Homeಅಂಕಣಗಳುಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

ಈ ಯುಗಧರ್ಮದ – zeitgeistಗೆ ಪ್ರತಿಚಿಂತನೆಗಳನ್ನು ಬೆಳೆಸೋಣ!

- Advertisement -
- Advertisement -

29 ಸೆಪ್ಟೆಂಬರ್ ಇದೇ ಹೊತ್ತಿಗೆ ಗಾಂಧಿ ಸಂಚಿಕೆಯ ಕೆಲಸವನ್ನು ಮುಗಿಸಿದ್ದೆವು. ಹದಿನಾರು ಪುಟಗಳ ನಮ್ಮ ಪುಟ್ಟ ವಾರಪತ್ರಿಕೆಯಲ್ಲಿ ಸುಮಾರು ಹತ್ತು ಪುಟಗಳಷ್ಟು ಗಾಂಧಿ ನೆನಪಿಗೆ ಮೀಸಲಿಟ್ಟಿದ್ದೆವು. ಇಂದಿನ ಕಾಲಧರ್ಮಕ್ಕೆ ಗಾಂಧಿ ಚಿಂತನೆಗಳ ಪ್ರಸ್ತುತತೆಯನ್ನು ಚರ್ಚೆ ಮಾಡುವುದು ಅದರ ಉದ್ದೇಶ ಆಗಿತ್ತು. ವಿಶ್ವದೆಲ್ಲೆಡೆ ಬಿಕ್ಕಟ್ಟು ಎದುರಿಸುತ್ತಿರುವ ಸ್ಟೇಟ್ ಅಥವಾ ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಪರಿಕಲ್ಪನೆಯ ಬಗ್ಗೆ, ಆರ್ಥಿಕ ವ್ಯವಸ್ಥೆ ಬಗ್ಗೆ ಗಾಂಧಿ ಅವರ ಚಿಂತನೆಗಳು ಇಂದಿಗೆ ಹೊಸ ಹೊಳಹುಗಳನ್ನು ನೀಡಬಲ್ಲವೇ ಎಂಬುದರ ಬಗ್ಗೆ ನ್ಯಾಯಪಥದ ಹಲವು ಲೇಖಕರು ಚರ್ಚಿಸಿದ್ದರು.

ಗಾಂಧಿ ಚಿಂತನೆಗಳ ಬಗ್ಗೆ ದೇಶದೆಲ್ಲೆಡೆ ನಡೆಯುವ ಇಂತಹ ಹುಡುಕಾಟದಲ್ಲಿ ನಾವೂ ಭಾಗಿಯಾಗಿದ್ದ ಸಮಯದಲ್ಲಿ ಆ ದಿನದಿಂದ ಮುಂದಿನ ಒಂದು ವಾರ ನಡೆದ ಸಂಗತಿಗಳು ಇವತ್ತಿನ ಯುಗಧರ್ಮದ ಬಗ್ಗೆ ಇನ್ನಷ್ಟು ಆತಂಕಕ್ಕೀಡಾಗುವಂತೆ ಮಾಡಿವೆ. zeitgeist ಎಂಬ ಪದ ಈ ದಿನಗಳಲ್ಲಿ ಬಹಳ ಪ್ರಚಲಿತದಲ್ಲಿ ಇದೆ. ಶಬ್ದಕೋಶದ ಪ್ರಕಾರ ಒಂದು ನಿರ್ದಿಷ್ಟ ಕಾಲದ ಚಿಂತನೆಗಳು ಮತ್ತು ನಂಬಿಕೆಗಳ ಅನುಗುಣವಾಗಿ ಜನರು ಒಟ್ಟಾರೆಯಾಗಿ ಪ್ರತಿನಿಧಿಸುವ ಮನೋಧರ್ಮ. ಈ zeitgeist ಮೇಲೆ ಆರೋಪಿಸಿ ಅದರ ಹಿಂದೆ ಅವಿತು ಆತಂಕಕ್ಕೀಡುಮಾಡಿದ ಆ ಸಂಗತಿಗಳನ್ನು ಉಪೇಕ್ಷೆ ಮಾಡಿ ಸುಮ್ಮನಿದ್ದುಬಿಡಬಹುದೇ?

