Homeಮುಖಪುಟಲಾಕ್‌ಡೌನ್‌ಗೆ 1 ವರ್ಷ: ಇನ್ನೂ ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ: ವಿಶೇಷ ವರದಿ

ಲಾಕ್‌ಡೌನ್‌ಗೆ 1 ವರ್ಷ: ಇನ್ನೂ ಚೇತರಿಸಿಕೊಳ್ಳದ ಹೋಟೆಲ್ ಉದ್ಯಮ: ವಿಶೇಷ ವರದಿ

- Advertisement -
- Advertisement -

ಲಾಕ್‌ಡೌನ್ ಹೆಸರು ಕೇಳಿದರೇ ಬೆಚ್ಚಿ ಬೀಳುವಂತಾಗಿದೆ ಇಂದಿನ ಪರಿಸ್ಥಿತಿ. ಸಾವಿರಾರು ಜನರ ಸಾವಿಗೆ ಕಾರಣವಾದ, ಲಕ್ಷಾಂತರ ಮಂದಿಯ ಬದುಕು ಬೀದಿಗೆ ತಂದಿಟ್ಟ ಮಾರ್ಚ್ 2020, 24ರ ಆ ಕರಾಳ ದಿನವನ್ನು ಮತ್ತೆ ನೆನಪಿಸಿಕೊಳ್ಳಲು ಕೂಡ ಜನ ಬಯಸುವುದಿಲ್ಲ. ಲಾಕ್‌ಡೌನ್‌ಗೆ ಒಂದು ವರ್ಷ ತುಂಬಿದೆ.

ಈ ಒಂದು ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕ ಬಾಧಿಸಿದ್ದಕ್ಕಿಂತ, ಒಕ್ಕೂಟ ಸರ್ಕಾರ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಜಾರಿ ಮಾಡಿದ ಲಾಕ್‌ಡೌನ್ ಸೃಷ್ಟಿಸಿದ ಅನಾಹುತಗಳ ಬಾಧೆಯೆ ಅಧಿಕವಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಬರಿಗಾಲಿನಲ್ಲಿ ತಮ್ಮ ಊರುಗಳಿಗೆ ಸೇರಲು ಹೊರಟರು. ಊರು ಸೇರದೆ ದಾರಿಯಲ್ಲೇ ಅಸುನೀಗಿದವರು ನೂರಾರು ಜನ. ಲಕ್ಷಾಂತರ ಸಂತ್ರಸ್ತರ ನೋವನ್ನು ಸರ್ಕಾರಗಳು ಕೇಳಿಸಿಕೊಳ್ಳಲಿಲ್ಲ.

ಅನ್‌ಲಾಕ್ 1.0, 2.0, 3.0, 4.0, 5.0 ಎಂಬ ನಿಯಮಾವಳಿಗಳ ಮೂಲಕ, ಹೊಸ ಹೊಸ ಮಾರ್ಗಸೂಚಿಗಳನ್ನು ಹೊರಡಿಸುತ್ತಾ ಒಕ್ಕೂಟ ಸರ್ಕಾರ ಲಾಕ್‌ಡೌನ್‌ಗೆ ಮುಕ್ತಿ ನೀಡಿತು. ಆದರೆ, ಲಾಕ್‌ಡೌನ್ ಸಮಯದಲ್ಲಿ ಮತ್ತು ಲಾಕ್‌ಡೌನ್ ಅನ್‌ಲಾಕ್ ಆದನಂತರ ಮಧ್ಯಮ ವರ್ಗದ ಉದ್ಯಮಗಳ ಮೇಲೆ ಆದ ಪರಿಣಾಮಗಳು ಇಂದಿಗೂ ಕಾಡುತ್ತಿವೆ.

ಬೆಂಗಳೂರು ಅವಕಾಶಗಳ ತವರೂರು ಎಂಬ ಕಾರಣದಿಂದ ಹಳ್ಳಿಗಾಡಿನಿಂದ ವಲಸೆ ಬರುವವರ, ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸುವವರ, ದೂರದ ಜಿಲ್ಲೆಗಳಿಂದ ಹೊಸ ಅವಕಾಶ ಅರಸಿ ಬರುವವರ ನೆಚ್ಚಿನ ತಾಣವಾಗಿದೆ. ಇಲ್ಲಿಗೆ ಬಂದವರು ಹೆಚ್ಚುಕಮ್ಮಿ ಮೊದಲು ಆಶ್ರಯಿಸುವುದು ಹೋಟೆಲ್‌ಗಳನ್ನೆ. ಹೋಟೆಲ್‌ಗಳ ಊಟ-ಉಪಚಾರದಿಂದಲೇ ಇವರ ಕೆಲಸ ಆರಂಭವಾಗುತ್ತದೆ. ತಳ್ಳುಗಾಡಿ ಹೋಟೆಲ್‌ನಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ಗಳನ್ನು ಆಶ್ರಯಿಸಿರುವ ಲಕ್ಷಾಂತರ ಮಂದಿ ಬೆಂಗಳೂರನಲ್ಲಿದ್ದಾರೆ.

