ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ತನ್ನ ಕೋವಿಶೀಲ್ಡ್ ಲಸಿಕೆಯನ್ನು ಯುರೋಪಿಯನ್ ಒಕ್ಕೂಟ ಮತ್ತು ಇತರ ದೇಶಗಳು ಮಾನ್ಯತೆ ಮಾಡುವಂತೆ ಕ್ರಮ ಜರುಗಿಸಲು ಸರ್ಕಾರವನ್ನು ಕೋರಿದೆ.
ಈಗಿನ ಅಮಾನ್ಯತೆಯು ವಿದ್ಯಾರ್ಥಿಗಳು ಮತ್ತು ಬ್ಯುಸಿನೆಸ್ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೀವ್ರ ಅಡ್ಡಿ ಉಂಟು ಮಾಡುತ್ತದೆ. ಕೋವಿಶೀಲ್ಡ್ ಪಡೆದವರಿಗೆ ಅಲ್ಲಿ ಪ್ರಯಾಣಕ್ಕೆ ಅಥವಾ ವಾಸ್ತವ್ಯಕ್ಕೆ ಅನುಮತಿ ಇಲ್ಲ. ಇದು ಭಾರತದ ಜೊತೆಗೇ ಜಾಗತಿಕ ಆರ್ಥಿಕತೆಗೆ ಹೊಡೆತ ನೀಡುತ್ತದೆ ಎಂದು ಸೀರಂ ಸಿಇಒ ಅದಾರ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
I realise that a lot of Indians who have taken COVISHIELD are facing issues with travel to the E.U., I assure everyone, I have taken this up at the highest levels and hope to resolve this matter soon, both with regulators and at a diplomatic level with countries.
— Adar Poonawalla (@adarpoonawalla) June 28, 2021
ಯುರೋಪಿಯನ್ ಒಕ್ಕೂಟದಲ್ಲಿ ಕೇವಲ ನಾಲ್ಕು ಲಸಿಕೆಗಳು ಮಾನ್ಯತೆ ಪಡೆದಿವೆ. ಫಿಜರ್ ಬಯೋಟೆಕ್ನ ಲಸಿಕೆ, ಮಾಡೆರ್ನಾ ಲಸಿಕೆ, ಅಸ್ಟ್ರಾಜಯೋನಿಕ್-ಆಕ್ಸ್ಫರ್ಡ್ನ Vaxzervria ಮತ್ತು ಜಾನ್ಸನ್ & ಜಾನ್ಸನ್ ಕಂಪನಿಯ ಜಾನ್ಸೀನ್ ಲಸಿಕೆಗಳಿಗೆ ಮಾತ್ರ ಅಲ್ಲಿ ಮಾನ್ಯತೆ ಇದೆ. ಈ ಲಸಿಕೆಗಳನ್ನು ಪಡೆದವರಿಗೆ ಮಾತ್ರ ವ್ಯಾಕ್ಸಿನೇಷನ್ ಪಾಸ್ಪೋರ್ಟ್ಗಳನ್ನು ನೀಡಲಾಗುವುದು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಯುರೋಪಿಯನ್ ಒಕ್ಕೂಟದ ಒಳಗೆ ಪ್ರಯಾಣಿಸಲು ಅನುಮತಿಸಲಾಗುವುದು.
“ಭಾರತವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಕೋವಿಶೀಲ್ಡ್ ಅನ್ನು ಯುರೋಪಿಯನ್ ಒಕ್ಕೂಟ ಕೋವಿಡ್ ವ್ಯಾಕ್ಸಿನೇಷನ್ ಪಾಸ್ಪೋರ್ಟ್ಗೆ ಸೇರಿಸದಿರುವುದು ಕೋವಿಶೀಲ್ಡ್ ಲಸಿಕೆ ಪಡೆದ ಜನರಿಗೆ ಯುರೋಪಿಯನ್ ದೇಶಗಳಿಗೆ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಪ್ರಯಾಣ ಮತ್ತು ವಾಸ್ತವ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಆರ್ಥಿಕತೆಗೆ ತೀವ್ರ ಅಡ್ಡಿ ಉಂಟು ಮಾಡುತ್ತದೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೂ ಇದರ ಪರಿಣಾಮ ಆಗುತ್ತದೆ ಎಂದು ಎಸ್ಐಐನ ಸಿಇಒ ಅದಾರ್ ಪೂನಾವಾಲಾ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳನ್ನು ಆಧರಿಸಿ ಟೆಲೆಗ್ರಾಫ್ ಇಂಡಿಯಾ ವರದಿ ಮಾಡಿದೆ.
