Homeಅಂತರಾಷ್ಟ್ರೀಯ'ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ': ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

- Advertisement -
- Advertisement -

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ.

ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ ಹಲ್ಲೆ, ಹಸಿವು ಮತ್ತು ಲೈಂಗಿಕ ದೌರ್ಜನ್ಯದಂತಹ ಗಂಭೀರ ಹಿಂಸೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಸಾಕ್ಷ್ಯಗಳನ್ನು ಒಳಗೊಂಡ ವರದಿ ಬಿಡುಗಡೆ ಮಾಡಿದೆ.

ಅಕ್ಟೋಬರ್ 2023ರ ಹಮಾಸ್ ದಾಳಿಯ ನಂತರ ಇಸ್ರೇಲ್‌ನಿಂದ ಬಂಧನಕ್ಕೊಳಗಾದ 59 ಪ್ಯಾಲೆಸ್ತೀನ್ ಪತ್ರಕರ್ತರನ್ನು ಸಿಪಿಜೆ ಸಂದರ್ಶಿಸಿದೆ. ಇವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ 58 ಪತ್ರಕರ್ತರು ತಮಗೆ ದೈಹಿಕ ಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಅಮಾನವೀಯ ಕಿರುಕುಳ ನೀಡಲಾಗಿದೆ ಎಂದು ಸಾಕ್ಷ್ಯ ನೀಡಿದ್ದಾರೆ.

ನಿರಂತರ ಥಳಿತ, ಹಸಿವಿನಿಂದ ಇರಿಸುವುದು, ಕಣ್ಣಿಗೆ ಬಟ್ಟೆ ಕಟ್ಟಿ ಅತಿ ಹೆಚ್ಚಿನ ಶಬ್ದದ ಸಂಗೀತ ಕೇಳಿಸುವುದು ಮತ್ತು ವೈದ್ಯಕೀಯ ನೆರವು ನಿರಾಕರಿಸುವಂತಹ ತೀವ್ರ ಕಿರುಕುಳಗಳನ್ನು ಪತ್ರಕರ್ತರು ವಿವರಿಸಿದ್ದಾರೆ. ಜೈಲಿನಲ್ಲಿ ನೀಡುತ್ತಿದ್ದ ಅಸಮರ್ಪಕ ಆಹಾರದಿಂದಾಗಿ ಅವರು ಸರಾಸರಿ 23.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಇಸ್ರೇಲ್ ಅಧಿಕಾರಿಗಳು ನಡೆಸಿದ್ದಾರೆನ್ನಲಾದ ಈ ದೌರ್ಜನ್ಯಗಳು ಅತ್ಯಂತ ಭೀಕರವಾಗಿವೆ. ಪತ್ರಕರ್ತರಿಗೆ ಬೆತ್ತದಿಂದ ಹೊಡೆಯುವುದು, ವಿದ್ಯುತ್ ಶಾಕ್ ನೀಡುವುದು ಮತ್ತು ಮಲಚರಂಡಿ ನೀರಿನಲ್ಲಿ ನಿಲ್ಲಿಸುವುದು ಸೇರಿದಂತೆ ಅತೀವ ವೇದನೆ ನೀಡುವ ದೈಹಿಕ ಭಂಗಿಗಳಲ್ಲಿ ಇರಿಸುವಂತಹ ಕ್ರೂರ ಕೃತ್ಯಗಳು ನಡೆದಿವೆ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲದೆ, ಲೈಂಗಿಕ ದೌರ್ಜನ್ಯವೂ ನಡೆದಿದ್ದು, ಇಬ್ಬರು ಪತ್ರಕರ್ತರು ತಾವು ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಸಾಕ್ಷ್ಯ ನುಡಿದಿದ್ದಾರೆ ಎಂದಿದೆ.

