Homeಸಿನಿಮಾಕ್ರೀಡೆಟೆನ್ನಿಸ್ ಬಾಲ್ ಕ್ರಿಕೆಟ್ ನೋವು ನಲಿವಿನ ಸುತ್ತ

ಟೆನ್ನಿಸ್ ಬಾಲ್ ಕ್ರಿಕೆಟ್ ನೋವು ನಲಿವಿನ ಸುತ್ತ

- Advertisement -
- Advertisement -

ಕ್ರಿಕೆಟ್ ಜಗತ್ತು ಯುವ ಆಟಗಾರರ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಇದರಲ್ಲಿ ಲೆದರ್ ಬಾಲ್ ಕ್ರಿಕೆಟ್ ಹಾಗೂ ಟೆನ್ನಿಸ್ ಬಾಲ್ ಕ್ರಿಕೆಟ್ ಎಂಬ ಎರಡು ಸ್ವರೂಪದ ಕ್ರಿಕೆಟ್ ಇದೆ. ಮೊದಲನೆಯದು ಅಂತಾರಾಷ್ಟ್ರೀಯ ಮದವರೆಗೂ ಮಾನ್ಯತೆಯನ್ನು ಪಡೆದಿದ್ದರೆ, ಎರಡನೆಯದು ಅಸಂಘಟಿತ ಸ್ವರೂಪದ್ದಾಗಿದೆ. ಲೆದರ್ ಬಾಲ್ ಕ್ರಿಕೆಟ್‌ಗೆ ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ಪಡೆದ ಸಂಸ್ಥೆಗಳಿವೆ. ಆದರೆ ಟೆನ್ನಿಸ್ ಬಾಲ್ ಕ್ರಿಕೆಟ್ ಗ್ರಾಮೀಣ ಮಟ್ಟದಿಂದ, ರಾಜ್ಯಮಟ್ಟದವರೆಗೆ ಇದ್ದರೂ ಕೂಡ ಅದಕ್ಕೆ ಯಾವ ಅಧಿಕೃತ ಸಂಸ್ಥೆಯೂ ಇಲ್ಲ. ಒಂದಷ್ಟು ಜನ ಕ್ರಿಕೆಟ್ ಆಡುವವರು ಒಂದು ಕಡೆ ಸೇರಿ ತಂಡವನ್ನು ಕಟ್ಟಿಕೊಳ್ಳುತ್ತಾರೆ. ಖಾಸಗಿಯಾಗಿ ನಡೆಯುವ ಪಂದ್ಯಗಳಿಗೆ ಪ್ರವೇಶಶುಲ್ಕವನ್ನು ಕಟ್ಟಿ ಭಾಗವಹಿಸುತ್ತಾರೆ. ಅಲ್ಲಿಯ ಯಾವ ಅತ್ಯುತ್ತಮ ಪ್ರದರ್ಶನಕ್ಕೂ ಬೆಲೆಯಿಲ್ಲ. ನಾನು ಎರಡೂ ಸ್ವರೂಪದ ಕ್ರಿಕೆಟನ್ನು ಆಡಿದ್ದೇನೆ. ತೀರ ಸಮೀಪದಿಂದ ಈ ಜಗತ್ತನ್ನು ನೋಡಿದ್ದೇನೆ. ನಾನು ಇಲ್ಲಿ ಕೇವಲ ಟೆನ್ನಿಸ್ ಬಾಲ್ ಕ್ರಿಕೆಟಿನ ಅನುಭವದ ಹಿನ್ನೆಲೆಯಲ್ಲಿ, ಪ್ರಾತಿನಿಧಿಕವಾಗಿ ಮೂರು ಘಟನೆಗಳ ಮೂಲಕ ಅದರ ರೋಚಕತೆಯನ್ನು ಹಂಚಿಕೊಳ್ಳುತ್ತೇನೆ ಮತ್ತು ಯುವ ಆಟಗಾರರ ಆರ್ಥಿಕ ಪರಿಸ್ಥಿತಿಯ ಕರಾಳ ಮುಖವನ್ನು ಬಿಚ್ಚಿಡಲು ಬಯಸುತ್ತೇನೆ.