photo courtesy : Het Parool

ಗಾಂಧಿ ಜಯಂತಿಗೆ ಇನ್ನು ಎರಡು ದಿನ ಇದೆ ಎನ್ನುವಾಗ ಹೊರಬಿದ್ದ ಬಾಬ್ರಿ ಮಸೀದಿ ಧ್ವಂಸದ ಕ್ರಿಮಿನಲ್ ಪ್ರಕರಣದ ತೀರ್ಪು ಸಂಘಪರಿವಾರ ಮತ್ತು ಬಿಜೆಪಿ ಪಕ್ಷಗಳು ತಾವು ಬಹು ದಿನಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ತಿರುಚಿದ ಇತಿಹಾಸಕ್ಕೆ ಸಿಕ್ಕ ಜಯ ಎಂಬಂತೆ ವಿಜಯೋತ್ಸವ ಆಚರಿಸುವುದರೊಂದಿಗೆ ತಣ್ಣಗೆ ಕಳೆದುಹೋಯಿತು. ಬಾಬ್ರಿ ಮಸೀದಿ ಧ್ವಂಸ ಮಾಡುವುದರ ಹಿಂದೆ ಇದ್ದ ಸಂಚಿನ ಬಗ್ಗೆ ಇದ್ದ ಎಷ್ಟೋ ಲಕ್ಷ ಪುಟಗಟ್ಟಲೆ ದಾಖಲೆಗಳು, ವಿಡಿಯೋ ದೃಶ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆದವು. ಈ ತೀರ್ಪಿನ ನಂತರ ನಮ್ಮ ಮಾಧ್ಯಮಗಳಲ್ಲಿ ಅಂತಹ ನಿರೀಕ್ಷಿತ ಆಕ್ರೋಶ ಏನಾದರು ಕಂಡಿತೇ? ಲಂಕೇಶ್, ಪುತಿನರಂತಹ ಸಾಹಿತಿಗಳು ಒಂದು ಧರ್ಮದ ಪ್ರಾರ್ಥನಾ ಮಂದಿರ ಉರುಳಿಸುವುದರ ವಿರುದ್ಧ ಕನ್ನಡ ಮನಸ್ಸುಗಳಿಗೆ ತಿಳಿಸಿಕೊಟ್ಟಿದ್ದ ವಿವೇಕವನ್ನು ಇಂದು ಚಾಲ್ತಿಯಲ್ಲಿರುವ ಅದೆಷ್ಟು ಜನಪ್ರಿಯ ಸಾಹಿತಿಗಳು- ಕಲಾವಿದರು ಈ ಸಮಯದಲ್ಲಿ ನೆನಪಿಸಿಕೊಂಡರು? ಅವರಲ್ಲಿ ಅದೆಷ್ಟು ಜನ ತಮ್ಮ ಪ್ರಭಾವ ಬಳಸಿಕೊಂಡು ಸಾಮಾನ್ಯ ಜನತೆಗೆ ಇದರ ಬಗ್ಗೆ ತಿಳಿವು ಮೂಡಿಸಲು ಪ್ರಯತ್ನ ಮಾಡಿದರು? ಇದು zeitgeist ಮೊಮೆಂಟ್ ಎಂದು ಆಲಕ್ಷಿಸಬೇಕೇ? ಸುಪ್ರೀಂ ಕೋರ್ಟ್ ಮತ್ತು ಲಿಬರ್ಹಾನ್ ಆಯೋಗ ಈ ಹಿಂದೆಯೇ ಹೇಳಿರುವಂತೆ ಮಸೀದಿ ಉರುಳಿಸುವುದು ಪೂರ್ವನಿಯೋಜಿತ ಸಂಚಾಗಿತ್ತು ಎಂಬುದನ್ನು ನೆನಪಿಸಿ ಇದರ ವಿರುದ್ಧ ಧ್ವನಿಯೆತ್ತುವಂತೆ ಮತ್ತು ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಒತ್ತಡ ತರಲು ಜನಾಂದೋಲನ ಸೃಷ್ಟಿಸಲು ಸಾಧ್ಯವಾಗುವ ಕಾಲದಲ್ಲಿ ನಾವು ಬದುಕಿದ್ದೇವೆಯೇ?

