ದಲಿತ ಆರ್ಟಿಐ ಕಾರ್ಯಕರ್ತ ಅಮ್ರಾಬಾಯಿ ಬೋರಿಚಾ ಕೊಲೆ ಪ್ರಕರಣದ ವಿರುದ್ಧ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಊನಾ ಚಳವಳಿ ನಾಯಕ, ಗುಜರಾತ್ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ನೂರಾರು ದಲಿತ ಪ್ರತಿಭಟನಾಕಾರರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ನ ಭವನಗರದ ಘೋಘಾ ತಾಲೂಕಿನ ಸನೋದರ್ ನಿವಾಸಿ 50 ವರ್ಷದ ಆರ್ಟಿಐ ಕಾರ್ಯಕರ್ತ ಅಮ್ರಾಬಾಯಿ ಬೋರಿಚಾ (50) ಎಂಬುವವರನ್ನು ಸ್ಥಳೀಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಪಸ್ಥಿತಿಯಲ್ಲಿಯೇ ಕೊಲೆ ಮಾಡಲಾಗಿದೆ. ತಮಗೆ ಜೀವ ಬೆದರಿಕೆ ಇದೆ ಎಂದು ಹಲವು ಬಾರಿ ಅಮ್ರಾಬಾಯಿ ಬೋರಿಚಾ ದೂರು ದಾಖಲಿಸಿದ್ದರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಈ ಘಟನೆ ಸಂಬಂಧ ವಿಧಾನಸಭಾ ಅಧಿವೇಶನದಲ್ಲಿಯೂ ಶಾಸಕ ಜಿಗ್ನೇಶ್ ಮೇವಾನಿ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಹತ್ಯೆ ವಿಚಾರದ ಬಗ್ಗೆ ಮಾತನಾಡಲು ಅವಕಾಶ ನಿಡುವಂತೆ ಕೇಳಿದ್ದರು. ಆದರೆ, ಅಶಿಸ್ತಿನ ನೆಪವೊಡ್ಡಿ ಅವರನ್ನು ಸದನದಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ನಮ್ಮ ಮೇಲೆ ದಾಳಿ ನಡೆಸಿದರೆ ಹೋರಾಟವನ್ನು ನಿಲ್ಲಿಸುತ್ತೇವೆಂದು ಭಾವಿಸಿದ್ದೀರಾ, ಮನುವಾದಿಗಳೇ ?- ಜಿಗ್ನೇಶ್
ಮಂಗಳವಾರ ಸದನದಲ್ಲಿ ಮಾತನಾಡಲು ಅವಕಾಶ ನೀಡದಿದ್ದರೇ, ನೂರಾರು ದಲಿತ ಪ್ರತಿಭಟನಾಕಾರರೊಂದಿಗೆ ಗುಜರಾತ್ ವಿಧಾನಸೌಧದ ಗೇಟ್ ನಂಬರ್ ಒಂದರಲ್ಲಿ ಬೆಳಗ್ಗೆ 11.15ಕ್ಕೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಮುಖ್ಯಮಂತ್ರಿ ವಿಜಯ್ ರೂಪಾನಿಯವರಿಗೆ ಟ್ವಿಟರ್ನಲ್ಲಿ ಮಾಹಿತಿ ನಿಡಲಾಗಿತ್ತು.
ಅಸೆಂಬ್ಲಿಯಲ್ಲಿ ಮಾತನಾಡಲು ಅವಕಾಶ ನೀಡದಿದ್ದರೇ, ಬೀದಿಗಳಲ್ಲಿ ನಿಮ್ಮನ್ನು ನಾನು ಪ್ರಶ್ನಿಸುತ್ತೇನೆ ಎಂದಿದ್ದರು. ಮಾರ್ಚ್ 23 ಭಗತ್ ಸಿಂಗ್ ಅವರ ಹುತಾತ್ಮ ದಿನ. ಇದಕ್ಕಿಂತ ಉತ್ತಮ ದಿನ ಮತ್ತೊಂದಿಲ್ಲ. ಇಂಕ್ವಿಲಾಬ್ ಜಿಂದಾಬಾದ್! ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಜಿಗ್ನೇಶ್ ಬರೆದುಕೊಂಡಿದ್ದರು.
