Homeಅಂಕಣಗಳುಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

ಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

- Advertisement -
- Advertisement -

29 ಸೆಪ್ಟೆಂಬರ್ ಇದೇ ಹೊತ್ತಿಗೆ ಗಾಂಧಿ ಸಂಚಿಕೆಯ ಕೆಲಸವನ್ನು ಮುಗಿಸಿದ್ದೆವು. ಹದಿನಾರು ಪುಟಗಳ ನಮ್ಮ ಪುಟ್ಟ ವಾರಪತ್ರಿಕೆಯಲ್ಲಿ ಸುಮಾರು ಹತ್ತು ಪುಟಗಳಷ್ಟು ಗಾಂಧಿ ನೆನಪಿಗೆ ಮೀಸಲಿಟ್ಟಿದ್ದೆವು. ಇಂದಿನ ಕಾಲಧರ್ಮಕ್ಕೆ ಗಾಂಧಿ ಚಿಂತನೆಗಳ ಪ್ರಸ್ತುತತೆಯನ್ನು ಚರ್ಚೆ ಮಾಡುವುದು ಅದರ ಉದ್ದೇಶ ಆಗಿತ್ತು. ವಿಶ್ವದೆಲ್ಲೆಡೆ ಬಿಕ್ಕಟ್ಟು ಎದುರಿಸುತ್ತಿರುವ ಸ್ಟೇಟ್ ಅಥವಾ ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಪರಿಕಲ್ಪನೆಯ ಬಗ್ಗೆ, ಆರ್ಥಿಕ ವ್ಯವಸ್ಥೆ ಬಗ್ಗೆ ಗಾಂಧಿ ಅವರ ಚಿಂತನೆಗಳು ಇಂದಿಗೆ ಹೊಸ ಹೊಳಹುಗಳನ್ನು ನೀಡಬಲ್ಲವೇ ಎಂಬುದರ ಬಗ್ಗೆ ನ್ಯಾಯಪಥದ ಹಲವು ಲೇಖಕರು ಚರ್ಚಿಸಿದ್ದರು.

ಗಾಂಧಿ ಚಿಂತನೆಗಳ ಬಗ್ಗೆ ದೇಶದೆಲ್ಲೆಡೆ ನಡೆಯುವ ಇಂತಹ ಹುಡುಕಾಟದಲ್ಲಿ ನಾವೂ ಭಾಗಿಯಾಗಿದ್ದ ಸಮಯದಲ್ಲಿ ಆ ದಿನದಿಂದ ಮುಂದಿನ ಒಂದು ವಾರ ನಡೆದ ಸಂಗತಿಗಳು ಇವತ್ತಿನ ಯುಗಧರ್ಮದ ಬಗ್ಗೆ ಇನ್ನಷ್ಟು ಆತಂಕಕ್ಕೀಡಾಗುವಂತೆ ಮಾಡಿವೆ. zeitgeist ಎಂಬ ಪದ ಈ ದಿನಗಳಲ್ಲಿ ಬಹಳ ಪ್ರಚಲಿತದಲ್ಲಿ ಇದೆ. ಶಬ್ದಕೋಶದ ಪ್ರಕಾರ ಒಂದು ನಿರ್ದಿಷ್ಟ ಕಾಲದ ಚಿಂತನೆಗಳು ಮತ್ತು ನಂಬಿಕೆಗಳ ಅನುಗುಣವಾಗಿ ಜನರು ಒಟ್ಟಾರೆಯಾಗಿ ಪ್ರತಿನಿಧಿಸುವ ಮನೋಧರ್ಮ. ಈ zeitgeist ಮೇಲೆ ಆರೋಪಿಸಿ ಅದರ ಹಿಂದೆ ಅವಿತು ಆತಂಕಕ್ಕೀಡುಮಾಡಿದ ಆ ಸಂಗತಿಗಳನ್ನು ಉಪೇಕ್ಷೆ ಮಾಡಿ ಸುಮ್ಮನಿದ್ದುಬಿಡಬಹುದೇ?