ಲಾಕ್‌ಡೌನ್ ನಂತರ ಹೋಟೆಲ್ ಉದ್ಯಮ ಕೂಡ 2020ರ ಮೇ ಅಂತ್ಯದವರೆಗೆ ಸಂಪೂರ್ಣ ಬಂದ್ ಆಯಿತು. ಕಾರ್ಮಿಕರು ಸೇರಿದಂತೆ ಹೋಟೆಲ್ ನಂಬಿಕೊಂಡಿದ್ದ ಲಕ್ಷಾಂತರ ಜನರಿದ್ದ ಕಾರಣ ಜೂನ್‌ನಲ್ಲಿ ಬರೀ ಪಾರ್ಸಲ್ ವ್ಯವಸ್ಥೆಗೆ ಅವಕಾಶ ನೀಡಲಾಯಿತು. ನಂತರ ಜುಲೈ ತಿಂಗಳಿನ 2ನೇ ವಾರದಿಂದ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸರ್ವಿಸ್ ನೀಡಲು ಅವಕಾಶ ನೀಡಲಾಯಿತು. ಆದರೂ ಕೂಡ ಕೊರೊನಾ ಲಾಕ್‌ಡೌನ್‌ನ ಕರಾಳತೆಯಿಂದ ಹೋಟೆಲ್ ಉದ್ಯಮ ಇನ್ನು ಚೇತರಿಸಿಕೊಂಡಿಲ್ಲ.

ಬೆಂಗಳೂರಿನಲ್ಲಿ ಸರಿಸುಮಾರು 24,500 ಹೋಟೆಲ್‌ಗಳಿವೆ. ಇದರಲ್ಲಿ 3,500 ಹೋಟೆಲ್‌ಗಳು ರೂಮ್ ಮತ್ತು ರೆಸ್ಟೋರೆಂಟ್ ಸೇವೆ ಒದಗಿಸುತ್ತಿವೆ. ಇನ್ನು 21 ಸಾವಿರ ಹೋಟೆಲ್‌ಗಳಲ್ಲಿ ಸಣ್ಣ ಪುಟ್ಟ ಹೋಟೆಲ್‌ನಿಂದ ಹಿಡಿದು ಫೈವ್‌ಸ್ಟಾರ್ ಹೋಟೆಲ್‌ಗಳು ಸೇರುತ್ತವೆ.

ಲಾಕ್‌ಡೌನ್‌ಗೂ ಮುಂಚೆ ಗ್ರಾಹಕರಿಂದ ತುಂಬಿರುತ್ತಿದ್ದ ಹೋಟೆಲ್‌ಗಳು ಇಂದು ಗ್ರಾಹಕರಿಗಾಗಿ ಕಾಯುವಂತಾಗಿದೆ. ಲಾಕ್‌ಡೌನ್‌ನಿಂದ ತಮ್ಮ ಊರುಗಳಿಗೆ ಹೋಗಿರುವ ಕಾರ್ಮಿಕರು ಇನ್ನೂ ಸಂಪೂರ್ಣವಾಗಿ ವಾಪಸ್ ಆಗಿಲ್ಲ. ಅನಕ್ಷರಸ್ಥರಿಗೆ ಊಟ, ವಸತಿ ಜೊತೆಗೆ ಕೆಲಸ ನೀಡುವ ಉದ್ಯಮ ಎಂದು ಹೆಚ್ಚು ಜನ ಹೋಟೆಲ್‌ಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಬಿಹಾರ, ಒರಿಸ್ಸಾ ಸೇರಿದಂತೆ ಉತ್ತರ ಭಾರತದ ಹೆಚ್ಚು ಕಾರ್ಮಿಕರು ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈಗ ಅವರೆಲ್ಲಾ ತಮ್ಮ ಊರುಗಳಿಗೆ ವಾಪಸ್ ಆಗಿದ್ದಾರೆ. ಬಂದರೂ ಅವರಿಗೆ ಸಂಬಳ ನೀಡುವ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರು ಇಲ್ಲ ಎಂಬುದು ಇನ್ನೊಂದು ವಾಸ್ತವ.