ಅಕ್ಟೋಬರ್ ಎರಡು – ಗಾಂಧಿ ಜಯಂತಿ ದಿನ. ಗಾಂಧಿ ಜಯಂತಿಯಂದು, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವೂ ಆಗಿರುವುದರಿಂದ, ಅವರನ್ನು ಗಾಂಧಿ ವಿರೋಧಿಯಾಗಿ ಚಿತ್ರಿಸಿ, ಶಾಸ್ತ್ರಿ ಅವರ ಜನ್ಮದಿನವನ್ನು ನಾವು ದೊಡ್ಡದಾಗಿ ಆಚರಿಸಬೇಕು ಎಂದು ತಮ್ಮ ಗಾಂಧಿ ವಿರೋಧಿತನವನ್ನು – ಗೋಡ್ಸೆ ಪ್ರೀತಿಯನ್ನು ನಾಜೂಕಾಗಿ ಪ್ರದರ್ಶನ ಮಾಡುತ್ತಿದ್ದ ಸಂಘಪರಿವಾರ, ಈಗ ತಮ್ಮ ನೆಚ್ಚಿನ ಪಕ್ಷ ಅಧಿಕಾರದಲ್ಲಿ ಇರುವಾಗ ಮಹಾತ್ಮ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಪ್ರೀತಿಯನ್ನು ಕದ್ದುಮುಚ್ಚಿ ಪ್ರದರ್ಶನ ಮಾಡುವ ಹಂತವನ್ನು ಮೀರಿ ಬೆಳೆದಿದೆ. ಟ್ವಿಟ್ಟರ್ ನಲ್ಲಿ ‘#ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಹಲವು ಗಂಟೆಗಳ ಕಾಲ ಅದು ಟ್ರೆಂಡಿಂಗ್‍ನಲ್ಲಿ ಇರುವಂತೆ ಸಂಘ ಪರಿವಾರದ ಸದಸ್ಯರು ನೋಡಿಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷದ ಸಂಸದರಾದ ಸಾಕ್ಷಿ ಮಹರಾಜ್, ಸಾಧ್ವಿ ಪ್ರಾಗ್ಯ ಮುಂತಾದವರು ಬಹಿರಂಗವಾಗಿಯೇ ಗೋಡ್ಸೆಯನ್ನು ಹೊಗಳಿ ಕೊಂಡಾಡಿದ್ದಾರೆ. ಅವರು ಇಂದಿಗೂ ಬಿಜೆಪಿ ಸಂಸದರಾಗಿ ಮುಲಾಜಿಲ್ಲದೆ ಮುಂದುವರೆದಿದ್ದಾರೆ. ಹೋದ ವರ್ಷದ ಗಾಂಧಿ ಜಯಂತಿಯ ದಿನ ಗೋಡ್ಸೆ ಪರವಾಗಿ ಮೂಡಿದ್ದ ಟ್ವೀಟ್‍ಗಳ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಟ್ರೆಂಡ್ ಇನ್ನೂ ದೊಡ್ಡದಾಗಿ ಬೆಳೆದಿದೆ. ಇದರಿಂದ ಉತ್ತೇಜಿತರಾಗಿ ಹಿಂದೂ ಮಹಾಸಭಾನವರು ಗೋಡ್ಸೆಗಾಗಿಯೇ ಒಂದು ನೂತನ ಯುಟ್ಯೂಬ್ ಚಾನೆಲ್ ತೆರೆಯಲು ಮುಂದಾಗಿರುವ ಸುದ್ದಿ ಕೂಡ ಬಂದಿದೆ. ಗೋಡ್ಸೆಯನ್ನು ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ ಸಂಭ್ರಮಿಸುವ ಹೊಸ ಸಹಜ ಮನೋಧರ್ಮವನ್ನು zeitgeist ಎಂದು ಎಣಿಸಿದರೂ ಕೈಕಟ್ಟಿ ಕೂರುವ ಆಯ್ಕೆ ಒಂದೇ ಉಳಿದಿರುವುದಾ? ‘ತಟ್ಟು ಚಪ್ಪಾಳೆ ಪುಟ್ಟ ಮಗು ಗಾಂಧಿಗಿಂದು ಜನ್ಮದಿನ’ ಎಂಬ ಸಾಲುಗಳು ಮತ್ತೆ ಎಳೆಯ ಮಕ್ಕಳ ನಡುವೆ ರಿಂಗಣಿಸಿ, ಯುವಕರಿಗೆ ಗೋಡ್ಸೆಯ ಚಿಂತನೆಗಳ ಅಪಾಯವನ್ನು ತಿಳಿಯುವಂತೆ ಮಾಡಿ, ವಿಶಾಲವಾಗಿ ಹರಡಿ ಟ್ರೆಂಡ್ ಮಾಡುವುದು ಹೇಗೆ?

