ಸಾವಿರಾರು ನೂರಾರು ವರ್ಷಗಳಿಂದ ಬಾಳಿ ಬದುಕಿ ಬಹುತ್ವದ ಭಾರತ ಕಟ್ಟಿದವರಿಗೆ, ಇಲ್ಲಿನ ಮಣ್ಣಿನ ಕಣಕಣದಲ್ಲೂ ರಕ್ತವನ್ನೇ ಬೆವರಾಗಿಸಿದವರಿಗೆ, ಈ ನೆಲದೊಂದಿಗಿನ ಸಂಬಂಧದ ದಾಖಲೆ ಒದಗಿಸಿ ಎಂದು ಕೇಳುವುದೇ ಮೂರ್ಖತನ. ಇಂತಹ ಮೂರ್ಖತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಬೇಧಗಳನ್ನು ಮೀರಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಹಬ್ಬಿದೆ. ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವಂತೆ ಸಾಗರದ ಅಲೆಗಳಂತೆ ಜನ ಮುನ್ನುಗ್ಗುತ್ತಿದ್ದಾರೆ.
ಈ ಶತಮಾನದ ‘ಅವಮಾನಿತ ಕಾಲ’ ಎಂದೇ ವ್ಯಾಖ್ಯಾನಿಸಬಹುದಾದ ಈ ಕಾಲದಲ್ಲಿ ಕಾವ್ಯ ಬೀದಿಗೆ ಬರದಿರಲು ಸಾಧ್ಯವೇ ಇಲ್ಲ. ಉಸಿರುಗಟ್ಟಿಸುವ ಪ್ರಭುತ್ವದ ಅರಮನೆ ಹಂಗಿನರಮನೆಯಾಗಿದೆ. ‘ನಾನು ನಿಮ್ಮಂತೆ, ನಿಮ್ಮವರಂತೆ, ನಿಮ್ಮ ಸಖನಂತೆ’ ಎಂದು ನಂಬಿಸಿ ಕೊರಳು ಕೊಯ್ಯವ ಕೆಲಸ ಸಾಗಿದೆ. ಕೊರಳು ಕೊಯ್ಯುವ ಕತ್ತಿ ಬಹಳ ಹರಿತವಾಗಿದೆ. ಇಂತಹ ಸನ್ನಿವೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ತೀವ್ರವಾದ ಹಲ್ಲೆ ನಡೆಯುತ್ತಿರುವಾಗ ಕವಿಗಳು, ಕಲಾವಿದರು, ಚಿಂತಕರು ಮೌನಗರ್ಭದಿಂದ ಹೊರಬರಬೇಕಾಗಿದೆ. ಬರುತ್ತಿದ್ದಾರೆ ಕೂಡಾ. ಪ್ರಭುತ್ವದ ಸರ್ವಾಧಿಕಾರದ ವಿರುದ್ಧ ಜನರ ಜೊತೆಗೆ ನಿಂತು ಅವರನ್ನು ಎಚ್ಚರಿಸುವುದರಲ್ಲಿ ತೊಡಗಿದ್ದಾರೆ. ಭವಿಷ್ಯದ ಕುರಿತು ಭರವಸೆ ಮೂಡಿಸುವ ಬೆಳವಣಿಗೆ ಇದು.

ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ಅವರು ರಚಿಸಿದ್ದ ‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂಬ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ FIR ಹಾಕಿದ್ದಾರೆ. ಕವಿಗಳನ್ನು ದೇಶದ್ರೋಹಿಗಳೆಂದು, ಕವಿತೆಗಳನ್ನು ದೇಶದ್ರೋಹದ, ಧರ್ಮದ್ರೋಹದ ಕೃತ್ಯಗಳು ಎಂದು ಪರಿಗಣಿಸುವ ಪರಿಪಾಠ ಇಂದು ನೆನ್ನೆಯದೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ನರಬಲಿ’ ಎಂಬ ಕವಿತೆ ಬರೆದ ದ.ರಾ.ಬೇಂದ್ರೆಯವರನ್ನೂ ಜೈಲಿಗೆ ತಳ್ಳಿತ್ತು ಅಂದಿನ ಬ್ರಿಟಿಷ್ ಸರ್ಕಾರ. ಆ ಮೆಲೆಯೂ ಇಂತ ಪ್ರಕರಣಗಳು ಆಗಾಗ ನಡೆದದ್ದಿದೆ. ಆದರೆ ಪ್ರತಿರೋಧದ ದನಿಗೆ ಮುಖಾಮುಖಿಯಾಗಲು ಬೆದರಿದ ಪ್ರಭುತ್ವ ಇಂದು ಈ ದಾಳಿಯನ್ನು ತೀವ್ರಗೊಳಿಸಿದೆ.