“ಇಷ್ಟು ವರ್ಷಗಳ ಉಳಿತಾಯವನ್ನು ಹೂಡಿ ಮಾರ್ಚ್ 13ಕ್ಕೆ ನನ್ನ ಕನಸಿನ ’ಶ್ರೀ ಬ್ರಾಹ್ಮಿ ಉಪಹಾರ ದರ್ಶಿನಿ’ ಎಂಬ ಪುಟ್ಟ ಹೋಟೆಲ್ ಆರಂಭಿಸಿದ್ದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಹೋಗುವ ಒಂಟಿ ಯುವಕ, ಯುವತಿಯರು ಈ ಏರಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಹೋಟೆಲ್ ಆರಂಭಿಸಲು ಕಾರಣ. ಆದರೆ, ಹೋಟೆಲ್ ಆರಂಭಿಸಿ 20 ದಿನವೂ ಆಗಿರಲಿಲ್ಲ. ನನ್ನ ಕನಸಿಗೆ ಕೊರೊನಾ ಲಾಕ್‌ಡೌನ್ ತಣ್ಣೀರು ಎರಚಿತು. ಒಳ್ಳೆಯ ವ್ಯಾಪಾರವಾಗುತ್ತಿದ್ದ ನನ್ನ ಹೋಟೆಲ್‌ಗೆ 20 ದಿನದಲ್ಲಿಯೇ ಬಾಗಿಲು ಹಾಕಬೇಕಾಯಿತು” ಎಂದು ನೊಂದುಕೊಳ್ಳುತ್ತಾರೆ ಹೋಟೆಲ್ ಮಾಲೀಕ ಸೋಮಶೇಖರ್.

“ಈಗೇನೊ ಹೋಟೆಲ್ ಓಪನ್ ಮಾಡಿಕೊಂಡು ಕೂತಿದೀವಿ. ಆದ್ರೆ ಜನ ಮಾತ್ರ ಇಲ್ಲ. ರಸ್ತೆಯಲ್ಲೇ ಜನ ಓಡಾಡುತ್ತಿಲ್ಲ. ಅಂತಹುದರಲ್ಲಿ ಹೋಟೆಲ್‌ಗೆ ಯಾರು ಬರ್ತಾರೆ. ಶಾಲಾ-ಕಾಲೇಜುಗಳು ಬಂದ್ ಆಗಿದ್ದರಿಂದ ಎಲ್ಲರೂ ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋದರು. ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದವರಿಗೆ ವರ್ಕ್ ಫ್ರಂ ಹೋಮ್ ಆಗಿದೆ. ಆದ್ದರಿಂದ ಈಗಲೂ ಜನ ಹೋಟೆಲ್‌ಗಳಿಗೆ ಬರುತ್ತಿಲ್ಲ. ಆದರೂ ವ್ಯಾಪಾರ ಇಂದಲ್ಲ ನಾಳೆ ಸರಿ ಹೋಗಬಹುದು ಎಂಬ ಆಸೆಯಿಂದ ಹೋಟೆಲ್ ತೆರೆಯುತ್ತಿದ್ದೇವೆ. ಆದರೆ ಸರ್ಕಾರ ಮತ್ತೆ ಲಾಕ್‌ಡೌನ್ ವಿಧಿಸಿದರೆ ನಮ್ಮ ಪಾಡು ಮಾತ್ರ ಏನಾಗುತ್ತದೋ ಎಂಬ ಭಯವಿದೆ” ಎಂದು ಸೋಮಶೇಖರ್ ಆತಂಕ ವ್ಯಕ್ತಪಡಿಸುತ್ತಾರೆ.

ಲಾಕ್‌ಡೌನ್ ಕಾರಣದಿಂದ ಸಾವಿರಾರು ಹೋಟೆಲ್‌ಗಳಿಗೆ ಶಾಶ್ವತವಾಗಿ ಬೀಗ ಬಿದ್ದಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಕಾರ್ಮಿಕರು ಪರ್ಯಾಯ ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ.

“ಲಾಕ್‌ಡೌನ್ ಆರಂಭದಲ್ಲಿ ನಮಗೆ ತುಂಬಾ ಕಷ್ಟವಾಯಿತು. ಎಲ್ಲಾ ಹೋಟೆಲ್‌ಗಳು ಸಂಪೂರ್ಣವಾಗಿ ಬಂದ್ ಮಾಡಿದೆವು. ಆದರೆ ಸರ್ಕಾರ ಬೇಗನೆ ಪಾರ್ಸಲ್ ವ್ಯವಸ್ಥೆಗೆ ಅವಕಾಶ ನೀಡಿದ್ದು ಸ್ಪಲ್ಪ ಸಮಾಧಾನ ನೀಡಿತ್ತು. ಆದರೆ ಆಗಲೂ ಕೂಡ 3,500ಕ್ಕೂ ಹೆಚ್ಚು ಹೋಟೆಲ್‌ಗಳು ಓಪನ್ ಆಗಲಿಲ್ಲ. ಈಗ ಸಂಪೂರ್ಣವಾಗಿ ಹೋಟೆಲ್ ತೆರೆಯಲು ಅವಕಾಶ ನೀಡಿದ್ದರೂ ಕೂಡ ಇನ್ನೂ 1,500 ಹೋಟೆಲ್‌ಗಳು ಓಪನ್ ಆಗೇ ಇಲ್ಲ. ಇದರಲ್ಲಿ ಒಂದು ಸಾವಿರ ಹೋಟೆಲ್‌ಗಳು ಶಾಶ್ವತವಾಗಿ ಮುಚ್ಚಿ ಹೋಗುವ ಸಂಭವವಿದೆ” ಎಂದು ಹೇಳುತ್ತಾರೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್.