ಮತಾಂಧ ಉಗ್ರಗಾಮಿ ಗಾಂಧಿಯವರನ್ನು ಕೊಂದ ನಂತರದ, ಮಹಾತ್ಮ ಗಾಂಧಿಯವರ ಶವದ ಮೆರವಣಿಗೆಯಲ್ಲಿ ಅಂತಿಮ ನಮನ ಸಲ್ಲಿಸಲು ನೆರೆದಿದ್ದ ಅಪಾರ ಜನಸ್ತೋಮ ಹಾಗೂ ಸಾಗರದಂತೆ ನೆರೆದಿರುವ ಜನಸಂಖ್ಯೆಯ ಮಧ್ಯೆ ನಡೆಯುತ್ತಿರುವ ಗಾಂಧಿಯವರ ಅಂತಿಮ ಶವ ಸಂಸ್ಕಾರದ ಫೋಟೋಗಳು ಪೀಳಿಗೆಯಿಂದ ಪೀಳಿಗೆಗೆ ಮಹಾತ್ಮ ಸೃಷ್ಟಿಸಿದ್ದ ಮೌಲ್ಯಗಳ ಬಗ್ಗೆ ಹೇಳಿಕೆಯನ್ನು ನೀಡುತ್ತಿವೆ (ಕಾರ್ಟಿಯರ್-ಬ್ರೆಸ್ಸೋ ಫೋಟೋ). ಅಷ್ಟು ಜನರ ಆಕ್ರಂದನದ ನಡುವೆ ಶವ ಬೂದಿಯಾಗುತ್ತಿರುವ ದೃಶ್ಯ ಮನುಷ್ಯತ್ವವನ್ನು ಕೊಂದ ಉಗ್ರನ ಕಹಿ ನೆನಪನ್ನ ಜನಕ್ಕೆ ಮರುಕಳಿಸದೆ ಇರದು. ಇದೇ ಗಾಂಧಿ ಜಯಂತಿಗೆ ಎರಡು ದಿನದ ಹಿಂದೆ, ಅಂದರೆ ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತ ಅಲ್ಲ ಎಂಬ ತೀರ್ಪು ಕೊಟ್ಟು ಎಲ್ಲಾ ಆಪಾದಿತರನ್ನು ಖುಲಾಸೆ ಮಾಡಿದ ದಿನವೇ ಮತ್ತೊಂದು ಸುದ್ದಿ ಇಡೀ ದೇಶವನ್ನು ಬೆಚ್ಚಿಬೀಳಿಸಬೇಕಿತ್ತು. ಉತ್ತರ ಪ್ರದೇಶದ ಹಾಥ್ರಸ್‍ನಲ್ಲಿ ದಲಿತ ಬಾಲಕಿಯನ್ನು ಅಲ್ಲಿನ ಪ್ರಬಲ ಮತ್ತು ಶೋಷಕ ಜಾತಿಯ ಯುವಕರು ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ನಡುವೆಯೇ, ಅಲ್ಲಿನ ಆಡಳಿತ ವ್ಯವಸ್ಥೆ ಆ ಬಾಲಕಿಯ ಕುಟುಂಬ ವರ್ಗಕ್ಕೂ ಅವಕಾಶ ನೀಡದೆ ರಹಸ್ಯವಾಗಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿತ್ತು. ಇಂಡಿಯಾ ಟುಡೆ ಮಾಧ್ಯಮ ಸಂಸ್ಥೆಯ ಪತ್ರಕರ್ತೆಯೊಬ್ಬರು ಆ ಮಧ್ಯರಾತ್ರಿಯಲ್ಲಿ ಪೊಲೀಸರ ಬೆದರಿಕೆಗೆ ಜಗ್ಗದೆ ತೆಗೆದ ಆ ಫೋಟೋ – ಶೋಷಕ ಜಾತಿಯ ಯುವಕರಿಂದ ಮೊದಲು ದೌರ್ಜನ್ಯಕ್ಕೆ ಒಳಗಾಗಿ – ಕೊಲೆಯಾಗಿ, ನಂತರ ಆಡಳಿತ ವ್ಯವಸ್ಥೆಯಿಂದ ಎರಡನೇ ಬಾರಿ ದೌರ್ಜನ್ಯಕ್ಕೆ ಒಳಗಾಗಿ ಅನಾಥ ಶವವಾಗಿ ಸುಡಲ್ಪಡುತ್ತಿದ – ಆ ಶವಸಂಸ್ಕಾರದ ಫೋಟೋ ಗಾಂಧಿ ಶವಸಂಸ್ಕಾರದ ಫೋಟೋದಷ್ಟೇ ಸಶಕ್ತವಾದ ಹೇಳಿಕೆ ಕೊಡುತ್ತಿದೆ. ಆದರೆ ಇವತ್ತಿನ ಕಾಲಧರ್ಮದ ಧೋರಣೆಯನ್ನು ಪ್ರತಿನಿಧಿಸಿದೆ. ಇನ್ನೂ ಹೆಚ್ಚು ಆತಂಕಮಯವಾಗಿದೆ. ಈ ಫೋಟೋ ಕೂಡ, ದಲಿತ ಬಾಲಕಿಯನ್ನು ದಮನಿಸಿದ, ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಹತ್ತಿರದವರಿಗೂ ಅವಕಾಶ ನೀಡದ ಆಡಳಿತ ವ್ಯವಸ್ಥೆಯ ಉಗ್ರತ್ವದ ಬಗ್ಗೆ ಮುಂದಿನ ಪೀಳಿಗೆಗಳಿಗೆ ನೆನಪು ಮಾಡಬಲ್ಲದೇ? ಈ ಸಂಗತಿ ಜನಸಾಮಾನ್ಯರಲ್ಲಿ ಆಕ್ರೋಶ ಹುಟ್ಟಿಸಿತೇ? ಅದರಿಂದ ಉತ್ತರಪ್ರದೇಶ ಆಡಳಿತ ಕೊಂಚವಾದರೂ ಬೆದರಿತೇ? ಸಂತ್ರಸ್ತೆಯ ಇಡೀ ಕುಟುಂಬವನ್ನು ಇನ್ನೂ ದಿಗ್ಭಂದನದಲ್ಲಿ ಇರಿಸಿ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಆಗುತ್ತಿರುವುದು ದಟ್ಟವಾಗಿ ಗೋಚರಿಸುತ್ತಿದೆಯಲ್ಲವೇ? ಗಾಯದ ಮೇಲೆ ಬರೆ ಎಳೆದಂತೆ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಶೋಷಕ ಜಾತಿಯ ಜನರು ಖಾಪ್ ಪಂಚಾಯಿತಿಗಳನ್ನು ನಡೆಸಿ, ಜಾತಿ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುವ ಸಂಗತಿಗಳು ನಡೆಯುತ್ತಿವೆ.