ತೊಂಭತ್ತರ ದಶಕ. ಬೆಂಗಳೂರಿನ ಮಿಲ್ಕ್ ಕಾಲೋನಿ ಮೈದಾನ. ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟಿನಲ್ಲಿ ಹೆಸರು ಮಾಡಿದ್ದ ಎರಡು ಸಮಬಲದ ತಂಡಗಳು ಮುಖಾಮುಖಿಯಾಗಿದ್ದವು. ಚಮಕ್ ತಂಡಕ್ಕೆ ಕೊನೆಯ ಎಸೆತದಲ್ಲಿ ಆರು ರನ್ನುಗಳ ಅವಶ್ಯಕತೆ ಇತ್ತು. ಒಂದೇ ಸಮನೆ ಬೀಳುತ್ತಿದ್ದ ಮಳೆಯ ತುಂತುರು ಹನಿಗಳು ಮೈದಾನವನ್ನು ತೇವಗೊಳಿಸಿದ್ದವು. ಟೆನ್ನಿಸ್ ಬಾಲ್ ಚೆಂಡು ಒದ್ದೆಯಾಗುತ್ತಿತ್ತು. ಚೆಂಡನ್ನು ಬೌಂಡರಿಯ ಹೊರಗೆ ಅಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಸ್ಟ್ರೈಕರ್ ವಿಭಾಗದಲ್ಲಿ ಆಲ್‌ರೌಂಡರ್ ಜಾನಿ ಚೆಂಡನ್ನು ಬೌಂಡರಿಯಾಚೆ ಅಟ್ಟಲೇಬೇಕೆಂದು ತಯಾರಾಗಿ ನಿಂತಿದ್ದನು. ನಾನ್ ಸ್ಟ್ರೈಕರ್ ವಿಭಾಗದಲ್ಲಿ ನೀಳಕಾಯದ ಕೃಷ್ಣ ಸಿಕ್ಸರ್ ಹೊಡೆಯುವಂತೆ ಜಾನಿಗೆ ಹುರಿದುಂಬಿಸುತ್ತಿದ್ದ. ಗುರುಬ್ರಹ್ಮ ತಂಡದ ನಾಯಕ ಹಾಗೂ ಚೆಂಡಿಗೆ ಒಳ ಮತ್ತು ಹೊರ ತಿರುವನ್ನು ಕೊಡಬಲ್ಲ ಹೆಸರಾಂತ ಬೌಲರ್ ಬಸವರಾಜ ಅನ್ವರಿ ಬೌಲಿಂಗ್ ವಿಭಾಗದಲ್ಲಿ ಈ ಅಂತಿಮ ಎಸೆತಕ್ಕೆ ಸಿದ್ಧವಾಗಿ ರೋಮಾಂಚನಕ್ಕೆ ಸಾಕ್ಷಿಯಾಗುವಂತೆ ಕಾದಿದ್ದ. ಆತ ಕೊನೆಯ ಎಸೆತ ಹಾಕುವ ಮೊದಲು ಪಕ್ಕದಲ್ಲೇ ನಿಂತಿದ್ದ ನಾನ್ ಸ್ಟ್ರೈಕರ್ ಕೃಷ್ಣನನ್ನು ನೋಡಿ ನಕ್ಕನು. ಮಳೆ ಬರುತ್ತಿದ್ದರಿಂದ ವಿಜಯಲಕ್ಷ್ಮಿ ತನ್ನ ಕಡೆ ಒಲಿಯುವುದು ನಿಶ್ಚಿತವೆಂಬ ಲೆಕ್ಕಾಚಾರದಲ್ಲಿದ್ದಂತೆ ಕಾಣುತ್ತಿತ್ತು. ಆ ವಾತಾವರಣದಲ್ಲಿ ಸಿಕ್ಸರ್ ಹೊಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಆತ ಹಾಕಿದ ಚೆಂಡನ್ನು ಮಿಡ್ ವಿಕೆಟ್ ಮೇಲೆ ಹೊಡೆದು ಜಾನಿ ಗೆಲುವಿನ ನಗೆ ಬೀರಿದನು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕ್ರೀಡಾಂಗಣ. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ತೀವ್ರ ಸೆಣೆಸಾಟದ ರೋಮಾಂಚನಕಾರಿ ಪಂದ್ಯಗಳಿಗೆ ಸಾಕ್ಷಿಯಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಸೂರತ್ಕಲ್ ತಂಡ ಮತ್ತು ಬೆಂಗಳೂರಿನ ಚಮಕ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಬೇಕಿತ್ತು. ಒಂದು ಲಕ್ಷ ಮೊದಲ ಬಹುಮಾನ. ಎರಡನೇ ಬಹುಮಾನ ಐವತ್ತು ಸಾವಿರ. ಅದಾಗಲೇ ಆ ಪಂದ್ಯಾವಳಿಯ ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸೂರತ್ಕಲ್ ತಂಡದ ಸೂರಜ್ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ವಿರೋಧಿ ತಂಡಗಳಿಗೆ ನಡುಕ ಹುಟ್ಟುವಂತೆ ಮಾಡಿದ್ದನು. ಪ್ರೇಕ್ಷಕರ ಮಧ್ಯದಿಂದ “ಸೂರಜ್, ಸೂರಜ್ ಎಂಬ ಉದ್ಘಾರ ಕೇಳಿಬರುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರಿನ ಚಮಕ್ ತಂಡ 39 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ದುಸ್ಥಿತಿಯಲ್ಲಿತ್ತು. ನಾನು ಮೊದಲ ಬಾರಿಗೆ ಕೊನೆಯ ಬ್ಯಾಟ್ಸ್‌ಮನ್ನಾಗಿ ಮೈದಾನದ ಒಳಗೆ ಇಳಿದಿದ್ದೆ. ಆರಂಭಿಕ ಆಟಗಾರನಾಗಿ ಆಡುತ್ತಿದ್ದ ನನ್ನನ್ನು ಸೆಮಿಫೈನಲ್ ಪಂದ್ಯದಲ್ಲಿ ಆಡಿಸಿರಲಿಲ್ಲ.