photo courtesy : Het Parool

ಗಾಂಧಿ ಜಯಂತಿಗೆ ಇನ್ನು ಎರಡು ದಿನ ಇದೆ ಎನ್ನುವಾಗ ಹೊರಬಿದ್ದ ಬಾಬ್ರಿ ಮಸೀದಿ ಧ್ವಂಸದ ಕ್ರಿಮಿನಲ್ ಪ್ರಕರಣದ ತೀರ್ಪು ಸಂಘಪರಿವಾರ ಮತ್ತು ಬಿಜೆಪಿ ಪಕ್ಷಗಳು ತಾವು ಬಹು ದಿನಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ತಿರುಚಿದ ಇತಿಹಾಸಕ್ಕೆ ಸಿಕ್ಕ ಜಯ ಎಂಬಂತೆ ವಿಜಯೋತ್ಸವ ಆಚರಿಸುವುದರೊಂದಿಗೆ ತಣ್ಣಗೆ ಕಳೆದುಹೋಯಿತು. ಬಾಬ್ರಿ ಮಸೀದಿ ಧ್ವಂಸ ಮಾಡುವುದರ ಹಿಂದೆ ಇದ್ದ ಸಂಚಿನ ಬಗ್ಗೆ ಇದ್ದ ಎಷ್ಟೋ ಲಕ್ಷ ಪುಟಗಟ್ಟಲೆ ದಾಖಲೆಗಳು, ವಿಡಿಯೋ ದೃಶ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆದವು. ಈ ತೀರ್ಪಿನ ನಂತರ ನಮ್ಮ ಮಾಧ್ಯಮಗಳಲ್ಲಿ ಅಂತಹ ನಿರೀಕ್ಷಿತ ಆಕ್ರೋಶ ಏನಾದರು ಕಂಡಿತೇ? ಲಂಕೇಶ್, ಪುತಿನರಂತಹ ಸಾಹಿತಿಗಳು ಒಂದು ಧರ್ಮದ ಪ್ರಾರ್ಥನಾ ಮಂದಿರ ಉರುಳಿಸುವುದರ ವಿರುದ್ಧ ಕನ್ನಡ ಮನಸ್ಸುಗಳಿಗೆ ತಿಳಿಸಿಕೊಟ್ಟಿದ್ದ ವಿವೇಕವನ್ನು ಇಂದು ಚಾಲ್ತಿಯಲ್ಲಿರುವ ಅದೆಷ್ಟು ಜನಪ್ರಿಯ ಸಾಹಿತಿಗಳು- ಕಲಾವಿದರು ಈ ಸಮಯದಲ್ಲಿ ನೆನಪಿಸಿಕೊಂಡರು? ಅವರಲ್ಲಿ ಅದೆಷ್ಟು ಜನ ತಮ್ಮ ಪ್ರಭಾವ ಬಳಸಿಕೊಂಡು ಸಾಮಾನ್ಯ ಜನತೆಗೆ ಇದರ ಬಗ್ಗೆ ತಿಳಿವು ಮೂಡಿಸಲು ಪ್ರಯತ್ನ ಮಾಡಿದರು? ಇದು zeitgeist ಮೊಮೆಂಟ್ ಎಂದು ಆಲಕ್ಷಿಸಬೇಕೇ? ಸುಪ್ರೀಂ ಕೋರ್ಟ್ ಮತ್ತು ಲಿಬರ್ಹಾನ್ ಆಯೋಗ ಈ ಹಿಂದೆಯೇ ಹೇಳಿರುವಂತೆ ಮಸೀದಿ ಉರುಳಿಸುವುದು ಪೂರ್ವನಿಯೋಜಿತ ಸಂಚಾಗಿತ್ತು ಎಂಬುದನ್ನು ನೆನಪಿಸಿ ಇದರ ವಿರುದ್ಧ ಧ್ವನಿಯೆತ್ತುವಂತೆ ಮತ್ತು ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಒತ್ತಡ ತರಲು ಜನಾಂದೋಲನ ಸೃಷ್ಟಿಸಲು ಸಾಧ್ಯವಾಗುವ ಕಾಲದಲ್ಲಿ ನಾವು ಬದುಕಿದ್ದೇವೆಯೇ?

