Homeಮುಖಪುಟನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

ನೊಂದವರ ಘನತೆಗೆ ಮಾರ್ಗ ತೋರಿದ ಸಾವಿತ್ರಿಬಾಯಿ ಫುಲೆ

- Advertisement -
- Advertisement -

ಜನವರಿ 3ರಂದು ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಆಚರಿಸುತ್ತಿರುವ ಹೊತ್ತಿನಲ್ಲೆ ಶಿಕ್ಷಣಕ್ಕಾಗಿ ಮಾಡಿದ ಸಾಲದ ಹೊರೆಗೆ ಅಂಜಿ ಮೊನ್ನೆಯಷ್ಟೆ ಜೀವ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಸೌರವ್ ಕುಮಾರ್ ಯಾದವ್‌ನ ಹೆಸರು ಮತ್ತೆಮತ್ತೆ ಮನಸ್ಸಿಗೆ ಬರುತ್ತಿದೆ. ಮಗನ ಕೊನೆಯ ದರ್ಶನಕ್ಕೂ ಬರಲಾಗದ ಹೆತ್ತವರ ಆರ್ಥಿಕ ಸ್ಥಿತಿ ನೆನೆದು ಕಣ್ಣು ಹನಿಗೂಡುತ್ತದೆ. ’ಇಲ್ಲಿ ಮಾನವ ಮೌಲ್ಯಗಳಿಗೆ ಬೆಲೆಯಿಲ್ಲ. ವ್ಯಕ್ತಿಯ ಗುರುತು ಮತ್ತು ಸಂಖ್ಯೆಯಿಂದ ಅಳೆಯಲಾಗುತ್ತದೆ. ಬೌದ್ಧಿಕತೆಯಿಂದ ಗುರುತಿಸುವುದಲ್ಲ’ ಎಂದ ರೋಹಿತ್ ವೇಮುಲ ನಮ್ಮನ್ನಗಲಿ 5ವರ್ಷಗಳಾದವು. ನಮ್ಮ ದೇಶದ ಸಾಮಾನ್ಯ ಜನರಿಗೆ ಶಿಕ್ಷಣ ಎಂಬುದು ಇನ್ನೂ ನಿಲುಕದ ಕುಸುಮ, ಒಂದೊಮ್ಮೆ ಪ್ರವೇಶ ಪಡೆದರೂ ಸಾಗುವ ಹಾದಿ ಅವರಲ್ಲಿನ ಸತ್ವವನ್ನೇ ಉಡುಗಿಸುವಂತಿದೆ ಎಂಬುದನ್ನು ಇವು ತೋರಿಸುತ್ತಿವೆ.

ಜೊತೆಗೆ, ನಮ್ಮಲ್ಲಿ ಈಗಾಗಲೇ ಇರುವ ಶ್ರೇಣೀಕರಣದ ಜೊತೆಗೆ ಜಾಗತೀಕರಣದ ಭಾಗವಾಗಿ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು ಹಿಂದುಳಿದವರನ್ನು ಮತ್ತಷ್ಟು ಅಂಚಿಗೆ ತಳ್ಳುತ್ತಿವೆ. ನಮ್ಮ ಗ್ರಾಮೀಣ ಪರಿಸರದ ಬಹುಪಾಲು ಇಂದು ವಿದ್ಯುತ್, ಅಂತರ್ಜಾಲದ ಕನಿಷ್ಟ ಸೌಲಭ್ಯ ಹೊಂದಿರುವ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣ, ಶಿಕ್ಷಣದ ಖಾಸಗೀಕರಣ ದೊಡ್ಡ ವಿದ್ಯಾರ್ಥಿ ಸಮೂಹವನ್ನೇ ಶಿಕ್ಷಣ ವಂಚಿತರನ್ನಾಗಿಸುತ್ತದೆ. ಯಾವ ದಲಿತ, ಹಿಂದುಳಿದ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಫುಲೆ ದಂಪತಿಗಳು ಶ್ರಮಿಸಿದರೋ ಇಂದು ಅದೇ ಸಮುದಾಯಕ್ಕೆ ದುರ್ಗಮ ಹಾದಿ ಎದುರಾಗಿದೆ. ಈ ಬದಲಾವಣೆಗಳು ಕಂಗೆಡಿಸುವಂತಿವೆ.