ತಂಡವನ್ನು ಮುನ್ನಡೆಸುತ್ತಿದ್ದ ಮಹೇಶ್ ಫೈನಲಿನಲ್ಲಿ ಒಂಭತ್ತನೇ ವಿಕೆಟ್ ಬಿದ್ದ ತಕ್ಷಣ ಕೊನೆಯ ಬ್ಯಾಟ್ಸಮನ್ ಆಗಿ ಆಡಲು ನನಗೆ ಹೇಳಿದ. ಆ ಸವಾಲನ್ನು ಸ್ವೀಕರಿಸಿ ದರ್ಶನ್ ಜೊತೆಗೂಡಿ ಕೊನೆಯ 8 ಎಸೆತಗಳಲ್ಲಿ 13 ರನ್‌ಗಳನ್ನು ಕಲೆ ಹಾಕಿ ನಿಗದಿತ 10 ಓವರ್‌ಗಳಲ್ಲಿ 52 ರನ್ ಗಳಿಸಿದೆವು. ಸೂರತ್ಕಲ್ ತಂಡದ ಬ್ಯಾಟಿಂಗ್ ಪ್ರಾರಂಭವಾಯಿತು. ಸೂರಜ್ ಆರಂಭಿಕ ಬ್ಯಾಟ್ಸಮನ್ ಆಗಿ ಕಣಕ್ಕಿಳಿದನು. ಅವನಿಗೆ ರನ್ ಕೊಡದೇ ಕಟ್ಟಿ ಹಾಕುವ ಯೋಜನೆಯನ್ನು ಹಾಕಿಕೊಂಡೆವು. ಅಚ್ಯುತನ ಮೊದಲ ಎಸೆತವನ್ನು ಸೂರಜ್ ಗೂಟರಕ್ಷಕನಿಗೆ ಹೋಗಲು ಬಿಟ್ಟನು. ಸಾಮಾನ್ಯವಾಗಿ ಚುಟುಕು ಟೆನ್ನಿಸ್ ಬಾಲ್ ಕ್ರಿಕೆಟಿನಲ್ಲಿ ಹೀಗೆ ಚೆಂಡನ್ನು ವಿಕೆಟ್‌ಕೀಪರಿಗೆ ಹೋಗಲು ಬಿಡುವುದಿಲ್ಲ. ಸೂರಜ್‌ಗೆ ಯಾವ ಕ್ಷಣದಲ್ಲೂ ಚೆಂಡನ್ನು ಬೌಂಡರಿ ಆಚೆ ಬಾರಿಸುವ ಆತ್ಮವಿಶ್ವಾಸವಿದ್ದಿದ್ದರಿಂದ ಹೀಗೆ ಬಿಟ್ಟಿದ್ದನು. ಮುಂದಿನ ಎಸೆತವನ್ನು ಬೌಲರ್‌ನ ತಲೆಯ ಮೇಲೆ ಸಿಕ್ಸರಿಗೆ ಅಟ್ಟಿದನು.

ಪ್ರಾರಂಭಿಕ ಹಂತದಲ್ಲಿ ಹೊಸ ಟೆನ್ನಿಸ್ ಬಾಲನ್ನು ಬೌಂಡರಿ ಆಚೆ ಅಟ್ಟುವುದು ಅಷ್ಟು ಸುಲಭವಲ್ಲ. ಅಪಾಯದ ಮುನ್ಸೂಚನೆ ಕಾಣಲು ಪ್ರಾರಂಭವಾಯಿತು. ಚಮಕ್ ತಂಡದ ನಾಯಕ ಮಹೇಶ್ ಅಚ್ಯುತನ ಬಳಿ ಬಂದು “ನೋಡು ಅವನಿಗೆ ಬ್ಯಾಟ್ ಹಿಡಿಯುವುದಕ್ಕೆ ಬರುವುದಿಲ್ಲ. ಅವನಿಂದ ಸಿಕ್ಸರ್ ಹೊಡೆಸಿಕೊಳ್ಳುತ್ತಿದ್ದೀಯಾ?” ಎಂದು ಕಿಚ್ಚು ಬರುವಂತೆ ಬೈದನು. ಅಚ್ಯುತನಿಗೆ ಅವಮಾನವಾಗಿ ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಮುಂದಿನ ಎಸೆತವನ್ನು ಎಸೆದನು. ಆ ಎಸೆತವನ್ನೂ ಕೂಡ ಬಾರಿಸುವ ಆತುರದಲ್ಲಿ ಸೂರಜ್ ಅಲ್ಲೇ ಎತ್ತರಕ್ಕೆ ಚೆಂಡನ್ನು ಹೊಡೆದ. ಗಾಳಿಯಲ್ಲಿದ್ದ ಚೆಂಡು ಕೆಳಕ್ಕೆ ಬೀಳುವ ಮೊದಲು ಅಚ್ಯುತ ಕ್ಯಾಚ್ ಹಿಡಿದುಕೊಂಡನು. ಹೀಗೆ ಸೂರಜ್‌ನ ವಿಕೆಟ್ ಬಿದ್ದ ಮೇಲೆ ಸೂರತ್ಕಲ್ ತಂಡದ ಆಟಗಾರರು ತರಗೆಲೆಗಳಂತೆ ಒಬ್ಬರಾದ ಮೇಲೆ ಒಬ್ಬರು ವಿಕೆಟ್ ಒಪ್ಪಿಸಿಹೋದರು. ಚಮಕ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಚಿಕ್ಕಮಗಳೂರು ಮೈದಾನ. ಶ್ರೀ ತಂಡದ ಕುಮಾರ ಸ್ಟ್ರೈಕರ್ ವಿಭಾಗದಲ್ಲಿ ನಿಂತಿದ್ದನು. ಕೊನೆಯ ಓವರ್‌ನಲ್ಲಿ 21 ರನ್ನುಗಳ ಅವಶ್ಯಕತೆ ಇತ್ತು. ಈತನಿಗೆ ಪಂದ್ಯದ ಮೂರು ದಿನಗಳ ಹಿಂದೆ ಕೆ.ಎಸ್.ಸಿ.ಎ ಲೀಗ್ ಪಂದ್ಯವಾಡುತ್ತಿದ್ದಾಗ ಲೆದರ್ ಬಾಲ್‌ನಿಂದ ಬೆರಳಿಗೆ ಬಲವಾದ ಪೆಟ್ಟುಬಿದ್ದಿತ್ತು. ಆದರೂ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಲು ಬಂದಿದ್ದನು. ಈತನಿಗೆ ಬ್ಯಾಟ್ ಹಿಡಿಯಲು ಕೂಡ ಕಷ್ಟವಾಗುತ್ತಿತ್ತು. ಆದರೂ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಲೇಬೇಕಾಗಿತ್ತು. ಬೌಲರಿಗೆ ಅತಿಯಾದ ವಿಶ್ವಾಸವಿತ್ತು. ಮುರಿದ ಬೆರಳ ಕೈಯಲ್ಲಿ ಬ್ಯಾಟ್ ಹಿಡಿದಿರುವ ಕುಮಾರನಿಗೆ 21 ರನ್ ಹೊಡೆಯುವುದು ಕಷ್ಟದ ಮಾತಾಗಿತ್ತು. ಆತ ’ತಕೋ ಹೊಡಿ’ ಎಂದು ಮೊದಲ ಮೂರು ಎಸೆತಗಳನ್ನು ತೀರ ಅಸಡ್ಡೆಯಿಂದ ಹಾಕಿದನು. ಕುಮಾರ್ ಆ ಮೂರನ್ನು ಸಿಕ್ಸರಿಗೆ ಅಟ್ಟಿದನು. ನಿದ್ದೆಯಿಂದ ಎಚ್ಚೆತ್ತವನಂತೆ ಪಂದ್ಯದ ಗಂಭೀರತೆಯನ್ನು ಅರಿತ ಬೌಲರ್ ಇನ್ನೂ ವೇಗವಾಗಿ, ಜೋರಾಗಿ ಬೌಲ್ ಮಾಡಲು ಶುರು ಮಾಡಿದನು. ನಾಲ್ಕನೇ ಎಸೆತ ರನ್ನುರಹಿತವಾಯಿತು. ಐದನೇ ಎಸೆತವನ್ನು ಬೌಂಡರಿ ದಾಟಿಸುವ ಮೂಲಕ ಕುಮಾರ್ ಟೆನ್ನಿಸ್ ಬಾಲ್ ಕ್ರಿಕೆಟ್‌ನ ಹೀರೋ ಆದನು.