photo courtesy : India Today

ಇಲ್ಲಿಬರಲಿಸಂ, ಬಹುಸಂಖ್ಯಾತ ಕೋಮುವಾದ, ಧಾರ್ಮಿಕ ಮತ್ತು ಆರ್ಥಿಕ ಅಲ್ಪಸಂಖ್ಯಾತರನ್ನು ಕೃತಕವಾಗಿ ಕೇಡಿಗಳನ್ನಾಗಿಸಿ – ಅದನ್ನು ಪ್ರಚಾರ ಮಾಡಿ ಸಂಭ್ರಮಿಸುವ ಮನೋಭಾವ, ಪ್ರಾಚೀನದ ಪೊಳ್ಳು ಧಾರ್ಮಿಕ ವ್ಯವಸ್ಥೆಯಿಂದ ಸಿಕ್ಕಿರುವ ಪ್ರಿವಿಲೆಜ್ ಅನ್ನು ಬಿಟ್ಟುಕೊಡಲು ತಯಾರು ಆಗದ ಮನಸ್ಥಿತಿ, ಸಮತಾವಾದದ ಬಗ್ಗೆ ಕೆಟ್ಟ ಧೋರಣೆ, ಆರ್ಥಿಕ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಅದಕ್ಕೆ ಅವಕಾಶ ಕೊಡುವ ದೊಡ್ಡ ಕಾರ್ಪೋರೆಟ್‍ಗಳ ತಾಳಕ್ಕೆ ಕುಣಿಯುವ ಸಂಕಲ್ಪ – ಇವೆಲ್ಲಾ ಯಾವುದೇ ಅಂಕೆಯಿಲ್ಲದೆ ಬೆಳೆದಿರುವುದು ಇವತ್ತಿನ zeitgeist. ಕೆಡುಕಿನ ಲಕ್ಷಣಗಳು ಎಲ್ಲರಿಗೂ ತಿಳಿದಿವೆ. ಆ ಕಾಲದ ಜಾತ್ಯತೀತತೆಯ, ತಮ್ಮ ಜಾತಿಯ-ಧರ್ಮದ-ಜನಾಂಗದ ಪ್ರಿವಿಲೆಜ್ ತೊರೆದು ಸಮ ಸಮಾಜದ ಕನಸು ಕಾಣುವ, ದುರ್ಬಲ ಮತ್ತು ಅವಕಾಶವಂಚಿತ ಜನರ ಒಳಿತಿಗಾಗಿ ಕೆಲಸ ಮಾಡುವ, ದೌರ್ಜನ್ಯದ ಆಡಳಿತ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ zeitgeist ಈ ದೇಶದಲ್ಲಿ ಎಂದಾದರೂ ಇತ್ತೆ? ಅದು ಮತ್ತೆ ಮರುಕಳಿಸಬಹುದೇ? ಇಂದು ವ್ಯಾಕವಾಗಿರುವ zeitgeist ಅನ್ನು ಒಪ್ಪಿಕೊಳ್ಳದ, ಅದನ್ನು ಮುಖಾಮುಖಿಯಾಗಿ ಬದಲಿಗಳನ್ನು ಹುಡುಕುವಲ್ಲಿ ಬಹುಶಃ ವಿವೇಕದ ಸಮಾಜವನ್ನು ಮರುಕಟ್ಟುವ ಯಶಸ್ಸು ಅಡಗಿದೆ.

