ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಸುಮಾರು 70 ಮಂದಿ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
594 ಕಿಮೀ ಉದ್ದದ ಗಂಗಾ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಶಹಜಹಾನ್ಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
’ಪ್ರವಾಹದ ನಂತರ ಜಿಲ್ಲೆಯನ್ನು ವಿಪತ್ತು ಪೀಡಿತ ಎಂದು ಘೋಷಿಸದ ಸರ್ಕಾರದ ವಿರುದ್ಧ ಪ್ರತಿಭಟಿಸಲು ಎಸ್ಪಿ ಕಾರ್ಯಕರ್ತರು ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ್ಯಾಲಿಗೆ ಬರುವ ಮೊದಲೇ ರೌಜಾ ಮೈದಾನಕ್ಕೆ ಹೋಗಲು ಯೋಜಿಸಿದ್ದರು” ಎಂದು ಎಸ್ಪಿಯ ಮಾಜಿ ಶಾಸಕ ರಾಜೇಶ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆ ಬಂದಿದೆ, ಮುಂದಕ್ಕೆ ಇಡಿ, ಸಿಬಿಐ ಬರುತ್ತದೆ: ಐಟಿ ದಾಳಿ ಬಗ್ಗೆ ಅಖಿಲೇಶ್ ಯಾದವ್
ಸುಮಾರು 70 ಎಸ್ಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದು, ಪ್ರಧಾನಿಯವರ ಸಾರ್ವಜನಿಕ ರ್ಯಾಲಿ ಮುಗಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
“ಪ್ರವಾಹದಿಂದಾಗಿ ರೈತರ ಬೆಳೆಗಳು ನಾಶವಾಗಿದ್ದು, ಈ ಸನ್ನಿವೇಶದಲ್ಲಿ ಜಿಲ್ಲೆಯನ್ನು ವಿಪತ್ತು ಪೀಡಿತ ಎಂದು ಘೋಷಿಸಬೇಕಾಗಿತ್ತು. ಆದರೆ, ಇದನ್ನು ಮಾಡಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಇಲ್ಲಿ ಸಾರ್ವಜನಿಕ ಸಭೆ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ನಮ್ಮ ಪ್ರತಿಭಟನೆಯನ್ನು ದಾಖಲಿಸಲು ಹೊರಟಿದ್ದರು” ಎಂದು ಪಕ್ಷದ ನಾಯಕ ರಾಜೇಶ್ ಯಾದವ್ ಹೇಳಿದ್ದಾರೆ.
ಎಸ್ಪಿ ಕಾರ್ಯಕರ್ತರು ಖಿರ್ನಿಬಾಗ್ನಲ್ಲಿರುವ ಪಕ್ಷದ ಕಚೇರಿಯಿಂದ ಪ್ರಧಾನಿಯವರ ಕಾರ್ಯಕ್ರಮದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ನಿಶಾತ್ ಟಾಕೀಸ್ ಬಳಿ ಸುಮಾರು 600 ಎಸ್ಪಿ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ರಾಜೇಶ್ ಯಾದವ್ ಹೇಳಿದ್ದಾರೆ.