ಗದಗ ಜಿಲ್ಲೆಯ ನರಗುಂದದ 15 ವರ್ಷದ ದಲಿತ ಬಾಲಕಿಯ ಸುಟ್ಟು ಕರಕಲಾದ ಮೃತದೇಹವು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಾರ್ಚ್ 24 ರಂದು ಪತ್ತೆಯಾಗಿದ್ದು, ಆಕೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ನರಗುಂದದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕೊಲೆ ಮತ್ತು ಸಾಕ್ಷ್ಯನಾಶ ಪ್ರಕರಣದಲ್ಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಘಟನೆಯ ವಿವರ
ಗದಗ ಜಿಲ್ಲೆಯ ನರಗುಂದದ ದಲಿತ ಕುಟುಂಬದ ಯುವತಿಯೊಬ್ಬರು ಮಾರ್ಚ್ 20 ರಂದು ಕೃಷಿ ಕೆಲಸದ ನಿಮಿತ್ತ ಹೊಲಕ್ಕೆ ಹೋಗಿದ್ದಾಳೆ. ಅವರ ತಂದೆ ನರಗುಂದದ ಹೋಟೆಲ್ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಆಕೆ ವಾಪಸ್ ಮನೆಗೆ ಬರದಿದ್ದಾಗ ಮತ್ತು ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅವರು ನರಗುಂದ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ.
ಆರಂಭದಲ್ಲಿ ಪೊಲೀಸರು ಕಾಣೆಯಾಗಿದ್ದಾರೆ, ಅಪಹರಣವಾಗಿದ್ದಾಳೆ ಎಂಬ ದೂರು ದಾಖಲಿಸಲು ಹಿಂದೇಟು ಹಾಕಿದರು. ಆದರೆ ನಮ್ಮ ಕಡೆಯ ಹಲವಾರು ಜನ ಬಂದು ಒತ್ತಾಯ ಮಾಡಿದ ನಂತರವಷ್ಟೇ ಪೊಲೀಸರು ಅಂದು ರಾತ್ರಿ 11 ಗಂಟೆಯ ವೇಳೆಗೆ ಪ್ರಕರಣ ದಾಖಲಿಸಿದರು ಎಂದು ಮೃತ ಬಾಲಕಿಯ ಸಂಬಂಧಿಕರೊಬ್ಬರ ಹೇಳಿಕೆ ಉಲ್ಲೇಖಿಸಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಇತ್ತ ಬೆಳಗಾವಿಯ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಮಾರ್ಚ್ 24 ರಂದು ನಮ್ಮ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ ಎಂದು ಸುನೀಲ್ ಈರಪ್ಪ ಹಳೇಮನಿ ಎಂಬುವವರ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ಮೃತ ಯುವತಿಯ ಗುರುತು ಪತ್ತೆಯಾಗಬಾರದು ಎಂದು ಆಕೆಯ ಮುಖವನ್ನು ಜಜ್ಜಲಾಗಿದೆ, ಬಲಗೈ ಕಡಿಯಲಾಗಿದೆ ಮತ್ತು ಸುಟ್ಟು ಹಾಕಲಾಗಿದೆ ಎಂದು ಎಫ್ಆರ್ಐನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಾಂ ಬೆಟ್ಟಗೇರಿ ಎಂಬುವವರನ್ನು ವಿಚಾರಣೆ ನಡೆಸಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ ಮತ್ತು ಆ ಯುವತಿಯ ನಡುವೆ ಸಂಬಂಧವಿತ್ತು ಎಂದು ಕೆಲವರು ಆರೋಪಿಸಿದ್ದಾರೆ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ. ಆದರೆ ವಿಚಾರಣೆ ವೇಳೆ ಆ ಯುವಕ ಅದನ್ನು ನಿರಾಕರಿಸಿ ಆಕೆ ತನಗೆ ಗೊತ್ತಿಲ್ಲ ಎಂದಿದ್ದಾನೆ.
ಆದರೆ ಪೊಲೀಸರು ಆ ಯುವಕನನ್ನು ಬಂಧಿಸಿದ್ದು, ಐಪಿಸಿ 302, 201ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಮತ್ತು ಸಾಕ್ಷ್ಯನಾಶ, ಸುಳ್ಳು ಹೇಳಿಕೆಯ ಆರೋಪ ಆತನ ಮೇಲಿದೆ. ಆತ ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿರುವಾಗ ಮೃತ ಯುವತಿಯು ಕೋಪದಿಂದ ಒರಟಾಗಿ ವರ್ತಿಸಿದ್ದಾಳೆ. ಆ ಜಗಳವೇ ಈ ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭುಗಿಲೆದ್ದ ಪ್ರತಿಭಟನೆ
ಮೃತ ಯುವತಿಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗುತ್ತಲೇ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು. ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಮೃತಳ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ. ಭೀಮ್ ಆರ್ಮಿಯ ಕಾರ್ಯಕರ್ತರು ಮೃತಳ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಈ ಘಟನೆ ಕುರಿತು ಬಾಲಕಿಯ ಇತರ ಫೋಟೊಗಳನ್ನು ಒಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಲವ್ ಜಿಹಾದ್ ಆರೋಪ
ಇನ್ನು ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಆದ ಕಾರಣಕ್ಕೆ ಇದು ಲವ್ ಜಿಹಾದ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆರೋಪಿಸಿದ್ದಾರೆ. ಆದರೆ ಹಲವಾರು ದಲಿತ ಮತ್ತು ಮುಸ್ಲಿಂ ಸಂಘಟನೆಗಳು ಅದನ್ನು ನಿರಾಕರಿಸಿದ್ದು ಸಮರ್ಪಕ ತನಿಖೆಗೆ ಒತ್ತಾಯಿಸಿವೆ.
ಇದನ್ನೂ ಓದಿ: ತುಮಕೂರು: ಸಮಾಧಿ ಗುಂಡಿಯಿಂದ ದಲಿತ ಶಿಶುವಿನ ಮೃತದೇಹ ಹೊರತೆಗೆಸಿ ಅಮಾನವೀಯತೆ!