Homeಮುಖಪುಟಇಲ್ಲಿ ಎಲ್ಲವೂ, ಎಲ್ಲರೂ ಸೌಖ್ಯ; ಪ್ರಭುತ್ವದ ಹಿಂಸೆ ಕೂಡ ಪ್ರಜೆಗಳ ಉದ್ಧಾರಕ್ಕಾಗಿ; ಹಾಗಾಗಿ ’ದೇರ್ ಇಸ್...

ಇಲ್ಲಿ ಎಲ್ಲವೂ, ಎಲ್ಲರೂ ಸೌಖ್ಯ; ಪ್ರಭುತ್ವದ ಹಿಂಸೆ ಕೂಡ ಪ್ರಜೆಗಳ ಉದ್ಧಾರಕ್ಕಾಗಿ; ಹಾಗಾಗಿ ’ದೇರ್ ಇಸ್ ನೊ ಈವಿಲ್’

- Advertisement -
- Advertisement -

’ದೇರ್ ಇಸ್ ನೊ ಈವಿಲ್’ ಬಗ್ಗೆ ನನ್ನ ಅನಿಸಿಕೆ ಹಂಚಿಕೊಳ್ಳುವ ಮೊದಲು ಈ ಸಿನಿಮಾದ ನಿರ್ದೇಶಕನ ಬಗ್ಗೆ ಕೆಲವು ಮಾತುಗಳು. ಮೊಹಮ್ಮದ್ ರಸೊಲಫ್ ಒಬ್ಬ ಸ್ವತಂತ್ರ ಸಿನಿಮಾ ನಿರ್ದೇಶಕ, ನಿರ್ಮಾಪಕ ಮತ್ತು ಬರೆಹಗಾರ. ಇವನ ’ಗುಡ್ ಬೈ’, ’ಮ್ಯಾನ್ ಆಫ್ ಇಂಟಗ್ರಿಟಿ’, ’ಐರನ್ ಐಲ್ಯಾಂಡ್’ ಇನ್ನೂ ಮುಂತಾದ ಸಿನಿಮಾಗಳು ಜಾಗತಿಕವಾಗಿ ಜನಮನ್ನಣೆ ಪಡೆದಿವೆ. ಕಲೆಯ ಉದ್ದೇಶವಾದರೂ ಏನು? ಒಬ್ಬ ಕಲಾವಿದನಾಗಿ ನನ್ನ ಜವಾಬ್ದಾರಿ ಯಾವುದು? ಸಮುದಾಯದ ಒಳಗಿನ ವ್ಯಕ್ತಿಯಾಗಿ ನಾನು ಸೃಜಿಸುವ ಕಲೆ ಯಾವುದಕ್ಕೆ ಧ್ವನಿಯಾಗಬೇಕು? ಈ ಎಲ್ಲದಕ್ಕೂ ಮೊಹಮ್ಮದ್ ರಸೊಲಫ್ ಜೀವನ ಮತ್ತು ಆತನ ಸಿನಿಮಾ ಬಹಳ ಅದ್ಭುತ ಉದಾಹರಣೆಗಳಂತೆ ನಿಲ್ಲುತ್ತವೆ.