ಅಕ್ಟೋಬರ್ ಎರಡು – ಗಾಂಧಿ ಜಯಂತಿ ದಿನ. ಗಾಂಧಿ ಜಯಂತಿಯಂದು, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವೂ ಆಗಿರುವುದರಿಂದ, ಅವರನ್ನು ಗಾಂಧಿ ವಿರೋಧಿಯಾಗಿ ಚಿತ್ರಿಸಿ, ಶಾಸ್ತ್ರಿ ಅವರ ಜನ್ಮದಿನವನ್ನು ನಾವು ದೊಡ್ಡದಾಗಿ ಆಚರಿಸಬೇಕು ಎಂದು ತಮ್ಮ ಗಾಂಧಿ ವಿರೋಧಿತನವನ್ನು – ಗೋಡ್ಸೆ ಪ್ರೀತಿಯನ್ನು ನಾಜೂಕಾಗಿ ಪ್ರದರ್ಶನ ಮಾಡುತ್ತಿದ್ದ ಸಂಘಪರಿವಾರ, ಈಗ ತಮ್ಮ ನೆಚ್ಚಿನ ಪಕ್ಷ ಅಧಿಕಾರದಲ್ಲಿ ಇರುವಾಗ ಮಹಾತ್ಮ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಪ್ರೀತಿಯನ್ನು ಕದ್ದುಮುಚ್ಚಿ ಪ್ರದರ್ಶನ ಮಾಡುವ ಹಂತವನ್ನು ಮೀರಿ ಬೆಳೆದಿದೆ. ಟ್ವಿಟ್ಟರ್ ನಲ್ಲಿ ‘#ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಹಲವು ಗಂಟೆಗಳ ಕಾಲ ಅದು ಟ್ರೆಂಡಿಂಗ್‍ನಲ್ಲಿ ಇರುವಂತೆ ಸಂಘ ಪರಿವಾರದ ಸದಸ್ಯರು ನೋಡಿಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ಸಂಸದರಾದ ಸಾಕ್ಷಿ ಮಹರಾಜ್, ಸಾಧ್ವಿ ಪ್ರಾಗ್ಯ ಮುಂತಾದವರು ಬಹಿರಂಗವಾಗಿಯೇ ಗೋಡ್ಸೆಯನ್ನು ಹೊಗಳಿ ಕೊಂಡಾಡಿದ್ದಾರೆ. ಅವರು ಇಂದಿಗೂ ಬಿಜೆಪಿ ಸಂಸದರಾಗಿ ಮುಲಾಜಿಲ್ಲದೆ ಮುಂದುವರೆದಿದ್ದಾರೆ. ಹೋದ ವರ್ಷದ ಗಾಂಧಿ ಜಯಂತಿಯ ದಿನ ಗೋಡ್ಸೆ ಪರವಾಗಿ ಮೂಡಿದ್ದ ಟ್ವೀಟ್‍ಗಳ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಟ್ರೆಂಡ್ ಇನ್ನೂ ದೊಡ್ಡದಾಗಿ ಬೆಳೆದಿದೆ. ಇದರಿಂದ ಉತ್ತೇಜಿತರಾಗಿ ಹಿಂದೂ ಮಹಾಸಭಾನವರು ಗೋಡ್ಸೆಗಾಗಿಯೇ ಒಂದು ನೂತನ ಯುಟ್ಯೂಬ್ ಚಾನೆಲ್ ತೆರೆಯಲು ಮುಂದಾಗಿರುವ ಸುದ್ದಿ ಕೂಡ ಬಂದಿದೆ. ಗೋಡ್ಸೆಯನ್ನು ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ ಸಂಭ್ರಮಿಸುವ ಹೊಸ ಸಹಜ ಮನೋಧರ್ಮವನ್ನು zeitgeist ಎಂದು ಎಣಿಸಿದರೂ ಕೈಕಟ್ಟಿ ಕೂರುವ ಆಯ್ಕೆ ಒಂದೇ ಉಳಿದಿರುವುದಾ? ‘ತಟ್ಟು ಚಪ್ಪಾಳೆ ಪುಟ್ಟ ಮಗು ಗಾಂಧಿಗಿಂದು ಜನ್ಮದಿನ’ ಎಂಬ ಸಾಲುಗಳು ಮತ್ತೆ ಎಳೆಯ ಮಕ್ಕಳ ನಡುವೆ ರಿಂಗಣಿಸಿ, ಯುವಕರಿಗೆ ಗೋಡ್ಸೆಯ ಚಿಂತನೆಗಳ ಅಪಾಯವನ್ನು ತಿಳಿಯುವಂತೆ ಮಾಡಿ, ವಿಶಾಲವಾಗಿ ಹರಡಿ ಟ್ರೆಂಡ್ ಮಾಡುವುದು ಹೇಗೆ?

