ಕೊನೆಗೂ ಇಂದು ಸಂಪುಟ ವಿಸ್ತರಣೆಯಾಗಿದೆ. ಉಪಚುನಾವಣೆಯಲ್ಲಿ ಗೆದ್ದು ಬಂದ ‘ಆ’ ಹತ್ತು ಮಂದಿಯೂ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಪ್ರತಿಜ್ಞಾವಿಧಿ ಬೋದಿಸಿದರು.
ಮೊದಲಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಯಶವಂತಪುರ ಕ್ಷೇತ್ರದ ಎಚ್.ಟಿ.ಸೋಮಶೇಖರ್ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಕೆ.ಆರ್ ಪುರಂನ ಕ್ಷೇತ್ರದ ಶಾಸಕ ಭೈರತಿ ಬಸವರಾಜು, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಬಿ.ಸಿ.ಪಾಟೀಲ್, ಶ್ರೀಮಂತಪಾಟೀಲ್, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ನಾರಾಯಣಗೌಡ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಮತ್ತು ಆನಂದ್ ಸಿಂಗ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆದರೆ ಯಾರಿಗೆ ಯಾವ ಯಾವ ಸ್ಥಾನ ಎಂಬುದು ಖಚಿತವಾಗಿಲ್ಲ. ಕೇವಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಿನ್ನಮತವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ನಡೆಯಲಿದೆ.
ಬೆಂಗಳೂರಿಗೆ ಸಿಂಹಪಾಲು – ಅಸಮತೋಲನ
ಸಂಪುಟದಲ್ಲಿನ 27 ಸಚಿವರ ಪೈಕಿ ಬೆಂಗಳೂರಿಗೆ ಅತಿಹೆಚ್ಚು ಸಚಿವ ಸ್ಥಾನಗಳು ದೊರೆತಿವೆ. 8 ಮಂದಿ ಸಚಿವರು ಬೆಂಗಳೂರಿನವರೇ ಆಗಿದ್ದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿದೆ. ಜೊತೆಗೆ ಬಹುತೇಕ ಸಚಿವ ಸ್ಥಾನಗಳು ದಕ್ಷಿಣ ಕರ್ನಾಟಕಕ್ಕೆ ಮೀಸಲಾಗಿವೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.