ಈ ಸಂದರ್ಭದಲ್ಲಿ ಫುಲೆ ದಂಪತಿಗಳು ಕೈಗೊಂಡ ಬಹುದೊಡ್ಡ ಕೆಲಸವನ್ನು ಮತ್ತೆ ಕಣ್ಣಮುಂದೆ ತಂದುಕೊಂಡು ಇಂದಿನ ಬಿಕ್ಕಟ್ಟನ್ನು ದಾಟಲು ಬೇಕಾದ ಶಕ್ತಿಯನ್ನು ಪಡೆಯಬೇಕಾಗಿದೆ. ಇತ್ತೀಚೆಗೆ ಹೊರಬಂದ ಸಂಗೀತಾ ಮುಳೆಯವರ ’ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕೃತಿ ಸಾವಿತ್ರಿಬಾಯಿಯವರ ಬದುಕಿನಿಂದ ಶಬರಿ ಎನ್ನುವ ದಲಿತ ಹುಡುಗಿ ಸ್ಫೂರ್ತಿ ಪಡೆದು ತನಗೆದುರಾದ ಸವಾಲುಗಳನ್ನು ದಾಟುವ ಕತೆ ಹೇಳುತ್ತದೆ. ಈ ಬಗೆಯ ಪ್ರೇರಣೆಯನ್ನು ನಾವು ಒಂದು ಸಮುದಾಯವಾಗಿ ಒಟ್ಟು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಪಲ್ಲಟಕ್ಕೆ ಮುಖಾಮುಖಿಯಾಗುವ ನಿಟ್ಟಿನಲ್ಲಿ ಪಡೆಯಬೇಕಾಗಿದೆ.

ಸಾವಿತ್ರಿಬಾಯಿಫುಲೆಯವರು 1831, ಜನವರಿ 3ರಂದು ಬಾಂಬೆ ಸಂಸ್ಥಾನಕ್ಕೆ ಸೇರಿದ್ದ ಸತಾರಾದ ನಯೀಗಾಂವ್‌ನಲ್ಲಿ ಜನಿಸಿದರು. ಸಣ್ಣವಯಸ್ಸಿನಲ್ಲೇ ಜ್ಯೋತಿಬಾರನ್ನು ಮದುವೆಯಾದ ಸಾವಿತ್ರಿಬಾಯಿಯವರು ಪತಿಯ ಒತ್ತಾಸೆಯಿಂದ ಶಿಕ್ಷಣ ಪಡೆದರು. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ಜೊತೆಯಾಗಿ ಪುಣೆಯಲ್ಲಿ 1848ರಲ್ಲಿ ಮೊತ್ತಮೊದಲ ಹೆಣ್ಣುಮಕ್ಕಳ ಶಾಲೆ ಆರಂಭಿಸುತ್ತಾರೆ. ನಂತರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೀಗೆ ಎಲ್ಲ ಶಿಕ್ಷಣವಂಚಿತ ಸಮುದಾಯಗಳಿಗಾಗಿ ಶಾಲೆಗಳನ್ನು ತೆರೆಯುತ್ತಾರೆ. ಸಂಪ್ರದಾಯವಾದಿ ಮನಸ್ಸುಗಳು ಇದನ್ನು ಸಹಿಸದೆ ಇಲ್ಲದ ಉಪಟಳಗಳನ್ನು ಕೊಟ್ಟರೂ ಧೃತಿಗೆಡದೆ ತಾವು ನಂಬಿದ ಮೌಲ್ಯದಿಂದ ದೂರಸರಿಯದೇ ಫುಲೆ ದಂಪತಿಗಳು ಬದುಕು ನಡೆಸಿದವರು.

