ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ ವ್ಯಾಪಾರಿಯೊಬ್ಬರು ವೈದ್ಯರ ಬೇಜವಾಬ್ದಾರಿತನದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ನ್ಯಾಯ ಕೋರಿ ಕುಟುಂಬದವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೇ 14 ರಂದು ರಾತ್ರಿ ಮನೆಯಲ್ಲಿ ಶರೀಫ್ ರ ಮೇಲೆ ಹೋರಿ ಹಾಯ್ದಿದೆ. ಇದರಿಂದ ಗಾಯಗೊಂಡಿದ್ದ ಅವರನ್ನು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದರಿಂದ ಶರೀಫ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು, ಬಳಿಕ ಅವರನ್ನು ಮೇ 16ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೇ 20 ರಂದು ಶರೀಫ್ ಮೃತಪಟ್ಟಿದ್ದಾರೆ.
ಸೂರ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದು:
ಈ ಸಂಬಂಧ ಪ್ರತಿಕ್ರಿಯೆಗಾಗಿ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ಕರೆ ಮಾಡಿದಾಗ ನಾನು ಗೌರಿ.ಕಾಂನೊಂದಿಗೆ ಮಾತನಾಡಿದ ಡಾ. ರಾಜೇಶ್, ಅವರು (ಮೊಹಮ್ಮದ್ ಶರೀಫ್) ಹೊಟ್ಟೆನೋವು ಎಂದು ಬಂದಾಗ ನಾವು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಲು ತಿಳಿಸಿದೆವು. ಆದರೆ ರಾತ್ರಿ ನಮ್ಮಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿಲ್ಲದ ಕಾರಣ ಅವರು ಮಂಗಳೂರಿಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬಂದರು.
ಮಂಗಳೂರಿಂದ ತಂದಿದ್ದ ಅಲ್ಟ್ರಾಸೌಂಡ್ ವರದಿಯಲ್ಲಿ ‘ಕಿಡ್ನಿ ಸ್ಟೋನ್’ (ರೀನಲ್ ಸ್ಟೋನ್) ಇರುವುದು ಕಂಡುಬಂದಿತ್ತು. ಜೊತೆಗೆ ಮೂರು ದಿನಗಳಿಂದ ಮೋಷನ್ ಆಗಿಲ್ಲ ಎಂದಿದ್ದಕ್ಕೆ ನಾವು ಗ್ಲುಕೋಸ್ ನೀಡಿ, ಎನಿಮಾ ಕೊಟ್ಟೆವು. ಅದರಿಂದ ನೋವು ಕಡಿಮೆಯಾಗಿ ಅವರು ಮನೆಗೆ ಹೋಗುತ್ತೇನೆ ಎಂದರು. ಆದರೆ ಅಷ್ಟರಲ್ಲೇ ಬಂದ ಅವರ ರಕ್ತದ ವರದಿಯಲ್ಲಿ ಸೋಂಕು ಇರುವುದು ಪತ್ತೆಯಾಯಿತು. ಅದು ಕಿಡ್ನಿಯದ್ದೋ ಅಥವಾ ಕರುಳಿನದ್ದೋ ಎಂದು ನಿಖರವಾಗಿ ತಿಳಿಯಲು ‘ಸಿಟಿ ಸ್ಕ್ಯಾನ್’ ಮಾಡಿಸಬೇಕು ಎಂದು ತಿಳಿಸಿದೆವು ಆದರೆ ಅಷ್ಟರಲ್ಲಿ ಹೊಟ್ಟೆಯೊಳಗೆ ಪರ್ಫೊರೇಷನ್ (ರಂಧ್ರ) ಆಗಿದ್ದ ಕಾರಣ ಇದ್ದಕ್ಕಿದ್ದಂತೆ ಹೊಟ್ಟೆನೋವು ತೀವ್ರಗೊಂಡು, ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಹಾಗಾಗಿ ತಕ್ಷಣವೇ ಅವರನ್ನು ಮಂಗಳೂರಿಗೆ ಕಳುಹಿಸಿಕೊಟ್ಟೆವು ಎಂದಿದ್ದಾರೆ.
ಪ್ರಕರಣ ದಾಖಲು:
ಕುಟುಂಬಸ್ಥರ ದೂರಿನನ್ವಯ ಬೆಳ್ತಂಗಡಿ ಠಾಣೆಯಲ್ಲಿ ಯು.ಡಿ.ಆರ್ : 28/2026, ಕಲಂ: 194(3) (iv) ಬಿ.ಎನ್.ಎಸ್.ಎಸ್. 2023ರಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷದ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಆರೋಪಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ವೈದ್ಯಕೀಯ ತಂಡವನ್ನು ರಚಿಸುವಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಕೇಳಿಕೊಳ್ಳಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಆರೋಪ ಪ್ರತ್ಯಾರೋಪಗಳೇನೇ ಇದ್ದರು, 35 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ಸಾವನಪ್ಪಿರುವುದು ಇಂದಿನ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದ್ದು ಒಂದು ಅಮೂಲ್ಯ ಜೀವ ಇನ್ನಿಲ್ಲವಾಗಿದೆ. ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಜೀವವೊಂದು ಉಸಿರು ಚೆಲ್ಲಿದೆ. ಆರೋಗ್ಯ ಇಲಾಖೆ ಈಗಲಾದರೂ ಎಚ್ಚೆತ್ತು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮವಹಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುತ್ತದೆಯೇ ಎಂದು ಕಾದು ನೋಡಬೇಕಿದೆ.


