮರಿಗೆ ವೀಣೆಯೆಂದರೆ ತಂಬೂರಕ್ಕಿಂತ ಭಿನ್ನವಾದ ಒಂದು ವಾದ್ಯ ಪ್ರಕಾರವೆಂದು ಆಗಲೇ ಪಟ್ಟಣಕ್ಕೆ ಬಂದಿದ್ದ ಅವರ ಸಹೋದರನೊಬ್ಬ ಅವರಿಗೆ ಹೇಳಿದ್ದರು) ಇದು ಸರಿಯೆಂಬಂತೆ ಶೇಷಣ್ಣನವರು ಸುಮಾರು ಎರಡು ಸಾವಿರ ಜನರ ‘ಗುಜುಗುಜು-ಗುಣುಗುಣು’ವಿನಲ್ಲಿ ಜನರಿಗೆ ಕೇಳಿಸದಿದ್ದರೂ ತನ್ನ ವಾದನವನ್ನು ನುಡಿಸಿಯೇಬಿಟ್ಟರಂತೆ. ಕೃಷ್ಣಶರ್ಮರ ಮಾತನ್ನೇ ಅನುಮೋದಿಸುವ ರೀತಿಯಲ್ಲಿ ಆಗಿನ ಉತ್ತರ ಕರ್ನಾಟಕದ ಇನ್ನೊಬ್ಬ ಪ್ರಮುಖರಾದ ಶ್ಯಾಮರಾವ್ ತಟ್ಟಿಯವರು ಹೇಳುತ್ತಾರೆ: “ಈ ಪ್ರದೇಶದಲ್ಲಿ ಕನ್ನಡಿಗರು ಯಾರಾದರೂ ಹಾಡಿದರೆ ಅವರು ಹಿಂದುಸ್ತಾನಿ ಸಂಗೀತವನ್ನೋ ಅಥವಾ ಒಂದು ಬಗೆಯ ಮಿಶ್ರ ಸಂಗೀತವನ್ನೋ ಹಾಡುತ್ತಾರೆ. ದಕ್ಷಿಣ ಭಾರತದ ಸಂಗೀತವನ್ನು ಹಾಡುವವರು ಬಲು ವಿರಳ”.

ಆದರೆ ಉತ್ತರ ಕರ್ನಾಟಕದಲ್ಲಿ ಆ ಮುಂಚೆ ಕರ್ನಾಟಕ ಸಂಗೀತ ಇದ್ದಿಲ್ಲವೆಂದು ಇದರ ಅರ್ಥವಲ್ಲ. ಹತ್ತೊಂಭತ್ತನೇ ಶತಮಾನದಲ್ಲಿ ಕರ್ನಾಟಕ ಸಂಗೀತ, ಸಂಗೀತದ ರಾಗಗಳು, ತ್ಯಾಗರಾಜರ ಕೃತಿಗಳು ಉತ್ತರ ಕರ್ನಾಟಕದಲ್ಲಿ ಅಂದರೆ ಧಾರವಾಡ-ಹುಬ್ಬಳ್ಳಿ ಪ್ರದೇಶದಲ್ಲಿ ಪ್ರಚಲಿತವಿದ್ದಂತಿದೆ (ದಕ್ಷಿಣ ಮಹಾರಾಷ್ಟ್ರದಲ್ಲೂ ಕೂಡಾ ಕರ್ನಾಟಕ ಸಂಗೀತದ ರಾಗಗಳು ಪ್ರಚಲಿತದಲ್ಲಿದ್ದಿತ್ತಂತೆ). ಮರಾಠೀ ನಾಟಕಗಳ ಪ್ರಮುಖ ಪ್ರದರ್ಶಕರಾದ ಅಣ್ಣಾಸಾಹೇಬ್ ಕಿರ್ಲೋಸ್ಕರ್ ಅವರ ನಾಟಕಗಳಲ್ಲಿ ಕರ್ನಾಟಕ ಸಂಗೀತದ ರಾಗಗಳೇ ಇದ್ದವೆಂದು ಬೆಟಗೇರಿ ಕೃಷ್ಣಶರ್ಮರು ‘ನನ್ನ ನೆನಪು’ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. ಹಾಗೆಯೇ ಚುರಮುರಿ ಶೇಷಗಿರಿರಾಯರ ‘ಶಾಕುಂತಲ’ವೆಂಬ ನಾಟಕದಲ್ಲಿಡೀ ಕರ್ನಾಟಕ ಸಂಗೀತದ ಹಾಡುಗಳೇ ಇದ್ದುವಂತೆ. ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ತಾಯಿಯಾದ ಅಂಬಾಬಾಯಿ ಅವರು ತ್ಯಾಗರಾಜರ ಕೃತಿಗಳನ್ನು ಚೆನ್ನಾಗಿ ಹಾಡುತ್ತಿದ್ದರೆಂದು ಹಾನಗಲ್ ಅವರೇ ತಮ್ಮ ಆತ್ಮಚರಿತ್ರೆ ‘ನನ್ನ ಬದುಕಿನ ಹಾಡು’ ಇದರಲ್ಲಿ ಹೇಳಿಕೊಳ್ಳುತ್ತಾರೆ. ಇದನ್ನು ಕೇಳಿದ ಅಬ್ದುಲ್ ಕರೀಂ ಖಾನ್‍ರಂತಹ ಹಿಂದುಸ್ತಾನಿ ಸಂಗೀತದ ದಿಗ್ಗಜ ಅಂಬಾಬಾಯಿಯವರಿಂದ ಸ್ವಲ್ಪ ಮಟ್ಟಿನ ಕರ್ನಾಟಕ ಸಂಗೀತವನ್ನೂ ಕಲಿತಿದ್ದರಂತೆ. ಹಿಂದುಸ್ತಾನಿ ಸಂಗೀತದ ಇನ್ನೊಬ್ಬ ದಿಗ್ಗಜ ಬಸವರಾಜ ರಾಜಗುರು ಅವರು ತಮ್ಮ ಸಂಗೀತಾಭ್ಯಾಸವನ್ನು ಕರ್ನಾಟಕ ಸಂಗೀತದಿಂದ ಆರಂಭಿಸಿದ್ದರು.

ಮುದವೀಡು ಕೃಷ್ಣರಾಯರಂತೂ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸಂಗೀತದ ‘ಅವನತಿ’ಯನ್ನು 1895ರಿಂದ ಎನ್ನುವಷ್ಟು ಕರಾರುವಾಕ್ಕಾಗಿ ಗುರುತಿಸುತ್ತಾರೆ (ರಾ.ಯ. ಧಾರವಾಡ್ಕರ್ ಅವರ ‘ಹೊಸಗನ್ನಡ ಸಾಹಿತ್ಯದ ಉದಯಕಾಲ’ ಎಂಬ ಪುಸ್ತಕದಲ್ಲಿ). ಅವರ ಪ್ರಕಾರ ಧಾರವಾಡದಲ್ಲಿ ಚಿಮ್ಮಲಗಿ ವೆಂಕಣ್ಣ ಎಂಬುವವರು ಕರ್ನಾಟಕ ಸಂಗೀತದ ಕೊನೆಯ ಪ್ರಮುಖ ಗುರುಗಳಾಗಿದ್ದರು. ತಂಜಾವೂರಿನಲ್ಲಿ ಸಂಗೀತ ಶಿಕ್ಷಣ ಪಡೆದು ಧಾರವಾಡಕ್ಕೆ ಬಂದು ಅಲ್ಲಿ ಸಂಗೀತ ಕಲಿಸುತ್ತಿದ್ದರು. 1893ರಲ್ಲಿ ಅವರು ತೀರಿಕೊಂಡಾಗ ಆ ಜಾಗವನ್ನು ಬೇರಾರೂ ತುಂಬಲಿಲ್ಲ. ಅದೇ ಸಮಯಕ್ಕೆ ಧಾರವಾಡದ ಟೀಚರ್ಸ್ ಟ್ರೇನಿಂಗ್ ಕಾಲೇಜಿಗೆ ಬಂದು ಸೇರಿಕೊಂಡ ಭಾಸ್ಕರ ಬುವಾ ಬಖಲೆ ಹಿಂದುಸ್ತಾನಿಯ ಉಚ್ಛ್ರಾಯಕ್ಕೆ ಇನ್ನೊಂದು ಮುಖ್ಯ ಕಾರಣರಾದರು. ಅಲ್ಲಿ ತರಬೇತಿಗೆ ಸೇರಿದ ಶಿಕ್ಷಕರೆಲ್ಲಾ ಹಿಂದುಸ್ತಾನೀ ಸಂಗೀತದ ಅಲ್ಪಸ್ವಲ್ಪ ತರಬೇತಿಯನ್ನೂ ಪಡೆದು ಧಾರವಾಡ ಪ್ರದೇಶದ ಬೇರೆ ಬೇರೆ ಹಳ್ಳಿಗಳಲ್ಲಿ ಶಿಕ್ಷಕರಾಗಿ ಸೇರಿದ್ದರಿಂದಾಗಿ ಹಿಂದುಸ್ತಾನೀ ಸಂಗೀತದ ರುಚಿ ಸಾಮಾನ್ಯರಲ್ಲೂ ಹತ್ತತೊಡಗಿತು, ಎನ್ನುತ್ತಾರೆ ಮುದವೀಡು ಕೃಷ್ಣರಾಯರು.

