Homeಮುಖಪುಟಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’...

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

- Advertisement -
- Advertisement -

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ ಮತ್ತು ಜಾನುವಾರು ಹತ್ಯೆ ಪ್ರಕರಣಗಳಲ್ಲಿ ಖಾಕಿ ಪಡೆಯ ನಡವಳಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೃದ್ಧರ ಸಾವನ್ನು ಪ್ರತಿಭಟಿಸಿ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ.

ಅಹಮದಾಬಾದ್‌ನ ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಜುಹಾಪುರದ ನಿವಾಸಿಯಾಗಿದ್ದ ಜಹೀರ್ ಶೇಖ್ ಅವರನ್ನು ವೆಜಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗೋಮಾಂಸ ವಶಪಡಿಸಿಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 16 ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಕಸ್ಟಡಿಯಲ್ಲಿದ್ದಾಗ ಪೊಲೀಸ್ ಸಿಬ್ಬಂದಿ ಜಹೀರ್ ಅವರ ಮೇಲೆ ತೀವ್ರವಾದ ದೈಹಿಕ ಹಲ್ಲೆ ನಡೆಸಿ, ಮಾನಸಿಕವಾಗಿ ಅವಮಾನಿಸಿದ್ದರು ಎಂದು ಅವರ ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ. ಆದರೆ, ಅಹಮದಾಬಾದ್ ಪೊಲೀಸರು ಈ ಎಲ್ಲಾ ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದ್ದಾರೆ.

ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಮೇ 5 ರಂದು ವೆಜಲ್‌ಪುರದ ಸೋನಾಲ್ ಸಿನಿಮಾ ರಸ್ತೆಯ ಬಳಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜುಹಾಪುರದ ನೇಹಾ ಫ್ಲಾಟ್ಸ್ ಹಿಂಭಾಗದ ತೆರೆದ ಮೈದಾನದಲ್ಲಿ ಸುಮಾರು 520 ಕಿಲೋಗ್ರಾಂಗಳಷ್ಟು ಶಂಕಿತ ದನದ ಮಾಂಸವನ್ನು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ಹಕ್ಕು ಮಂಡಿಸಿದ್ದರು. ಅಂದು ನಡೆದ ದಾಳಿಯ ಸಂದರ್ಭದಲ್ಲಿ ಜೀವಂತ ಕರುವೊಂದನ್ನು ರಕ್ಷಿಸಲಾಗಿದ್ದು, ಮಾಂಸ ತೂಕ ಮಾಡುವ ತಕ್ಕಡಿಗಳು, ವಾಹನಗಳು, ಕಟಾವು ಮಾಡಲು ಬಳಸುವ ಉಪಕರಣಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು. ವಶಪಡಿಸಿಕೊಳ್ಳಲಾದ ಒಟ್ಟು ಸೊತ್ತಿನ ಮೌಲ್ಯ ಸುಮಾರು ₹4.66 ಲಕ್ಷ ಎಂದು ಅಂದಾಜಿಸಲಾಗಿತ್ತು.

ಅಂದು ಘಟನಾ ಸ್ಥಳದಲ್ಲಿದ್ದ ಮುಷ್ತಾಕ್ ತಾಹಿರ್ಭಾಯಿ ಮಲರಿವಾಲಾ, ರೈಶ್ ಇನಾಯತ್ ಹುಸೇನ್ ಶೇಖ್ ಮತ್ತು ಮುನಾಫ್ ಅಲಿಯಾಸ್ ಕಾಲು ಅಲಿಯಾಸ್ ಹಾಕೋ ಮೊಹಮ್ಮದ್ ಭಾಯ್ ಮಿರ್ ಎಂಬ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದರು. ಆದರೆ, ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೊಹಮ್ಮದ್ ಸಾಜಿದ್ ಅಲಿಯಾಸ್ ಮುರ್ಗಿ ಮತ್ತು ಜಹೀರ್ ಶೇಖ್ ಅಲಿಯಾಸ್ ಜಹೀರ್ ದಬ್ಬಾ ಗ್ಯಾಸುದ್ದೀನ್ ಶೇಖ್ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದರು.

