ಏಕ ಸಂಸ್ಕೃತಿಯ ಹೇರಿಕೆಯ ವಿರುದ್ಧ ಕಲಬುರಗಿಯಲ್ಲಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ – 2025’ ಹಾಗೂ ಚಲೋ ಕಲಬುರಗಿ ರ್ಯಾಲಿಯನ್ನು ರಾಜ್ಯದ ಎಡ, ದಲಿತ, ಕಾರ್ಮಿಕ, ಮಹಿಳಾ ಮತ್ತು ಬಸವಾದಿ ಸೇರಿದಂತೆ ಸುಮಾರು 40 ಸಂಘಟನೆಗಳು ಜನವರಿ 17, 18 ಮತ್ತು 19ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿವೆ. ಈ ನಡುವೆ, ಆರೆಸ್ಸೆಸ್ ಹಾಗೂ ಬಿಜೆಪಿ ಪರ ಬಲಪಂಥೀಯ ಸಂಘಟನೆಗಳು ಕೂಡಾ ಜನವರಿ 29 ಮತ್ತು ಫೆಬ್ರವರಿ 6ರ ನಡುವೆ ‘ಭಾರತೀಯ ಸಂಸ್ಕೃತಿ ಉತ್ಸವ’ವನ್ನು ಆಯೋಜಿಸಿವೆ.
ಸೌಹಾರ್ದ ಕರ್ನಾಟಕ ವೇದಿಕೆ ಆಯೋಜಿಸಿರುವ ಬಹುತ್ವ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಲವಾರು ಲಿಂಗಾಯತ ಮಠಾಧೀಶರು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ಗದಗಿನ ತೋಂಟದ ಸಿದ್ಧರಾಮ ಸ್ವಾಮೀ, ಇಲಕಲ್ಲಿನ ಗುರುಮಹಾಂತ ಸ್ವಾಮೀ, ಗುರುಮಠಕಲ್ನ ಶಾಂತವೀರ ಸ್ವಾಮಿ, ಬಸವ ಕಲ್ಯಾಣದ ಗಂಗಾಂಬಿಕ ಅಕ್ಕ ಸೇರಿದಂತೆ ಹಲವಾರು ಪ್ರಮುಖರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜನವರಿ 17 ರಂದು ಪ್ರಾರಂಭವಾಗಲಿರುವ ಬಹುತ್ವ ಸಂಸ್ಕೃತಿ ಉತ್ಸವವು ಸೌಹಾರ್ದ ಯಾತ್ರೆಯೊಂದಿಗೆ ಆರಂಭವಾಗಲಿದ್ದು, ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಮಹಾತ್ಮ ಬಸವೇಶ್ವರ ಮತ್ತು ಬಾಬಾಸಾಹೇಬರ ಪುತ್ಥಳಿ ಮಾರ್ಗವಾಗಿ ಖ್ವಾಜಾ ಬಂದೇನವಾಜ್ ದರ್ಗಾದವರೆಗೆ ಇದು ನಡೆಯಲಿದೆ. ಇದೇ ವೇಳೆ “ನಮ್ಮ ನಡಿಗೆ ಶರಣ, ಸಂತ, ಸೂಫಿ ಪ್ರಜ್ಞೆಯೆಡೆಗೆ” ಘೋಷಣೆಯಡಿಯಲ್ಲಿ ವಾಹನ ಜಾಥಾ ನಡೆಯಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜನವರಿ 18ರಂದು “ಭಾವೈಕ್ಯದ ಹೊನಲು: ಸಮನ್ವಯದ ಗಾಯನ ಗಮಲು” ಘೋಷಣೆಯಡಿ ದಿನವಿಡೀ ತತ್ವಪದ, ಸೂಫಿಪದ, ವಚನ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ನಾನುಗೌರಿ.ಕಾಂಗೆ ಹೇಳಿದ್ದಾರೆ.
ಜನವರಿ 19ರಂದು ದಿನವಿಡೀ “ಬಹುತ್ವ ಭಾರತದ ಜಾಗ್ರತ ಅಭಿಯಾನ” ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ನಾಡಿನೆಲ್ಲೆಡೆಯಿಂದ ಸರ್ವಧರ್ಮಗಳ ನೇತಾರರು, ವಿಚಾರವಾದಿಗಳು, ಸಾಮಾಜಿಕ ಹೋರಾಟಗಾರರು, ಮಾನವಹಕ್ಕುಗಳ ಹೋರಾಟಗಾರರು, ನಾಡಿನ ದುಡಿಯುವ ವರ್ಗದ ಜನರು ಸಮಾವೇಶಗೊಂಡು ಸಮತೆ-ಮಮತೆಗಳ ಸಂದೇಶ ಸಾರಲಿದ್ದಾರೆ ಎಂದು ಸಂಘಟಕರು ನಾನುಗೌರಿ.ಕಾಂಗೆ ಹೇಳಿದ್ದಾರೆ.