ಮೊಹಮ್ಮದ್ ರಸೊಲಫ್

ಸರ್ವಾಧಿಕಾರದ ಇರಾನ್‌ನಲ್ಲಿ ಅಲ್ಲಿನ ಜನ ಸಮುದಾಯ ಸ್ವತಂತ್ರಹೀನರಾಗಿ ಸಣ್ಣಸಣ್ಣ ಖಾಸಗಿ ಸಂಗತಿಗಳಲ್ಲೂ ಪ್ರಭುತ್ವದ ಹಸ್ತಕ್ಷೇಪದಿಂದ ನಲುಗುತ್ತಿದ್ದಾರೆ. ಈ ತರದ ದಬ್ಬಾಳಿಕೆ, ದೌರ್ಜನ್ಯ ಮತ್ತು ಉಸಿರುಗಟ್ಟುವಂತಹ ವಾತಾವರಣವನ್ನು ರಸೊಲಫ್ ತನ್ನ ಸಿನಿಮಾಗಳಲ್ಲಿ ಪ್ರತಿಬಿಂಬಿಸುತ್ತಾನೆ. ಈ ಕಾರಣವಾಗಿ ಅಲ್ಲಿನ ಸರ್ಕಾರ, ರಾಷ್ಟ್ರದ ಭದ್ರತೆ ಮತ್ತು ದೇಶದ ವಿರುದ್ಧ ಪ್ರಪೊಗಾಂಡ ನಡೆಸುತ್ತಿದ್ದಾನೆ ಎಂದು ಹಲವಾರು ಬಾರಿ ರಸೊಲಫ್ ಮೇಲೆ ಪ್ರಕರಣ ದಾಖಲಿಸಿ, ಜೈಲು ಶಿಕ್ಷೆ ನೀಡಿ, ಸುಮಾರು ವರ್ಷಗಳ ಕಾಲ ಸಿನಿಮಾ ಮಾಡುವುದರಿಂದ ಮತ್ತು ದೇಶದ ಹೊರಹೋಗುವುದರಿಂದ ನಿಷೇಧವನ್ನು ಹೇರಿದೆ. 2020ರ ಒಂದು ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ರಸೊಲಫ್‌ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೋವಿಡ್ ಕಾರಣವಾಗಿ ಆ ಶಿಕ್ಷೆಯನ್ನು ಜಾರಿ ಮಾಡಲಾಗಿಲ್ಲ. ತಮ್ಮ ದಿನಚರಿ ಶುರುವಾಗುವುದು ತನ್ನ ಜೈಲು ಶಿಕ್ಷೆಯ ಬಗ್ಗೆ ಏನಾದ್ರೂ ಸಂದೇಶ ಬಂದಿದೆಯಾ ಎಂದು ನೋಡುವುದರ ಮೂಲಕ ಎನ್ನುತ್ತಾರೆ ರಸೊಲಫ್.

’ದೇರ್ ಇಸ್ ನೊ ಈವಿಲ್’

’ದೇರ್ ಇಸ್ ನೊ ಈವಿಲ್’ ನಾಲ್ಕು ಬಿಡಿ ಕಥೆಗಳ ಗುಚ್ಛ. ಆದರೆ, ಒಂದು ಕಥೆಗೂ ಮತ್ತೊಂದಕ್ಕೂ ಸಾವಯವ ಸಂಬಂಧವಿದೆ. ನಾಲ್ಕು ಕಥೆಗಳ ಮೂಲ ವಸ್ತು ಒಂದೇ ಆದರೂ, ಕಥಾ ಪರಿಸರ, ಅದರ ಭಾಗವಾಗಿರುವ ಸಮುದಾಯ ಮತ್ತು ಅವರ ಅಲೋಚನೆಗಳು ತುಸು ಭಿನ್ನ. ಇರಾನ್‌ನಲ್ಲಿ ಪ್ರಸ್ತುತ ಇರುವ ಮರಣದಂಡನೆ ಶಿಕ್ಷೆ ಮತ್ತು ಕಡ್ಡಾಯ ಮಿಲಿಟರಿ ಸೇವೆ ಸಿನಿಮಾದ ಪ್ರಧಾನ ವಸ್ತು.