ಸಾವಿತ್ರಿಬಾಯಿಯವರು ಜ್ಯೋತಿಬಾರೊಂದಿಗೆ ನೊಂದ, ತ್ಯಕ್ತ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು 1854ರಲ್ಲಿ ಬಾಲಹತ್ಯಾ ಪ್ರತಿಬಂಧಕ ಗೃಹ ಆರಂಭಿಸುತ್ತಾರೆ. ಮಹಿಳಾ ಮಂಡಲಗಳಲ್ಲಿ ಜಾತಿಮತಗಳ ಭೇದವಿಲ್ಲದೆ ಎಲ್ಲ ಮಹಿಳೆಯರೂ ಬೆರೆಯುವ ವಾತಾವರಣ ನಿರ್ಮಿಸುತ್ತಾರೆ. ವಿಧವಾ ಕೇಶಮುಂಡನದ ವಿರುದ್ಧ ದನಿಯೆತ್ತುತ್ತಾ ಇಂತಹ ಕೆಲಸ ಮಾಡದಂತೆ ಕ್ಷೌರಿಕರ ಮನವೊಲಿಸುತ್ತಾರೆ. ಸಮಾಜದ ತಳವರ್ಗದ ಜನರಿಗೆ ಬಾವಿಯಿಂದ ನೀರು ಸೇದುವ ಅವಕಾಶವಿಲ್ಲದಿದ್ದಾಗ ತಮ್ಮ ಮನೆಯ ಬಾವಿಯನ್ನು ಎಲ್ಲರಿಗೆ ಮುಕ್ತವಾಗಿರಿಸುತ್ತಾರೆ. ಜ್ಯೋತಿಬಾರ ಜೊತೆಯಲ್ಲಿ ಸತ್ಯಶೋಧಕ ಸಮಾಜ ಆರಂಭಿಸುವಲ್ಲಿ ಪ್ರೇರಕಶಕ್ತಿಯಾಗುತ್ತಾರೆ.

ಸಾವಿತ್ರಿಬಾಯಿ ಫುಲೆಯವರು ಶಿಕ್ಷಣ, ಸಾಮಾಜಿಕ ಜಾಗೃತಿ ಮೂಡಿಸಲು ತಮ್ಮ ಬದುಕನ್ನೇ ತೆತ್ತವರು. 1897ರಲ್ಲಿ ಮಹಾರಾಷ್ಟ್ರದಲ್ಲಿ ಪ್ಲೇಗ್ ಹರಡಿತ್ತು. ಸಾವಿತ್ರಿಬಾಯಿಯವರು ತಮ್ಮ ಜೊತೆಗಾರರೊಂದಿಗೆ ಜನರ ಶುಶ್ರೂಷೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರೂ ಸೋಂಕಿಗೆ ತುತ್ತಾಗಿ 1897, ಮಾರ್ಚ್ 10ರಂದು ಮರಣ ಹೊಂದುತ್ತಾರೆ. ಹೀಗೆ ತಮ್ಮ ಬದುಕಿನ ಕೊನೆಯ ಗಳಿಗೆಯಲ್ಲೂ ಅವರ ಮನಸ್ಸು ಮತ್ತು ದೇಹ ನೊಂದ ಜನರಿಗೆ ನೆರವಾಗಲು ತುಡಿಯುತ್ತಿತ್ತು.