“ಕಲಬುರಗಿಯು ಬಸವಕಲ್ಯಾಣದ ಹೆಬ್ಬಾಗಿಲು. ಶರಣಬಸವಪ್ಪನವರ ಕರ್ಮಭೂಮಿ ಮತ್ತು ಸೂಫಿಸಂತ ಖ್ವಾಜಾ ಬಂದೇನವಾಜ್ರ ಪ್ರಯೋಗ ಭೂಮಿ. ಕ್ರಿ.ಶ 1ನೇ ಶತಮಾನದಲ್ಲಿ ಚಿತ್ತಾಪೂರದ ಕನಗವಳ್ಳಿಯಲ್ಲಿ ನಿರ್ಮಿಸಲಾದ ಬೌದ್ಧ ಮಹಾಸ್ತೂಪವು ಸಾಮ್ರಾಟ್ ಅಶೋಕನ ಕಾಲದಲ್ಲಿ ಇದು ಬೌದ್ಧ ಭೂಮಿಯಾಗಿತ್ತು ಎಂಬುದನ್ನು ಸಾಕ್ಷೀಕರಿಸುತ್ತಿದೆ. ಅತ್ಯಂತ ಪ್ರಾಚೀನ ಕಾಲದಿಂದಲೂ ಹಲವು ಧರ್ಮ, ಜಾತಿ, ಮತ, ಪಂಥ ಮತ್ತು ಭಾಷೆಗಳ ಸಮ್ಮಿಲನಕ್ಕೆ ನೆಲೆಮನೆಯಾಗಿದೆ. ಧಾರ್ಮಿಕ ಸಾಮರಸ್ಯ, ಸಹಬಾಳ್ವೆ, ಮತ ಸಮನ್ವಯತೆಗೆ ಪ್ರಸಿದ್ಧಿಯಾಗಿರುವ ಈ ನಾಡು¸ ಸಾಂಸ್ಕೃತಿಕ ಬಹುತ್ವಕ್ಕೂ ಹೆಸರುವಾಸಿಯಾಗಿದೆ. ಇಂಥ ಕಲ್ಬುರ್ಗಿಯನ್ನು ಇತ್ತೀಚಿಗೆ ಕೋಮುವಾದೀಕರಣಗೊಳಿಸುವ ನಿಷ್ಫಲ ಪ್ರಯತ್ನಗಳು ನಡೆಯುತ್ತಿವೆ” ಎಂದು ಸಂಘಟಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
“ಉಗ್ರ ಹಿಂದುತ್ವವಾದಿಗಳು ಸಂಸ್ಕೃತಿ ಉತ್ಸವದ ನೆಪದಲ್ಲಿ ಏಕ ಸಂಸ್ಕೃತಿಯನ್ನು ಹೇರುತ್ತಾ ನಮ್ಮ ನಾಡಿನ ಭಾವೈಕ್ಯ ಪರಂಪರೆಯನ್ನು ಹಾಳು ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಉತ್ತರವೆಂಬಂತೆ ಕೆಲವು ಅಲ್ಪಸಂಖ್ಯಾತ ಮೂಲಭೂತವಾದಿಗಳು ಮತಾಂಧತೆಯಲ್ಲಿ ಮುಳುಗುತ್ತಿದ್ದಾರೆ. ಅತ್ಯಂತ ಅಪಾಯಕಾರಿ ಕೋಮು ಚಟುವಟಿಕೆಗಳು ಪ್ರಭುತ್ವ ಪ್ರೇರಿತ ಅಧಿಕಾರದ ಮೂಲಕ ನಡೆಯುತ್ತಿವೆ. ಈ ನಡೆಗಳು ನಮ್ಮ ಬದುಕನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ಈಗಾಗಲೇ ಬಡತನ, ಅಪೌಷ್ಟಿಕತೆ, ಅನಿಯಂತ್ರಿತ ವಲಸೆ, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ, ಮೌಢ್ಯಗಳಿಂದ ನಲುಗುತ್ತಿರುವ ಜನಸಮುದಾಯಗಳನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳುತ್ತಿವೆ.” ಎಂದು ಅವರು ಹೇಳಿದ್ದಾರೆ.
“ಕೋಮುವಾದಿಗಳ ಆಕರ್ಷಕ ಮಾತುಗಳಿಗೆ ಮರುಳಾದ ನಮ್ಮ ಯುವಜನರು, ವಿಶೇಷವಾಗಿ ದಲಿತ, ಶೂದ್ರ ಮುಂತಾಗಿ ಹಿಂದುಳಿದ ಯುವಜನರು ಅವರು ತೋಡಿದ ಖೆಡ್ಡಾಗಳಿಗೆ ಬೀಳುತ್ತಿದ್ದಾರೆ. ಧಾರ್ಮಿಕ ದ್ವೇಷಗಳಿಂದ ಕೋಮುದಂಗೆಗಳಲ್ಲಿ ನಿರತರಾಗಿ ಕೇಸು ಹಾಕಿಸಿಕೊಂಡು ಒದ್ದಾಡುತ್ತಿದ್ದಾರೆ. ಹಿಂದೂ ನಾವೆಲ್ಲ ಒಂದು ಎನ್ನುತ್ತ ದಲಿತಾದಿ ಶೂದ್ರ ಬಡಮಕ್ಕಳನ್ನು ಮತಾಂಧತೆಯಲ್ಲಿ ಕೆರಳಿಸಿ ಅವರೆಲ್ಲರನ್ನು ಕ್ರಿಮಿನಲ್ಗಳಾಗಿಸುತ್ತಿದ್ದಾರೆ. ನಮ್ಮ ತರುಣ ಪೀಳಿಗೆ ಕೋಮುದ್ವೇಷದ ದಳ್ಳುರಿಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಸಂಘಟಕರು ಹೇಳಿದ್ದಾರೆ.
ಇದನ್ನೂಓದಿ: ಗಾಝಾ ಕದನ ವಿರಾಮದ ಕರಡು ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ : ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಭರವಸೆ
ಗಾಝಾ ಕದನ ವಿರಾಮದ ಕರಡು ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ : ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಭರವಸೆ


