ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ದ ದೇಶದಾದ್ಯಂತ ಹೋರಾಟಗಳು ತೀವ್ರಗೊಂಡಿದೆ. ದೆಹಲಿಯ ಗಡಿಗಳಲ್ಲಿ ನಡೆಯುತ್ತಿರು ಐತಿಹಾಸಿಕ ರೈತ ಹೋರಾಟ 83ನೇ ದಿನಕ್ಕೆ ಕಾಲಿಟ್ಟಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಕಿಸಾನ್ ಮಹಾಪಂಚಾಯತ್ಗಳು ಆರಂಭವಾಗಿ ಬಿಜೆಪಿಗೆ ತಲೆನೋವಾಗಿವೆ. ಉತ್ತರ ಭಾರತದಲ್ಲಿ ಕೃಷಿ ಕಾನೂನುಗಳ ವಿರುದ್ಧ ಹೋರಾಟದ ಕಾವು ಎಷ್ಟರ ಮಟ್ಟಿಗೆ ಇದೆ ಎಂದರೆ ಅಲ್ಲಿನ ಜನರು ತಮ್ಮ ಮದುವೆ ಆಮಂತ್ರಣ ಪತ್ರಗಳಲ್ಲಿ ಕೂಡಾ ಕೃಷಿ ವಿರೋಧಿ ಕಾನೂನನ್ನು ವಿರೋಧಿಸುವ ಘೋಷಣೆಗಳನ್ನು ಬರೆಸುತ್ತಿದ್ದಾರೆ!
ಹರಿಯಾಣದ ಸ್ಥಳೀಯ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದೆ. ವರದಿಯಲ್ಲಿ ಮದುವೆ ಆಮಂತ್ರಣ ಪತ್ರಗಳನ್ನು ಮುದ್ರಿಸುವ ಮುದ್ರಕರ ಬಳಿಗೆ ಬರುವ ಗ್ರಾಹಕರು, ರೈತ ಹೋರಾಟದ ಘೋಷಣೆಗಳನ್ನು ಮುದ್ರಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಈ ಹಿಂದೆ ಮದುವೆ ಆಮಂತ್ರಣ ಪತ್ರಗಳಲ್ಲಿ ಜಾತಿ ಸೂಚಕ, ಧರ್ಮಸೂಚಕ ಚಿನ್ನೆಗಳು ಅಥವಾ ಚಿತ್ರಗಳನ್ನು ಮಾತ್ರ ಮುದ್ರಿಸಲು ಹೇಳುತ್ತಿದ್ದ ಗ್ರಾಹಕರು ಇತ್ತೀಚೆಗೆ ಭಗತ್ ಸಿಂಗ್, ಅಂಬೇಡ್ಕರ್, ಸಾವಿತ್ರಿ ಬಾಯಿ ಮುಂತಾದ ಮಹಾಪುರುಷರ ಚಿತ್ರಗಳನ್ನು ಮುದ್ರಿಸಲು ಬೇಡಿಕೆಯಿಡುತ್ತಿದ್ದಾರೆ!
ಇದನ್ನೂ ಓದಿ: ರೈತ ಹೋರಾಟ 80ನೇ ದಿನಕ್ಕೆ: ಪ್ರೊ ಎಂ.ಡಿ ನಂಜುಂಡಸ್ವಾಮಿಯವರನ್ನು ನೆನೆದ ರೈತ ಒಕ್ಕೂಟ
”ಚಿತ್ರದಲ್ಲಿ ಕಾಣುವ ಮದುಮಗನ ಹೆಸರು ಜಗದೀಪ್ ಸಿಂಗ್ (30 ವರ್ಷ). ತಂದೆ ನಿವೃತ್ತ ಸೈನಿಕರು. ತನ್ನ ಮದುವೆಯ ದಿಬ್ಬಣ ಹೋಗುವಾಗ ಬರ್ನಾಲಾ ಎಂಬಲ್ಲಿ ಕಳೆದ 101 ದಿನಗಳಿಂದ ಚಳುವಳಿ ನಡೆಸುತ್ತಿರುವ ರೈತರು ಆತನ ಕಣ್ಣಿಗೆ ಬಿದ್ದರು. ತಕ್ಷಣ ದಿಬ್ಬಣ ನಿಲ್ಲಿಸಿದ ಮದುಮಗ ಜಗದೀಪ್ ದಿಬ್ಬಣದವರ ಸಮೇತ ರೈತರ ಜೊತೆ ಒಂದು ಗಂಟೆ ಕುಳಿತು ಅವರಿಗೆ ತನ್ನ ಬೆಂಬಲ ಘೋಷಿಸಿ, ಮದುವೆ ಹಾಲ್ ಕಡೆ ನಡೆದರು. ಹೋಗುವ ಮುನ್ನ ‘ಇದನ್ನು ಕೇಳಿ ಕಮಲ್ ಪ್ರೀತ್ (ಮದುಮಗಳು) ನನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತಾಳೆ’ ಎಂದು ಹೇಳಲು ಜಗದೀಪ್ ಮರೆಯಲಿಲ್ಲ” ಎಂದು ತಾನು ಕಂಡ ಘಟನೆಯ ಬಗ್ಗೆ ಪ್ರೊ. ಪುರುಷೋತ್ತಮ ಬಿಳಿಮಲೆಯವರು ತಮ್ಮ ಫೇಸ್ಬುಕ್ನಲ್ಲಿ ಬರೆದಿದ್ದರು.
