ಪರಸ್ಪರ ಗೌರವ ಇಟ್ಟುಕೊಂಡು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ. ಉಭಯ ದೇಶಗಳಿಗೆ ಮುಂದಿನ ಸರಿಯಾದ ಮಾರ್ಗ ‘ಪರಸ್ಪರ ಗೌರವಿಸುವುದು’ ಎಂದು ಅದು ಹೇಳಿದೆ.
“ಎಲ್ಒಸಿ (ಲೈನ್ ಆಫ್ ಕಂಟ್ರೋಲ್) ನಿಂದ ಎಲ್ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ವರೆಗೆ, ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟರೆ, ಸಶಸ್ತ್ರ ಪಡೆಗಳು ಅವರ ಭಾಷೆಯಲ್ಲಿಯೇ ಪ್ರತಿಕ್ರಿಯಿಸಿವೆ” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಚೀನಾ ಎಂದು ಹೆಸರಿಸದೆ ಪೂರ್ವ ಲಡಾಕ್ನಲ್ಲಿ ನಡೆದ ಗಡಿ ಸಂಘರ್ಷವನ್ನೂ ಮೋದಿ ಉಲ್ಲೇಖಿಸಿದ್ದರು.
“ಭಾರತದ ಸಮಗ್ರತೆಯು ನಮಗೆ ಸರ್ವೋಚ್ಚವಾಗಿದೆ. ನಾವು ಏನು ಮಾಡಬಹುದು, ನಮ್ಮ ಸೈನಿಕರು ಏನು ಮಾಡಬಹುದು ಎಂಬುದನ್ನು ಎಲ್ಲರೂ ನೋಡಿದ್ದಾರೆ” ಎಂದು ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರ ಗಡಿ ಘರ್ಷಣೆಯನ್ನು ಉಲ್ಲೇಖಿಸಿ ಮೋದಿ ಹೇಳಿದರು.
ಘರ್ಷಣೆಯಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಚೀನಾ ಸಹ ಸಾವುನೋವುಗಳನ್ನು ಅನುಭವಿಸಿದೆ ಎಂದು ಒಪ್ಪಿಕೊಂಡಿದೆ. ಆದರೆ ನಿಖರವಾದ ಸಾವಿನ ಸಂಖ್ಯೆಯನ್ನು ಉಲ್ಲೇಖಿಸಿಲ್ಲ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಗೆ ಮೋದಿಯವರ ಭಾಷಣದ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, “ನಾವು ನಿಕಟವರ್ತಿ ನೆರೆಹೊರೆಯವರು, ನಮ್ಮದು ಒಂದು ಶತಕೋಟಿಗೂ ಹೆಚ್ಚು ಜನರಿರುವ ಉದಯೋನ್ಮುಖ ರಾಷ್ಟ್ರಗಳು” ಎಂದು ಹೇಳಿದ್ದಾರೆ.
ಆದ್ದರಿಂದ ದ್ವಿಪಕ್ಷೀಯ ಸಂಬಂಧಗಳ ಉತ್ತಮ ಅಭಿವೃದ್ಧಿಯು ಎರಡು ರಾಷ್ಟ್ರಗಳ ಹಿತಾಸಕ್ತಿಗೆ ಮಾತ್ರವಲ್ಲದೆ, ಸ್ಥಿರತೆ, ಶಾಂತಿ, ಪ್ರದೇಶದ ಸಮೃದ್ಧಿ ಮತ್ತು ಇಡೀ ಪ್ರಪಂಚವನ್ನು ಸಹ ಪೊರೆಯುತ್ತದೆ.
ಇದು ನಮ್ಮ ದೀರ್ಘಕಾಲೀನ ಹಿತಾಸಕ್ತಿಗಳಿಗೆ ನೆರವಾಗುವುದರಿಂದ ಪರಸ್ಪರ ಗೌರವ ನೀಡಿ ಮತ್ತು ಬೆಂಬಲಿಸುವುದು ಎರಡೂ ಕಡೆಯಿಂದ ಸರಿಯಾದ ಮಾರ್ಗವಾಗಿದೆ” ಎಂದು ಝಾವೋ ಸೋಮವಾರ ಸಚಿವಾಲಯದ ಸಮಾವೇಶದಲ್ಲಿ ಹೇಳಿದರು.
“ಆದ್ದರಿಂದ, ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಹಂತ ಹಂತದ ಪ್ರಾಯೋಗಿಕ ಸಹಕಾರವನ್ನು ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಬೆಳವಣಿಗೆಯನ್ನು ಕಾಪಾಡಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ” ಎಂದು ಅವರು ಹೇಳಿದರು.
ಆಗಸ್ಟ್ 8 ರಂದು ಬೀಜಿಂಗ್ ಮತ್ತು ನವದೆಹಲಿ ನಡುವೆ ಇತ್ತೀಚಿನ ದೊಡ್ಡ ಮಟ್ಟದ ಮಾತುಕತೆಯ ನಂತರ, ಭಾರತ ತನ್ನ ನಿಲುವನ್ನು ಬದಲಾಯಿಸುವ ಯಾವುದೇ ಲಕ್ಷಣವನ್ನು ತೋರಿಸಿಲ್ಲ.
ಮೋದಿಯವರ ಭಾಷಣವನ್ನು ಉಲ್ಲೇಖಿಸಿ ಝಾವೋ ಇದನ್ನು ಎರಡು ದೃಷ್ಟಿಕೋನಗಳಿಂದ ವಿವರಿಸಬಹುದು ಎಂದು ಹೇಳಿದರು.
ಒಂದು, ಮೋದಿಯವರು ಯುದ್ಧದ ಮನೋಭಾವವನ್ನು ಹೊಂದಿದ್ದಾರೆ. ಇನ್ನೊಂದು, ಚೀನಾ ಬಗ್ಗೆ ತನ್ನ ಮನೋಭಾವವನ್ನು ಪ್ರದರ್ಶಿಸುವ ಮೂಲಕ ಸಾಕಷ್ಟು ಮಾಡಿದೆ ಎಂದು ಭಾರತ ಸರ್ಕಾರ ಭಾವಿಸಿದೆ ಎಂಬ ಅರ್ಥದಲ್ಲಿ ಗ್ರಹಿಸಬಹುದು. ಆದ್ದರಿಂದ, ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ್ದು ಮುಖ್ಯವಲ್ಲ. ಆದರೆ ಮುಂದೆ ಅವರು ಏನು ಮಾಡುತ್ತಾರೆ ಎಂಬುದು ಮುಖ್ಯ ಎಂದರು.
ಇದನ್ನೂ ಓದಿ: ಆತ್ಮನಿರ್ಭರ ಭಾರತಕ್ಕೆ 130 ಕೋಟಿ ಪರಿಹಾರಗಳಿವೆ: ನರೇಂದ್ರ ಮೋದಿ