ಕೋವಿಶೀಲ್ಡ್ ತೆಗೆದುಕೊಂಡ ಬಹಳಷ್ಟು ಭಾರತೀಯರು ಯುರೋಪಿಯನ್ ದೇಶಗಳಿಗೆ ಪ್ರಯಾಣಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಾನು ಅರಿತುಕೊಂಡಿದ್ದೇನೆ, ಎಲ್ಲರಿಗೂ ನಾನು ಭರವಸೆ ನೀಡುತ್ತೇನೆ, ನಾನು ಇದನ್ನು ಉನ್ನತ ಮಟ್ಟದಲ್ಲಿ ಚರ್ಚಿಸುತ್ತಿದ್ದೇನೆ. ವಿವಿಧ ದೇಶಗಳ ಔಷಧ ನಿಯಂತ್ರಕರು ಮತ್ತು ರಾಜತಾಂತ್ರಿಕ ಅಧಿಕಾರಿಗಳ ಜೊತೆ ಮಾತನಾಡಿ, ಶೀಘ್ರದಲ್ಲೇ ಈ ವಿಷಯವನ್ನು ಭಾರತ ಸರ್ಕಾರ ಪರಿಹರಿಸುತ್ತದೆ ಎಂದು ಆಶಿಸುತ್ತೇನೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಎಸ್ಐಐನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಪೂನಾವಾಲಾ ಅವರ ಪತ್ರವನ್ನು ಉಲ್ಲೇಖಿಸಿ, ಸಚಿವ ಜೈಶಂಕರ್ ಅವರ ಹಸ್ತಕ್ಷೇಪವನ್ನು ಕೋರಿದ್ದಾರೆ. “ಇದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಹಿತದೃಷ್ಟಿಯಿಂದ ಕೂಡಿದೆ. ಕೋವಿಶೀಲ್ಡ್ ಲಸಿಕೆಯನ್ನು ಯುರೋಪಿಯನ್ ಒಕ್ಕೂಟದ ದೇಶಗಳು ಮತ್ತು ಇತರ ದೇಶಗಳು ಮಾನ್ಯ ಮಾಡುವಂತೆ ವ್ಯವಸ್ಥ ಮಾಡಬೇಕು ಎಂದು ಕೇಳಿದ್ದಾರೆ.
ಭಾರತದಲ್ಲಿ ಈಗಾಗಲೇ ಸುಮಾರು 30 ಕೋಟಿ ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ ಎಂದು ಪೂನಾವಾಲಾ ಅವರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದ. ಅಂತಿಮವಾಗಿ ಕೋವಿಶೀಲ್ಡ್ ಲಸಿಕೆಯೊಂದಿಗೆ ಭಾರತೀಯ ಜನಸಂಖ್ಯೆಯ ಶೇಕಡಾ 50ಕ್ಕಿಂತ ಹೆಚ್ಚು ಜನರಿಗೆ ರಕ್ಷಣೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಆಕ್ಸ್ಫರ್ಢ್-ಅಸ್ಟ್ರಾಜೆನೆಕಾದಿಂದ ತಂತ್ರಜ್ಞಾನ ವರ್ಗಾವಣೆಯಡಿಯಲ್ಲಿ ಅಸ್ಟ್ರಾಜೆನೆಕಾ-ಎಸ್ಐಐ ಸಹಯೋಗದಲ್ಲಿ ಕೋವಿಶೀಲ್ಡ್ ಅನ್ನು ತಯಾರಿಸಲಾಗಿದೆ, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ವಿದೇಶದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಮತ್ತು ತುರ್ತು ಬಳಕೆಯ ಅನುಮೋದನೆಗಾಗಿ ಎಂಹೆಚ್ಆರ್ಎ ಅನುಮೋದಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; ಲಸಿಕೆ ನೀಡುವಲ್ಲಿ ಅಮೆರಿಕ ಹಿಂದಿಕ್ಕಿದ ಭಾರತ: ಪಿಳ್ಳಂಗೋವಿ ಪ್ರಚಾರವೆಂದು ನೆಟ್ಟಿಗರ ಟ್ರೋಲ್