ಒಂದು ಕವಿತೆಯ ಮೇಲೆ FIR ದಾಖಲಿಸಿದ್ದನ್ನು ಪ್ರತಿಭಟಿಸಿ, CAA-NRC-NPR ಗಳನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ. ಅಕ್ಷರ ಲೋಕದ ಈ ಸಾತ್ವಿಕ ಪ್ರತಿರೋಧ ಹೇಗಿದೆ ಎಂದರೆ ಸಿರಾಜ್ ಬಿಸರಳ್ಳಿಯವರ ಪದ್ಯ ಕೇವಲ ಎರಡು ದಿನಗಳಲ್ಲಿ 12 ಭಾಷೆಗಳಿಗೆ ಅನುವಾದವಾಗಿ ‘ವೈರಲ್’ ಆಗಿದೆ. ಈಗಾಗಲೇ ಎನ್ಆರ್ಸಿ-ಪ್ರತಿರೋಧದ ಸಭೆ, ರ್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿದೆ. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶದಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಒಟ್ಟಾರೆಯಾಗಿ ಇದನ್ನು ‘ಎನ್ಆರ್ಸಿ ವಿರುದ್ಧ ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ.
‘ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ ಸಂಕಲನ. ಇಲ್ಲಿ ಕನ್ನಡದಲ್ಲಿ ಪ್ರಮುಖವಾಗಿ ಎನ್ಆರ್ಸಿ ಗೆ ಪ್ರತಿರೋಧದ ಹಿನ್ನೆಲೆಯಲ್ಲಿ ಬಂದ ಕವಿತೆಗಳಿವೆ. ಇವಲ್ಲದೆ ಚಳುವಳಿಯ ‘ಅಧಿಕೃತ ಗೀತೆ’ಯೇ ಆಗಿರುವ ವರುಣ್ ಗ್ರೋವರ್ ಅವರ ‘ಹಮ್ ಕಾಗಜ್ ನಹೀ ದಿಖಾಯೆಂಗೆ’ ಸೇರಿದಂತೆ ಹಿಂದಿ, ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಎನ್.ಆರ್.ಸಿ ಗೆ ಪ್ರತಿರೋಧ ಚಳುವಳಿಯ ಭಾಗವಾಗಿ ಬಂದ ಕೆಲವು ಪ್ರಮುಖ ಕವಿತೆಗಳ ಅನುವಾದಗಳೂ ಇವೆ. ಇಲ್ಲಿರುವ ಕವಿತೆಗಳಲ್ಲಿ ‘ನನ್ನ ದಾಖಲೆ ಕೇಳುವ ಮೊದಲು ನಿಮ್ಮ ದಾಖಲೆ ತೋರಿಸಿ’ ಎಂದು ಸವಾಲು ಹಾಕುವ ‘ಅವರ’ ಕೆಟ್ಟ ಭೀಕರ ದಾಖಲೆಗಳನ್ನು ಬಯಲಿಗೆಳೆಯುವ ಕವಿತೆಗಳು ಒಂದು ವಿಧ. ನಮ್ಮ ಗುರುತು ದಾಖಲೆಗಳಲ್ಲಿ ಅಲ್ಲ, ನೆಲದಲ್ಲಿ ಹಾಸುಹೊಕ್ಕಾಗಿರುವ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಇದೆ ಎಂದು ದೃಢವಾಗಿ ತಿಳಿಹೇಳುವ ಕವಿತೆಗಳು ಇನ್ನೊಂದು ವಿಧ. ಕವಿತೆಗೆ ಬೆದರಿ ಕೇಸು ಹಾಕುವುದನ್ನು ಮತ್ತಿತರ ದಮನ ಕ್ರಮಗಳನ್ನು ಎದುರಿಸುವ, ಲೇವಡಿ ಮಾಡುವ, ಜನರ ದನಿಯಾಗಬಲ್ಲ ಕಾವ್ಯದ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆಗಳು ಮಗದೊಂದು ವಿಧ. ಇವಲ್ಲದೆ ಹಿಟ್ಟರನ ನಾಜಿವಾದ ಅವನೊಂದಿಗೆ ಸತ್ತಿಲ್ಲ ಎಂಬುದರ ಕುರಿತು ಬರೆದ ಆಡೆನ್ ಅವರ ಚಾರಿತ್ರಿಕ ಕವಿತೆಯ ಅನುವಾದವೂ ಇಲ್ಲಿದೆ. ಸರ್ವಾಧಿಕಾರಿ, ಅದರಲ್ಲೂ ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ, ಪ್ರಭುತ್ವಗಳ ದಮನದ ವಿರುದ್ಧ ಚಳುವಳಿಗಳ ಪ್ರತಿರೋಧದ ಗೀತೆಯಾಗಿದ್ದು, ಎನ್ಆರ್ಸಿ ವಿರುದ್ಧ ಚಳುವಳಿಯಲ್ಲೂ ವ್ಯಾಪಕವಾಗಿ ಕೇಳಿ ಬಂದಿರುವ ಫೈಜ್ ಅಹ್ಮದ್ ಫೈಜ್ ಅವರ ‘ಹಮ್ ದೇಖೇಂಗೆ’ಯ ಅನುವಾದವೂ ಇದೆ.