ಮೇಲಿನ ಮೂರು ಪಂದ್ಯಗಳ ಘಟನೆಗಳು ಪ್ರೇಕ್ಷಕರನ್ನು ಮೈನವಿರೇಳಿಸುವಂತಹವು. ಮೊದಲ ಎರಡು ಪಂದ್ಯಗಳ ಘಟನೆಗಳಲ್ಲಿ ಆಟಗಾರನಾಗಿ ನಾನು ನೇರವಾಗಿ ಭಾಗಿಯಾಗಿದ್ದೆ. ಮೂರನೇ ಘಟನೆ ನಡೆಯುತ್ತಿದ್ದಾಗ, ಆ ಟೂರ್ನಮೆಂಟಿನ ಭಾಗವಾಗಿ ಮೈದಾನದಲ್ಲಿದ್ದು ಆ ಘಟನೆಗೆ ಸಾಕ್ಷಿಯಾಗಿದ್ದೆ. ಇಂತಹ ನೂರಾರು ಘಟನೆಗಳು ಟೆನ್ನಿಸ್ ಬಾಲ್ ಕ್ರಿಕೆಟಿನಲ್ಲಿ ಸಂಭವಿಸಿವೆ. ಎಂಟು, ಹತ್ತು, ಹನ್ನೆರಡು, ಓವರ್‌ಗಳ ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಒಂದೊಂದು ಎಸೆತವೂ ರೋಮಾಂಚನಕ್ಕೆ ಎಡೆಮಾಡಿಕೊಡುತ್ತದೆ. ನೂರಾರು ಕನಸುಗಳನ್ನು ಕಟ್ಟಿಕೊಂಡಿರುವ ಯುವ ಆಟಗಾರರ ಅದ್ಭುತ ಪ್ರಪಂಚ ಇದು. ಇಲ್ಲಿ ಅನೇಕ ಯುವ ಕ್ರಿಕೆಟ್ ಆಟಗಾರರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಭವಿಷ್ಯವನ್ನು ರೂಪಿಸಿಕೊಳ್ಳುವ ತವಕದಲ್ಲಿರುತ್ತಾರೆ.