“24,500 ಹೋಟೆಲ್‌ಗಳಲ್ಲಿ 1,500 ಹೋಟೆಲ್‌ಗಳು ಮುಚ್ಚುವ ಹಂತದಲ್ಲಿವೆ. ಅದು ಗಣನೆಗೆ ಬಂದಿರುವುದು. ಇದರಲ್ಲಿ 500 ಹೋಟೆಲ್‌ಗಳು ಐಟಿ ಸೆಕ್ಟರ್ ಓಪನ್ ಆಗಿ ಕೆಲಸಕ್ಕೆ ಜನ ಬರುವಂತಾದರೆ ಉಳಿಯುತ್ತವೆ ಇಲ್ಲದಿದ್ದರೇ ಇವುಗಳು ಕೂಡ ಮುಚ್ಚಿ ಹೋಗುತ್ತವೆ. ಈ ಹೋಟೆಲ್‌ಗಳು ಅವಲಂಬಿಸಿರುವುದು ಐಟಿ-ಬಿಟಿ ವಲಯದಲ್ಲಿ ಕೆಲಸ ಮಾಡುವವರ ಮೇಲೆ. ಇನ್ನು ಒಂದು ಸಾವಿರ ಹೋಟೆಲ್‌ಗಳು ಕಾರ್ಮಿಕರ ಅಲಭ್ಯತೆ, ಹಣಕಾಸಿನ ತೊಂದರೆ, ಬಾಡಿಗೆ ಸಮಸ್ಯೆಗಳ ಕಾರಣಕ್ಕೆ ಮತ್ತೆಂದು ಓಪನ್ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಪಿ.ಸಿ ರಾವ್.

ಹೋಟೆಲ್ ಉದ್ಯಮ ಅವಲಂಬಿಸಿರುವುದನ್ನು ಸಾರ್ವಜನಿಕರನ್ನು. ಗ್ರಾಹಕನಿಲ್ಲದಿದ್ದರೆ ಹೋಟೆಲ್ ನಡೆಸಿ ಪ್ರಯೋಜನವಿಲ್ಲ. ಆದರೆ, ಹೋಟೆಲ್ ಉದ್ಯಮ ಇಷ್ಟು ದಿನವಾದರೂ ಚೇತರಿಸಿಕೊಳ್ಳದಿರುವುದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ ಪ್ರವಾಸೋದ್ಯಮಕ್ಕೆ ಬ್ರೇಕ್ ಹಾಕಿರುವುದು. ಐಟಿ-ಬಿಟಿ ವಲಯಗಳು ಇನ್ನು ಕೆಲಸ ಆರಂಭಿಸಿರದಿರುವುದು.

ಐಟಿ-ಬಿಟಿ ವಲಯಗಳು

ಬೆಂಗಳೂರಿನಲ್ಲಿ 12 ಸಾವಿರ ಐಟಿ-ಬಿಟಿ ಕಂಪನಿಗಳಿವೆ. ಅದರಲ್ಲಿನ 45 ದೊಡ್ಡ ದೊಡ್ಡ ಕಂಪನಿಗಳನ್ನು ನಂಬಿಕೊಂಡು 1,500 ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಇನ್ಫೋಸಿಸ್ ಫುಡ್‌ಕೋರ್ಟ್ ಒಂದರಲ್ಲಿಯೇ 60 ಹೋಟೆಲ್‌ಗಳಿವೆ. ಒಂದೊಂದು ಕಂಪನಿಯ ಒಳಗೆ 20 ರಿಂದ 30 ಹೋಟೆಲ್‌ಗಳಿದ್ದವು. ಈಗ ಅವ್ಯಾವುವು ಓಪನ್ ಆಗಿಲ್ಲ. ಮತ್ತೆ ಓಪನ್ ಆಗುವ ಯಾವ ಸುಳಿವು ಇನ್ನು ಸಿಕ್ಕಿಲ್ಲ. ಇನ್ನೂ ಹಲವು ಕಂಪನಿಗಳಿಗೆ ಪುಟ್ಟಪುಟ್ಟ ಹೋಟೆಲ್‌ಗಳು ಮತ್ತು ಮನೆಗಳಿಂದ ಕ್ಯಾಟರಿಂಗ್ ಸರ್ವಿಸ್ ಇತ್ತು. ಇದು ಕೂಡ ನಿಂತುಹೋಗಿದೆ..