ಮೊದಲ ಕಥೆ/ಭಾಗ: There is no evil

ಸ್ವೀಡಿಷ್ ದೇಶದ ಪ್ರಸಿದ್ಧ ನಿರ್ದೇಶಕ ಮೈಕಲ್ ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಪ್ರಭುತ್ವವೊಂದು, ಸಮಾಜದಲ್ಲಿ ಹಿಂಸೆಯನ್ನು ಹೇಗೆ ಸಾರ್ವತ್ರಿಕಗೊಳಿಸಿ ಸಮ್ಮತವಾಗಿಸಿಬಿಡುತ್ತೆ ಎಂಬುದನ್ನು ತಾತ್ವಿಕವಾಗಿ ನಿರೂಪಿಸುತ್ತಾನೆ. ರಸೊಲಫ್ ಕೂಡ ಪ್ರಸ್ತುತ ಸಿನಿಮಾದ ಮೊದಲ ಕಥೆ/ಭಾಗದಲ್ಲಿ ಇದೇ ರೀತಿಯ ತಾತ್ವಿಕ ಪ್ರಶ್ನೆಯನ್ನು ಚರ್ಚಿಸುತ್ತಾನೆ. ಪ್ರಭುತ್ವ ತನ್ನ ಸಹಪ್ರಜೆಗಳು ಮೇಲೆ ನಡೆಸುವ ಸ್ವಾತಂತ್ರ್ಯ ಹರಣ, ಅವರ ಮೇಲೆ ಹೇರುವ ಮನುಷ್ಯ ವಿರೋಧಿ ಕಾನೂನುಗಳು/ಪಾಲಿಸಿಗಳು, ಮತ್ತು ಇವೆಲ್ಲ ಸೃಷ್ಟಿ ಮಾಡುವ ಹಿಂಸೆಗಳನ್ನು ಲೆಕ್ಕಿಸದೆ-ವಿರೋಧಿಸದೆ, ಎಲ್ಲವನ್ನು ಸಹಜವಾಗಿ ಸ್ವೀಕರಿಸಿ, ಎಲ್ಲರೂ/ಎಲ್ಲವೂ ಸೌಖ್ಯ ಎಂದು ಸಹಜವಾಗಿ ತನ್ನ ಕುಟುಂಬದೊಂದಿಗೆ ಬದುಕುವ ಇರಾನ್ ದೇಶದ ಸಾಮಾನ್ಯ ನಾಗರಿಕ, ಹೇಗೆ ಪ್ರಭುತ್ವ ನಡೆಸುವ ಹಿಂಸೆಯ ಭಾಗವಾಗುತ್ತಾನೆ ಎಂಬುದನ್ನು ಇಲ್ಲಿ ನಿರ್ದೇಶಕ ಶೋಧಿಸುತ್ತಾರೆ. ಪ್ರಭುತ್ವ ವಿಧಿಸುವ ನಿಯಮಗಳನ್ನು ಹೇಗೆ ಅಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತಾನೆ ಹಾಗು ತನ್ನ ದಿನನಿತ್ಯದ ಖಾಸಗಿ ಬದುಕಿನಲ್ಲಿರುವ ನೈತಿಕ ಪ್ರಜ್ಞೆಗೂ, ಪ್ರಭುತ್ವದ ಪರವಾಗಿ ತಾನು ನಿರ್ವಹಿಸುವ ಕಾರ್ಯಗಳಿಗೂ ಯಾವ ಸಂಬಂಧವನ್ನೂ ಅವಲೋಕಿಸಿಕೊಳ್ಳದೆ ಏಕೆ ಮುಂದುವರೆಯುತ್ತಾನೆ ಎಂಬ ತಾತ್ವಿಕ ಪ್ರಶ್ನೆಯನ್ನು ರಸೊಲಫ್ ಪ್ರೇಕ್ಷಕರ ಮುಂದಿಡುತ್ತಾನೆ.

ಎರಡನೇ ಕಥೆ/ಭಾಗ: ‘She Said: you can do it’

