84 ವರ್ಷದ ನಂದಿಪಾಪಯ್ಯ, ಕಳೆದ 65 ವರ್ಷಗಳಿಂದ ಮೊಳಕಾಲ್ಮೂರು ತಾಲ್ಲೂಕು ತುಮಕೂರ್ಲಹಳ್ಳಿ ಗ್ರಾಮದ ಸರ್ವೆ ನಂ. 78 ರಲ್ಲಿ 3 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದರೂ ಭೂಮಿ ಅವರದ್ದಾಗಿಲ್ಲ. ಅರಣ್ಯ ಹಕ್ಕು ಕಾಯ್ದೆಯನ್ವಯ ಭೂಮಿ ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಅರ್ಜಿಸಲ್ಲಿಸಿದ್ದಾರೆ.
ಈ ವಯೋವೃದ್ದ ಪಾಪಯ್ಯ ಬದುಕಿಗಾಗಿ ಭೂಮಿಯನ್ನು ಪಡೆಯಬೇಕೆಂಬ ಛಲದಿಂದ ಹಲವಾರು ವರ್ಷಗಳಿಂದ ನಡೆಸುತ್ತಿರುವ ಪ್ರತಿಭಟನೆ, ಧರಣಿಯಿಂದ ಹಿಂದೆ ಸರಿದಿಲ್ಲ. “ನಾನು ಬಡ್ವ ಎಲ್ಡ್ ಎಕರೆ ಭೂಮಿ ಇರ್ಬೇಕೊ ಬ್ಯಾಡ್ವೋ … ನಾನು ಕೇಳುವುದರಲ್ಲಿ ನ್ಯಾಯ ಐತೋ ಇಲ್ವೋ” ಎಂಬ ಇವರ ಮಾತಿಗೆ ಯಾವ ಅಧಿಕಾರಿಯೂ ಉತ್ತರ ನೀಡಲು ತಬ್ಬಿಬ್ಬಾಗುತ್ತಾರೆ.
Posted by Kumar Samathala on Tuesday, June 25, 2019
ಆ ಊರಿನಲ್ಲಿ ಅರಣ್ಯ ಇಲಾಖೆಯವರು 38 ಕುಟುಂಬಗಳನ್ನು ಹೊರಹಾಕಿ ಜನರನ್ನು ಬೀದಿಗೆ ತಳ್ಳಿದ್ದಾರೆ. ಊರುಗೋಲ ಆಸರೆಯಲ್ಲೇ ಕಛೇರಿ ಕಛೇರಿಗಳನ್ನು ಅಲೆಯುತ್ತಿದ್ದರೂ ಪರಿಹಾರ ಸಿಕ್ಕಿಲ್ಲ. ಇವರು ಪ್ರತಿಭಟನೆಯು ಆರಂಭದಿಂದಲೂ ಪ್ರತಿದಿನ ತಪ್ಪದೇ ಭಾಗವಹಿಸುವ, ರಾತ್ರಿಯು ಪ್ರತಿಭಟನೆಯ ಜಾಗ ಬಿಟ್ಟು ಕದಲದ ವ್ಯಕ್ತಿ ನಂದಿಪಾಪಯ್ಯ.
ಅದೇ ರೀತಿ ಹೊಳಲ್ಕೆರೆ ತಾಲ್ಲೂಕಿನ ನೇರಲಕಟ್ಟೆ ಗ್ರಾಮದಲ್ಲಿ ಒಂದೇ ಸಮುದಾಯದ 70 ಕುಟುಂಬಗಳು ಭೂಮಿಗಾಗಿ ಹೋರಾಡಿ ಕೇಸು ಹಾಕಿಸಿಕೊಂಡು ಜೈಲಿಗೂ ಹೋಗಿದ್ದಾರೆ. ಇಂತಹ ಸಾವಿರಾರು ಪ್ರಕರಣಗಳು, ಘಟನೆಗಳು ಕಳೆದ ಐದಾರು ದಶಕಗಳಿಂದಲೂ ನಡೆಯುತ್ತಲೇ ಇವೆ. ಕಂದಾಯ, ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಹಕ್ಕುಪತ್ರಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳು ಕಾಯುತ್ತಿವೆ ಆದರೆ ಅವರಿಗೆ ಸಿಕ್ಕಿರುವುದು ತೀವ್ರ ನಿರಾಶೆ ಮಾತ್ರ ಎನ್ನುತ್ತಾರೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಕುಮಾರ್ ಸಮತಳ.
ಚಿತ್ರದುರ್ಗದ ಜಿಲ್ಲಾಡಳಿತ ಜನರ ಸಮಸ್ಯೆಗಳನ್ನು ಬಗೆ ಹರಿಸದೆ, ನಿಷ್ಕಾಳಜಿ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕಳೆದ 10 ದಿನಗಳಿಂದ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ, ನಿಮ್ಮ ಸಮಸ್ಯೆ ಏನೆಂದು ಕೇಳುವ ಕನಿಷ್ಠ ವ್ಯವಧಾನವೂ ಅವರಿಗಿಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ಜನರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಣ್ಣಿಗೆ ಕಾಣುತ್ತಾರೆ ಬಿಟ್ಟರೆ ಬಾಕಿ ಸಮಯದಲ್ಲಿ ಕಾಣುವುದಿಲ್ಲ. ಅಂದರೆ ಅಧಿಕಾರಿಗಳು, ಕಾನೂನು ಜಾರಿ ಮಾಡಬೇಕಿರುವವರು, ಇದೇ ಜನರು ಬೆಳೆದ ಅನ್ನ ತಿನ್ನುತ್ತಿಲ್ಲವೇ? ಎಂದು ಕುಮಾರ್ ಸಮತಳ ಪ್ರಶ್ನಿಸಿದ್ದಾರೆ.

ಭೂಮಿ ವಸತಿಗಾಗಿ ಬಡವರು ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲೆಯ ಜನತೆ, ನಾಡಿನ ಪ್ರಜ್ಞಾವಂತರು, ಹೋರಾಟಗಾರರು ಬಡ ಜನರ ಕೂಗಿಗೆ ದ್ವನಿಗೂಡಿಸಬೇಕೆಂದು ಅವರು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಈ ಮೂಲಕ ಮನವಿ ಮಾಡಿದ್ದಾರೆ.


