‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ'(PMVS) ಜಾತಿ ಆಧಾರಿತ ಉದ್ಯೋಗಗಳ ಕಲ್ಪನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಅದನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನವೆಂಬರ್ 27ರಂದು ಕೇಂದ್ರಕ್ಕೆ ಪತ್ರ ಬರೆದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಸರ್ಕಾರ ಯೋಜನೆಯ ಕುರಿತು ಅಧ್ಯಯನ ನಡೆಸಿದೆ. ಈ ವೇಳೆ ಯೋಜನೆಯು ಸಣ್ಣ ಕುಟುಂಬ ನಡೆಸುವ ಕರಕುಶಲ ಮತ್ತು ಕುಶಲಕರ್ಮಿ ಉದ್ಯೋಗದಲ್ಲಿ ತೊಡಗಿರುವವವರಿಗೆ ಮಾತ್ರ ಲಾಭ ಒದಗಿಸುವುದು ಕಂಡು ಬಂದಿದೆ. ಇದು ಮೂಲಭೂತವಾಗಿ ಕೆಳಜಾತಿಯ ಯುವಕರನ್ನು ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಬದಲು ಜಾತಿ ಆಧಾರಿತ ಉದ್ಯೋಗಗಳಲ್ಲೇ ಉಳಿಯಲು ಪ್ರೋತ್ಸಾಹಿಸುತ್ತದೆ ಎಂದು ಸಿಎಂ ಪತ್ರದಲ್ಲಿ ಹೇಳಿದ್ದಾರೆ.
ವಿಶ್ವಕರ್ಮ ಯೋಜನೆಯು 15 ಸಾವಿರ ರೂಪಾಯಿ ಟೂಲ್ಕಿಟ್ ಪ್ರೋತ್ಸಾಹ ಧನದ ಜೊತೆಗೆ ಕೌಶಲ್ಯ ವರ್ಧನೆಗೆ ತರಬೇತಿ ಮತ್ತು ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಮೊದಲ ಕಂತಿನಲ್ಲಿ ರೂ. 1 ಲಕ್ಷ ಮತ್ತು ಎರಡನೇ ಕಂತಿನಲ್ಲಿ ರೂ. 2 ಲಕ್ಷದವರೆಗೆ ಮೇಲಾಧಾರ-ಮುಕ್ತ ಸಾಲವನ್ನು ಶೇ. 5ರಷ್ಟು ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತದೆ.
ಯೋಜನೆಯು ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ಗೆ ಪ್ರೋತ್ಸಾಹ ಒದಗಿಸುತ್ತದೆ. ಮರಗೆಲಸ, ದೋಣಿ ತಯಾರಿಕೆ, ಕಬ್ಬಿಣದ ಶಸ್ತ್ರಾಸ್ತ್ರ ತಯಾರಿಕೆ, ಶೂ ತಯಾರಿಕೆ ಸೇರಿದಂತೆ ಕುಟುಂಬ ಪಾರಂಪರ್ಯವಾಗಿ ಬಂದಿರುವ 18 ಕೆಲಸಗಳಿಗೆ ಇದು ಅನ್ವಯಿಸುತ್ತದೆ.
ಸೆಪ್ಟೆಂಬರ್ 17, 2023ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಈ ಯೋಜನೆ ಕುರಿತು ಬಿಜೆಪಿ ಸರ್ಕಾರ ಬಹಳ ಹೆಮ್ಮೆ ವ್ಯಕ್ತಪಡಿಸಿದೆ. ಆದರೆ, ತಮಿಳುನಾಡು ಸರ್ಕಾರ ಯೋಜನೆಯನ್ನು ವಿರೋಧಿಸಿದೆ.
ಒಂದು ಕುಟುಂಬ ಮರಗೆಲಸ ಮಾಡಿಕೊಂಡಿದ್ದರೆ, ಅವರ ಮಕ್ಕಳೂ ಅದೇ ಕೆಲಸ ಮಾಡಿಕೊಂಡು ಹಿಂದೆ ಉಳಿಯುವುದು ಬೇಡ. ಆ ಮಕ್ಕಳು ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣ ಪಡೆದು, ಉತ್ತಮ ಕೆಲಸಗಳನ್ನು ಗಿಟ್ಟಿಸಿಕೊಂಡು ಸಂಬಳ ಪಡೆಯುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದೆ ಬರಲಿ ಎಂಬುವುದು ತಮಿಳುನಾಡು ಸರ್ಕಾರದ ವಾದ.