ಎರಡನೇ ಕಥೆ/ಭಾಗದಲ್ಲಿ ನಾಗರಿಕ ಸಮಾಜವೊಂದರಲ್ಲಿ ಕಾಣೆಯಾದ ನೈತಿಕ/ತಾತ್ವಿಕ ಸಂಘರ್ಷವನ್ನ ಕಾಣುತ್ತೇವೆ. ಮಿಲಿಟರಿ ಸೇವೆಯಲ್ಲಿರುವ ಒಬ್ಬ ಸೈನಿಕ ತನ್ನ ಕರ್ತವ್ಯದ ಭಾಗವಾಗಿ ಒಬ್ಬ ಖೈದಿಯನ್ನು ನೇಣಿಗೆ ಏರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಆ ಸೈನಿಕನಿಗೆ ಒಪ್ಪಿಗೆಯಿಲ್ಲ. ಈ ಕರ್ತವ್ಯ ನಿರ್ವಹಿಸಿದರೆ ಮಾತ್ರ ಅವನ ಎರಡು ವರ್ಷದ ಮಿಲಿಟರಿ ಸೇವೆ ಪೂರ್ಣಗೊಳ್ಳುವುದು ಮತ್ತು ಅವನ ಸಹಜ ಬದುಕು ಬದುಕಲು ಸಾಧ್ಯವಾಗುವುದಕ್ಕೆ ಅವಕಾಶ ಸಿಗುವುದು. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು? ಇದು ಅವನನ್ನು ಮಾನಸಿಕವಾಗಿ ತೊಳಲಾಡಿಸುತ್ತದೆ. ಈ ಕುರಿತು ಅವನ ಸಹೋದ್ಯೋಗಿಗಳಲ್ಲಿ ನಡೆಯುವ ಚರ್ಚೆ ಬಹಳ ಸ್ವಾರಸ್ಯಕರವಾಗಿದೆ. ಇವನ ಬದಲಾಗಿ ಸಹೋದ್ಯೋಗಿಯೊಬ್ಬ ಖೈದಿಯನ್ನು ನೇಣಿಗೇರಿಸಲು ಸಿದ್ಧವಿರುವುದಾಗಿ ಮತ್ತು ಅದಕ್ಕೆ ಪರ್ಯಾಯವಾಗಿ ಆತನ ಹಣದ ತುರ್ತನ್ನು ಪೂರೈಸಲು ನಿಯೋಜಿತ ಸೈನಿಕ ಮುಂದಾಗಬೇಕೆಂದು, ಮತ್ತೊಬ್ಬ ಸೈನಿಕ ಇವರ ನಡುವೆ ಮಧ್ಯಸ್ಥಿಕೆ ವಹಿಸುತ್ತಾನೆ. ಈ ಪರಿಹಾರಕ್ಕೆ ಮೊದಲ ನಿಯೋಜಿತ ಸೈನಿಕ ಒಪ್ಪುತ್ತಾನೆ. ರಸೊಲಫ್ ಇಲ್ಲಿ ಮತ್ತೊಂದು ತಾತ್ವಿಕತೆ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತಾನೆ. ನೆಲದ ಕಾನೂನನ್ನು ಜಾರಿಗೊಳಿಸುವ ಕಾರಣವಾಗಿ ಒಬ್ಬನನ್ನು ಕೊಲ್ಲಲು ಒಪ್ಪದ ಮನಸ್ಸು ಅದೇ ಕೆಲಸವನ್ನು ಅವನ ಪರವಾಗಿ ಮತ್ತೊಬ್ಬ ಮಾಡುತ್ತಾನೆ ಎಂದಾಗ ಒಪ್ಪಲು ಸಾಧ್ಯವಾಗುವುದಾದರೂ ಹೇಗೆ? ’ಇದು ಅವನೇ ನೇಣಿಗೇರಿಸುವುದಕ್ಕಿಂತ ಮಹಾ ಪಾಪ’; ಈ ಮಾತನ್ನ ಮತ್ತೊಬ್ಬ ಸೈನಿಕನ ಹತ್ತಿರ ನಿರ್ದೇಶಕ ಹೇಳಿಸುತ್ತಾನೆ.

ಮೂರನೇ ಕಥೆ/ಭಾಗ: ‘Birthday’

