Homeಮುಖಪುಟಪೊಲೀಸರ ಮೇಲಿಲ್ಲ ವಿಶ್ವಾಸ: ಸ್ವ-ಸುರಕ್ಷತಾ ವ್ಯವಸ್ಥೆ ಮೊರೆ ಹೋದ ರೈತರು

ಪೊಲೀಸರ ಮೇಲಿಲ್ಲ ವಿಶ್ವಾಸ: ಸ್ವ-ಸುರಕ್ಷತಾ ವ್ಯವಸ್ಥೆ ಮೊರೆ ಹೋದ ರೈತರು

- Advertisement -
- Advertisement -

ಶನಿವಾರ ಸಾಯಂಕಾಲ 4.30ರ ಸಮಯ. ‘ಮತ್ತೆ ದಾಂಧಲೆಕೋರರ ದಂಡು ದೊಡ್ಡ ಸಂಖ್ಯೆಯಲ್ಲಿ ಹೊರಗೆ ಜಮಾವಣೆ ಆಗುತ್ತಿದೆ’ ಎಂಬ ಸಣ್ಣ ಅನುಮಾನದ ಸಂದೇಶ ಬಂದ ನಿಮಿಷಗಳಲ್ಲಿ ಲಾಠಿಗಳನ್ನು ಹಿಡಿದ ಹತ್ತಾರು ರೈತ ಸ್ವಯಂಸೇವಕರು ಬ್ಯಾರಿಕೇಡ್ ಬಳಿ ಹಾಜರಾಗಿದ್ದರು.

ಇದು ಬಿಕೆಯು ನಡೆಸಿತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಕಂಡು ಬಂದ ಹೊಸ ಬೆಳವಣಿಗೆ. ಶುಕ್ರವಾರ ಸಿಂಘು ಗಡಿಯ ದೆಹಲಿ ಭಾಗದ ಒಂದು ಜಾಗದಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪೊಂದು ದಾಂಧಲೆ ನಡೆಸಲು ಯತ್ನಿಸಿದ ನಂತರ, ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ರೈತರು ತಮ್ಮದೇ ಸುರಕ್ಷತಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್ ಗೂಂಡಾಗಳು ತಮ್ಮ ಹೋರಾಟ ನಾಶ ಮಾಡಲು ಹವಣಿಸುತ್ತಿದ್ದಾರೆ ಎಂಬ ಭಾವನೆ ರೈತರಲ್ಲಿದೆ.

ಸಿಂಘು ಗಡಿಯ ಒಂದು ಭಾಗದಲ್ಲಿ ಸಣ್ಣ ಹಿಂಸಾಚಾರದ ನಂತರ, ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಮತ್ತು “ರಾಜಕೀಯ ಏಜೆಂಟರಿಗೆ” ಮತ್ತೆ ಹಿಂಸಾಚಾರವನ್ನು ಪ್ರಚೋದಿಸಲು ಅವಕಾಶ ಸಿಗದಂತೆ ನೋಡಿಕೊಳ್ಳಲು ರೈತರು “ಆಂತರಿಕ ಭದ್ರತೆ” ಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

‘ಸ್ಥಳೀಯರ’ ಹೆಸರಿನಲ್ಲಿ ಶುಕ್ರವಾರ ಮೂರು ಹಂತಗಳ ಪೊಲೀಸ್ ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಬಂದು ದುಷ್ಕರ್ಮಿಗಳು ದಾಂಧಲೆ ಮಾಡಿದ ನಂತರ ರೈತರಿಗೆ ಪೊಲೀಸರ ಬಗ್ಗೆ ವಿಶ್ವಾಸವೇ ಹೋಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ದಾಂಧಲೆ ನಡೆದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

‘ನೌಜವಾನ್ ಭಾರತ್ ಸಭಾ ಅಧ್ಯಕ್ಷ ರೂಪಿಂದರ್ ಸಿಂಗ್, “ನಾವು ಮುಖ್ಯ ವೇದಿಕೆಯ ಬಳಿ ಭದ್ರತಾ ಕೊಠಡಿಯನ್ನು ಸ್ಥಾಪಿಸಿದ್ದೇವೆ, ಎಲ್ಲಾ ಸಮಯದಲ್ಲೂ 10 ಜನರು ಅಲ್ಲಿರುತ್ತಾರೆ. ನಾವು ಸ್ವಯಂಸೇವಕರ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಹೆಚ್ಚಿನ ತಪಾಸಣೆಯ ನಂತರ ಕಡಿಮೆ ಜನರಿಗೆ ವೇದಿಕೆಯ ಬಳಿ ಅವಕಾಶ ನೀಡಲಾಗುತ್ತಿದೆ. ಎಂತಹ ಸಮಯದಲ್ಲೂ ಅಹಿತಕರ ಪರಿಸ್ಥಿತಿ ಸಮಯದಲ್ಲೂ ಪರಿಸ್ಥಿತಿ ನಿಯಂತ್ರಿಸಲು ಯುವ ಘಟಕಗಳಿಗೆ ಸ್ಟ್ಯಾಂಡ್‌ಬೈನಲ್ಲಿ ಉಳಿಯುವಂತೆ ತಿಳಿಸಲಾಗಿದೆ. ನಮ್ಮ ಮೇಲೆ ಪ್ರತಿಭಟನೆ ನಡೆಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಅವಕಾಶ ನೀಡುವುದಿಲ್ಲ’ ಎಂದರು.