ಆದರೆ, ಈ ದಾಳಿ ನಡೆದ ನಂತರದ ದಿನಗಳಲ್ಲಿ ಬಂಧಿತ ಮುಸ್ಲಿಂ ಯುವಕರ ಮೇಲೆ ಪೊಲೀಸ್ ಸಿಬ್ಬಂದಿ ಸಾರ್ವಜನಿಕವಾಗಿ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದವು. ಇದು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ನಾಗರಿಕರ ತೀವ್ರ ಟೀಕೆಗೆ ಕಾರಣವಾಗಿತ್ತು. ಸೋನಾಲ್ ಸಿನಿಮಾ ರಸ್ತೆಯ ಬಳಿ ಬಂಧಿತ ಮುಸ್ಲಿಂ ಪುರುಷರನ್ನು ಸಾರ್ವಜನಿಕರ ಕಣ್ಣೆದುರೇ ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ವ್ಯಾನ್‌ಗೆ ಕಟ್ಟಿ ಹಾಕಿ ಅಮಾನವೀಯವಾಗಿ ಥಳಿಸುತ್ತಿರುವುದನ್ನು ಈ ದೃಶ್ಯಾವಳಿಗಳು ಬಹಿರಂಗಪಡಿಸಿದ್ದವು. ಸಾರ್ವಜನಿಕವಾಗಿ ನಡೆದ ಈ ದಾಳಿಯಲ್ಲಿ ಓರ್ವ ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ನೇರವಾಗಿ ಭಾಗಿಯಾಗಿದ್ದರು ಎಂದು ತಿಳಿದುಬಂದಿತ್ತು.

ಪೊಲೀಸ್ ಇಲಾಖೆಯ ಹೇಳಿಕೆಯ ಪ್ರಕಾರ, ಮೇ 16 ರಂದು ಮುನ್ನೆಚ್ಚರಿಕೆ ಕ್ರಮವಾಗಿ ಜಹೀರ್ ಶೇಖ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಜಾನುವಾರು ವಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸಿ, ಮೇ 18 ರಂದು ವೆಜಲ್‌ಪುರ ಪೊಲೀಸರು ಅವರನ್ನು ಔಪಚಾರಿಕವಾಗಿ ಬಂಧಿಸಿದ್ದರು. ಆದರೆ, ವಯೋವೃದ್ಧ ಜಹೀರ್ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರೂ ಸಹ ಪೊಲೀಸರು ಕಸ್ಟಡಿಯಲ್ಲಿ ಅವರಿಗೆ ತೀವ್ರ ಚಿತ್ರಹಿಂಸೆ ನೀಡಿದ್ದರು ಎಂದು ಕುಟುಂಬಸ್ಥರು ದೂರಿದ್ದರು. ವಿಚಾರಣೆಯ ನೆಪದಲ್ಲಿ ಅವರನ್ನು ಬೂಟುಗಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಡ್ಡವನ್ನು ಹಿಡಿದು ಎಳೆದಾಡಿ ವಿಕೃತವಾಗಿ ಆನಂದಿಸಿದ್ದರು ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಜಹೀರ್ ಶೇಖ್ ಅವರನ್ನು ಕಸ್ಟಡಿ ಹಿಂಸಾಚಾರಕ್ಕೆ ಒಳಪಡಿಸಿದ್ದಷ್ಟೇ ಅಲ್ಲದೆ, ಅವರಿಗೆ ಬಲವಂತವಾಗಿ ಯಾವುದೋ “ಅನುಮಾನಾಸ್ಪದ ಪಾನೀಯ”ವನ್ನು ಕುಡಿಸಲಾಗಿತ್ತು ಎಂದು ಮೃತರ ಕುಟುಂಬದ ಪರ ವಕೀಲ ನೌಮನ್ ಘಾಂಚಿ ಗಂಭೀರ ಆರೋಪ ಮಾಡಿದ್ದಾರೆ. ಜಹೀರ್ ಶೇಖ್ ಅವರು ಸಾವನ್ನಪ್ಪುವ ಮುನ್ನ ತಮ್ಮ ಮೇಲೆ ಹಲ್ಲೆ ನಡೆಸಿದ ಕೆಲವು ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದರು ಮತ್ತು ತಮಗಾದ ಚಿತ್ರಹಿಂಸೆಯನ್ನು ಮರಣಶಾಸನದ ರೂಪದಲ್ಲಿ ದಾಖಲಾದ ಹೇಳಿಕೆಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದರು ಎಂದು ವಕೀಲರು ತಿಳಿಸಿದ್ದಾರೆ..