ರಸೊಲಫ್ ಮೊದಲ ಎರಡು ಕಥೆಗಳನ್ನು ಮೀರಿ ಮೂರನೆಯದರಲ್ಲಿ, ಪ್ರಭುತ್ವದ ಹಿಡಿತ/ಹಿಂಸೆಯ ವಿರುದ್ಧದ ಪ್ರತಿರೋಧದ ಪ್ರಜ್ಞೆ ವೈಯಕ್ತಿಕ ಮಟ್ಟದಿಂದ ಸಮುದಾಯದ ಪ್ರಜ್ಞೆಯಾಗುವುದರ ಬೆಳವಣಿಗೆಯನ್ನ ಸೂಚಿಸುತ್ತಾನೆ. ಜಾವದ್ ತನ್ನ ಪ್ರಿಯತಮೆ ನಾನಳ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡಲು, ತನ್ನ ಎರಡು ವರ್ಷದ ಕಡ್ಡಾಯ ಮಿಲಿಟರಿ ಸೇವೆ ಮಧ್ಯೆ 3 ದಿನಗಳ ರಜೆ ಮೇಲೆ ಬಂದಿದ್ದಾನೆ. ನಾನಳಿಗೆ ಇವನನ್ನು ನೋಡಿ ಎಲ್ಲಿಲ್ಲದ ಸಡಗರ. ಆ ಸಡಗರದ ನಡುವೆ ಆಳದಲ್ಲಿರುವ ನೋವನ್ನ ಜಾವದ್ ಗುರುತಿಸುತ್ತಾನೆ. ನಾನಳ ಕುಟುಂಬದ ಸ್ನೇಹಿತ ಕಿವಾನ್‌ನನ್ನು ಪ್ರಭುತ್ವ ನೇಣಿಗೆ ಏರಿಸಿರುತ್ತದೆ. ಇಡೀ ಕುಟುಂಬದಲ್ಲಿ ಆ ಸಾವಿನ ನೋವು ಮಡುಗಟ್ಟಿರುತ್ತದೆ. ಕಿವಾನ್ ಯಾರು ಎಂಬುದು ಜಾವದ್‌ಗೆ ತಿಳಿದಿರುವುದೇ ಇಲ್ಲ. ಕಿವಾನ್ ಫೋಟೋ ನೋಡಿದ ತಕ್ಷಣ ಜಾದವ್ ಆಘಾತಕ್ಕೆ ಒಳಗಾಗುತ್ತಾನೆ. ಜ್ವರದಿಂದ ನರಳುತ್ತಾನೆ. ಆ ಆಘಾತದಲ್ಲೆ ಜಾದವ್ ನಾನಳಿಗೆ ’ಕಿವಾನ್‌ನನ್ನು ಕೊಂದಿದ್ದು ನಾನೆ… ಅವನು ನೇಣಿಗೇರಿದ ಕುರ್ಚಿಯನ್ನು ಒದ್ದಿದ್ದು ನಾನೆ, ಆ ಕಾರಣವಾಗಿಯೇ ನನಗೆ ಮೂರು ದಿನ ರಜೆ ಸಿಕ್ಕಿದ್ದು’ ಎಂದು ಹೇಳುತ್ತಾನೆ. ನಾನ ಕೊಂಚ ವಿಚಲಿತಳಾದರೂ ಸಾವರಿಸಿಕೊಂಡು ಅವನನ್ನು ಸಂತೈಸುತ್ತಾಳೆ. ಅವರಿಬ್ಬರ ನಡುವೆ ಮದುವೆ ನಿಶ್ಚಯ ಆಗುತ್ತದೆ. ಆದರೆ ನಾನ ಜಾದವ್‌ಗೆ ’ನಾನು ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ, ಆದರೆ ನಿನ್ನನ್ನು ಕಳೆದುಕೊಳ್ಳುತ್ತಿದ್ದೇನೆ’ ಎಂದು ಹೇಳುತ್ತಾ ಅವನಿಂದ ದೂರವಾಗಿಬಿಡುತ್ತಾಳೆ.

ನಾಲ್ಕನೆ ಕಥೆ/ಭಾಗ: Kiss me

ರಸೊಲಪ್ ತನ್ನ ಈ ಸಿನಿಮಾದಲ್ಲಿ ಒಂದು ಕಥೆಯಿಂದ ಮತ್ತೊಂದು ಕಥೆಗೆ ತನ್ನ ಅಲೋಚನೆ ಮತ್ತು ಆಶಯವನ್ನು ಬೆಳೆಸಿದ್ದಾನೆ. ಅದೇ ರೀತಿ ದೃಶ್ಯ ಕಟ್ಟುವಿಕೆಯಲ್ಲಿ, ಆ ಕಥಾಭಾಗ ಯಾವ ತಾತ್ವಿಕತೆಯನ್ನ ಪ್ರಸ್ತುತಪಡಿಸುತ್ತದೆಯೋ, ಅದಕ್ಕೆ ಪೂರಕವಾದ ಕಥಾ ಪರಿಸರವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾನೆ ಅನಿಸುತ್ತದೆ. ಮೊದಲ ಕಥೆಯಲ್ಲಿ ಟೆಹರಾನ್ ನಗರದ ಜನಜಂಗುಳಿ, ಏಕಾತನತೆ, ಇಕ್ಕಟ್ಟಾದ ಪ್ರದೇಶವನ್ನು ಕಟ್ಟಿಕೊಟ್ಟರೆ, ನಾಲ್ಕನೆ ಕಥೆಗೆ ಬರುವಷ್ಟರಲ್ಲಿ ವಿಶಾಲವಾದ ಭೂ ಪ್ರದೇಶವನ್ನು ಕಟ್ಟಿಕೊಡುತ್ತಾನೆ. ಆ ಜಾಗದಲ್ಲಿ ಪ್ರಭುತ್ವದ ಹಸ್ತಕ್ಷೇಪದ ಯಾವ ಕುರುಹು ಇಲ್ಲ. ನಾಲ್ಕನೇ ಕಥೆ ಎರಡನೆ ಕಥೆಯ ಮುಂದುವರೆದ ಭಾಗ ಅಂತಲೂ ಊಹಿಸಬಹುದು. ಬಹಳ ವರ್ಷಗಳ ಹಿಂದೆ ಬಹ್ರಾಮ್ ತನ್ನ ಎದೆಯ ದನಿಗೆ ಓಗೊಟ್ಟು ಪ್ರಭುತ್ವದ ಆಜ್ಞೆಯನ್ನು ನಿರಾಕರಿಸಿದವನು. ಆ ಕಾರಣವಾಗಿ ಅವನು ತನ್ನ ಹೆಂಡತಿ ಮಗುವನ್ನು ದೂರ ಮಾಡಿಕೊಂಡು ದೇಶಾಂತರ ತಲೆಮರೆಸಿಕೊಂಡು ಬದುಕಬೇಕಾಗುತ್ತದೆ. ಪ್ರಸ್ತುತ ಅವನಿಗೆ ಒಬ್ಬ ಸಂಗಾತಿ ಇದ್ದಾಳೆ. ಈಗ ಸಾವಿನ ಅಂಚಿನಲ್ಲಿರುವ ಬಹ್ರಾಮ್‌ಗೆ, ತಾನು ಬಿಟ್ಟುಬಂದಿರುವ ಮಗಳಿಗೆ, ನಾನೇ ನಿನ್ನ ನಿಜವಾದ ತಂದೆ ಎಂದು ತಿಳಿಸುವ ಅಭಿಲಾಶೆ. ಮಗಳನ್ನು ತನ್ನಲ್ಲಿಗೆ ಕರೆಯಿಸಿಕೊಂಡು ಈ ಸತ್ಯವನ್ನ ಅವಳಲ್ಲಿ ಹೇಳುತ್ತಾನೆ ಕೂಡ. ಆದರೆ ಮಗಳು ಸ್ವೀಕರಿಸುವ ಬಗೆ ಅವನ ನಿರೀಕ್ಷೆಗೂ ಮೀರಿ ಬೇರೆಯದ್ದಾಗಿರುತ್ತದೆ.