ಪತ್ರಕರ್ತ ಸಾಮಿ ಅಲ್-ಸಾಯಿ ಅವರು ಇಸ್ರೇಲ್‌ನ ಮೆಗಿಡ್ಡೊ ಕಾರಾಗೃಹದಲ್ಲಿ ತಮಗಾದ ಭೀಕರ ಅನುಭವವನ್ನು ವಿವರಿಸಿದ್ದಾರೆ. ಸೈನಿಕರು ತಮ್ಮನ್ನು ಬೆತ್ತಲೆಗೊಳಿಸಿ ಸಣ್ಣ ಕೋಣೆಯಲ್ಲಿ ಇರಿಸಿ ಬೆತ್ತ ಮತ್ತು ಇತರ ವಸ್ತುಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ದೂರಿದ್ದಾರೆ ಎಂದಿರುವ ವರದಿ, ಈ ಘೋರ ಕಿರುಕುಳವು ಅವರನ್ನು ತೀವ್ರವಾದ ಮಾನಸಿಕ ಖಿನ್ನತೆ ಮತ್ತು ಆಘಾತಕ್ಕೆ ತಳ್ಳಿದೆ ಎಂದು ತಿಳಿಸಿದೆ.

ಸಿಪಿಜೆ ಸಾಕ್ಷ್ಯಗಳಲ್ಲಿ ಲೈಂಗಿಕ ದೌರ್ಜನ್ಯದ ವಿವರಣೆಗಳು ಪದೇ ಪದೇ ಕಂಡುಬಂದಿವೆ. ಪತ್ರಕರ್ತರನ್ನು ಅವಮಾನಿಸಲು, ಭಯಭೀತರನ್ನಾಗಿಸಲು ಮತ್ತು ಅವರ ಮನಸ್ಸಿನ ಮೇಲೆ ಶಾಶ್ವತವಾಗಿ ಮಾಯದ ಗಾಯವನ್ನುಂಟುಮಾಡುವ ಉದ್ದೇಶದಿಂದ ಈ ಹಲ್ಲೆಗಳನ್ನು ನಡೆಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

“ನಾವು ನಿಮ್ಮ ಕುಟುಂಬಸ್ಥರನ್ನು ಕೊಲ್ಲುತ್ತೇವೆ”

ಸಿಪಿಜೆಯ ಇತರ ಸಾಕ್ಷ್ಯಗಳು ಪತ್ರಕರ್ತರು ಅನುಭವಿಸಿದ ಮಾನಸಿಕ ಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿವೆ. ಕುಟುಂಬ ಸದಸ್ಯರನ್ನು ಕೊಲ್ಲುವ ಬೆದರಿಕೆ ಹಾಕುವುದು, ಅತಿ ಹೆಚ್ಚಿನ ಶಬ್ದದ ಸಂಗೀತದ ಮೂಲಕ ನಿದ್ರಾಹೀನತೆ ಉಂಟುಮಾಡುವುದು ಮತ್ತು ಗಂಭೀರ ಮೂಳೆ ಮುರಿತ ಹಾಗೂ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ನೀಡದೆ ವೈದ್ಯಕೀಯ ನಿರ್ಲಕ್ಷ್ಯ ತೋರುವುದು ಸೇರಿದಂತೆ ಹತ್ತು ಹಲವು ಕ್ರೂರ ವಿಧಾನಗಳನ್ನು ಅಲ್ಲಿ ಬಳಸಲಾಗಿದೆ ಎಂದು ವರದಿ ಹೇಳಿದೆ.

ಪತ್ರಕರ್ತ ಅಮೀನ್ ಬರಾಕಾ ಅವರು ಅಲ್-ಜಝೀರಾ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿ ತಮಗೆ ಪದೇ ಪದೇ ಬೆದರಿಕೆ ಹಾಕಲಾಗುತ್ತಿತ್ತು ಎಂದು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಒಬ್ಬ ಇಸ್ರೇಲಿ ಸೈನಿಕ ಅರೆಬಿಕ್ ಭಾಷೆಯಲ್ಲಿ, “ಅಲ್- ಜಝೀರಾ ವರದಿಗಾರ ವೇಲ್ ಅಲ್-ದಹ್ದೂಹ್ ನಮ್ಮನ್ನು ವಿರೋಧಿಸಿ ಗಾಝಾ ಪಟ್ಟಿಯಲ್ಲೇ ಉಳಿದುಕೊಂಡಿದ್ದಕ್ಕಾಗಿ ನಾವು ಅವನ ಕುಟುಂಬವನ್ನೇ ಕೊಂದೆವು. ನಿನ್ನ ಕುಟುಂಬವನ್ನೂ ನಾವು ಕೊಲ್ಲುತ್ತೇವೆ” ಎಂದು ಬರಾಕಾ ಅವರು ಸಿಪಿಜೆ ವರದಿಗೆ ತಿಳಿಸಿದ್ದಾರೆ.