ಈ ಎಲ್ಲಾ ನಿರಾಶವಾದದ ನಡುವೆ ಭರವಸೆಯ ಕಿರಣಗಳು ಇನ್ನೂ ಅಲ್ಲಲ್ಲಿ ಉಳಿದಿವೆ. ಈ ಸರ್ವಾಧಿಕಾರಿ ಪರಿಸ್ಥಿತಿಯನ್ನು ವ್ಯಂಗ್ಯ ಮಾಡಿ ‘ದ ಕಾಕ್ ಇಸ್ ದ ಕಲ್ಪ್ರಿಟ್’ (ಪ್ರತಿ ಪೂವಂಕೋಳಿ) ಎಂಬ ನೀಳ್ಗತೆ ಬರೆದ ಮಲಯಾಳಂ ಸಾಹಿತಿ ಉನ್ನಿ. ಆರ್ ಇದ್ದಾರೆ. ಮಲಯಾಳಂನಲ್ಲಿ ಆ ಪುಸ್ತಕ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಕೊಂಡು ಓದಿದವರಿದ್ದಾರೆ. ಕೇಂದ್ರ ಸರ್ಕಾರ ರೈತ, ಕಾರ್ಮಿಕ ಮತ್ತು ಜನಸಾಮಾನ್ಯರ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿರುವುದರ ಬಗ್ಗೆ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಹಲವು ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಐಕ್ಯಹೋರಾಟ ನಡೆಸಿವೆ. ಈ ಹೋರಾಟವನ್ನು ಕವರ್ ಮಾಡುವಂತೆ ಯಾತಾಸ್ಥಿತಿವಾದದ ಪ್ರತಿಪಾದಕ ಮಾಧ್ಯಮಗಳ ಮೇಲೆ ಒತ್ತಡ ಹಾಕಲು ಸಫಲವಾಗಿವೆ. ಉತ್ತರ ಪ್ರದೇಶದ ಸರ್ಕಾರ ಸೃಷ್ಟಿಸಿರುವ ರಿಪ್ರೆಸಿವ್ ವಾತಾವರಣದ ನಡುವೆಯೂ ಕೆಲವೇ ಕೆಲವು ಪತ್ರಕರ್ತೆಯರಾದರೂ ಪೊಲೀಸರಿಗೆ ಸವಾಲೆಸೆದು ರೇಪ್ ಸಂತ್ರಸ್ತೆಯ ಕುಟುಂಬದವರ ಸಂಪರ್ಕ ಸಾಧಿಸಲು ಯಶಸ್ವಿಯಾಗಿದ್ದಾರೆ. ಪೊಲೀಸರ ಎದುರೇ ಒಬ್ಬಂಟಿಯಾಗಿ ಧರಣಿ ಕುಳಿತವರಿದ್ದಾರೆ. ವಿರೋಧ ಪಕ್ಷದ ಮುಖಂಡರಾದ ಪ್ರಿಯಾಂಕ ಮತ್ತು ರಾಹುಲ್ ಗಾಂಧಿಯವರನ್ನು ಮೊದಲ ಬಾರಿಗೆ ಪೊಲೀಸರು ತಡೆದು ಬಂಧಿಸಿ ದೆಹಲಿಗೆ ವಾಪಸ್ ಕಳಿಸಿದ್ದರೂ ವಿಚಲಿತರಾಗದೆ ಮತ್ತೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಆಗಿ ಸಾಂತ್ವನ ಹೇಳಿದ್ದಾರೆ. ಉತ್ತರ ಪ್ರದೇಶದ ಯುವ ರಾಜಕಾರಣಿ ಚಂದ್ರಶೇಖರ್ ಆಜಾದ್ ನಿಷೇಧದ ನಡುವೆಯೂ ಐದಾರು ಕಿಲೋಮೀಟರ್ ದೂರ ನಡೆದು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಆಡಳಿತ ವ್ಯವಸ್ಥೆಯ ದೌರ್ಜನ್ಯಕ್ಕೆ ಸವಾಲೆಸಿದಿದ್ದಾರೆ. ಟ್ವಿಟ್ಟರ್ – ಫೇಸ್‍ಬುಕ್ – ಇಂಸ್ಟಾಗ್ರಾಮ್‍ಗಳು ಸಮಾಜದಲ್ಲಿ ಸೃಷ್ಟಿ ಮಾಡುತ್ತಿರುವ ಒಡಕಿನ ಧ್ರುವೀಕರಣಕ್ಕೆ ಬೇಸತ್ತು ಆ ಸಾಮಾಜಿಕ ಮಾಧ್ಯಮಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದ ತಂತ್ರಜ್ಞರು, ಇಂಜಿನಿಯರ್ ಗಳು ಹೊರನಡೆದು ‘ಸೋಶಿಯಲ್ ಡಿಲೆಮಾ’ ತರಹದ ಸಾಕ್ಷ್ಯಚಿತ್ರಗಳಲ್ಲಿ ತಾವೆಸಗಿದ ತಪ್ಪನ್ನು ನಿವೇದಿಸಿಕೊಂಡು ಸುಧಾರಣೆಗೆ ಮುಂದಾಗಲು ಅಲೋಚಿಸುತ್ತಿದ್ದಾರೆ – ಪ್ರೇರೇಪಿಸುತ್ತಿದ್ದಾರೆ.