ಸರ್ವಾಧಿಕಾರ ಮತ್ತು ಮೂಲಭೂತವಾದವನ್ನು ಪ್ರತಿಪಾದಿಸುವಂತಹ ಇರಾನ್‌ನಂತಹ ದೇಶಗಳಲ್ಲಿ ಕಲೆಯಲ್ಲಿ ಸತ್ಯದ ಸಾಧ್ಯತೆ ಕಂಡುಕೊಳ್ಳುವುದು ಕಷ್ಟಸಾಧ್ಯ. ಜಾಫರ್ ಫನಾಹಿ, ಮೊಹಮ್ಮದ್ ರಸೊಲಫ್ ಅಂತ ಬಂಡುಕೋರರು ಪ್ರಭುತ್ವದ ಬೆದರಿಕೆಗಳಿಗೆ ಸೆಡ್ಡುಹೊಡೆದು ತಮ್ಮ ಸಿನಿಮಾಗಳಲ್ಲಿ ಸತ್ಯವನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. ಅಲ್ಲಿನ ಸೆನ್ಸಾರ್ ಮಂಡಳಿಯ ನಿರ್ಬಂಧದ ನಡುವೆಯೂ ಸತ್ಯ ಹೇಳುವ ಹೊಸ ಹೊಸ ಸಾಧ್ಯತೆಗಳನ್ನ ದೃಶ್ಯ ಮಾಧ್ಯಮದ ಮೂಲಕ ಶೋಧಿಸುತ್ತಾರೆ. ಇದು ಜಗತ್ತಿಗೆ ತಿಳಿದಾಗ ಅಲ್ಲಿನ ಪ್ರಭುತ್ವ ಇವರನ್ನು ಹೆದರಿಸುತ್ತದೆ, ಬಂಧಿಸುತ್ತದೆ, ಸಿನಿಮಾ ಮಾಡದಂತೆ ನಿಷೇಧ ಹೇರುತ್ತದೆ. ಇವರು ಮತ್ತೆ ಮತ್ತೆ ಪುಟಿದೇಳುತ್ತಾರೆ. ಪ್ರಭುತ್ವದ ಹಿಂಸೆಯ ವಿರುದ್ಧದ ತಮ್ಮ ಅಸಮ್ಮತಿಯನ್ನು ಎದೆಯ ದನಿಯನ್ನು ಬಹಳ ಗಟ್ಟಿಯಾಗಿ ಜಗತ್ತಿಗೆ ಕೂಗಿ ಹೇಳುತ್ತಾರೆ.