ಮತಾಂಧ ಉಗ್ರಗಾಮಿ ಗಾಂಧಿಯವರನ್ನು ಕೊಂದ ನಂತರದ, ಮಹಾತ್ಮ ಗಾಂಧಿಯವರ ಶವದ ಮೆರವಣಿಗೆಯಲ್ಲಿ ಅಂತಿಮ ನಮನ ಸಲ್ಲಿಸಲು ನೆರೆದಿದ್ದ ಅಪಾರ ಜನಸ್ತೋಮ ಹಾಗೂ ಸಾಗರದಂತೆ ನೆರೆದಿರುವ ಜನಸಂಖ್ಯೆಯ ಮಧ್ಯೆ ನಡೆಯುತ್ತಿರುವ ಗಾಂಧಿಯವರ ಅಂತಿಮ ಶವ ಸಂಸ್ಕಾರದ ಫೋಟೋಗಳು ಪೀಳಿಗೆಯಿಂದ ಪೀಳಿಗೆಗೆ ಮಹಾತ್ಮ ಸೃಷ್ಟಿಸಿದ್ದ ಮೌಲ್ಯಗಳ ಬಗ್ಗೆ ಹೇಳಿಕೆಯನ್ನು ನೀಡುತ್ತಿವೆ (ಕಾರ್ಟಿಯರ್-ಬ್ರೆಸ್ಸೋ ಫೋಟೋ). ಅಷ್ಟು ಜನರ ಆಕ್ರಂದನದ ನಡುವೆ ಶವ ಬೂದಿಯಾಗುತ್ತಿರುವ ದೃಶ್ಯ ಮನುಷ್ಯತ್ವವನ್ನು ಕೊಂದ ಉಗ್ರನ ಕಹಿ ನೆನಪನ್ನ ಜನಕ್ಕೆ ಮರುಕಳಿಸದೆ ಇರದು. ಇದೇ ಗಾಂಧಿ ಜಯಂತಿಗೆ ಎರಡು ದಿನದ ಹಿಂದೆ, ಅಂದರೆ ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತ ಅಲ್ಲ ಎಂಬ ತೀರ್ಪು ಕೊಟ್ಟು ಎಲ್ಲಾ ಆಪಾದಿತರನ್ನು ಖುಲಾಸೆ ಮಾಡಿದ ದಿನವೇ ಮತ್ತೊಂದು ಸುದ್ದಿ ಇಡೀ ದೇಶವನ್ನು ಬೆಚ್ಚಿಬೀಳಿಸಬೇಕಿತ್ತು. ಉತ್ತರ ಪ್ರದೇಶದ ಹಾಥ್ರಸ್‍ನಲ್ಲಿ ದಲಿತ ಬಾಲಕಿಯನ್ನು ಅಲ್ಲಿನ ಪ್ರಬಲ ಮತ್ತು ಶೋಷಕ ಜಾತಿಯ ಯುವಕರು ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ನಡುವೆಯೇ, ಅಲ್ಲಿನ ಆಡಳಿತ ವ್ಯವಸ್ಥೆ ಆ ಬಾಲಕಿಯ ಕುಟುಂಬ ವರ್ಗಕ್ಕೂ ಅವಕಾಶ ನೀಡದೆ ರಹಸ್ಯವಾಗಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿತ್ತು. ಇಂಡಿಯಾ ಟುಡೆ ಮಾಧ್ಯಮ ಸಂಸ್ಥೆಯ ಪತ್ರಕರ್ತೆಯೊಬ್ಬರು ಆ ಮಧ್ಯರಾತ್ರಿಯಲ್ಲಿ ಪೊಲೀಸರ ಬೆದರಿಕೆಗೆ ಜಗ್ಗದೆ ತೆಗೆದ ಆ ಫೋಟೋ – ಶೋಷಕ ಜಾತಿಯ ಯುವಕರಿಂದ ಮೊದಲು ದೌರ್ಜನ್ಯಕ್ಕೆ ಒಳಗಾಗಿ – ಕೊಲೆಯಾಗಿ, ನಂತರ ಆಡಳಿತ ವ್ಯವಸ್ಥೆಯಿಂದ ಎರಡನೇ ಬಾರಿ ದೌರ್ಜನ್ಯಕ್ಕೆ ಒಳಗಾಗಿ ಅನಾಥ ಶವವಾಗಿ ಸುಡಲ್ಪಡುತ್ತಿದ – ಆ ಶವಸಂಸ್ಕಾರದ ಫೋಟೋ ಗಾಂಧಿ ಶವಸಂಸ್ಕಾರದ ಫೋಟೋದಷ್ಟೇ ಸಶಕ್ತವಾದ ಹೇಳಿಕೆ ಕೊಡುತ್ತಿದೆ. ಆದರೆ ಇವತ್ತಿನ ಕಾಲಧರ್ಮದ ಧೋರಣೆಯನ್ನು ಪ್ರತಿನಿಧಿಸಿದೆ. ಇನ್ನೂ ಹೆಚ್ಚು ಆತಂಕಮಯವಾಗಿದೆ. ಈ ಫೋಟೋ ಕೂಡ, ದಲಿತ ಬಾಲಕಿಯನ್ನು ದಮನಿಸಿದ, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಹತ್ತಿರದವರಿಗೂ ಅವಕಾಶ ನೀಡದ ಆಡಳಿತ ವ್ಯವಸ್ಥೆಯ ಉಗ್ರತ್ವದ ಬಗ್ಗೆ ಮುಂದಿನ ಪೀಳಿಗೆಗಳಿಗೆ ನೆನಪು ಮಾಡಬಲ್ಲದೇ? ಈ ಸಂಗತಿ ಜನಸಾಮಾನ್ಯರಲ್ಲಿ ಆಕ್ರೋಶ ಹುಟ್ಟಿಸಿತೇ? ಅದರಿಂದ ಉತ್ತರಪ್ರದೇಶ ಆಡಳಿತ ಕೊಂಚವಾದರೂ ಬೆದರಿತೇ? ಸಂತ್ರಸ್ತೆಯ ಇಡೀ ಕುಟುಂಬವನ್ನು ಇನ್ನೂ ದಿಗ್ಭಂದನದಲ್ಲಿ ಇರಿಸಿ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಆಗುತ್ತಿರುವುದು ದಟ್ಟವಾಗಿ ಗೋಚರಿಸುತ್ತಿದೆಯಲ್ಲವೇ? ಗಾಯದ ಮೇಲೆ ಬರೆ ಎಳೆದಂತೆ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಶೋಷಕ ಜಾತಿಯ ಜನರು ಖಾಪ್ ಪಂಚಾಯಿತಿಗಳನ್ನು ನಡೆಸಿ, ಜಾತಿ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುವ ಸಂಗತಿಗಳು ನಡೆಯುತ್ತಿವೆ.