ಇದೇ ವೇಳೆ, ಜಹೀರ್ ಶೇಖ್ ಅವರ ಮಗ ತೋಫಿಕ್ ಶೇಖ್ ಅವರು ತಮ್ಮ ತಂದೆ ಸಾಯುವ ಕೆಲವೇ ಕ್ಷಣಗಳ ಮುನ್ನ ಚಿತ್ರೀಕರಿಸಿದ್ದಾರೆ ಎನ್ನಲಾದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ದೃಶ್ಯಾವಳಿಯಲ್ಲಿ ತೀರಾ ದುರ್ಬಲ ಹಾಗೂ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಜಹೀರ್ ಶೇಖ್ ಅವರು, ಕಸ್ಟಡಿಯಲ್ಲಿದ್ದಾಗ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ತಮಗೆ ನಿಗೂಢ ಪಾನೀಯವೊಂದನ್ನು ಕುಡಿಯಲು ನೀಡಿದ್ದರು ಎಂದು ಆರೋಪಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಈ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ತೋಫಿಕ್ ಶೇಖ್ ಅವರು ಅಹಮದಾಬಾದ್ ಪೊಲೀಸ್ ಆಯುಕ್ತರಾದ ಜಿ.ಎಸ್. ಮಲಿಕ್ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದು, ತಮ್ಮ ತಂದೆಯ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದರು.

ಈ ಸಂಬಂಧ ಮುಕ್ತೂಬ್ ಮೀಡಿಯಾ ಜೊತೆ ಮಾತನಾಡಿದ್ದ ಮಗ ತೋಫಿಕ್, “ಇದು ಸ್ಪಷ್ಟವಾಗಿ ಕಸ್ಟಡಿಯಲ್ಲಿ ನಡೆದ ಕೊಲೆಯಾಗಿದೆ. ಪೊಲೀಸರೇ ಹೊಡೆದು ನನ್ನ ತಂದೆಯನ್ನು ಕೊಂದಿದ್ದಾರೆ. ಅವರು ತೀವ್ರ ಮಧುಮೇಹ (ಡಯಾಬಿಟಿಸ್) ರೋಗಿಯಾಗಿದ್ದರು. ಅವರ ದೈಹಿಕ ಸ್ಥಿತಿಯನ್ನು ಪರಿಗಣಿಸದೆ, ಮೊದಲಿಗೆ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ವಶಕ್ಕೆ ಪಡೆಯಲಾಗಿತ್ತು. ಆ ಬಳಿಕ ಪೊಲೀಸ್ ಠಾಣೆಯೊಳಗೆ ಅತ್ಯಂತ ಕ್ರೂರವಾಗಿ ಥಳಿಸಿ ಹತ್ಯೆ ಮಾಡಲಾಗಿದೆ” ಎಂದು ಆಕ್ರೋಶ ಹೊರಹಾಕಿದ್ದರು.

ಮುಂದುವರಿದು ಮಾತನಾಡಿದ್ದ ತೋಫಿಕ್, “ಮೇ 16 ರಂದು ಸರ್ಖೇಜ್ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನನ್ನ ತಂದೆಯನ್ನು ಬಂಧಿಸಿದ್ದರು. ಬಂಧನದ ಬೆನ್ನಲ್ಲೇ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿರವಾಗುವ ಮೊದಲೇ, ಅಂದರೆ ಮೇ 18 ರಂದು, ಜಾನುವಾರು ಹತ್ಯೆ ಪ್ರಕರಣದ ವಿಚಾರಣೆಯ ನೆಪ ಒಡ್ಡಿ ವೆಜಲ್‌ಪುರ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿಕೊಂಡಿದ್ದರು” ಎಂದು ಘಟನಾವಳಿಗಳನ್ನು ವಿವರಿಸಿದ್ದರು.