ಶನಿವಾರ, ಹೆಚ್ಚಿನ ಸ್ವಯಂಸೇವಕರು ಉದ್ದನೆಯ ಕಟ್ಟಿಗೆ ಮತ್ತು ಬಿದಿರಿನ ಕೋಲುಗಳೊಂದಿಗೆ ತಿರುಗಾಡುತ್ತಿದ್ದರು.. ರೈತರ ಪ್ರಕಾರ, ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ, ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ ಎರಡು ಪಾಳಿಯಲ್ಲಿ ಸ್ವಯಂಸೇವಕರು, ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆಯೂ ಪಹರೆ ಕಾಯುತ್ತಾರೆ. ಪ್ರಮುಖ ಪ್ರವೇಶ-ನಿರ್ಗಮನ ಸ್ಥಳಗಳಲ್ಲಿ ಬೀಡುಬಿಟ್ಟಿದ್ದಾರೆ. ಪರಿಶೀಲನೆ ನಡೆಸಲು ಕನಿಷ್ಠ ಐದು ಮಂದಿ ಪ್ರತಿಭಟನೆಯ ಮುಖ್ಯ ಪ್ರವೇಶ ಕೇಂದ್ರದಲ್ಲಿ ನಿಲ್ಲುತ್ತಾರೆ. ವೇದಿಕೆ ಸಮಿತಿಯು ಭಾಷಣಗಳನ್ನು ನಿರ್ವಹಿಸುತ್ತಿದ್ದರೆ, 25 ಜನರ ಹೆಚ್ಚುವರಿ ತಂಡವು ಹತ್ತಿರದಲ್ಲೇ ಜಾಗರೂಕತೆಯನ್ನು ಕಾಯ್ದುಕೊಳ್ಳುತ್ತದೆ.

ಮುಖ್ಯ ವೇದಿಕೆ ಪಕ್ಕದಲ್ಲಿರುವ ಮತ್ತೊಂದು ಟ್ರಾಲಿಯಲ್ಲಿ 10-15 ಸ್ವಯಂಸೇವಕರು ಇದ್ದಾರೆ, ಅವರನ್ನು ಯಾವಾಗಲಾದರೂ ಸಹಾಯಕ್ಕಾಗಿ ಕರೆಯಬಹುದು. ಪ್ರತಿಭಟನಾ ಸ್ಥಳದೊಳಗೆ, ಮೂರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. “ಬೆದರಿಕೆ” ಸಂಭವಿಸಿದಾಗ ಸ್ವಯಂಸೇವಕರನ್ನು ತಕ್ಷಣವೇ ಎಚ್ಚರಿಸಲು ಎಲ್ಲ ಪ್ರತಿಭಟನಾಕಾರರಿಗೆ ಸಂದೇಶವನ್ನು ಕಳುಹಿಸಲಾಗಿದೆ.
‘ಕನಿಷ್ಠ 1,500 ಜನರು 24 ತಾಸು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾವು ಮೊದಲ ದಿನದಿಂದ ಶಾಂತಿಯುತವಾಗಿದ್ದೇವೆ. ಆದರೂ ಎಷ್ಟೋ ದುಷ್ಟ ಜನರು ಪ್ರತಿಭಟನಾ ಸ್ಥಳ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ನಮ್ಮನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ… ” ಎಂದು ರೂಪಿಂದರ್ ಹೇಳಿದರು.