photo courtesy : India Today

ಇಲ್ಲಿಬರಲಿಸಂ, ಬಹುಸಂಖ್ಯಾತ ಕೋಮುವಾದ, ಧಾರ್ಮಿಕ ಮತ್ತು ಆರ್ಥಿಕ ಅಲ್ಪಸಂಖ್ಯಾತರನ್ನು ಕೃತಕವಾಗಿ ಕೇಡಿಗಳನ್ನಾಗಿಸಿ – ಅದನ್ನು ಪ್ರಚಾರ ಮಾಡಿ ಸಂಭ್ರಮಿಸುವ ಮನೋಭಾವ, ಪ್ರಾಚೀನದ ಪೊಳ್ಳು ಧಾರ್ಮಿಕ ವ್ಯವಸ್ಥೆಯಿಂದ ಸಿಕ್ಕಿರುವ ಪ್ರಿವಿಲೆಜ್ ಅನ್ನು ಬಿಟ್ಟುಕೊಡಲು ತಯಾರು ಆಗದ ಮನಸ್ಥಿತಿ, ಸಮತಾವಾದದ ಬಗ್ಗೆ ಕೆಟ್ಟ ಧೋರಣೆ, ಆರ್ಥಿಕ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಅದಕ್ಕೆ ಅವಕಾಶ ಕೊಡುವ ದೊಡ್ಡ ಕಾರ್ಪೋರೆಟ್‍ಗಳ ತಾಳಕ್ಕೆ ಕುಣಿಯುವ ಸಂಕಲ್ಪ – ಇವೆಲ್ಲಾ ಯಾವುದೇ ಅಂಕೆಯಿಲ್ಲದೆ ಬೆಳೆದಿರುವುದು ಇವತ್ತಿನ zeitgeist. ಕೆಡುಕಿನ ಲಕ್ಷಣಗಳು ಎಲ್ಲರಿಗೂ ತಿಳಿದಿವೆ. ಆ ಕಾಲದ ಜಾತ್ಯತೀತತೆಯ, ತಮ್ಮ ಜಾತಿಯ-ಧರ್ಮದ-ಜನಾಂಗದ ಪ್ರಿವಿಲೆಜ್ ತೊರೆದು ಸಮ ಸಮಾಜದ ಕನಸು ಕಾಣುವ, ದುರ್ಬಲ ಮತ್ತು ಅವಕಾಶವಂಚಿತ ಜನರ ಒಳಿತಿಗಾಗಿ ಕೆಲಸ ಮಾಡುವ, ದೌರ್ಜನ್ಯದ ಆಡಳಿತ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ zeitgeist ಈ ದೇಶದಲ್ಲಿ ಎಂದಾದರೂ ಇತ್ತೆ? ಅದು ಮತ್ತೆ ಮರುಕಳಿಸಬಹುದೇ? ಇಂದು ವ್ಯಾಕವಾಗಿರುವ zeitgeist ಅನ್ನು ಒಪ್ಪಿಕೊಳ್ಳದ, ಅದನ್ನು ಮುಖಾಮುಖಿಯಾಗಿ ಬದಲಿಗಳನ್ನು ಹುಡುಕುವಲ್ಲಿ ಬಹುಶಃ ವಿವೇಕದ ಸಮಾಜವನ್ನು ಮರುಕಟ್ಟುವ ಯಶಸ್ಸು ಅಡಗಿದೆ.