ಇಂತಹ ಪ್ರತಿರೋಧಗಳು- ಪ್ರತಿಚಿಂತನೆಗಳು ನಾಳೆ ನಾಡಿದ್ದೇ ಬದಲಾವಣೆ ತರದೇ ಹೋದರೂ, ಬುದ್ಧ – ಬಸವ – ಗಾಂಧಿ – ಅಂಬೇಡ್ಕರ್ – ಟ್ಯಾಗೋರ್ – ನೆಹರೂ – ಕುವೆಂಪು ಇಂತಹ ಮಾನವತಾವಾದಿಗಳು ಕಟ್ಟಿಕೊಟ್ಟಿದ್ದ ಅತ್ಯುತ್ತಮ ಚಿಂತನೆಗಳನ್ನು ಸಿಂಥೆಸೈಸ್ ಮಾಡಿದ ಅಲೋಚನೆಗಳು ಜನರನ್ನು ಪ್ರೇರೇಪಿಸುವ ದಿನಗಳನ್ನು ಪ್ರತಿನಿಧಿಸುವ zeitgeist ಮೊಮೆಂಟ್‍ಗಳ ಬಗ್ಗೆ ಚರ್ಚಿಸುವ ದಿನಗಳ ಬರವನ್ನು ತಡವಾಗಿಯಾದರೂ ನಿರೀಕ್ಷಿಸಬಹುದೇನೋ!


ಇದನ್ನೂ ಓದಿ: ಹತ್ರಾಸ್‌: ಬಂಧಿತ ಪತ್ರಕರ್ತನ ಮೇಲೆ “ಭಯೋತ್ಪಾದನೆ ನಿಗ್ರಹ” ಕಾನೂನಿನಡಿಯಲ್ಲಿ FIR!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...