ಮದುವೆ, ಸಮಾರಂಭಗಳಿಗೆ ಕಡಿತ

ಲಾಕ್‌ಡೌನ್‌ನಿಂದಾಗಿ ಮದುವೆ, ಸಮಾರಂಭಗಳು, ವಿಶೇಷ ಕಾರ್ಯಕ್ರಮಗಳು ಇಲ್ಲದೆ ಇರುವುದು ಅಥವಾ ಕಡಿಮೆಯಾಗಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಮದುವೆಗೆ, ಹಲವು ಕಾರ್ಯಕ್ರಮಗಳಿಗೆ ಜನರ ಸಂಖ್ಯೆ ಮೇಲೆ ಸರ್ಕಾರ ನಿಯಂತ್ರಣ ಹೇರಿದೆ. 500, 1000 ಗೆಸ್ಟ್‌ಗಳಿರುತ್ತಿದ್ದ ಕಡೆ 100 ಜನ ಆಗಿರುವುದು ಕೂಡ ಹೋಟೆಲ್ ಉದ್ಯಮಕ್ಕೆ ಲಾಕ್‌ಡೌನ್ ಕೊಟ್ಟ ದೊಡ್ಡ ಪೆಟ್ಟು.

ಪ್ರವಾಸೋದ್ಯಮ

ಪ್ರವಾಸೋದ್ಯಮಕ್ಕೆ ಲಾಕ್‌ಡೌನ್ ತಡೆ ನೀಡಿದ್ದು, ಅದು ಹೆಚ್ಚು ಹೊಡೆತ ನೀಡಿದ್ದು ಹೋಟೆಲ್ ಉದ್ಯಮಕ್ಕೆ. ವಿದೇಶಿಗರು ನಗರಕ್ಕೆ ಬರುವುದು ನಿಂತಿದ್ದರಿಂದ ಹೋಟೆಲ್‌ಗಳು ಅರ್ಧ ಜೀವವಾದವು. ಮುಂಬೈ ಮತ್ತು ದೆಹಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ರೂಮ್ ಮತ್ತು ರೆಸ್ಟೋರೆಂಟ್ ಇರುವ ಹೋಟೆಲ್‌ಗಳು ಇವರ ಮೇಲೆಯೇ ಅವಲಂಬಿತರಾಗಿದ್ದರು. ಈಗ ಅದ್ಯಾವುದು ನಡೆಯುತ್ತಿಲ್ಲ. ಬೇರೆ ಕಡೆಯಿಂದ ಬಂದ ಕಂಪನಿ ಮ್ಯಾನೇಜರ್ ಜೊತೆಗೆ ಮೀಟಿಂಗ್‌ಗಳು ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿಯೇ ನಡೆಯುತ್ತಿತ್ತು. ಕೊರೊನಾ ಲಾಕ್‌ಡೌನ್ ಕಾರಣದಿಂದ ಆನ್‌ಲೈನ್ ಮೀಟಿಂಗ್‌ಗಳು ಆರಂಭವಾಗಿ ಹೋಟೆಲ್ ಉದ್ಯಮಕ್ಕೆ ನಷ್ಟ ಉಂಟಾಗುತ್ತಿದೆ.

ಕಾರ್ಮಿಕರು ವಾಪಸ್

ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಹೇರಳವಾಗಿ ನಡೆಯುತ್ತಿದ್ದವು. ಲಾಕ್‌ಡೌನ್ ಕಾರಣದಿಂದ ಈ ಎಲ್ಲ ಕೆಲಸಗಳು ನಿಂತಿದ್ದರಿಂದ ಬಿಹಾರ, ಒರಿಸ್ಸಾ ಮೂಲದ ಕಟ್ಟಡ ಕಾಮಿಕರು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ ಹೊರಟುಹೋದರು. ಒಂದು ಬೃಹತ್ತಾದ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 1000 ದಿಂದ 1,500 ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರಲ್ಲಿ ಕನಿಷ್ಠ 25% ಜನ ಹೋಟೆಲ್‌ಗಳನ್ನು ಅವಲಂಬಿಸಿರುವವರು ಇರುತ್ತಿದ್ದರು. ಈಗ ಇವರೆಲ್ಲಾ ಇಲ್ಲದ ಕಾರಣಕ್ಕೆ ಮಧ್ಯಮ ವರ್ಗದ ಹೋಟೆಲ್‌ಗಳು ಗ್ರಾಹಕರಿಲ್ಲದೆ ಪರದಾಡುವಂತಾಗಿದೆ.