ಈ ಎಲ್ಲಾ ನಿರಾಶವಾದದ ನಡುವೆ ಭರವಸೆಯ ಕಿರಣಗಳು ಇನ್ನೂ ಅಲ್ಲಲ್ಲಿ ಉಳಿದಿವೆ. ಈ ಸರ್ವಾಧಿಕಾರಿ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿ ‘ದ ಕಾಕ್ ಇಸ್ ದ ಕಲ್ಪ್ರಿಟ್’ (ಪ್ರತಿ ಪೂವಂಕೋಳಿ) ಎಂಬ ನೀಳ್ಗತೆ ಬರೆದ ಮಲಯಾಳಂ ಸಾಹಿತಿ ಉನ್ನಿ. ಆರ್ ಇದ್ದಾರೆ. ಮಲಯಾಳಂನಲ್ಲಿ ಆ ಪುಸ್ತಕ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಕೊಂಡು ಓದಿದವರಿದ್ದಾರೆ. ಕೇಂದ್ರ ಸರ್ಕಾರ ರೈತ, ಕಾರ್ಮಿಕ ಮತ್ತು ಜನಸಾಮಾನ್ಯರ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿರುವುದರ ಬಗ್ಗೆ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹಲವು ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕ್ಯಹೋರಾಟ ನಡೆಸಿವೆ. ಈ ಹೋರಾಟವನ್ನು ಕವರ್ ಮಾಡುವಂತೆ ಯಾತಾಸ್ಥಿತಿವಾದದ ಪ್ರತಿಪಾದಕ ಮಾಧ್ಯಮಗಳ ಮೇಲೆ ಒತ್ತಡ ಹಾಕಲು ಸಫಲವಾಗಿವೆ. ಉತ್ತರ ಪ್ರದೇಶದ ಸರ್ಕಾರ ಸೃಷ್ಟಿಸಿರುವ ರಿಪ್ರೆಸಿವ್ ವಾತಾವರಣದ ನಡುವೆಯೂ ಕೆಲವೇ ಕೆಲವು ಪತ್ರಕರ್ತೆಯರಾದರೂ ಪೊಲೀಸರಿಗೆ ಸವಾಲೆಸೆದು ರೇಪ್ ಸಂತ್ರಸ್ತೆಯ ಕುಟುಂಬದವರ ಸಂಪರ್ಕ ಸಾಧಿಸಲು ಯಶಸ್ವಿಯಾಗಿದ್ದಾರೆ. ಪೊಲೀಸರ ಎದುರೇ ಒಬ್ಬಂಟಿಯಾಗಿ ಧರಣಿ ಕುಳಿತವರಿದ್ದಾರೆ. ವಿರೋಧ ಪಕ್ಷದ ಮುಖಂಡರಾದ ಪ್ರಿಯಾಂಕ ಮತ್ತು ರಾಹುಲ್ ಗಾಂಧಿಯವರನ್ನು ಮೊದಲ ಬಾರಿಗೆ ಪೊಲೀಸರು ತಡೆದು ಬಂಧಿಸಿ ದೆಹಲಿಗೆ ವಾಪಸ್ ಕಳಿಸಿದ್ದರೂ ವಿಚಲಿತರಾಗದೆ ಮತ್ತೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಆಗಿ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶದ ಯುವ ರಾಜಕಾರಣಿ ಚಂದ್ರಶೇಖರ್ ಆಜಾದ್ ನಿಷೇಧದ ನಡುವೆಯೂ ಐದಾರು ಕಿಲೋಮೀಟರ್ ದೂರ ನಡೆದು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಆಡಳಿತ ವ್ಯವಸ್ಥೆಯ ದೌರ್ಜನ್ಯಕ್ಕೆ ಸವಾಲೆಸಿದಿದ್ದಾರೆ. ಟ್ವಿಟ್ಟರ್ – ಫೇಸ್‍ಬುಕ್ – ಇಂಸ್ಟಾಗ್ರಾಮ್‍ಗಳು ಸಮಾಜದಲ್ಲಿ ಸೃಷ್ಟಿ ಮಾಡುತ್ತಿರುವ ಒಡಕಿನ ಧ್ರುವೀಕರಣಕ್ಕೆ ಬೇಸತ್ತು ಆ ಸಾಮಾಜಿಕ ಮಾಧ್ಯಮಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದ ತಂತ್ರಜ್ಞರು, ಇಂಜಿನಿಯರ್ ಗಳು ಹೊರನಡೆದು ‘ಸೋಶಿಯಲ್ ಡಿಲೆಮಾ’ ತರಹದ ಸಾಕ್ಷ್ಯಚಿತ್ರಗಳಲ್ಲಿ ತಾವೆಸಗಿದ ತಪ್ಪನ್ನು ನಿವೇದಿಸಿಕೊಂಡು ಸುಧಾರಣೆಗೆ ಮುಂದಾಗಲು ಅಲೋಚಿಸುತ್ತಿದ್ದಾರೆ – ಪ್ರೇರೇಪಿಸುತ್ತಿದ್ದಾರೆ.

ಇಂತಹ ಪ್ರತಿರೋಧಗಳು- ಪ್ರತಿಚಿಂತನೆಗಳು ನಾಳೆ ನಾಡಿದ್ದೇ ಬದಲಾವಣೆ ತರದೇ ಹೋದರೂ, ಬುದ್ಧ – ಬಸವ – ಗಾಂಧಿ – ಅಂಬೇಡ್ಕರ್ – ಟ್ಯಾಗೋರ್ – ನೆಹರೂ – ಕುವೆಂಪು ಇಂತಹ ಮಾನವತಾವಾದಿಗಳು ಕಟ್ಟಿಕೊಟ್ಟಿದ್ದ ಅತ್ಯುತ್ತಮ ಚಿಂತನೆಗಳನ್ನು ಸಿಂಥೆಸೈಸ್ ಮಾಡಿದ ಅಲೋಚನೆಗಳು ಜನರನ್ನು ಪ್ರೇರೇಪಿಸುವ ದಿನಗಳನ್ನು ಪ್ರತಿನಿಧಿಸುವ zeitgeist ಮೊಮೆಂಟ್‍ಗಳ ಬಗ್ಗೆ ಚರ್ಚಿಸುವ ದಿನಗಳ ಬರವನ್ನು ತಡವಾಗಿಯಾದರೂ ನಿರೀಕ್ಷಿಸಬಹುದೇನೋ!


ಇದನ್ನೂ ಓದಿ: ಹತ್ರಾಸ್‌: ಬಂಧಿತ ಪತ್ರಕರ್ತನ ಮೇಲೆ “ಭಯೋತ್ಪಾದನೆ ನಿಗ್ರಹ” ಕಾನೂನಿನಡಿಯಲ್ಲಿ FIR!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...