“ಇಷ್ಟೆಲ್ಲಾ ಆದರೂ ಪೊಲೀಸರು ನಮಗೆ ನನ್ನ ತಂದೆಯನ್ನು ಭೇಟಿಯಾಗಲು ದೀರ್ಘಕಾಲ ಅವಕಾಶ ನೀಡಲೇ ಇಲ್ಲ. ಸೋಲಾ ಸಿವಿಲ್ ಆಸ್ಪತ್ರೆಯ ವೈದ್ಯರು ಬರೆದುಕೊಟ್ಟಿದ್ದ ಅತ್ಯಗತ್ಯ ಔಷಧಿಗಳನ್ನು ವೆಜಲ್‌ಪುರ ಪೊಲೀಸರು ಅವರಿಗೆ ನೀಡದೆ ಸತಾಯಿಸಿದ್ದರು. ಮಧುಮೇಹ ಇರುವ ವ್ಯಕ್ತಿ ದೀರ್ಘಕಾಲ ಹಸಿವಿನಿಂದ ಇರಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಅವರಿಗೆ ಸರಿಯಾಗಿ ಆಹಾರವಾಗಲಿ, ಮದ್ದನ್ನಾಗಲಿ ನೀಡದೆ ಸಾಯುವಂತೆ ಮಾಡಿದ್ದರು. ಕೊನೆಗೆ ನನ್ನ ತಾಯಿಗೆ ಕಸ್ಟಡಿಯಲ್ಲಿದ್ದ ತಂದೆಯನ್ನು ನೋಡಲು ಕೇವಲ ಕೆಲವು ಸೆಕೆಂಡುಗಳ ಕಾಲ ಮಾತ್ರ ಅವಕಾಶ ನೀಡಲಾಗಿತ್ತು, ಅದು ಕೂಡ ಪೊಲೀಸರು ಸುತ್ತುವರಿದಿದ್ದ ಬಂದೋಬಸ್ತ್ ನಡುವೆ” ಎಂದು ತೋಫಿಕ್ ಅಳಲು ತೋಡಿಕೊಂಡಿದ್ದರು.

ಮೇ 5 ರಂದು ಪೊಲೀಸ್ ವ್ಯಾನ್‌ಗೆ ಮುಸ್ಲಿಂ ಯುವಕನನ್ನು ಕಟ್ಟಿ ಹಾಕಿ ಪೊಲೀಸರು ಅಮಾನುಷವಾಗಿ ಥಳಿಸುತ್ತಿದ್ದ ದೃಶ್ಯವನ್ನು ತೋಫಿಕ್ ಅವರ ಸಹೋದರನೇ ಮೊಬೈಲ್‌ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದರು ಎನ್ನಲಾಗಿತ್ತು. ಈ ಕಾರಣಕ್ಕಾಗಿ ಪೊಲೀಸರ ಅಸಲಿ ಮುಖವಾಡ ಕಳಚಿಬಿದ್ದಿದ್ದರಿಂದ, ಖಾಕಿ ಪಡೆ ತಮ್ಮ ಕುಟುಂಬದ ವಿರುದ್ಧ ತೀವ್ರ ದ್ವೇಷ ಸಾಧಿಸುತ್ತಿತ್ತು ಎಂದು ತೋಫಿಕ್ ಆರೋಪಿಸಿದ್ದಾರೆ. “ಅದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪೊಲೀಸರು ನನ್ನ ತಂದೆಯ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ. ಅಷ್ಟೇ ಅಲ್ಲದೆ, ನನ್ನ ಅಪ್ರಾಪ್ತ ವಯಸ್ಸಿನ ಸಹೋದರ ಹಾಗೂ ನನ್ನ ಮೇಲೂ ಸುಳ್ಳು ಕೇಸ್ ದಾಖಲಿಸಲು ಸಂಚು ರೂಪಿಸುತ್ತಿದ್ದಾರೆ” ಎಂದು ಅವರು ದೂರಿದ್ದಾರೆ.

ತಮ್ಮ ತಂದೆ ಜಹೀರ್ ಶೇಖ್ ಅವರು 2023 ರವರೆಗೆ ಕೇವಲ ಕುರಿಮರಿಗಳ ವ್ಯಾಪಾರವನ್ನು ಮಾತ್ರ ಮಾಡುತ್ತಿದ್ದರು ಎಂದು ಸ್ಪಷ್ಟಪಡಿಸಿದ ತೋಫಿಕ್, ಪೊಲೀಸರು ಮುನ್ನೆಲೆಯಲ್ಲಿಟ್ಟುಕೊಂಡಿರುವ ಮಾಂಸ ವಧೆಯ ಕೋನ ಸಂಪೂರ್ಣ ಕಲ್ಪಿತ ಎಂದು ವಾದಿಸಿದ್ದಾರೆ.