ಒಂದು ಕಡೆಯಲ್ಲಿ ಜಾತಿಶ್ರೇಣೀಕರಣ, ಅಸ್ಪೃಶ್ಯತೆ, ಲಿಂಗ ತಾರತಮ್ಯದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ, ಇನ್ನೊಂದು ಕಡೆಯಲ್ಲಿ ವಸಾಹತುಶಾಹಿಯ ಹಿಡಿತ, ಇವುಗಳ ಮಧ್ಯೆ ನಿಜವಾದ ಬಿಡುಗಡೆ ಶಿಕ್ಷಣದ ಮೂಲಕ ಸಾಧ್ಯ ಎಂದು ದೃಢವಾಗಿ ನಂಬಿ ನಡೆದವರು ಸಾವಿತ್ರಿಬಾಯಿಯವರು. “ಏಳಿ, ಎದ್ದೇಳಿ ಮತ್ತು ಶಿಕ್ಷಿತರಾಗಿ, ಸಂಪ್ರದಾಯದ ಸಂಕಲೆಗಳನ್ನು ಮುರಿಯಿರಿ” ಎಂಬ ಅವರ ಮಾತಿಗೆ ಅವರ ಬದುಕೇ ಒಂದು ನಿದರ್ಶನ. ಫುಲೆ ದಂಪತಿಗಳು ಅನಾಥ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತುಮಗನಾಗಿ ಸ್ವೀಕರಿಸುತ್ತಾರೆ. ಯಶವಂತ ರಾವ್ ಕೂಡಾ ತಂದೆತಾಯಿ ಸಾಗಿದ ದಾರಿಯಲ್ಲೇ ಸಾಗುತ್ತಾರೆ. ತಮ್ಮ ಪತಿ ಜ್ಯೋತಿಬಾ ತೀರಿಕೊಂಡಾಗ ಸಾಂಪ್ರದಾಯಿಕ ರೂಢಿಗೆ ವಿರುದ್ಧವಾಗಿ ಸ್ವತಃ ಸಾವಿತ್ರಿಬಾಯಿ ಅಂತಿಮ ವಿಧಿ ನೆರವೇರಿಸುತ್ತಾರೆ. ಸಾವಿತ್ರಿಬಾಯಿ ಅವರ ಇಂತಹ ನಡೆ, ಎಷ್ಟೋ ವರ್ಷಗಳ ನಂತರ ಕುವೆಂಪು ಅವರು ನುಡಿದ ’ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬುದನ್ನು ನೆನಪಿಸುತ್ತದೆ.

ಸಾವಿತ್ರಿಬಾಯಿ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ಹಾದಿ ಹಾಕಿಕೊಟ್ಟವರಲ್ಲಿ ಮೊದಲಿಗರು; ಜನಹಿತವನ್ನು ಮನದಲ್ಲಿರಿಸಿಕೊಂಡು, ಅದನ್ನು ಕಾರ್ಯರೂಪಗೊಳಿಸಿ ವೈಚಾರಿಕತೆಯ ದೀಪ ಬೆಳಗಿದವರು. ಭಾರತದಲ್ಲಿ ಮೊದಲ ಘಟ್ಟದಲ್ಲಿ ಸ್ತ್ರೀವಾದಿ ದನಿಯಾಗಿ ಕಾಣುವವರು ಸಾವಿತ್ರಿಬಾಯಿ. ಏನೂ ಸವಲತ್ತುಗಳಿಲ್ಲದ ಕಾಲದಲ್ಲಿ ನೈಜ ಕಾಳಜಿಯೊಂದನ್ನೇ ಗಟ್ಟಿಯಾಗಿ ಆತುಕೊಂಡು ಮುಂದುವರೆದವರು ಫುಲೆ ದಂಪತಿಗಳು. ಇವರ ಕೊಡುಗೆಯ ಬಗ್ಗೆ ಹೇಳುವಾಗ ಭಾರತದ ಮಹತ್ವದ ಚಿಂತಕ ಜಿ.ಎನ್.ದೇವಿಯವರ ಮಾತು ಇಲ್ಲಿ ಪ್ರಸ್ತುತ, “ಭಾರತದಲ್ಲಿ ಆಧುನಿಕ ಶಿಕ್ಷಣವೆಂಬುದು ಸರ್ಕಾರದಿಂದಲೇ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ ಅಲ್ಲ. ಹಲವಾರು ನಿಸ್ವಾರ್ಥ ವ್ಯಕ್ತಿಗಳು ತಮ್ಮದೆಲ್ಲವನ್ನೂ ತೆತ್ತು ಕಟ್ಟಿದ ಒಂದು ಸಾಂಸ್ಕೃತಿಕ ಉತ್ಪನ್ನ… …ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ಭಾರತೀಯ ಸಮಾಜದ ಆಳ ಸತ್ವವನ್ನು ಪೋಷಿಸುವ ಶಿಕ್ಷಣದ ಶ್ರೇಷ್ಠ ಕಾಣ್ಕೆಗಳನ್ನು ಶಿಕ್ಷಣದೊಂದಿಗೆ ಬೆಸೆಯಲಾಗಲೇ ಇಲ್ಲ.” ಇವು ನಮಗೆ ಸಾವಿತ್ರಿಬಾಯಿಯವರ ಮಹತ್ವ ಮತ್ತು ಇಂದಿನ ಬಿಕ್ಕಟ್ಟಿನ ಮೂಲವನ್ನು ಒಟ್ಟಿಗೆ ಮನದಟ್ಟು ಮಾಡಿಸುತ್ತವೆ.