ಟೆನ್ನಿಸ್ ಬಾಲ್ ಕ್ರಿಕೆಟ್‌ಅನ್ನು ತುಂಬ ಹತ್ತಿರದಿಂದ ಬಲ್ಲ ಒಬ್ಬ ವ್ಯಕ್ತಿಯು ಒಂದು ತಂಡವನ್ನಾಗಿ ಕಟ್ಟಿ ಟೂರ್ನಮೆಂಟ್ ಆಡಿಸಲು ಬಂಡವಾಳವನ್ನು ಹಾಕುತ್ತಾನೆ. ಅವನನ್ನು ತಂಡದ ಮ್ಯಾನೇಜರ್ ಎಂದು ಕರೆಯಲಾಗುತ್ತದೆ. ಚೆನ್ನಾಗಿ ಆಡುವ ಆಟಗಾರರನ್ನು ಒಂದು ಕಡೆ ಕಲೆಹಾಕಿ ಒಂದು ತಂಡವನ್ನಾಗಿಸುತ್ತಾನೆ. ರಾಜ್ಯದ ಬೇರೆಬೇರೆ ಸ್ಥಳಗಳಲ್ಲಿ ನಡೆಯುವ ಟೂರ್ನಮೆಂಟ್‌ಗಳಿಗೆ ಈ ಆಟಗಾರರನ್ನು ಕರೆದುಕೊಂಡು ಹೋಗುತ್ತಾನೆ. ಆಟಗಾರರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಾನೆ. ಮಂಗಳೂರು, ಉಡುಪಿ, ಕುಂದಾಪುರ, ಚಿಕ್ಕಮಗಳೂರು, ಹಾಸನ, ಮೈಸೂರು-ಹೀಗೆ ರಾಜ್ಯದ ಎಲ್ಲಾ ಕಡೆಗಳಲ್ಲೂ ಪಂದ್ಯಾವಳಿಗಳು ಆಯೋಜನೆಯಾಗಿರುತ್ತವೆ.

ಒಂದು ಪಂದ್ಯಾವಳಿಯ ಮೊದಲ ಬಹುಮಾನ ಒಂದು, ಎರಡು, ಮೂರು ಲಕ್ಷದವರೆಗೂ ಇರುತ್ತದೆ. ಬಹುಪಾಲು ಪಂದ್ಯಾವಳಿಗಳನ್ನು ಆಯೋಜಕರು ವಾರದ ಕೊನೆಗೆ ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಆಯೋಜನೆ ಮಾಡಿರುತ್ತಾರೆ. ಪಂದ್ಯಾವಳಿ ದೂರದ ಮಂಗಳೂರು ಅಥವಾ ಉಡುಪಿಯಲ್ಲಿದ್ದರೆ ಬೆಂಗಳೂರಿನಿಂದ ಹೊರಡುವ ತಂಡಕ್ಕೆ ಶನಿವಾರ ಮದ್ಯಾಹ್ನದ ಮೇಲೆ ಪಂದ್ಯವನ್ನು ಹಾಕಿಕೊಡಲಾಗಿರುತ್ತದೆ. ಒಂದಷ್ಟು ವಿಶ್ರಾಂತಿ ಪಡೆದುಕೊಳ್ಳುವ ತಂಡಗಳು ಹೊನಲು-ಬೆಳಕಿನಲ್ಲೂ ಆಡುವುದರಿಂದ ಈ ರೀತಿ ವ್ಯವಸ್ಥೆ ಮಾಡಿಕೊಡಲಾಗಿರುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಮೂರು ದಿನಗಳಲ್ಲಿ ಮುಗಿಯುವ ಪಂದ್ಯಾವಳಿಗಳು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿರುತ್ತವೆ.

ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವ ಟೆನ್ನಿಸ್ ಬಾಲ್ ಕ್ರಿಕೆಟಿನ ಆಟಗಾರರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಅಸಾಮಾನ್ಯ ಪ್ರತಿಭಾವಂತರಿಗೆ ಒಂದು ಟೂರ್ನಮೆಂಟಿಗೆ ಒಂದು ಸಾವಿರದಂತೆ ಮ್ಯಾನೇಜರ್ ಕೊಡುತ್ತಾನೆ. ಉಳಿದಂತೆ ಭವಿಷ್ಯದ ಹುಡುಕಾಟದಲ್ಲಿರುವ ಇವರಲ್ಲಿ ಅನೇಕರು ದಿನಗೂಲಿ ನೌಕರರಾಗಿ ದುಡಿಯುತ್ತಿರುತ್ತಾರೆ. ಕೆಲವರು ಆಟೋ ಡ್ರೈವರುಗಳಾಗಿ, ಪೇಂಟರುಗಳಾಗಿ, ಎಲೆಕ್ಟ್ರಿಷಿಯನ್ನರುಗಳಾಗಿ ದುಡಿಮೆ ಮಾಡುತ್ತಾ ವಾರದ ಕೊನೆಯಲ್ಲಿ ನಡೆಯುವ ಇಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇವರಿಗೆ ಪ್ರಥಮ ಅಥವಾ ದ್ವಿತೀಯಾ ಬಹುಮಾನ ಗೆದ್ದಾಗ ಮಾತ್ರ ಅದರಲ್ಲಿ ಅಲ್ಪ ಭಾಗವನ್ನು ಕೊಡಲಾಗುತ್ತದೆ.

ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದವರಲ್ಲಿ, ಸುನಿಲ್ ಗವಾಸ್ಕರ್, ಡಿ ಗಣೇಶ್, ಕೇದರ್ ಜಾದವ್, ಟಿ. ನಟರಾಜನ್‌ರಂತಹ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಅದೃಷ್ಟದ ಕದ ತೆಗೆದಾಗ ಅಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಬಡಕುಟುಂಬದ ಬಹುಪಾಲು ಯುವಕರು ಲೆದರ್ ಬಾಲ್ ಕ್ರಿಕೆಟ್ ಆಡಲು ಕಿಟ್ಟನ್ನು ಕೊಳ್ಳಲಾಗದೇ, ಅಕಾಡೆಮಿ ಶುಲ್ಕ ಕಟ್ಟಲು ಸಾಧ್ಯವಾಗದೇ ಕೇವಲ ಕನಸುಗಳನ್ನು ಕಾಣುತ್ತಾ ಜೀವನ ಸವೆಸಿಬಿಡುತ್ತಾರೆ. ಭಾರತದ ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರ ವಿಶೇಷ ಸಾಧನೆಯ ವಿಡಿಯೋಗಳನ್ನು ಹಂಚಿಕೊಳ್ಳುವುದರ ಮೂಲಕ ಅವರ ಪ್ರತಿಭೆ ಅನಾವರಣಗೊಳ್ಳುವಂತೆ ಮಾಡುತ್ತಿದ್ದಾರೆ. ಹೀಗಾದರೂ ಆಯ್ಕೆಗಾರರ ಕಣ್ಣು ಆ ವಿಡಿಯೋಗಳ ಮೇಲೆ ಬಿದ್ದರೆ ಕೆಲವು ಆಟಗಾರರ ಭವಿಷ್ಯವಾದರೂ ಉಜ್ವಲವಾಗಬಹುದೇನೋ?