ಆದರೆ, ಕಸ್ಟಡಿಯಲ್ಲಿ ವೃದ್ಧನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಕುಟುಂಬದ ಎಲ್ಲಾ ಗಂಭೀರ ಆರೋಪಗಳನ್ನು ಅಹಮದಾಬಾದ್ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿರಾಕರಿಸಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಎ.ಬಿ. ವಾಲಂದ್ ಅವರು, “ಜಹೀರ್ ಶೇಖ್ ಪೊಲೀಸ್ ಠಾಣೆಯಲ್ಲಿದ್ದಾಗ ಅವರ ಪತ್ನಿ ತಂದುಕೊಟ್ಟಿದ್ದ ಔಷಧಿಗಳನ್ನು ಸೇವಿಸಿದ್ದರು. ಅದನ್ನು ಸೇವಿಸಿದ ಬಳಿಕವಷ್ಟೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು” ಎಂದು ಉಲ್ಟಾ ಹಕ್ಕು ಮಂಡಿಸಿದ್ದರು. ಜಹೀರ್ ಅವರಿಗೆ ಮೊದಲೇ ಮಧುಮೇಹ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿದ್ದವು ಮತ್ತು ಅವರ ಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದರು. ಮರಣ ಹೊಂದುವ ಮುನ್ನ ಜಹೀರ್ ಶೇಖ್ ಅವರು ಅಹಮದಾಬಾದ್‌ನ ಎಸ್‌ವಿಪಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೈದ್ಯರ ಕಠಿಣ ಮೇಲ್ವಿಚಾರಣೆಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು. ಅಲ್ಲದೆ, ಈ ಸಾವಿನ ಘಟನೆಯ ಸುತ್ತ ಇರುವ ಸತ್ಯಾಸತ್ಯತೆಯನ್ನು ತಿಳಿಯಲು ಆಂತರಿಕ ಇಲಾಖಾ ತನಿಖೆಯನ್ನು ಘೋಷಿಸಿರುವುದಾಗಿ ಪೊಲೀಸರು ಪ್ರಕಟಿಸಿದ್ದರು.

ಪೊಲೀಸ್ ದಾಖಲೆಗಳ ಪ್ರಕಾರ, ಮೃತ ಜಹೀರ್ ಶೇಖ್ ವಿರುದ್ಧ ಅಹಮದಾಬಾದ್‌ನ ವಿವಿಧ ಠಾಣೆಗಳಲ್ಲಿ ಅಕ್ರಮ ಪ್ರಾಣಿ ವಧೆ, ಪ್ರಾಣಿ ಹಿಂಸೆ ತಡೆ ಕಾಯ್ದೆ ಉಲ್ಲಂಘನೆ, ಗಲಭೆ ಸೃಷ್ಟಿ ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಆರೋಪಗಳ ಅಡಿಯಲ್ಲಿ ಈ ಹಿಂದೆ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಅವರ ಮೇಲೆ ಸಮಾಜವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ (ಪಾಸಾ) ಅಡಿಯಲ್ಲಿಯೂ ಸಹ ಮೊಕದ್ದಮೆ ಹೂಡಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಆದರೆ, ಮೃತರ ಕುಟುಂಬಸ್ಥರು ಪೊಲೀಸರ ಈ ವಾದವನ್ನು ತೀವ್ರವಾಗಿ ತಳ್ಳಿಹಾಕಿದ್ದರು. ಹಳೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪೊಲೀಸರು ಪ್ರಸ್ತುತ ಕಸ್ಟಡಿ ಮರಣವನ್ನು ಮತ್ತು ತಮ್ಮ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಸ್ಟಡಿ ಚಿತ್ರಹಿಂಸೆಯು ಮೇಲ್ನೋಟಕ್ಕೇ ಸಾಬೀತಾಗುತ್ತಿರುವುದರಿಂದ ಈ ಪ್ರಕರಣದ ಕುರಿತು ತಕ್ಷಣವೇ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದಿದ್ದರು.