ಮೈಸೂರಿನಲ್ಲಿ ಪ್ರತೀ ವರ್ಷ ದಸರಾ ಮಹೋತ್ಸವ ಅಥವಾ ಮಹಾರಾಜರ ವರ್ಧಂತಿ ಇತ್ಯಾದಿ ನಡೆದಾಗ ಉತ್ತರ ಭಾರತದ ಸಂಗೀತಗಾರರು ಮೈಸೂರಿಗೆ ಬರುತ್ತಿದ್ದರು. ಹಾಗೆ ಬರುವಾಗ ಅವರಿಗೆ ಉತ್ತರಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಜನಪ್ರಿಯತೆ ಹೆಚ್ಚುತ್ತಿದ್ದುದು ಗೊತ್ತಾಗಿತ್ತು. ಮುಂಬಯಿಯಿಂದ ಮೈಸೂರಿಗೆ ಬರುವಾಗ ಧಾರವಾಡದ ಮೂಲಕ ಬಂದು ಭಾಸ್ಕರ ಬುವಾ ಬಖಲೆಯವರ ಮತ್ತು ಧಾರವಾಡದ ಶಿಕ್ಷಣಾಧಿಕಾರಿಯವರಾದ ಬಲವಂತರಾವ್ ಸಹಸ್ರಬುದ್ಧೆ ಅವರ ಆತಿಥ್ಯವನ್ನು ಸ್ವೀಕರಿಸುತ್ತಿದ್ದರು. ವಾಪಾಸು ಹೋಗುವಾಗಲೂ ಧಾರವಾಡದಲ್ಲಿ ಹಲವಾರು ದಿನಗಳ ಮಟ್ಟಿಗೆ ತಂಗಿದ್ದು ಮರಳಿ ಉತ್ತರ ಭಾರತಕ್ಕೆ ತೆರಳುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ನತ್ಥನ್ ಖಾನ್ ಅವರು ಮುಖ್ಯರು ಎಂದು ಬಿ. ಆರ್. ದೇವ್‍ಧರ್ ಅವರು ತಮ್ಮ ‘ಪಿಲ್ಲರ್ಸ್ ಆಫ್ ಹಿಂದುಸ್ತಾನೀ ಮ್ಯೂಸಿಕ್’ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. ಬರ್ಕತುಲ್ಲಾ ಖಾನ್, ದುಲ್ಲೇ ಖಾನ್, ಬಾಬಲೀ ಬಾಯಿ ಇವರನ್ನೂ ಕೂಡಾ ಬಖಲೆಯವರು ಆಮಂತ್ರಿಸಿಕೊಳ್ಳುತ್ತಿದ್ದರಂತೆ (ವಿದ್ಯಾ ಸಪ್ರೆ ಚೌಧರಿಯವರು ಬರೆದು ಶುಭದಾ ಅಮೀನಭಾವಿಯವರು ಕನ್ನಡಕ್ಕೆ ಅನುವಾದಿಸಿದ ಮನ್ಸೂರರ ಜೀವನಚರಿತ್ರೆ ‘ನಾದನದಿ’ಯನ್ನು ನೋಡಿ). ಹೀಗೆ ಹಿಂದುಸ್ತಾನೀ ಸಂಗೀತಕ್ಕೆ ಸಾರ್ವಜನಿಕರಲ್ಲಿ ಬೆಳೆದ ಒಲವು 1920 ಹಾಗೂ 1930ರ ದಶಕಕ್ಕಾಗುವಾಗ ಬೆಳೆದು ಹೆಮ್ಮರವಾಗಿತ್ತು. ಹೀಗೆ ಮೈಸೂರಿಗೆ ಬರುತ್ತಿದ್ದ ನತ್ಥನ್ ಖಾನರು ತದನಂತರ ಮೈಸೂರಿನ ಆಸ್ಥಾನ ವಿದ್ವಾಂಸರೆಂದು ಅನಿಸಿಕೊಂಡರು.