“ನನ್ನನ್ನು ವರ್ಗಾವಣೆ ಮಾಡಿದ ಪ್ರತಿಯೊಂದು ಜೈಲಿನಲ್ಲೂ ನಾನು ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಹೊಟ್ಟೆಗೆ ಬಿದ್ದ ಪೆಟ್ಟುಗಳಿಂದ ನಾನು ಇಂದಿಗೂ ನೋವು ಅನುಭವಿಸುತ್ತಿದ್ದೇನೆ ಮತ್ತು ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ” ಎಂದಿದ್ದಾರೆ.

“ಇವು ಕೇವಲ ಬಿಡಿ ಘಟನೆಗಳಲ್ಲ. ಪತ್ರಕರ್ತರನ್ನು ಬೆದರಿಸಲು, ಅವರ ಧ್ವನಿಯನ್ನು ಅಡಗಿಸಲು ಮತ್ತು ಸತ್ಯವನ್ನು ಹೊರಹಾಕುವ ಅವರ ಸಾಮರ್ಥ್ಯವನ್ನು ನಾಶಮಾಡಲು ರೂಪಿಸಲಾದ ಉದ್ದೇಶಪೂರ್ವಕ ತಂತ್ರವನ್ನು ಇವು ಬಹಿರಂಗಪಡಿಸುತ್ತವೆ” ಎಂದು ಸಿಪಿಜೆ ಪ್ರಾದೇಶಿಕ ನಿರ್ದೇಶಕಿ ಸಾರಾ ಕುದಾ ಹೇಳಿದ್ದಾರೆ.

ಸಿಪಿಜೆ ತಿಳಿಸಿರುವಂತೆ, ಜೈಲಿನಲ್ಲಿರುವ ಅನೇಕ ಪತ್ರಕರ್ತರಿಗೆ ಕನಿಷ್ಠ ಕಾನೂನು ರಕ್ಷಣೆಗಳನ್ನು ಸಹ ನೀಡಲಾಗಿಲ್ಲ.

ಸಂದರ್ಶಿಸಲಾದವರಲ್ಲಿ ಶೇಕಡ 80ರಷ್ಟು ಜನರು ಇಸ್ರೇಲ್‌ನ ಆಡಳಿತಾತ್ಮಕ ಬಂಧನ ವ್ಯವಸ್ಥೆಯಡಿಯಲ್ಲಿ ಬಂಧಿಸಲ್ಪಟ್ಟಿದ್ದರು. ಅಂದರೆ ಅವರ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲಾಗಿಲ್ಲ. ನಾಲ್ವರಲ್ಲಿ ಒಬ್ಬರು ತಮಗೆ ವಕೀಲರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದಿದ್ದಾಗಿ ಸಿಪಿಜೆ ತಿಳಿಸಿದೆ.

ಸಂದರ್ಶನಕ್ಕೊಳಗಾದವರಲ್ಲಿ ಬಹುಪಾಲು ಪತ್ರಕರ್ತರು ತಾವು ತೀವ್ರ ಹಸಿವು ಅಥವಾ ಅಪೌಷ್ಟಿಕತೆಯನ್ನು ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ ಎಂದು ಸಿಪಿಜೆ ಹೇಳಿದೆ. ಇದನ್ನು ಪುಷ್ಟೀಕರಿಸುವಂತಹ ಬಂಧಿತರ ವೆರಿಫೈಡ್ ಫೋಟೋಗಳನ್ನು ಅದು ಹಂಚಿಕೊಂಡಿದೆ. ಅವುಗಳಲ್ಲಿ ಪತ್ರಕರ್ತರ ‘ಬಾಡಿದ ಮುಖಗಳು, ಎದ್ದು ಕಾಣುವ ಪಕ್ಕೆಲುಬುಗಳು ಮತ್ತು ಗುಳಿಬಿದ್ದ ಕೆನ್ನೆಗಳು’ ಕಂಡುಬಂದಿವೆ.