ಈ ಕುರಿತು ಅಲ್ಪಸಂಖ್ಯಾತ ಸಮನ್ವಯ ಸಮಿತಿಯ (ಎಂಕಾಂ) ಸಂಚಾಲಕರಾದ ಮುಜಾಹಿದ್ ನಫೀಸ್ ಅವರು ಮುಕ್ತುಬ್ ಮೀಡಿಯಾ ಜೊತೆ ಮಾತನಾಡಿ, “ಈ ಕಸ್ಟಡಿ ಮರಣ ಮತ್ತು ಪೊಲೀಸರು ಅನುಸರಿಸಿದ ಸಂಪೂರ್ಣ ಪ್ರಕ್ರಿಯೆಯು ಕಾನೂನು ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಮೂಡಿಸುತ್ತಿದೆ. ಮೊದಲನೆಯದಾಗಿ, ಜಹೀರ್ ಅವರ ಪತ್ನಿ ಪೊಲೀಸ್ ಠಾಣೆಗೆ ಬಂದು ಔಷಧಿ ನೀಡಿದ್ದರಿಂದಲೇ ಅವರು ಸತ್ತರು ಎಂದು ಪೊಲೀಸರು ಹೇಳುತ್ತಿದ್ದಾರೆ. ಕಟ್ಟುನಿಟ್ಟಿನ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯನ್ನು ಭೇಟಿ ಮಾಡಲು ಮತ್ತು ಅವರಿಗೆ ಏನನ್ನಾದರೂ ತಿನ್ನಿಸಲು ಅಥವಾ ಕುಡಿಸಲು ಸಾರ್ವಜನಿಕರು ಪೊಲೀಸರ ಕಣ್ಣು ತಪ್ಪಿಸಿ ಹೋಗಲು ಹೇಗೆ ಸಾಧ್ಯ? ಒಂದು ವೇಳೆ ಪೊಲೀಸರ ಸಮ್ಮುಖದಲ್ಲೇ ಅದು ನಡೆದಿದ್ದರೂ, ಆರೋಪಿಗಳ ಸುರಕ್ಷತೆ ಮತ್ತು ಪೊಲೀಸರ ಕರ್ತವ್ಯ ನಿಷ್ಠೆಯ ಬಗ್ಗೆ ಇದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ” ಎಂದು ಕಿಡಿಕಾರಿದ್ದರು.

“ಗೋಮಾಂಸ ಹತ್ಯೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 5 ರಂದೇ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆ ಮೂವರನ್ನು ಅಹಮದಾಬಾದ್ ಪೊಲೀಸರು ಸಾರ್ವಜನಿಕ ರಸ್ತೆಯಲ್ಲೇ ಪೊಲೀಸ್ ವ್ಯಾನ್‌ಗೆ ಕಟ್ಟಿ ಹಾಕಿ ದೃಶ್ಯ ವೈಭವದಂತೆ ಥಳಿಸಿದ್ದಾರೆ. ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವ ಮುನ್ನವೇ, ಕೇವಲ ವಿಚಾರಣೆಯ ಹಂತದಲ್ಲಿರುವ ಆರೋಪಿಗಳ ಮೇಲೆ ಸಾರ್ವಜನಿಕವಾಗಿ ಇಂತಹ ಕ್ರೂರ ಹಲ್ಲೆ ನಡೆಸಿದ್ದು ಯಾವ ಕಾನೂನಿನಡಿಯಲ್ಲಿ?” ಎಂದು ನಫೀಸ್ ಪ್ರಶ್ನಿಸಿದ್ದಾರೆ.

“ಕೇವಲ ಪ್ರಾಥಮಿಕ ಆರೋಪದ ಮೇಲೆ ಸಾರ್ವಜನಿಕರ ಕಣ್ಣೆದುರೇ ಜನರನ್ನು ಇಷ್ಟೊಂದು ಭೀಕರವಾಗಿ ಹೊಡೆಯಬಲ್ಲ ಪೊಲೀಸರು, ಇನ್ನು ನಾಲ್ಕು ಗೋಡೆಗಳ ಮಧ್ಯೆ ಸಾರ್ವಜನಿಕರ ದೃಷ್ಟಿಯಿಂದ ದೂರವಿರುವ ಪೊಲೀಸ್ ಕಸ್ಟಡಿಯೊಳಗೆ ವೃದ್ಧನಿಗೆ ಯಾವ ಮಟ್ಟದ ನರಕಯಾತನೆ ನೀಡಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು” ಎಂದು ನಫೀಸ್ ಆತಂಕ ವ್ಯಕ್ತಪಡಿಸಿದ್ದಾರೆ