“ಹೆಚ್ಚಾಗಿ ಅನಕ್ಷರಸ್ಥ ಜನರಿಗೆ ಊಟ, ವಸತಿ ಜೊತೆಗೆ ಕೆಲಸ ಕೊಡುವ ಉದ್ಯಮ ನಮ್ಮದು. ಈಗ ಅವರೆಲ್ಲಾ ಬೇರೆಡೆ ಕೆಲಸಕ್ಕೆ ಹೋಗಬೇಕಾಗಿದೆ. ಲಾಕ್‌ಡೌನ್‌ನಲ್ಲಿ ಹೈನುಗಾರಿಕೆ ನಡೆಸುತ್ತಿದ್ದ ರೈತರಿಗೆ ಹೆಚ್ಚಿನ ನಷ್ಟವಾಗಿದೆ. ಪ್ರಮುಖವಾಗಿ ಹಾಲು ಅತ್ಯಧಿಕವಾಗಿ ನಷ್ಟವಾಗುತ್ತಿರುವ ಪದಾರ್ಥವಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಕೂಡ ಮಾಡಿದ್ವಿ. ಲಾಕ್‌ಡೌನ್‌ನಿಂದ ಕೇವಲ ಹೋಟೆಲ್ ಕಾರ್ಮಿಕರಿಗೆ ಮಾತ್ರವಲ್ಲ ಇದನ್ನು ನಂಬಿಕೊಂಡಿದ್ದ ಹಲವು ವಲಯಗಳಿಗೆ ತೊಂದರೆಯಾಗಿದೆ” ಎನ್ನುತ್ತಾರೆ ಪಿ.ಸಿ. ರಾವ್.

“ಈಗತಾನೇ ಕೊಂಚಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದೇವೆ. ಆದರೆ ಜನ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಮತ್ತೆ ಲಾಕ್‌ಡೌನ್ ಮಾಡಿದರೆ ತುಂಬಾ ಕಷ್ಟವಾಗುತ್ತದೆ. ಆದರೆ, ರಾಜಕೀಯ ಪಕ್ಷಗಳ ಪ್ರತಿಭಟನೆಗಳು, ಸಮಾವೇಶಗಳು ನಡೆಯುವಾಗ ಲಕ್ಷಾಂತರ ಮಂದಿ ಒಂದೆಡೆ ಸೇರುತ್ತಾರೆ. ಅವರಿಗೆ ಕೊರೊನಾ ನಿಯಮಗಳೇಕಿಲ್ಲ” ಎಂದು ಪ್ರಶ್ನಿಸುತ್ತಾರೆ ರಾವ್.

“ಕೊರೊನಾ ಸೋಂಕು ನಗರದಲ್ಲಿ ಅಧಿಕವಾಗಿದ್ದಾಗ ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. 48 ಗಂಟೆಗಳಲ್ಲಿ, 23ಕ್ಕೂ ಅಧಿಕ ಆಸ್ಪತ್ರೆಗಳ ಪಕ್ಕದ ಹೋಟೆಲ್‌ಗಳನ್ನು ಅತಿ ಕಡಿಮೆ ಬೆಲೆಗೆ ಹಾಸ್ಪಿಟಲ್ ಆಗಿ ಮಾರ್ಪಾಡು ಮಾಡಿ ಜನರ ಉಪಯೋಗಕ್ಕೆ ಕೊಟ್ಟಿದ್ದೇವೆ. ಆದರೆ, ಸರ್ಕಾರ ಹೋಟೆಲ್ ಓಪನ್ ಮಾಡಲು ಅವಕಾಶ ನೀಡಿತೇ ಹೊರತು ನಮಗೆ ಬೇರೆ ಯಾವುದೇ ರೀತಿಯಲ್ಲಿಯೂ ಸಹಾಯ ಮಾಡಲಿಲ್ಲ” ಎಂದು ಕೂಡ ಅವರು ಹೇಳುತ್ತಾರೆ.

“ಅಂದರೆ, ಬಾರ್ ಅಂಡ್ ರೆಸ್ಟೋರೆಂಟ್‌ಗಳು 6 ತಿಂಗಳು ಓಪನ್ ಆಗಲಿಲ್ಲ. ತಿಂಗಳಿಗ 75 ಸಾವಿರ ಇರುವ ಅವುಗಳ ಲೈಸೆನ್ಸ್ ಫೀ ಕಡಿಮೆ ಮಾಡಿ ಎಂದೆವು. ನಾವು ಉಪಯೋಗಿಸದೇ ಇದ್ದ ಸಂದರ್ಭದ್ದು ಎಂದು ಕೇಳಿದ್ದೆವು. ಪ್ರಾಪರ್ಟಿ ಟ್ಯಾಕ್ಸ್, ಲೈಸೆನ್ಸ್ ಶುಲ್ಕ ಕಡಿತ, ಕರೆಂಟ್ ಬಿಲ್ ಹೀಗೆ ಹಲವು ಸಂಗತಿಗಳಲ್ಲಿ ಸರ್ಕಾರ ನಮ್ಮ ಸಹಾಯಕ್ಕೆ ಬರಬಹುದಿತ್ತು. ಆದರೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ” ಎನ್ನುತ್ತಾರೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ, ಪಿ.ಸಿ.ರಾವ್