ಕರ್ನಾಟಕದ ಶಿಲ್ಪಿ ಎಂದು ಹೆಸರಾದ ಆಲೂರು ವೆಂಕಟರಾಯರು ಉತ್ತರ ಕರ್ನಾಟಕದ ಸಂಗೀತದ ರುಚಿಯನ್ನು ಮರಳಿಸುವ ಪ್ರಯತ್ನವೊಂದನ್ನು ಈ ಸಮಯದಲ್ಲಿ ಮಾಡಿದ್ದರು. ಕರ್ನಾಟಕವಿಡೀ ಅದೇ ಹೆಸರಿನ ಸಂಗೀತವನ್ನು ನೆಚ್ಚಿಕೊಳ್ಳಬೇಕು ಎಂಬ ಅವರ ಆಸೆ ಮಹತ್ವಾಕಾಂಕ್ಷಿಯಾಗಿತ್ತು. ಅದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದರು. ಕರ್ನಾಟಕ ಸಂಗೀತ ವಿಶಾರದೆಯಾಗಿದ್ದ ಮೈಸೂರಿನ ತಿರುಮಲೆ ರಾಜಮ್ಮ ಅವರನ್ನು ಧಾರವಾಡಕ್ಕೆ ಕರೆಸಿ ಸುಮಾರು ಹತ್ತು ದಿವಸದ ತನಕ ಕಛೇರಿ ನಡೆಸಿದರು. ಅದಾದ ಮೇಲೆ ನರಸಿಂಗ ರಾವ್ ಎಂಬ ಕೊಳಲು ವಾದಕರನ್ನು ಕರೆಸಿ ಅವರಿಂದ ಕಛೇರಿ ಮಾಡಿಸಿದರು. ಕಡೆಗೆ ದಾಸರ ಪದಗಳಿಂದ ಜನರ ಆಸಕ್ತಿ ಕೆರಳೀತು ಎಂದುಕೊಂಡು ದಕ್ಷಿಣ ಕರ್ನಾಟಕದ ಯೋಗಾನರಸಿಂಹ ಅವರಿಂದ ಕರ್ನಾಟಕ ಶೈಲಿಯಲ್ಲಿ ದಾಸರ ಪದಗಳ ಕಛೇರಿ ನಡೆಸಿದರು. ಈ ಮೂರೂ ಪ್ರಯತ್ನಗಳಿಂದ ಸ್ವಲ್ಪವೂ ಪ್ರತಿಫಲ ಬರದಿದ್ದಾಗ ಇದು ಸಾಧ್ಯವಾಗದ ಕೆಲಸವೆಂದು ಕೈ ಬಿಟ್ಟರು (ವೆಂಕಟರಾಯರ ‘ಕರ್ನಾಟಕತ್ವದ ವಿಕಾಸ’ ಎಂಬ ಪುಸ್ತಕ ನೋಡಿ).

ಕೃಷ್ಣರಾಜ ಒಡೆಯರ ಸಂಗೀತಾಸಕ್ತಿ ಬರೇ ಕರ್ನಾಟಕ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ಹಿಂದುಸ್ತಾನೀ, ಪಾಶ್ಚಾತ್ಯ ಸಂಗೀತ ಇತ್ಯಾದಿಗಳಿಗೂ ಹಬ್ಬಿತ್ತು ಮತ್ತು ದಸರಾ ಅದಕ್ಕೊಂದು ಸಂದರ್ಭವನ್ನೊದಗಿಸುತ್ತಿತ್ತು. ಈಗಿನ ಉತ್ತರ ಕರ್ನಾಟಕದಲ್ಲಿ ಹಿಂದುಸ್ತಾನೀ ಸಂಗೀತ ಹಬ್ಬಲು ಅವರೂ ಒಬ್ಬ ಪರೋಕ್ಷ ಕಾರಣರು. ಕರ್ನಾಟಕ ಸಂಗೀತ ಒಂದು ಕಲಾಪ್ರಕಾರದ ಹೆಸರನ್ನು ಸೂಚಿಸುತ್ತದೆಯೇ ಹೊರತು ಒಂದು ಇಡೀ ಭೂ-ರಾಜಕೀಯ ಪ್ರದೇಶದ ಸಂಸ್ಕೃತಿಯನ್ನಲ್ಲ. ಭಾರತದ ಈಗಿನ ಭೂ-ರಾಜಕೀಯ ಪ್ರದೇಶಗಳು, ಅದರಲ್ಲೂ ಕರ್ನಾಟಕವು ವಿಭಿನ್ನ ಚಾರಿತ್ರಿಕ-ರಾಜಕೀಯ ಕಾರಣಗಳಿಂದಾಗಿ ವೈಶಿಷ್ಟ್ಯಪೂರ್ಣ ಸಂಸ್ಕೃತಿಗಳನ್ನೊಳಗೊಂಡಿದೆ. ನಿರಂತರ ಬದಲಾವಣೆಗೊಳಗಾಗುವ ಈ ಸಾಂಸ್ಕೃತಿಕ ಪ್ರಕಾರಗಳು ಕೆಲವೊಮ್ಮೆ ಕರ್ನಾಟಕದ ‘ಒಳಗಿನದ್ದು’ ಮತ್ತು ‘ಹೊರಗಿನದ್ದು’ ಎಂದು ವಿಭಜಿಸಲು ಕಷ್ಟವಾಗುವಂಥವು. ಅಂಥಾ ವೈಶಿಷ್ಟ್ಯಪೂರ್ಣತೆ ಮತ್ತು ಬಹುತ್ವ ನಮ್ಮಲ್ಲಿ ಸಾಂಸ್ಕೃತಿಕ ಸಹಿಷ್ಣುತೆಯನ್ನು ಬೇಡುತ್ತದೆ. ಮೈಸೂರು ದಸರಾ ಈ ಬಹುತ್ವಕ್ಕೆ ಒಂದು ರೂಪಕವಾಗಿ ನಿಲ್ಲಬಲ್ಲುದಾಗಿದೆ.

ಡಾ. ಶಶಿಕಾಂತ್ ಕೌಡೂರ್

(ಸುರತ್ಕಲ್‍ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NITK) ಮಾನವಿಕ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಶಶಿಕಾಂತ್ ಅವರು ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಹಾಗೂ ಹಿಂದುಸ್ತಾನೀ ಸಂಗೀತಗಳೆರಡರಲ್ಲೂ ತಕ್ಕಮಟ್ಟಿಗೆ ಪರಿಶ್ರಮ ಇರುವ ಇವರು ಕೆಲವು ನಾಟಕಗಳಿಗೆ ಸಂಗೀತವನ್ನೂ ನಿರ್ದೇಶಿಸಿದ್ದಾರೆ. ಪಂಜೆ ಮಂಗೇಶರಾಯರ ‘ಕೋಟಿ ಚೆನ್ನಯ’ ಇತಿಹಾಸ ಕಥನವನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ.)


ಇದನ್ನೂ ಓದಿ: ‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...