ಸುಪ್ರೀಮ್ ಕೋರ್ಟಿನ ಘನತೆ ಗೌರವಗಳು ಗುರುವಾರ ಅಗ್ನಿಪರೀಕ್ಷೆಗೆ ಗುರಿಯಾಗಲಿವೆ. ನ್ಯಾಯಾಂಗ ನಿಂದನೆಯ ಉರುಳಿಗೆ ಪ್ರಶಾಂತ್ ಭೂಷಣ್ ಅವರ ಕೊರಳನ್ನು ಸಿಕ್ಕಿಸುವುದು ಆಳುವ ಪಟ್ಟಭದ್ರರ ಪ್ರಯತ್ನ. ಯಾಕೆಂದರೆ ಆಳುವವರ ಪಾಲಿಗೆ ಪ್ರಶಾಂತ್ ಬೆಂಬಿಡದೆ ಕಾಡುವ ತೊಣಚಿ. ಜೊತೆಗೆ ನ್ಯಾಯಾಂಗದ ಕಾರ್ಯವೈಖರಿ- ಭ್ರಷ್ಟಾಚಾರದತ್ತ ಕಾಲ ಕಾಲಕ್ಕೆ ಬೆರಳು ಮಾಡಿ ತೋರುತ್ತ, ಅದರ ಅಂತಸ್ಸಾಕ್ಷಿಯನ್ನು ಪಾಟೀಸವಾಲಿಗೆ ಗುರಿ ಮಾಡಿರುವ ದಿಟ್ಟ ನ್ಯಾಯವಾದಿ.
ಸಾಮಾಜಿಕ ಜಾಲತಾಣ ಟ್ವೀಟ್ರ್ನಲ್ಲಿ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಕುರಿತು ಮತ್ತು ಕಳೆದ ಆರು ವರ್ಷಗಳ ಸುಪ್ರೀಮ್ ಕೋರ್ಟ್ ಕಾರ್ಯವೈಖರಿ ಕುರಿತು ಇತ್ತೀಚೆಗೆ ಎರಡು ಟ್ವೀಟ್ಗಳನ್ನು ಮಾಡಿದ್ದರು. ಇವುಗಳಿಂದ ನ್ಯಾಯಾಂಗ ನಿಂದನೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿರುವ ಸುಪ್ರೀಮ್ ಕೋರ್ಟ್ ಗುರುವಾರ ಪ್ರಶಾಂತ್ ಅವರಿಗೆ ವಿಧಿಸುವ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಪ್ರಕಟಿಸಲಿದೆ.
ಈ ತೀರ್ಪಿನ ವೇಳೆ ಕಟಕಟೆಯಲ್ಲಿ ನಿಂತಿರುವುದು ಪ್ರಶಾಂತ್ ಮಾತ್ರವೇ ಅಲ್ಲ, ಸುಪ್ರೀಮ್ ಕೋರ್ಟಿನ ಸಹನೆ ಘನತೆ ವಿವೇಕಗಳು ಕೂಡ ಕಟಕಟೆಯಲ್ಲಿ ನಿಂತಿರುವುದು ಹೌದು. ಇಷ್ಟಕ್ಕೂ ಪ್ರಶಾಂತ್ ಟ್ವೀಟ್ಗಳು ಹೇಳಿದ್ದೇನು ಎಂಬುದನ್ನು ಮತ್ತೊಮ್ಮೆ ನೆನೆದು ನೋಡೋಣ:
ಟ್ವೀಟ್ 1- ತಮ್ಮ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ಕದ ಬಡಿಯುವ ನಾಗರಿಕರ ಪಾಲಿಗೆ ಸುಪ್ರೀಮ್ ಕೋರ್ಟನ್ನು ಲಾಕ್ಡೌನ್ ಸ್ಥಿತಿಯಲ್ಲಿ ಇರಿಸಿ ಅವರಿಗೆ ನ್ಯಾಯವನ್ನು ನಿರಾಕರಿಸಿರುವ ಮುಖ್ಯ ನ್ಯಾಯಮೂರ್ತಿಯವರು ನಾಗಪುರದ ರಾಜಭವನದಲ್ಲಿ ಬಿಜೆಪಿ ನಾಯಕರೊಬ್ಬರ ಒಡೆತನದ 50 ಲಕ್ಷ ರು ಬೆಲೆ ಬಾಳುವ ಮೋಟರ್ ಸೈಕಲ್ಲನ್ನು ಏರಿ ಕುಳಿತಿದ್ದಾರೆ. ಮಾಸ್ಕ್ ಮತ್ತು ಹೆಲ್ಮೆಟ್ ಕೂಡ ಧರಿಸಿಲ್ಲ.