ಕೆಲವು ಪತ್ರಕರ್ತರು ತಾವು ಕೇವಲ ಬೂಸ್ಟ್ ಹಿಡಿದಿ ರೊಟ್ಟಿ ಮತ್ತು ಕೊಳೆತ ಆಹಾರ ತಿಂದು ಬದುಕಿದ್ದಾಗಿ ತಿಳಿಸಿದ್ದಾರೆ. ಇಸ್ರೇಲ್ ವಶದಲ್ಲಿದ್ದ ಅವಧಿಯಲ್ಲಿ ಈ ಬಂಧಿತರು ಸರಾಸರಿ 23.5 ಕಿಲೋಗ್ರಾಂ ತೂಕ ಕಳೆದುಕೊಂಡಿದ್ದಾರೆ ಎಂದು ಸಿಪಿಜೆ ವರದಿ ಮಾಡಿದೆ. ಈ ಭೀಕರ ಪರಿಸ್ಥಿತಿಯನ್ನು ವಿವರಿಸುತ್ತಾ ಪತ್ರಕರ್ತ ಇಮಾದ್ ಇಫ್ರಾಂಜಿ, “ನಾವು ನರಕದಿಂದ ಮರಳಿ ಬಂದಿದ್ದೇವೆ” ಎಂದು ಹೇಳಿದ್ದಾರೆ.

ಸಿಪಿಜೆ ಮುಖ್ಯಸ್ಥರಾದ ಜೋಡಿ ಗಿನ್ಸ್‌ಬರ್ಗ್ ಅವರು, ಇಸ್ರೇಲಿ ಜೈಲುಗಳಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ವ್ಯಾಪಕ ದೌರ್ಜನ್ಯಗಳ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ‘ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಕರೆ ನೀಡಿದ್ದಾರೆ.

“ಮಾನವೀಯ ಕಾನೂನುಗಳು ಬಂಧಿತರನ್ನು ನಡೆಸಿಕೊಳ್ಳುವ ಬಗ್ಗೆ ಸ್ಪಷ್ಟವಾದ ಮಾನದಂಡಗಳನ್ನು ರೂಪಿಸಿವೆ. ಈ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲರಾಗಿರುವುದಕ್ಕೆ ಅರ್ಥಪೂರ್ಣವಾದ ಹೊಣೆಗಾರಿಕೆ ಇರಲೇಬೇಕು” ಎಂದು ಗಿನ್ಸ್‌ಬರ್ಗ್ ಪ್ರತಿಪಾದಿಸಿದ್ದಾರೆ.