ಕರ್ನಾಟಕದಲ್ಲೂ ಕೂಡ ಅನೇಕ ಪ್ರತಿಭಾವಂತ ಆಟಗಾರರು ಎಲೆಮರೆಕಾಯಿಯಂತೆ ಇದ್ದಾರೆ. ವರ್ತಮಾನದಲ್ಲಿ ಸಾಗರ್ ಭಂಡಾರಿ, ಸ್ವಸ್ತಿಕ್ ನಾಗರಾಜ್, ಅಕ್ಷಯ್, ರಾಜ ಸಾಲಿಗ್ರಾಮ, ಪ್ರದೀಪ್‌ರಂತಹ ಅನೇಕರು ಇದ್ದರೆ, ಹಿಂದೆ ಭಗವಾನ್, ಮಹೇಶ್, ರಾಜೀವ, ಪುರುಷಿ, ಇಮ್ರಾನ್, ಸೂರಜ್, ಟಬು, ಶಂಕರರಂತಹ ಘಟಾನುಘಟಿ ಆಟಗಾರರು ತಮ್ಮ ಛಾಪನ್ನು ಮೂಡಿಸಿಹೋಗಿದ್ದಾರೆ. ಆದರೆ ಇವರಲ್ಲಿ ಹೆಚ್ಚು ಮಂದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ತಳ್ಳುತ್ತಿದ್ದಾರೆ.

ಶ್ರೀಮಂತರು ತಮ್ಮ ಮಕ್ಕಳನ್ನು ’ಕ್ರಿಕೆಟ್ ಅಕಾಡೆಮಿ’ಗಳಿಗೆ ಸೇರಿಸುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಪ್ರತಿದಿನ ಜೊತೆಯಲ್ಲಿ ಕರೆದುಕೊಂಡುಹೋಗಿ ಬರುತ್ತಾರೆ. ಅವರಿಗೆ ಕಷ್ಟ, ಸಮಸ್ಯೆ, ತೊಂದರೆ ಎನ್ನುವುದೇ ಗೊತ್ತಿಲ್ಲ. ಭಾರತ ಕ್ರಿಕಟ್ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಂತಹ ರಾಜ್ಯ ಕ್ರಿಕೆಟ್ ಸಂಸ್ಥೆಗಳು ’ಟ್ಯಾಲೆಂಟ್ ಹಂಟ್’ ಎಂಬ ಹೆಸರಿನಲ್ಲಿ ಇಂತಹ ಶ್ರೀಮಂತ ಮಕ್ಕಳ ಪ್ರತಿಭಾನ್ವೇಷಣೆಗೆ ಮನ್ನಣೆ ಕೊಡುತ್ತಿರುವುದು ಕ್ರಿಕೆಟ್ ಜಗತ್ತಿನ ದುರಂತವಾಗಿದೆ. ಇದಕ್ಕೆ ಪರ್ಯಾಯವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ ಗ್ರಾಮೀಣ ಭಾಗದ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಬೇಕಿದೆ. ಅವರಿಗೆ ಉತ್ತಮ ತರಬೇತಿ ಕೊಟ್ಟು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಬೇಕಿದೆ. ಕ್ರಿಕೆಟ್ ಶ್ರೀಮಂತರ ಆಟ ಎನ್ನುವ ಸ್ಥಾಪಿತ ಸತ್ಯವನ್ನು ಸುಳ್ಳು ಮಾಡಬೇಕಿದೆ. ಇನ್ನಾದರೂ ಬಿ.ಸಿ.ಸಿ ಹಾಗೂ ಕೆ.ಎಸ್.ಸಿ.ಎ.ಯಂತಹ ಸಂಸ್ಥೆಗಳು ಈ ಕಡೆ ಗಮನ ಹರಿಸಬೇಕೆನ್ನುವುದು ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ ಸಾವಿರಾರು ಪ್ರತಿಭೆಗಳ ಆಶಯವಾಗಿದೆ.

ಡಾ. ರಿಯಾಜ಼್ ಪಾಷ

ಡಾ. ರಿಯಾಜ್ ಪಾಷಾ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ


ಇದನ್ನೂ ಓದಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿರುವ ರಾಹುಲ್ ದ್ರಾವಿಡ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...