ಸದ್ಯ ಪ್ರತಿಭಟನೆ ನಡೆಸುತ್ತಿದ್ದ ಜಿಗ್ನೇಶ್ ಮೇವಾನಿ ಮತ್ತು ನೂರಾರು ದಲಿತ ಪ್ರತಿಭಟನಾಕಾರರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ ಎಂದು ಜಿಗ್ನೇಶ್ ಮೇವಾನಿ ಅವರ ಸೋಶೀಯಲ್ ಮೀಡಿಯಾ ತಂಡ ಟ್ವೀಟ್ ಮಾಡಿದೆ.
Gujarat govt has detained Jignesh Mevani & hundreds of Dalits for seeking justice for Amrabhai Boricha's lynching!
Their casteist face is out in the open!– Jignesh Mevani's Social Media Team.
— Jignesh Mevani (@jigneshmevani80) March 23, 2021
ಇದನ್ನೂ ಓದಿ: ತುಮಕೂರು: ಸಮಾಧಿ ಗುಂಡಿಯಿಂದ ದಲಿತ ಶಿಶುವಿನ ಮೃತದೇಹ ಹೊರತೆಗೆಸಿ ಅಮಾನವೀಯತೆ!
ಮಾರ್ಚ್ 2 ರಂದು ಹತ್ಯೆಗೊಳಗಾದ ಆರ್ಟಿಐ ಕಾರ್ಯಕರ್ತ, ರೈತ ಅಮ್ರಾಬಾಯಿ ಬೋರಿಚಾ ಅವರಿಗೆ ಸಂತಾಪ ಸೂಚಿಸಲು ಮಾರ್ಚ್ 14ರಂದು ಗುಜರಾತ್ ರಾಜ್ಯದಾದ್ಯಂತದ ಸುಮಾರು 2,500 ಪರಿಶಿಷ್ಟ ಜಾತಿ (ಎಸ್ಸಿ) ಪುರುಷರು ಮತ್ತು ಮಹಿಳೆಯರು ಭಾವನಗರ ಜಿಲ್ಲೆಯ ಸನೋದರ್ ಗ್ರಾಮಕ್ಕೆ ಆಗಮಿಸಿದ್ದರು.
ಸ್ಪೀಕರ್ ಅನುಮತಿಯಿಲ್ಲದೆ ದಲಿತ ವ್ಯಕ್ತಿಯ ಹತ್ಯೆಯ ವಿಷಯವನ್ನು ಸದನದಲ್ಲಿ ಎತ್ತಿದ ಕಾರಣ ಜಿಗ್ನೇಶ್ ಮೇವಾನಿ ಅವರನ್ನು “ಅಶಿಸ್ತು” ಎಂದು ರಾಜ್ಯ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು. ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರ ಆದೇಶದ ಮೇರೆಗೆ ಅವರನ್ನು ಸದನದಿಂದ ಹೊರಹಾಕಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಪೋಸ್ಟರ್ ಹಿಡಿದು ಮೇವಾನಿ, ಮೈಕ್ ಆಫ್ ಆಗಿದ್ದರೂ, ಕೂಗಲು ಪ್ರಾರಂಭಿಸಿದರು ಮತ್ತು ರಾಜ್ಯದ ಬಿಜೆಪಿ ಸರ್ಕಾರ ಇನ್ನೂ ಪಿಎಸ್ಐ ಅನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಬಹುಜನ ಭಾರತ; ಚಂಬಲ್ ಸೀಮೆಯಲ್ಲೊಂದು ಹೆಣ್ಣುನೋಟದ ದಲಿತ ಪತ್ರಿಕೋದ್ಯಮ: ಡಿ. ಉಮಾಪತಿ