ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ-ಎನ್ಸಿಪಿ ಮೈತ್ರಿಕೂಟ ಸರ್ಕಾರದ ಭಾಗವಾಗಿದ್ದರೂ, ಮೈತ್ರಿಕೂಟದ ನಾಯಕ ಶರದ್ ಪವಾರ್ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಪಕ್ಷದ ಸ್ಟಾರ್ ಪ್ರಚಾರಕರಾಗಿ ಆಯ್ಕೆಯಾಗಿದ್ದಾರೆ. ಅವರು ಮುಂದಿನ ವಾರ ಹೋಲಿ ನಂತರ ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ.
ಶರದ್ ಪವಾರ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ತೃಣಮೂಲ ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಎನ್ಸಿಪಿ ಮೂಲಗಳು ತಿಳಿಸಿವೆ. ಅವರ ಪ್ರಚಾರದ ಮೊದಲ ಹಂತವು ಮೂರು ದಿನಗಳವರೆಗೆ ಇರುತ್ತದೆ.
ಇದನ್ನೂ ಓದಿ: ತ್ರಿವಳಿ ಕೊಲೆ ಪ್ರಕರಣ: ಹೆಂಡತಿ, ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ
ಈ ಹಿಂದೆಯೆ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಶರದ್ ಪವಾರ್ ಅವರಿಗೆ ಪತ್ರ ಬರೆದಿದ್ದು, ಬಂಗಾಳದಲ್ಲಿ ತೃಣಮೂಲ ಪರ ಪ್ರಚಾರ ಮಾಡದಂತೆ ಕೇಳಿಕೊಂಡಿದ್ದು, ಇದು ಮತದಾರರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು, ತೃಣಮೂಲ ಮೈತ್ರಿಕೂಟದ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ದೇಶದಲ್ಲಿ ಯುಪಿಎ ಮೈತ್ರಿಕೂಟದ ನೇತೃತ್ವ ಕಾಂಗ್ರೆಸ್ ವಹಿಸಿದ್ದರೂ, ಯುಪಿಎ ಮೈತ್ರಿಕೂಟದ ಅನೇಕ ಪಕ್ಷಗಳು ತೃಣಮೂಲ ಪಕ್ಷವನ್ನು ಬೆಂಬಲಿಸುತ್ತಿವೆ. ಎನ್ಸಿಪಿ ಮಾತ್ರವಲ್ಲದೆ, ಶಿವಸೇನೆ, ಜೆಎಂಎಂ ಮತ್ತು ಆರ್ಜೆಡಿ ಪಕ್ಷಗಳು ಕೂಡಾ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಪಕ್ಷಕ್ಕೆ ಬೆಂಬಲ ನೀಡಿವೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರಸ್ ನಡುವೆ ಭಾರಿ ಹೋರಾಟ ನಡೆಯುತ್ತಿದೆ. ನಾಳೆಯಿಂದ(ಮಾರ್ಚ್27) ರಾಜ್ಯದಲ್ಲಿ ಮತದಾನ ಪ್ರಾರಂಭವಾಗಲಿದ್ದು, ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಸದನದಲ್ಲಿ ಶರ್ಟ್ ಬಿಚ್ಚಿದ ಸಂಗಮೇಶ್; ಅಸಲಿಗೆ ಕಬಡ್ಡಿ ಗಲಾಟೆಯಲ್ಲಿ ನಡೆದದ್ದೇನು?