ರಾಜಸ್ಥಾನ, ಪಂಜಾಬ್, ಹರಿಯಾಣದಲ್ಲಿ ದಂಪತಿಗಳು ರೈತರ ಚಳುವಳಿ ಘೋಷಣೆಗಳನ್ನು ಮುದ್ರಿಸಿ ಹಾಡುತ್ತಿದ್ದಾರೆ. ಹಲವು ನವ ದಂಪತಿಗಳು ತಮ್ಮ ಮದುವೆ ಊಟವನ್ನು ರೈತ ಹೋರಾಟಗಾರರಿಗೆ ಹಂಚಿಕೊಳ್ಳುತ್ತಿದ್ದಾರೆ. ಪಂಜಾಬಿ ಮದುವೆಗಳಲ್ಲಿ ಹಾಡು ಹಾಡುವ ನೋರಾ ಝೋರಾ ಗಿಡ್ಡಾ ಗುಂಪಿನ ಪ್ರಕಾರ, (ದೆಲ್ಲಿನೂ ಚಲಿಯೆ, ಜಾಕೆ ಮೋದಿನು ಘೆರಿಯೆ, ಹೇ ಸಮಾಲೋ) “ದೆಹಲಿಗೆ ಹೊರಡೋಣ, ಮೋದಿಯನ್ನು ಮುತ್ತಿಗೆ ಹಾಕೋಣಾ” ಎಂಬ ಹಾಡು ಜನಪ್ರಿಯವಾಗಿದೆ. ಜನರು ಮದುವೆಗಳಲ್ಲೂ ಈ ಹಾಡನ್ನೂ ಸಾಮೂಹಿಕವಾಗಿ ಹಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಇದುವರೆಗೂ ತಾನು ಜಾರಿಗೆ ತಂದಿರುವ ಕೃಷಿ ಕಾನೂನನ್ನು ಸಮರ್ಥಿಸುತ್ತಲೆ ಬಂದಿದೆ. ತೀರಾ ಇತ್ತೀಚೆಗೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ನಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದ್ದಾರೆ. ಆದರೆ ಜನರು ವಿಭಿನ್ನವಾಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷದ ಸಿಎಎ ವಿರುದ್ದದ ಹೋರಾಟದಲ್ಲಿ ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ನವದಂಪತಿಗಳು “ಸಿಎಎ ಬೇಡ” ಎಂಬ ಘೋಷಣೆಗಳಿರುವ ಕಾರ್ಡ್ಗಳನ್ನು ಹಿಡಿದು ನಡೆಯುತ್ತಿರುವ, ಹೋರಾಟದಲ್ಲಿ ತಾವೂ ಭಾಗಿಯಾಗಿ ಬೆಂಬಲ ನೀಡುತ್ತಿದ್ದದ್ದು ವರದಿಯಾಗಿತ್ತು. ಅದರಂತೆ ಈ ವರ್ಷವು ಕೃಷಿ ಕಾನೂನನ್ನು ವಿರೋಧಿಸಿ ಇಂತಹದೆ ಘಟನೆಗಳು ವರದಿಯಾಗಿದೆ.
ಇದನ್ನೂ ಓದಿ: ಪಂಜಾಬ್ ಲೂಧಿಯಾನ ಮಹಾಪಂಚಾಯತ್ನಲ್ಲಿ ಲಕ್ಷಕ್ಕೂ ಅಧಿಕ ರೈತರು ಭಾಗಿ: ಚಳವಳಿ ತೀವ್ರಗೊಳಿಸಲು ನಿರ್ಧಾರ