“ಇವು ನಾವು ಉನ್ನತ ಪೊಲೀಸ್ ಅಧಿಕಾರಿಗಳನ್ನು ನೇರವಾಗಿ ಕೇಳಬೇಕಾದ ಪ್ರಾಥಮಿಕ ಪ್ರಶ್ನೆಗಳಾಗಿವೆ. ಮೃತರ ಕುಟುಂಬಸ್ಥರು ನೀಡಿದ ದೂರನ್ನು ತಕ್ಷಣವೇ ಎಫ್‌ಐಆರ್ ಆಗಿ ದಾಖಲಿಸಿಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ, ಆದರೆ ಪೊಲೀಸರು ಅದನ್ನು ಇನ್ನೂ ಬಾಕಿ ಇಟ್ಟಿದ್ದಾರೆ. ಈ ಪ್ರಕರಣದಲ್ಲಿ ತಕ್ಷಣವೇ ನ್ಯಾಯಯುತ ನ್ಯಾಯಾಂಗ ತನಿಖೆ ಆರಂಭವಾಗಬೇಕು. ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಮತ್ತು ಸಾಮಾಜಿಕ ಬೆಂಬಲವನ್ನು ನಮ್ಮ ಸಮಿತಿ ನೀಡಲಿದೆ” ಎಂದು ನಫೀಸ್ ಘೋಷಿಸಿದ್ದಾರೆ.

ವೃದ್ಧ ಜಹೀರ್ ಶೇಖ್ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಅಹಮದಾಬಾದ್‌ನ ಎಸ್‌ವಿಪಿ ಆಸ್ಪತ್ರೆಯ ಮುಂಭಾಗದಲ್ಲಿ ಭಾರಿ ಜನಸ್ತೋಮ ಜಮಾಯಿಸಿ, ಪ್ರತಿಭಟನೆಗಳು ಭುಗಿಲೆದ್ದಿದ್ದವು. ಜಹೀರ್ ಅವರ ಅಕ್ರಮ ಬಂಧನ ಮತ್ತು ಕಸ್ಟಡಿಯಲ್ಲಿದ್ದಾಗ ಅವರಿಗೆ ನೀಡಲಾದ ಅಮಾನವೀಯ ಚಿತ್ರಹಿಂಸೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಕುಟುಂಬಸ್ಥರು ಮತ್ತು ನೂರಾರು ಸಂಖ್ಯೆಯ ಸಂಬಂಧಿಕರು ವೆಜಲ್‌ಪುರ ಪೊಲೀಸ್ ಠಾಣೆಯ ಹೊರಗಡೆ ಧರಣಿ ಕುಳಿತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮೃತರ ಶವವನ್ನು ಸ್ವೀಕರಿಸಲು ಬದ್ಧವಾಗಿ ನಿರಾಕರಿಸಿದ್ದರು.

“ನನ್ನ ತಂದೆ ಮರಣ ಹೊಂದುವ ಮುನ್ನ ನೀಡಿರುವ ಕೊನೆಯ ಹೇಳಿಕೆಯಲ್ಲಿ ತಮಗೆ ಪೊಲೀಸ್ ಕಸ್ಟಡಿಯಲ್ಲಿ ಎದುರಾದ ಭೀಕರ ಅನುಭವಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಅದನ್ನು ಅತ್ಯಂತ ಬಲವಾದ ‘ಮರಣಶಾಸನ’ (ಡೈಯಿಂಗ್ ಡಿಕ್ಲರೇಷನ್) ಸಾಕ್ಷಿ ಎಂದು ಪರಿಗಣಿಸಬೇಕು. ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಅಕ್ಷಯ್ ದೇಸಾಯಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ” ಎಂದು ಮಗ ತೋಫಿಕ್ ಶೇಖ್ ಪ್ರತಿಪಾದಿಸಿದ್ದಾರೆ.

“ಪೊಲೀಸರು ನನ್ನ ದೂರಿನ ಆಧಾರದ ಮೇಲೆ ಆರೋಪಿ ಅಧಿಕಾರಿಗಳ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡು, ನ್ಯಾಯಸಮ್ಮತ ತನಿಖೆಯನ್ನು ಪ್ರಾರಂಭಿಸುವವರೆಗೂ ನಾವು ಇಲ್ಲಿಂದ ಒಂದು ಇಂಚೂ ಕದಲುವುದಿಲ್ಲ” ಎಂದು ತೋಫಿಕ್ ಅತ್ಯಂತ ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...