ಕ್ಯಾಟರಿಂಗ್ ಸರ್ವಿಸ್ ಕಡಿಮೆಯಾದ ಬಗ್ಗೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭಟ್ಕಳದ ನಾಗರಾಜು ಹೇಳಿದ್ದು ಹೀಗೆ: “ಲಾಕ್‌ಡೌನ್ ವಿಧಿಸಿದಾಗ ಆ 2 ತಿಂಗಳು ನಾವು ನರಕ ಅನುಭವಿಸಿದ್ದೇವೆ. ಅಂದಿನ ಕ್ಷಣಗಳನ್ನು ನೆನೆಸಿಕೊಳ್ಳಲು ಸಹ ಭಯವಾಗುತ್ತದೆ. ಬೇಕರಿ ನಡೆಸುತ್ತಿದ್ದೇವೆ. ಆದರೆ ನಮ್ಮ ಮುಖ್ಯ ಉದ್ಯೋಗ ಕ್ಯಾಟರಿಂಗ್ ಸರ್ವಿಸ್ ನೀಡುವುದೇ ಆಗಿತ್ತು. ಸಮಾರಂಭಗಳೇ ಇಲ್ಲ. ಮದುವೆಗೂ ಜನರ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾಗಿ ಆರ್ಡರ್ ಕೂಡ ಬರುತ್ತಿಲ್ಲ. ಬೇಕರಿಗೆ ಬಂದು ತಿನಿಸು ತೆಗೆದುಕೊಳ್ಳುವುದು ಈಗ ಕಡಿಮೆಯಾಗಿದೆ. ಲಾಕ್‌ಡೌನ್‌ಗಿಂತ ಮುಂಚೆ ಇದ್ದ ವ್ಯಾಪಾರಕ್ಕೂ ಈಗಿನ ವ್ಯಾಪಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊರೊನಾ ಭಯಕ್ಕೆ ಜನ ಬೇಕರಿಯಲ್ಲಿ ತಿನಿಸು ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದಾರೆ. ಇಲ್ಲೇ ಒಂದೆರಡು ಬೇಕರಿಗಳು ಮುಚ್ಚಿ ಹೋದವು. ಕಷ್ಟವೋ ಸುಖವೋ ನೋಡುವ ಏನಾಗುತ್ತದೆ ಅಂತಾ ದಿನಾ ಗ್ರಾಹಕರಿಗಾಗಿ ಕಾಯುತ್ತೇವೆ” ಎನ್ನುತ್ತಾರೆ.

ಮತ್ತೆ ಲಾಕ್‌ಡೌನ್ ಘೋಷಣೆ ಬಗ್ಗೆ ಸುಳಿವು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಾಜ್, “ಮತ್ತೆ ಈಗ ಲಾಕ್‌ಡೌನ್ ಘೋಷಿಸಿದರೇ ಜನರೇ ರೊಚ್ಚಿಗೇಳುತ್ತಾರೆ. ಈಗತಾನೇ ಕೊಂಚ ಕೊಂಚ ಚೇತರಿಕೆ ಕಾಣಿಸೋಕೆ ಶುರುವಾಗಿದೆ. ಮತ್ತೆ ಲಾಕ್‌ಡೌನ್ ಘೋಷಿಸಿದರೆ, ಎಲ್ಲರೂ ಹಸಿವಿನಿಂದ ಸಾಯುತ್ತಾರೆ ಅಷ್ಟೇ. ಮತ್ತೆ ಲಾಕ್‌ಡೌನ್ ಮಾಡುವವರು ಔಷಧಿ ಯಾಕೆ ತರಬೇಕಿತ್ತು? ಎಲ್ಲರಿಗೂ ಔಷಧಿ ಕೊಡುತ್ತೇವೆ ಎಂದು ತಿಳಿಸಿ, ಕೊರೊನಾ ಹೋಗುತ್ತದೆ ಎಂದು ಹೇಳಿ ಈಗ ಮತ್ತೆ ಲಾಕ್‌ಡೌನ್ ಅಂದರೆ ಹೇಗೆ” ಎಂದು ಪ್ರಶ್ನಿಸುತ್ತಾರೆ.

