“ಶಾಹೀನ್ ಬಾಗ್ನ ದಾದಿ” ಎಂದೆ ಪ್ರೀತಿಯಿಂದ ಕರೆಯಲ್ಪಡುವ ಸಿಎಎ ವಿರುದ್ದದ ಹೋರಾಟದ ಸ್ಪೂರ್ತಿಯಾಗಿರುವ 82 ವರ್ಷದ ಬಿಲ್ಕಿಸ್ ಬಾನು ಅವರ ಬಗ್ಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ನೀಡಿರುವ ಹೇಳಿಕೆಗೆ ಕಾನೂನು ನೋಟಿಸ್ ನೀಡಲಾಗಿದೆ.
ದೆಹಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಟೈಮ್ ನಿಯತಕಾಲಿಕೆಯ 2020 ರ 100 ಅತ್ಯಂತ ಪ್ರಭಾವಶಾಲಿ ಜನರ ಪಟ್ಟಿಯಲ್ಲಿ ಬಿಲ್ಕೀಸ್ ಬಾನು ಸ್ಥಾನ ಪಡೆದಿದ್ದಾರೆ. ಅಲ್ಲದೆ ತೀರಾ ಇತ್ತೀಚೆಗೆ ಬಿಬಿಸಿಯ ವರ್ಷದ ಪ್ರಭಾವಶಾಲಿ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ಇದನ್ನೂಓದಿ: ’ಶಾಹಿನ್ ಬಾಗ್ ಅಜ್ಜಿ’ ಬಿಲ್ಕೀಸ್ 2020 ರ ಪ್ರಭಾವಶಾಲಿ ವ್ಯಕ್ತಿ
ವಿವಾದಾತ್ಮಕ ಟ್ವೀಟನ್ನು ಕಂಗನಾ ಈಗ ಅಳಿಸಿದ್ದು ಅದರಲ್ಲಿ, “ಹಹಹ ಇದು ಅದೇ ದಾದಿ, ಟೈಮ್ ಮ್ಯಾಗಝಿನ್ ಹೇಳಿರುವ ಅತ್ಯಂತ ಪ್ರಭಾವಶಾಲಿ ಇಂಡಿಯನ್…ಮತ್ತು ಅವರು 100 ರುಪಾಯಿಗೆ ಸಿಗುತ್ತಾರೆ. ಭಾರತ ಮುಜುಗರಕ್ಕೀಡಾಗಲು ಅಂತರಾಷ್ಟ್ರೀಯ ಪಿಆರ್ಗಳನ್ನು ಪಾಕಿಸ್ತಾನಿ ಪತ್ರಕರ್ತರು ಹೈಜಾಕ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮಗಾಗಿ ಮಾತನಾಡಲು ನಮ್ಮದೇ ಜನರು ಬೇಕು” ಎಂದು ಟ್ವೀಟ್ ಮಾಡಿದ್ದರು.
ಪಂಜಾಬ್ನ ಜಿರಾಕ್ಪುರ ಪಟ್ಟಣದ ವಕೀಲರು ಕಾನೂನು ನೋಟಿಸ್ ಕಳುಹಿಸಿದ್ದು, ಏಳು ದಿನಗಳ ಒಳಗಾಗಿ ಕಂಗನಾ ಅವರ ಟ್ವೀಟ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವೃದ್ದ ಮಹಿಳೆಯೊಬ್ಬರನ್ನು ಕಂಗನಾ “ಬಿಲ್ಕಿಸ್ ದಾದಿ” ಎಂದು ತಪ್ಪಾಗಿ ಗುರುತಿಸಿದ್ದಾರೆ ಎಂದು ವಕೀಲರು ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ. ಸ್ವತಃ ಬಿಲ್ಕಿಸ್ ಬಾನೂ ಅವರೇ ಚಿತ್ರದಲ್ಲಿರುವ ಮಹಿಳೆ ತಾನಲ್ಲ ಎಂದು ದೃಡಪಡಿಸಿದ್ದಾರೆ.
ಕಾನೂನು ನೋಟಿಸ್, “ಮಹಿಳೆಯು ನಕಲಿ ಅಲ್ಲ, ಅವರ ಹೆಸರು ಮನಿಂದರ್ ಕೌರ್ ಹಾಗೂ ಅವರು ಬಹದ್ದೂರ್ ಗಡ್ ಗ್ರಾಮಕ್ಕೆ ಸೇರಿದವರು” ಎಂದು ಹೇಳಿದೆ.
ಇದನ್ನೂ ಓದಿ: ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಾಹೀನ್ಬಾಗ್ ಅಜ್ಜಿ ಬಿಲ್ಕೀಸ್ರನ್ನು ಬಂಧಿಸಿದ ಪೊಲೀಸರು!
ಕಂಗನಾ ತನ್ನ ಟ್ವೀಟ್ ಮೂಲಕ ರೈತರ ಪ್ರತಿಭಟನೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. “ಈ ರೀತಿಯಾಗಿ ಟ್ವೀಟ್ ಮಾಡುವ ಮೂಲಕ, ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಜನರನ್ನು ಬಾಡಿಗೆಗೆ ತರುವ ಮೂಲಕ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆಂದು” ಎಂದು ಅದು ಹೇಳುತ್ತದೆ.
ಮಂಗಳವಾರ ಸಂಜೆ ದೆಹಲಿ-ಹರಿಯಾಣದ ಸಿಂಗು ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಬಿಲ್ಕೀಸ್ ಬಾನು ಬಂದಿದ್ದು, ಆದರೆ ಅವರನ್ನು ಪೊಲೀಸರು ಬಂಧಿಸಿದರು. “ನಾವು ರೈತರನ್ನು ಬೆಂಬಲಿಸಲು ಇಲ್ಲಿದ್ದೇವೆ. ಶಾಹೀನ್ ಬಾಗ್ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಅವರು ನಮ್ಮನ್ನು ಬೆಂಬಲಿಸಿದರು. ಈಗ ನಾವು ಅವರಿಗಾಗಿ ಇಲ್ಲಿದ್ದೇವೆ. ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಅವರು ಪ್ರತಿಭಟನಾ ಸ್ಥಳದಲ್ಲಿ ಹೇಳಿದ್ದರು.
ಭಾರತದ ಹಲವಾರು ರಾಜ್ಯಗಳ ರೈತರು ದೆಹಲಿಯ ಗಡಿಯಲ್ಲಿ ನಿರಂತರ ಏಳು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಅವರು ಕೇಂದ್ರದ ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ಘೋಷಣೆ ಕೂಗುತ್ತಿದ್ದಾರೆ. ಮಂಗಳವಾರ ಕೇಂದ್ರ ಸರ್ಕಾರ ಮತ್ತು 30 ಕ್ಕೂ ಹೆಚ್ಚು ಯೂನಿಯನ್ ನಾಯಕರ ನಡುವಿನ ಮಾತುಕತೆ ಮುರಿದು ಬಿದ್ದಿದ್ದು, ನಾಳೆ ನಾಲ್ಕನೇ ಸುತ್ತಿನ ಮಾತುಕತೆಗೆ ಕೇಂದ್ರ ಕರೆ ನೀಡಿದೆ.
ಇದನ್ನೂ ಓದಿ: ಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!