ಯೋಜನೆಯ ಕುರಿತು ಟೀಕೆಗಳು ವ್ಯಕ್ತವಾದಾಗ, ತಮಿಳುನಾಡು ಸರ್ಕಾರ ಅದರ ಸಂಭಾವ್ಯ ಪರಿಣಾಮಗಳನ್ನು ನಿರ್ಣಯಿಸಲು ಸಮಿತಿಯನ್ನು ರಚಿಸಿತ್ತು. ಅದರ ವರದಿ ಆಧಾರಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ವರ್ಷದ ಜನವರಿಯಲ್ಲಿ ನಮ್ಮ ಸರ್ಕಾರ ಯೋಜನೆಯ ಕುರಿತು ಮೂರು ಬೇಡಿಕೆಗಳನ್ನು ಮುಂದಿಟ್ಟಿತ್ತು. ಅದು ಪರಿಹಾರವಾಗದೆ ಉಳಿದಿದೆ ಎಂದು ಸಿಎಂ ಸ್ಟಾಲಿನ್ ತಮ್ಮ ಪತ್ರದಲ್ಲಿ ಕೇಂದ್ರಕ್ಕೆ ಹೇಳಿದ್ದಾರೆ.
ನಿರ್ದಿಷ್ಟ ಕಸುಬಿನಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ಯೋಜನೆ ಲಾಭ ಎಂಬ ನಿಯಮವನ್ನು ತೆಗೆದುಹಾಕಿ, ಯಾವುದೇ ಉದ್ಯೋಗ ಮಾಡುವವರೂ ಅರ್ಹರು ಎಂಬ ನಿಯಮ ಅಳವಡಿಸಿ ಎಂದು ವಿಶ್ವಕರ್ಮ ಯೋಜನೆ ಸಂಬಂಧ ತಮಿಳುನಾಡು ಸರ್ಕಾರ ಕೇಂದ್ರವನ್ನು ಆಗ್ರಹಿಸಿತ್ತು.
ಎರಡನೆಯದಾಗಿ, ಫಲಾನುಭವಿಗಳು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅರ್ಹತೆಯ ಕನಿಷ್ಠ ವಯಸ್ಸನ್ನು 18 ವರ್ಷದಿಂದ 35 ವರ್ಷಕ್ಕೆ ಏರಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು.
ಕೊನೆಯದಾಗಿ, ಗ್ರಾಮೀಣ ಪ್ರದೇಶದ ಫಲಾನುಭವಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಮುಖ್ಯಸ್ಥರಿಗಿಂತ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗೆ (ವಿಎಒ) ವಹಿಸಬೇಕೆಂದು ಸರ್ಕಾರ ಶಿಫಾರಸು ಮಾಡಿತ್ತು.
“ನಾವು ಮುಂದಿಟ್ಟಿರುವ ಬೇಡಿಕೆಗಳು ಈಡೇರದ ಕಾರಣ, ಪ್ರಸ್ತುತ ರೂಪದಲ್ಲಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಕುಶಲಕರ್ಮಿಗಳನ್ನು ಸಾಮಾಜಿಕ ನ್ಯಾಯದ ಒಟ್ಟಾರೆ ತತ್ವದಡಿಯಲ್ಲಿ ಸಬಲೀಕರಣಗೊಳಿಸಲು, ಸರ್ಕಾರ ಕುಶಲಕರ್ಮಿಗಳಿಗಾಗಿ ಹೆಚ್ಚು ಒಳಗೊಳ್ಳುವಿಕೆಯ ಮತ್ತು ಸಮಗ್ರ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅದು ಜಾತಿ ಆಧಾರಿತ ತಾರತಮ್ಯದಿಂದ ಹೊರತಾಗಿರಲಿದೆ. ನಮ್ಮ ಯೋಜನೆಯು ಜಾತಿ ಅಥವಾ ಕೌಟುಂಬಿಕ ಉದ್ಯೋಗಗಳನ್ನು ಲೆಕ್ಕಿಸದೆ ರಾಜ್ಯದ ಎಲ್ಲಾ ಕುಶಲಕರ್ಮಿಗಳಿಗೆ ಸಮಗ್ರ ಬೆಂಬಲವನ್ನು ನೀಡಲಿದೆ. ಯೋಜನೆಯು ಅವರಿಗೆ ಆರ್ಥಿಕ ನೆರವು, ತರಬೇತಿ ಮತ್ತು ಅವರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಸಮಗ್ರವಾಗಿ ಮತ್ತು ಒಳಗೊಳ್ಳುವಿಕೆಯ ಮೂಲಕ ಒದಗಿಸಲಿದೆ” ಎಂದು ಸ್ಟಾಲಿನ್ ಪತ್ರದಲ್ಲಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MoMSME),ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಸಚಿವಾಲಯ (MSDE)ಮತ್ತು ಹಣಕಾಸು ಸಚಿವಾಲಯ (MoF)ದ ಅಡಿ ಬರುವ ಹಣಕಾಸು ಸೇವೆಗಳ ಇಲಾಖೆ (DFS)ಜಂಟಿಯಾಗಿ 13,000 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಿದೆ.
ಇದನ್ನೂ ಓದಿ : ಮಧ್ಯಪ್ರದೇಶ | ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗ್ರಾಮ ಪಂಚಾಯತ್ ಅಧ್ಯಕ್ಷ