ಇನ್ನು, ಬಹುತೇಕ ಹೋಟೆಲ್‌ಗಳು ವ್ಯವಹಾರ ನಡೆಸುವುದು ಬಾಡಿಗೆ ಕಟ್ಟಡದಲ್ಲಿಯೇ. ಅದರಲ್ಲೂ ಸಣ್ಣ-ಪುಟ್ಟ ಹೋಟೆಲ್‌ಗಳನ್ನು ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ತೆರೆದಿರಲಾಗುತ್ತದೆ. ಕೊರೊನಾ ಲಾಕ್‌ಡೌನ್ ಕೊಟ್ಟ ಹೊಡೆತಕ್ಕೆ ಈ ಅಂಗಡಿಗಳು ಖಾಲಿಯಾಗಿರುವುದು ಈಗ ಎಲ್ಲೆಡೆ ಕಾಣಿಸುತ್ತಿದೆ. ಮೊದಲು ಒಂದು ರಸ್ತೆಗೆ ಕನಿಷ್ಠ 6-7 ಇರುತ್ತಿದ್ದ ಸಣ್ಣ ಹೋಟೆಲ್‌ಗಳ ಸಂಖ್ಯೆ ಈಗ 3-4ಕ್ಕೆ ಬಂದು ನಿಂತಿದೆ. ಎಲ್ಲೆಡೆ ’ಬಾಡಿಗೆಗಿದೆ’, ’ಶಾಪ್ ಖಾಲಿ ಇದೆ’, ’ಟುಲೆಟ್’ ಬೋರ್ಡ್‌ಗಳು ಸಾಮಾನ್ಯವಾಗಿವೆ. ಬಾಡಿಗೆ ಮನೆಗಳ ಮಾಲೀಕರ ಪರಿಸ್ಥಿತಿ ಮತ್ತೊಂದು ರೀತಿಯದ್ದು.

ಮೊದಲು ಹೋಟೆಲ್‌ಗಳಿದ್ದ ಜಾಗದಲ್ಲಿ ಹೊಸ ಅಂಗಡಿಗಳು ತಲೆ ಎತ್ತಿವೆ. ಮತ್ತೆ ಕೆಲವು ಕಡೆಗಳಲ್ಲಿ ಹೊಸ ಹೊಸ ಸಣ್ಣ ಹೋಟೆಲ್‌ಗಳು ಆರಂಭವಾಗಿ ತಮ್ಮ ಅದೃಷ್ಟದ ಪರೀಕ್ಷೆಗಿಳಿದಿವೆ. ಹೋಟೆಲ್‌ಗಳಿಗಾಗಿ, ಬೇಕರಿ, ಕ್ಯಾಟರಿಂಗ್ ಸರ್ವಿಸ್ ನಡೆಸುವವರಿಗೆ ಬಾಡಿಗೆ ನೀಡಿದ್ದ ಬಾಡಿಗೆದಾರ, ಇತ್ತ ಬಾಡಿಗೆ ಇಲ್ಲದೆ ಖಾಲಿ ಬೋರ್ಡ್ ಹಾಕಿಕೊಂಡಿರುವ ಸ್ಥಿತಿ ಬಂದಿದೆ.

ಹೋಟೆಲ್ ಉದ್ಯಮ ಕೇವಲ ಹೋಟೆಲ್ ಕಾರ್ಮಿಕರ ಮೇಲೆ ಪರಿಣಾಮ ಬೀರಿಲ್ಲ. ರೈತರ ಮೇಲೆ ಹೋಟೆಲ್ ಲಾಕ್‌ಡೌನ್ ಹೆಚ್ಚು ಪರಿಣಾಮ ಬೀರಿದೆ. ಹಾಲು ಉತ್ಪಾದಕರು, ತರಕಾರಿಗಳನ್ನು ಬೆಳೆಯುವವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಾರ್ಮಿಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಬಾಡಿಗೆದಾರ ಬಾಡಿಗೆ ಇಲ್ಲದೆ ಪರೋಕ್ಷವಾಗಿ ನಿರುದ್ಯೋಗಿಯಾಗಿದ್ದಾನೆ.

ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಮಧ್ಯಮವರ್ಗದ ಹೋಟೆಲ್‌ಗಳಿಗೆ ಇಂಧನ ಬೆಲೆ ಏರಿಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ನುಂಗಲಾರದ ತುತ್ತಾಗಿವೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಕೂಡ ಆಗಿದ್ದು, ತಿನಿಸುಗಳ ಬೆಲೆ ಏರಿಕೆ ಹೊರೆಯಾಗಿ ಪರಿಣಮಿಸಿದೆ. ಈ ಮಧ್ಯದಲ್ಲೆ ಮತ್ತೊಂದು ಲಾಕ್‌ಡೌನ್‌ಗೆ ಸರ್ಕಾರ ಸಣ್ಣ ಸುಳಿವು ನೀಡಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ಹೇರುವುದಿಲ್ಲ- ಸಿಎಂ ಯಡಿಯೂರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...