‘ಶುಕ್ರವಾರದ ಘಟನೆಯ ನಂತರ ಹೆಚ್ಚಿನ ಜಾಗರೂಕತೆ ಅಗತ್ಯ ಎನಿಸಿದೆ’ ಎಂದು ಪಂಜಾಬ್‌ನ ಮೊಗಾ ಜಿಲ್ಲೆಯ ಅಮರ್‌ಜೀತ್ ಸಿಂಗ್ ಹೇಳಿದರು. ರೈತರಿಗೆ ಪೊಲೀಸ್ ಪಡೆಗಳ ಬಗ್ಗೆ ಅಪನಂಬಿಕೆ ಇದೆ. “ನಿನ್ನೆ, ಪೊಲೀಸರು ನಿಂತು ಏನಾಯಿತು ಎಂದು ವೀಕ್ಷಿಸಿದರು. ನಾವು ಅವರನ್ನು ಮತ್ತು ಅವರ ಬ್ಯಾರಿಕೇಡ್‌ಗಳನ್ನು ಅವಲಂಬಿಸಲಾಗುವುದಿಲ್ಲ. ವದಂತಿಗಳಿಗೆ ಯಾರೂ ಬಲಿಯಾಗಬಾರದು ಮತ್ತು ಆತ್ಮರಕ್ಷಣೆಗಾಗಿ ಹೊರತುಪಡಿಸಿ ಅನಗತ್ಯವಾಗಿ ಕ್ರಿಯೆಗೆ ಇಳಿಯಬಾರದು ಎಂದು ಎಲ್ಲರಿಗೂ ಸ್ಪಷ್ಟಪಡಿಸಲಾಗಿದೆ. ನಮ್ಮ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಚಿತ್ರಿಸಬೇಕೆಂದು ನಾವು ಬಯಸುವುದಿಲ್ಲ” ಎಂದು ಹರಿಯಾಣದ ಅಂಬಾಲಾದ ಸುರಿಂದರ್ ಸಿಂಗ್ ಹೇಳಿದರು, ಅವರು ಮೊದಲಿನಿಂದಲೂ ಪ್ರತಿಭಟನೆಯಲ್ಲಿದ್ದಾರೆ.

ಹರಿಯಾಣದ ಕೈತಾಲ್‌ನ ಜ್ವಾರ್ಮಾಲ್, “ನಾವು ನಮ್ಮ ಪ್ರತಿಭಟನಾ ಸ್ಥಳವನ್ನು ಸುರಕ್ಷಿತವಾಗಿಡಲು ಬಯಸುತ್ತೇವೆ; ನಾವು ಯಾವುದೇ ಹಿಂಸಾಚಾರವನ್ನು ಬಯಸುವುದಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಒಳನುಸುಳುತ್ತಿದ್ದಾರೆ ಮತ್ತು ಜನರನ್ನು ಕೆರಳಿಸುತ್ತಿದ್ದಾರೆ. ಇದನ್ನು ತಡೆಯುತ್ತೇವೆ” ಎಂದರು. ರೈತರ ವೇಷದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ಗಳು ಸೇರಿಕೊಂಡು ರೈತರ ತಲೆ ಕೆಡಿಸುವ ಯತ್ನ ಮಾಡುತ್ತಿದ್ದಾರೆ ಎಂಬ ಸಂದೇಹದ ಕಾರಣ ಒಳಬರುವವರನ್ನು ಯಾರು ಎಂದು ಖಚಿತಪಡಿಸಿಕೊಂಡೇ ಒಳಕ್ಕೆ ಬಿಡಲಾಗುತ್ತಿದೆ.

ವೇದಿಕೆಯಿಂದ ಮಾತನಾಡಿದ ಬಿಕೆಯು ನಾಯಕ ಗುರ್ನಮ್ ಸಿಂಗ್ ಚಾದುನಿ ಶುಕ್ರವಾರದ ದಾಳಿಯ ಬಗ್ಗೆ ಸರ್ಕಾರಕ್ಕೆ “ಎಚ್ಚರಿಕೆ” ಕಳುಹಿಸಿದ್ದಾರೆ. “ಅವರು ಈ ಗೂಂಡಾಗಿರಿ ಬಿಡಬೇಕೆಂದು ನಾನು ಈ ಸರ್ಕಾರವನ್ನು ಎಚ್ಚರಿಸಲು ಬಯಸುತ್ತೇನೆ. ಇಲ್ಲಿಗೆ ಬಂದು ದಂಗಾ (ಗಲಭೆ) ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ”ಎಂದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ದಬ್ಬಾಳಿಕೆ ನಡೆದರೂ ಈಗ ಹಿಂತಿರುಗುವುದಿಲ್ಲ. “ಪೊಲೀಸರು ನಮ್ಮ ಮೇಲೆ ಮುಗಿಬಿದ್ದರೆ, ಅದು ರಾತ್ರಿ ಅಥವಾ ಬೆಳಿಗ್ಗೆ ಆಗಿರಲಿ, ನಾವು ಬಿಡುವುದಿಲ್ಲ, ನಾವು ಇಲ್ಲೇ ಸಾಯುತ್ತೇವೆ” ಎಂದು ಅವರು ಹೇಳಿದರು. ರೈತರು ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರಿಸಬೇಕು ಎಂದು ಪುನರುಚ್ಚರಿಸಿದರು.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್


ಇದನ್ನೂ ಓದಿ: ಸರ್ಕಾರದೊಂದಿಗೆ ಮಾತುಕತೆಯ ಬಾಗಿಲು ಮುಚ್ಚುವ ಪ್ರಶ್ನೆಯೇ ಇಲ್ಲ: ಸಂಯುಕ್ತ ಕಿಸಾನ್ ಮೋರ್ಚಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...