ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಶ್ಲೀಲತೆಯ ಪ್ರಸಾರದ ಬಗ್ಗೆ ಇರುವ ಕಳವಳಗಳನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.28) ಒಪ್ಪಿಕೊಂಡಿದ್ದು, ಅದನ್ನು ಪರಿಹರಿಸಲು ಶಾಸಕಾಂಗ (ಸಂಸತ್ತು) ಕಾನೂನಿನ ಚೌಕಟ್ಟಿನೊಳಗೆ ಏನಾದರೂ ಮಾಡಬೇಕು ಎಂದು ಹೇಳಿದೆ.
ಪತ್ರಕರ್ತ ಮತ್ತು ಮಾಜಿ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಎ.ಜಿ ಮಸಿಹ್ ಅವರ ಪೀಠ, ಕೇಂದ್ರ ಸರ್ಕಾರ ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಎಎಲ್ಟಿಟಿ (ಎಎಲ್ಟಿಟಿ ಬಾಲಾಜಿ) ಉಲ್ಲು ಡಿಜಿಟಲ್ ಮತ್ತು ಮುಬಿ ಹಾಗೂ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಾದ ಎಕ್ಸ್ (ಟ್ವಿಟ್ಟರ್) ಗೂಗಲ್, ಮೆಟಾ (ಫೇಸ್ಬುಕ್ ) ಮತ್ತು ಆಪಲ್ಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ವಿಷ್ಣುಶಂಕರ್ ಜೈನ್ ಅವರು, “ಈ ಅರ್ಜಿಯನ್ನು ಯಾರ ವಿರುದ್ದ ಸಲ್ಲಿಸಿಲ್ಲ, ನಿಜವಾದ ಕಳವಳದಿಂದ ಸಲ್ಲಿಸಲಾಗಿದೆ. ಯಾವುದೇ ನಿರ್ಬಂಧವಿಲ್ಲದೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಶ್ಲೀಲ ವಿಷಯಗಳು ಹರಿದಾಡುತ್ತಿವೆ” ಎಂದು ಹೇಳಿದ್ದಾರೆ.
ಇದನ್ನು ಆಲಿಸಿದ ನ್ಯಾಯಮೂರ್ತಿ ಗವಾಯಿ ಅವರು, ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, “ಏನಾದರು ಮಾಡಿ… ಶಾಸಕಾಂಗದ ಮೂಲಕ ಏನಾದರು ಮಾಡಿ” ಎಂದು ಎಂದಿದ್ದಾರೆ.
ಈ ವೇಳೆ, “ಕೆಲವು ನಿಯಮಿತ ಕಾರ್ಯಕ್ರಮಗಳಲ್ಲಿಯೂ ಸಹ ಆಕ್ಷೇಪಾರ್ಹ ವಿಷಯಗಳು ಕಾಣಿಸಿಕೊಳ್ಳುತ್ತವೆ ಎಂದು ಮೆಹ್ತಾ ಗಮನಸೆಳೆದಿದ್ದಾರೆ. ಕೆಲವು ಕಾರ್ಯಕ್ರಮಗಳು ಎಷ್ಟು ವಿಕೃತವಾಗಿವೆಯೆಂದರೆ ಇಬ್ಬರು ಗೌರವಾನ್ವಿತ ವ್ಯಕ್ತಿಗಳು ಒಟ್ಟಿಗೆ ಕುಳಿತು ಅವುಗಳನ್ನು ನೋಡಲು ಸಾಧ್ಯವೇ ಇಲ್ಲ. ಸೆನ್ಸಾರ್ಶಿಪ್ ಇಲ್ಲ, ಆದರೆ ಕೆಲವು ನಿಯಂತ್ರಣಗಳು ಜಾರಿಯಲ್ಲಿವೆ, ಇನ್ನು ಕೆಲವು ಚಿಂತನೆಯಲ್ಲಿವೆ” ಎಂದು ತಿಳಿಸಿದ್ದಾರೆ.
“ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಿಧ ಆಕ್ಷೇಪಾರ್ಹ, ಅಶ್ಲೀಲ ಮತ್ತು ಅಸಭ್ಯ ವಿಷಯಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಈ ಅರ್ಜಿಯು ಪ್ರಮುಖ ಕಳವಳವನ್ನು ಹುಟ್ಟುಹಾಕುತ್ತದೆ. ವಿಷಯವು ವಿಕೃತವಾಗಿದೆ ಎಂದು ಸಾಲಿಸಿಟರ್ ಜನರಲ್ ಅವರೇ ನ್ಯಾಯಯುತವಾಗಿ ಹೇಳುತ್ತಿದ್ದಾರೆ. ಇನ್ನೂ ಕೆಲವು ನಿಯಮಗಳು ಚಿಂತನೆಯಲ್ಲಿವೆ ಎಂದು ಅವರು ತಿಳಿಸಿದ್ದಾರೆ” ಎಂದು ನೋಟಿಸ್ ಜಾರಿ ಮಾಡಿದ ಪೀಠವು ತನ್ನ ಆದೇಶದಲ್ಲಿ ಹೇಳಿದೆ.
ಈ ವರ್ಷದ ಮಾರ್ಚ್ನಲ್ಲಿ ಸಲ್ಲಿಸಲಾದ ಪಿಐಎಲ್ನಲ್ಲಿ “ಒಟಿಟಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಂದಿನ ಪೀಳಿಗೆಯ ಭವಿಷ್ಯವನ್ನು ಹಾಳು ಮಾಡುವಂತಹ ಅಶ್ಲೀಲ, ವಿಕೃತ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ವಿಕೃತಿಯ ವಿಷಯಗಳು ಯಾವುದೇ ನಿಯಂತ್ರಣಗಳಿಲ್ಲದೆ ಪ್ರಸಾರವಾಗುತ್ತಿವೆ” ಎಂದು ಗಮನಸೆಳೆಯಲಾಗಿದೆ.
“ಒಂದು ಸಮಯದಲ್ಲಿ ವೈಯಕ್ತಿಕವಾಗಿದ್ದ ವಿಷಯಗಳು ಈಗ ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮೂಲೆ ಮೂಲೆಗೂ ಹಬ್ಬಿದೆ. ಅಶ್ಲೀಲ ವಿಷಯಗಳ ಈ ಅನಿಯಂತ್ರಿತ ಹರಡುವಿಕೆಯನ್ನು ನಿಯಂತ್ರಿಸದಿದ್ದರೆ ಸಾಮಾಜಿಕ ಮೌಲ್ಯಗಳು, ಮಾನಸಿಕ ಆರೋಗ್ಯ ಮತ್ತು ಸಾರ್ವಜನಿಕ ಸುರಕ್ಷತೆಯ ಮೇಲೆ ತೀವ್ರ ಪರಿಣಾಮಗಳು ಬೀರಬಹುದು” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
“ಮಕ್ಕಳ ಅಶ್ಲೀಲತೆ, ಸಾಫ್ಟ್-ಕೋರ್ ಅಡಲ್ಟ್ ಕಂಟೆಂಟ್ಗಳಂತಹ ವಿಷಯಗಳ ಅನಿಯಂತ್ರಿತ ಪ್ರಸರಣವು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಹೆಚ್ಚುತ್ತಿರುವ ಪ್ರವೃತ್ತಿಗೆ ಕಾರಣವಾಗಿದೆ ಮತ್ತು ಯುವ ಮನಸ್ಸುಗಳ ಮಾನಸಿಕ ಬೆಳವಣಿಗೆಯನ್ನು ನಕಾರಾತ್ಮಕವಾಗಿ ರೂಪಿಸುತ್ತಿದೆ” ಎಂದು ವಿವರಿಸಲಾಗಿದೆ.
ಪಹಲ್ಗಾಮ್ ದಾಳಿಯ ಕುರಿತು ಪೋಸ್ಟ್: ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ‘ದೇಶದ್ರೋಹ’ ಪ್ರಕರಣ ದಾಖಲು