ಇಂದು ನಮ್ಮ ಮುಂದೆ ಎಲ್ಲರನ್ನೂ ಕಾಯುವ ಸಂವಿಧಾನವಿದೆ, ಶಿಕ್ಷಣ ಮೂಲಭೂತ ಹಕ್ಕಾಗಿ ಬದಲಾಗಿದೆ. ಇಂತಹ ಸಂದರ್ಭದಲ್ಲೂ ಬಾಲ್ಯ ವಿವಾಹಗಳು ನಡೆಯುತ್ತಿವೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕಲಿಕೆಯ ಮಧ್ಯದಲ್ಲೇ ತೆರಳುವವರೂ ಹೆಚ್ಚಿದ್ದಾರೆ. ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ? ಎಂದು ನಾವು ಪ್ರಶ್ನೆ ಹಾಕಿಕೊಂಡು ನಮ್ಮನ್ನೇ ಅವಲೋಕನ ಮಾಡಿಕೊಳ್ಳದೇ ಹೋದರೆ ಆಶಯ ಕೇವಲ ಕಾಗದಕ್ಕಷ್ಟೆ ಮೀಸಲಾಗಿ, ಅರಳಬೇಕಾದ ಜೀವಗಳು ಕಣ್ಣಮುಂದೆಯೇ ಇಲ್ಲವಾಗುವ ದುರಂತವಷ್ಟೇ ಎದುಗಿರುತ್ತದೆ. ಈ ಸಂಕಷ್ಟಕರ ಸಂದರ್ಭದಲ್ಲಿ ಸಾವಿತ್ರಿಬಾಯಿಯವರ ಬದುಕಿನ ಹೋರಾಟದಿಂದ ನಾವು ಸತ್ವವನ್ನು ಪಡೆದು ಮುನ್ನಡೆಯುವ ದೃಢತೆ ತೋರಬೇಕಿದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈಗ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪವೇ ಸಾವಿತ್ರಿ ಬಾಯಿ ಫುಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಚೆಂದದ ಬರೆಹ ಮೇಡಂ, ಅಕ್ಷರದ ಅವ್ವನ ದಿಟ್ಟತನ ನಮ್ಮಲ್ಲಿ ಇನ್ನಾದರೂ ಗಟ್ಟಿಯಾಗಿ ಎದೆಗಿಳಿಯಬೇಕಿದೆ.

  2. ಪುಲೆ ಯವರ್ ಚಿಂತನೆಗಳನ್ನು ಮನ ಮುಟ್ಟಿಸುವ ಕೆಲಸ ಮಾಡುವ ನಿಮ್ಮ ಬರವಣಿಗೆ ನಿಜವಾಗಿಯೂ ಮೆಚ್ಚಿಕೊಳ್ಳುವುದರಲ್ಲಿ ಯಾವ ಬಗೆಯ ಎರಡು ಮಾತುಗಲ್ಲೂ ಇಲ್ಲ
    ಆದರೂ ಇಂದಿನ ಅಂದ ಭಕ್ತ ಗುಂಪು ಅನೇಕ ಮಹ್ನಿಯರ ಅನ್ನು ಅವೆಳ್ನಕಾರಿ ಮಾಡುತ್ತಿರುವುದು ವಿಷಾದ ಸಂಗತಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...