ಇವಲ್ಲದೆ ಪ್ರತಿರೋಧದ ಭಾಗವಾಗಿ ಬಂದ ಪೋಸ್ಟರುಗಳು, ಕಲಾಕೃತಿಗಳು ಇಲ್ಲಿವೆ. Fearless-“ಹಮ್ ಯಹೀಂ ಕೆ ಹೈಂ” (ನಿರ್ಭಯರು-ನಾವು ಇಲ್ಲಿಯವರೇ, ಮಹಿಳೆಯರು, ಮುಸ್ಲಿಮರು, ಹಿಂದುಗಳು, ಸಿಖ್ಖರು, ಆದಿವಾಸಿಗಳು, ದಲಿತರು ಇಲ್ಲಿಯವರೇ) ಈ ಚಳುವಳಿಯಲ್ಲಿ ಮೂಡಿಬಂದು ಎಲ್ಲರ ಗಮನ ಸೆಳೆದಿರುವ ಕಲಾಕೃತಿಯನ್ನು ಮುಖಪುಟದಲ್ಲಿ, ಮತ್ತು ಶಾಹೀನ್ ಬಾಗ್ ಭೇಟಿಯಿಂದ ಸ್ಫೂರ್ತಿ ಪಡೆದು ರಚಿಸಿರುವ, ಅಲ್ಲಿ ಪ್ರದರ್ಶಿತಗೊಂಡು ಎಲ್ಲರನ್ನೂ ಸೆಳೆಯುತ್ತಿರುವ ಶಾಹೀನ್ ಬಾಗ್- ಹಮ್ ದೇಖೇಂಗೆ- ಲಾಜಿಮ್ ಹೈ ಹಮ್ ಭೀ ದೇಖೇಂಗೆ( ನಾವು ಕಾಣುವೆವು, ನಾವು ಕಂಡೇ ಕಾಣುವೆವು) ಎಂಬ ಕಲಾಕೃತಿಯನ್ನು ಹಿಂದಿನ ಪುಟದಲ್ಲಿ ಬಳಸಿಕೊಡಿದ್ದೇವೆ.

ಹೋರಾಟದ ಅಗತ್ಯವಾಗಿ ಈ ಕವಿತೆ ಸಂಕಲನ ದಿಢೀರ್ ಆಗಿ ಬಂತು. ಇದಕ್ಕೆ ಕೈಜೋಡಿಸಿದ ತಮ್ಮ ಕವಿತೆಗಳನ್ನು ಕಳಿಸಿದ, ಹಾಕಿಕೊಳ್ಳಲು ಅನುಮತಿ ಕೊಟ್ಟ, ಕವಿತೆಗಳನ್ನು ಅನುವಾದಿಸಿದ ಎಲ್ಲ ಕವಿಗಳಿಗೆ ಶರಣು. ಎಲ್ಲ ಕವಿಗಳಿಗೆ ಈ ಸಂಕಲನದ ಬಗ್ಗೆ ಮಾಹಿತಿ ಕೊಡಲು ಸಾಧ್ಯವಾಗಿಲ್ಲ. ಅದಕ್ಕೆ ಕ್ಷಮೆ ಇರಲಿ. ಇದೇ ರೀತಿ ಇಲ್ಲಿ ಬಳಸಿಕೊಳ್ಳಲಾದ ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಪೋಸ್ಟರುಗಳು, ಕಲಾಕೃತಿಗಳ ಮೂಲ ಕಲಾವಿದರಿಗೆ ನಮ್ಮ ಕೃತಜ್ಞತೆಗಳು. ಅವರೆಲ್ಲರನ್ನು ಸಂಪರ್ಕಿಸುವುದು ಸಾಧ್ಯವಾಗಿಲ್ಲ. ಈ ಸಂಕಲನವನ್ನು ಯೋಜಿಸಿ, ಸಂಪಾದಿಸುವ ಜವಾಬ್ದಾರಿಯನ್ನು ನನಗೆ ಒಪ್ಪಿಸಿ, ಪ್ರಕಟಿಸುತ್ತಿರುವ ಕ್ರಿಯಾ ಮಾಧ್ಯಮ ತಂಡಕ್ಕೂ, ಮುಖಪುಟ ವಿನ್ಯಾಸ ಮಾಡಿರುವ ರಾಮು ಅವರಿಗೂ, ದಿಢೀರ್ ಮುದ್ರಣ ಮಾಡಿಕೊಟ್ಟ ಚಂದ್ರು ಅವರ ತಂಡಕ್ಕೂ ಅನಂತ ಧನ್ಯವಾದಗಳು.
ಬಹು ಹಿಂದೆ ಓದಿದ ಕವಿತೆಯೇಕೋ ಮತ್ತೆ ಮತ್ತೆ ನೆನಪಾಗುತ್ತಿದೆ.
“ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು / ಸಂಶಯದ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು / ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ / ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವುದನ್ನು / ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ”