ಕೊನೆಯ ಮಾತು

ಇತ್ತೀಚಿನ ವರ್ಷಗಳಲ್ಲಿ ಇರಾನ್ ಪರಿಸ್ಥಿತಿಗೂ ಭಾರತದ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ. ಪ್ರಭುತ್ವ ನಡೆಸುವ ಹಿಂಸೆಯ ಭೂತದ ನರ್ತನಕ್ಕೆ ನಮ್ಮ ಪ್ರತಿಸ್ಪಂದನೆ, ’ದೇರ್ ಇಸ್ ನೊ ಈವಿಲ್’. ಇಲ್ಲಿ ಎಲ್ಲವು.. ಎಲ್ಲರೂ ಸೌಖ್ಯ ಮತ್ತು ಸುಭಿಕ್ಷ. ಇದನ್ನ ಒಂದು ಪ್ರಪೊಗಾಂಡವಾಗಿ ಈ ದೇಶದ ಬಹುಸಂಖ್ಯಾತರ ಪ್ರಜ್ಞೆಯಾಗಿಸಲು, ಕೆಲವು ವರ್ಗದ ಜನರು ಮತ್ತು ಇಲ್ಲಿನ ಮಾರಿಕೊಂಡ ಮಾಧ್ಯಮಗಳು ಹಗಲಿರುಳು ಶ್ರಮಿಸುತ್ತಿವೆ. ಈ ಸಿನಿಮಾ ಕುರಿತ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುವ ಹೊತ್ತಿಗೆ ಕರ್ನಾಟಕದಲ್ಲಿಯೇ ನಡೆದ ಒಂದು ಘಟನೆ: ಕನ್ನಡದ ಪ್ರಸಿದ್ಧ ಸಿನಿಮಾ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕರೊಬ್ಬರು ಒಂದು ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸಹಜ ಮನುಷ್ಯತ್ವದ ಕಾಳಜಿಯಿಂದ ವ್ಯಕ್ತಪಡಿಸಿದ ಅಭಿಪ್ರಾಯದ ಸಲುವಾಗಿ ಅವರನ್ನು ಟಿ ವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಕೆಟ್ಟ ಭಾಷೆಗಳಿಂದ ಟ್ರೋಲ್ ಮಾಡಲಾಯಿತು. ಎಷ್ಟರಮಟ್ಟಿಗೆ ಅಂದರೆ, ಆ ಸಂಗೀತ ನಿರ್ದೇಶಕರು ತಮ್ಮದೇ ಅಭಿಪ್ರಾಯಕ್ಕೆ ವಿರುದ್ಧವಾದ ಹೇಳಿಕೆಯೊಂದನ್ನು ಕೊಟ್ಟು ಕ್ಷಮಾಪಣೆ ಕೇಳುವ ಮಟ್ಟಕ್ಕೆ. ಇದಕ್ಕೆ ಎರಡು ದಿನಗಳ ಹಿಂದೆ, ಹಿಂದಿ ಸಿನಿಮಾದ ಒಬ್ಬ ನಟಿ ವೇದಿಕೆಯೊಂದರಲ್ಲಿ ’1947ರಲ್ಲಿ ಈ ದೇಶ ಪಡೆದ ಸ್ವಾತಂತ್ರ್ಯ ಭಿಕ್ಷೆಯದು’ ಎಂದು ಕೊಟ್ಟ ಹೇಳಿಕೆಗೆ ಇದೇ ಟ್ರೋಲಿಗರಿಂದ ಯಾವ ಪ್ರತಿರೋಧವು ಬರಲಿಲ್ಲ. ಆದರೆ, ಆ ನಟಿ ತನ್ನ ಹೇಳಿಕೆಗೆ ತಾನು ಬದ್ಧ, ಇದನ್ನು ವಿರೋಧಿಸುವರು ಅದಕ್ಕೆ ದಾಖಲೆ ನೀಡಿ ಎಂದು ಅಷ್ಟೇ ದ್ರಾಷ್ಟ್ಯದಿಂದ ಪ್ರತಿಯಾಗಿ ಟ್ವೀಟ್ ಮಾಡಿದರು. ಇದು ಇಂದಿನ ಭಾರತದ ಸ್ಥಿತಿ: ದೇರ್ ಇಸ್ ನೋ ಈವಿಲ್?

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...