ಇಸ್ರೇಲಿ ಅಧಿಕಾರಿಗಳು ತಮ್ಮ ವಶದಲ್ಲಿರುವ ಪ್ಯಾಲೆಸ್ತೀನ್‌ ಕೈದಿಗಳ ಮೇಲೆ ಚಿತ್ರಹಿಂಸೆ ಮತ್ತು ಅತ್ಯಾಚಾರ ಸೇರಿದಂತೆ ವ್ಯಾಪಕವಾದ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪಗಳನ್ನು ದೀರ್ಘಕಾಲದಿಂದ ಕೇಳಿ ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಕುಖ್ಯಾತ Sde Teiman ಬಂಧನ ಕೇಂದ್ರದಲ್ಲಿ ಇಂತಹ ಘಟನೆಗಳು ಹೆಚ್ಚು ವರದಿಯಾಗಿವೆ. ಕಳೆದ ವರ್ಷ, ಇಸ್ರೇಲಿ ಜೈಲು ಕಾವಲುಗಾರರು ಪ್ಯಾಲೆಸ್ತೀನ್ ಕೈದಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ದೃಶ್ಯಗಳು ಸೋರಿಕೆಯಾಗಿ, ಇಸ್ರೇಲ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಈ ಹಿಂದೆ ಪ್ಯಾಲೆಸ್ತೀನ್ ಕೈದಿಗಳ ಅಮಾನವೀಯ ಸ್ಥಿತಿಯನ್ನು ಬಹಿರಂಗವಾಗಿಯೇ ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ, ಜೈಲಿನಲ್ಲಿರುವ ಕೈದಿಗಳಿಗೆ ನೀಡುವ ಆಹಾರದ ಪ್ರಮಾಣವನ್ನು ಕಾನೂನಿನ ಪ್ರಕಾರ ಅಗತ್ಯವಿರುವ ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸುವುದಾಗಿ ಅವರು ಹೇಳಿದ್ದರು. ಈ ಹೇಳಿಕೆಗಳು ಇಸ್ರೇಲಿ ಜೈಲುಗಳಲ್ಲಿನ ಹಸಿವು ಮತ್ತು ಕಿರುಕುಳದ ಆರೋಪಗಳಿಗೆ ಪುಷ್ಟಿ ನೀಡುವಂತಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ತಿಳಿಸಿವೆ.

ಗಾಝಾ ಯುದ್ಧದ ಸಮಯದಲ್ಲಿ ಇಸ್ರೇಲ್ ಉದ್ದೇಶಪೂರ್ವಕವಾಗಿ ಪ್ಯಾಲೆಸ್ತೀನ್ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿರುವ ವಿಷಯವು ಸಾಕ್ಷ್ಯಾಧಾರಗಳೊಂದಿಗೆ ದಾಖಲಾಗಿದೆ. ಯುದ್ಧ ಆರಂಭವಾದಾಗಿನಿಂದ ಈವರೆಗೆ ಗಾಝಾದಲ್ಲಿ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸುಮಾರು 300 ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಹತರಾಗಿದ್ದಾರೆ ಎಂದು Shireen.ps ವೆಬ್‌ಸೈಟ್‌ನ ಅಂಕಿಅಂಶಗಳು ತಿಳಿಸಿವೆ. ಈ ವೆಬ್‌ಸೈಟ್‌ಗೆ 2022ರಲ್ಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲಿ ಪಡೆಗಳಿಂದ ಗುಂಡೇಟು ತಿಂದು ಮೃತಪಟ್ಟ ಅಲ್ ಜಝೀರಾದ ಪತ್ರಕರ್ತೆ ಶಿರೀನ್ ಅಬು ಅಕ್ಲೆ ಅವರ ಹೆಸರನ್ನು ಇಡಲಾಗಿದೆ.

ಆಗಸ್ಟ್ 2025ರಲ್ಲಿ ಇಸ್ರೇಲ್ ದಕ್ಷಿಣ ಗಾಝಾದ ಆಸ್ಪತ್ರೆಯೊಂದರ ಮೇಲೆ ‘ಡಬಲ್-ಟ್ಯಾಪ್’ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಲ್- ಜಝೀರಾದ ಛಾಯಾಗ್ರಾಹಕ ಮೊಹಮ್ಮದ್ ಸಲಾಮಾ ಸೇರಿದಂತೆ ಐವರು ಪತ್ರಕರ್ತರು ಹತರಾಗಿದ್ದರು. ಮೃತಪಟ್ಟವರಲ್ಲಿ ರಾಯಿಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರೂ ಸೇರಿದ್ದರು.

ಈ ‘ಡಬಲ್-ಟ್ಯಾಪ್’ ತಂತ್ರವು (ಮೊದಲ ದಾಳಿಯ ನಂತರ ರಕ್ಷಣಾ ಕಾರ್ಯಕ್ಕೆ ಧಾವಿಸುವವರನ್ನು ಗುರಿಯಾಗಿಸಿ ಎರಡನೇ ದಾಳಿ ಮಾಡುವುದು) ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...