ಟ್ವೀಟ್ 2- ಅಧಿಕೃತ ತುರ್ತುಪರಿಸ್ಥಿತಿಯನ್ನು ಕೂಡ ಘೋಷಿಸದೆ ಕಳೆದ ಆರು ವರ್ಷಗಳ ಅವಧಿಯಲ್ಲಿ ಭಾರತದ ಜನತಂತ್ರವನ್ನು ಹೇಗೆ ನಾಶ ಮಾಡಲಾಯಿತು ಎಂಬುದನ್ನು ಭವಿಷ್ಯದಲ್ಲಿ ಇತಿಹಾಸಕಾರರು ಹೊರಳಿ ನೋಡಲಿದ್ದಾರೆ. ಆಗ ಅವರು ಈ ವಿನಾಶದಲ್ಲಿ ಸುಪ್ರೀಮ್ ಕೋರ್ಟಿನ, ಅದರಲ್ಲೂ ವಿಶೇಷವಾಗಿ ಕಳೆದ ನಾಲ್ವರು ಮುಖ್ಯನ್ಯಾಯಮೂರ್ತಿಗಳ ಪಾತ್ರವನ್ನು ರೇಖಾಂಕಿತಗೊಳಿಸಿ ಗುರುತಿಸುವರು.
ಕಾಯಿದೆ ಕಾನೂನು ನಿಷ್ಪಕ್ಷಪಾತತೆಯ ಬಟ್ಟೆಯನ್ನು ಕಣ್ಣಿಗೆ ಕಟ್ಟಿಕೊಂಡಿರುವ ನ್ಯಾಯದೇವತೆಗೆ, ದಯೆ, ಕರುಣೆ ಸಹನೆ, ಘನತೆ, ಔದಾರ್ಯ, ಕ್ಷಮೆಯ ಗುಣಗಳೂ ಇರುತ್ತವೆ. ವಿವೇಚನೆಯಿಂದ ಆಕೆ ಅದನ್ನು ಬಳಸುತ್ತಾಳೆ ಕೂಡ. ಆರೋಗ್ಯಕರವಾಗಿ ಜನಪರ ಕಾಳಜಿಗಳೊಂದಿಗೆ ಕೆಲಸ ಮಾಡಲು ಪೂರಕವಾಗುವ ಸಕಾರಾತ್ಮಕ ಟೀಕೆಯನ್ನು ಅಸಹನೆಯಿಂದ ಕೊಡವಿ ಹಾಕುವಷ್ಟು ಸಂಕುಚಿತವಲ್ಲ ನ್ಯಾಯಾಂಗದ ಭುಜಗಳು. ಭೂಷಣ್ ಅವರ ಈ ಟೀಕೆ ತಮ್ಮ ಸ್ವಂತದ ಹಿತಕ್ಕಾಗಿ ಮಾಡಿರುವಂತಹುದಲ್ಲ. ಒಂದು ವೇಳೆ ಘನತೆಯ ಗಡಿಯನ್ನು ಅಷ್ಟಿಷ್ಟು ಮೀರಿದ್ದರೂ ಅದನ್ನು ರಚನಾತ್ಮಕವಾಗಿ ಸ್ವೀಕರಿಸಬೇಕಿತ್ತು ಸುಪ್ರೀಮ್ ಕೋರ್ಟು.
ಸುಪ್ರೀಮ್ ಕೋರ್ಟಿನ ಆಡಳಿತ ಕೊಳೆತಿದೆ, ದೇಶದಲ್ಲಿ ಜನತಂತ್ರ ಉಳಿಯಬೇಕೆಂದಿದ್ದರೆ ಅದನ್ನು ಸರಿಪಡಿಸಬೇಕು ಎಂದು ೨೦೧೮ರ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬAತೆ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ ಯಾವ್ಯಾವ ನ್ಯಾಯಮೂರ್ತಿಗೆ ಯಾವ್ಯಾವ ಕೇಸುಗಳನ್ನು ವಿಚಾರಣೆಗೆ ಒಪ್ಪಿಸಬೇಕೆಂಬ ತೀರ್ಮಾನದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂಬ ಆಪಾದನೆಯನ್ನು ಈ ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದರು. ನ್ಯಾಯಾಲಯದ ಘನತೆ ಮಣ್ಣುಪಾಲಾಗುತ್ತದೆಂಬ ಕಾರಣದಿಂದ ವಿವರಗಳನ್ನು ಬಹಿರಂಗಗೊಳಿಸುತ್ತಿಲ್ಲ ಎಂದೂ ಸಾರಿದ್ದರು. ಈ ನಾಲ್ವರ ಪೈಕಿ ಒಬ್ಬರಾದ ರಂಜನ್ ಗೊಗೋಯ್ ಮುಖ್ಯ ನ್ಯಾಯಮೂರ್ತಿಯ ಹುದ್ದೆ ಏರಿದರು. ಅವರ ಮೇಲಿನ ಆಪಾದನೆಗಳು ದೀಪಕ್ ಮಿಶ್ರ ವಿರುದ್ಧ ಮಾಡಿದ್ದ ಆಪಾದನೆಗಳಿಗಿಂತ ಹೀನ ಸ್ವರೂಪದವು.
ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಮಾತುಗಳನ್ನು ಯಥಾವತ್ ಉಲ್ಲೇಖಿಸುವುದಾದರೆ, “ಗೊಗೋಯ್ (ಅವರನ್ನು ನ್ಯಾಯಮೂರ್ತಿ ಎಂದು ಕರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ) (ದೀಪಕ್ ಮಿಶ್ರ ಎಸಗಿದ್ದಕ್ಕಿಂತ) ಗಂಭೀರವಾದ, ದೊಡ್ಡದಾದ ದುರ್ವರ್ತನೆಗಳನ್ನು ಪ್ರದರ್ಶಿಸಿದರು. ಅಕ್ಷರಶಃ ಆಳುವ ಬಿಜೆಪಿ ಸರ್ಕಾರದ ಕಾಲಿಗೆ ಬಿದ್ದು ನಮಸ್ಕರಿಸಿದರು. ಬಹುತೇಕ ಸುಪ್ರೀಮ್ ಕೋರ್ಟನ್ನು ರಾಜಕೀಯ ಕಾರ್ಯಾಂಗದ ವಶಕ್ಕೆ ಒಪ್ಪಿಸಿದರು. ಜನರ ಹಕ್ಕುಗಳನ್ನು ಕಾಯುವ ಪವಿತ್ರ ಕಾರ್ಯಕ್ಕೆ ಎಳ್ಳು ನೀರು ಬಿಟ್ಟರು. ಆದರೆ ಗೊಗೋಯ್ ಹೀಗೆ ನಡೆದುಕೊಳ್ಳುತ್ತಿದ್ದಾಗ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಿಂದ ಒಂದೇ ಒಂದು ಭಿನ್ನಮತದ ದನಿಯೂ ಕೇಳಿಬರಲಿಲ್ಲ.”
ಪ್ರಶಾಂತ್ ಭೂಷಣ್ ಟೀಕೆಗೆ ಸುಪ್ರೀಮ್ ಕೋರ್ಟ್ ಈಗ ತಳೆದಿರುವ ನಿಲುವಿನ ತರ್ಕದ ಪ್ರಕಾರ,2018ರಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ವಿರುದ್ಧವೂ ನ್ಯಾಯಾಂಗನಿಂದನೆ ಕ್ರಮ ಜರುಗಿಸಬೇಕು. ಮಾರ್ಕಂಡೇಯ ಕಾಟ್ಜು ಅವರನ್ನೂ ಬಿಡುವಂತಿಲ್ಲ.
ಕೋವಿಡ್-19 ಮಹಾಮಾರಿಯ ಈ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟು ತನ್ನ ಕಲಾಪಗಳನ್ನು ಎಂದಿನಂತೆ ಕೋರ್ಟುಗಳಲ್ಲಿ ನಡೆಸುತ್ತಿಲ್ಲ. ವಾದ ಮಂಡನೆ- ವಿಚಾರಣೆ ತೀರ್ಪು ಎಲ್ಲವೂ ಕಂಪ್ಯೂಟರ್ ಜಾಲ ಬಳಸಿ ನಡೆಯುತ್ತಿದೆ. 19 ಸಾವಿರಕ್ಕೂ ಹೆಚ್ಚು ಕೇಸುಗಳು ವಿಚಾರಣೆಗೆ ಕಾದಿವೆ. ಇವುಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಗಳು, ಪೌರತ್ವ
ಕಾಯಿದೆ ತಿದ್ದುಪಡಿಯನ್ನು ಪ್ರಶ್ನಿಸುವ ತುರ್ತು ಸ್ವರೂಪದ ಅರ್ಜಿಗಳೂ ಸೇರಿವೆ. ಇವುಗಳೆಲ್ಲವನ್ನೂ ಪಕ್ಕಕ್ಕಿರಿಸಿ ಪ್ರಶಾಂತ್ ಭೂಷಣ್ ಅವರ ವಿರುದ್ಧದ ಪ್ರಕರಣವನ್ನು ಕೈಗೆತ್ತಿಕೊಳ್ಳುವ ತುರ್ತನ್ನು ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಹಿರಿಯ ಅಧಿಕಾರಿಗಳೂ ಪ್ರಶ್ನಿಸಿದ್ದಾರೆ.
ಹಾಲಿ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಪ್ರಧಾನಿ ಮೋದಿಯವರನ್ನು versatile Genius(ಬಹುಮಖ ಮೇಧಾವಿ) ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಹೊಗಳಿದ್ದರು. ಪ್ರಶಾಂತ್ ಭೂಷಣ್ ಅವರು ಮೋದಿಯವರ ಕಟು ಟೀಕಾಕಾರರು ಎಂಬುದು ಜನಜನಿತ. ಆದರೂ ಪ್ರಶಾಂತ್ ವಿರುದ್ಧದ ಈ ಕೇಸನ್ನು ಅರುಣ್ ಮಿಶ್ರ ಅವರ ನ್ಯಾಯಪೀಠಕ್ಕೆ ಒಪ್ಪಿಸಿರುವ ಔಚಿತ್ಯವೂ ಪ್ರಶ್ನಾರ್ಹ.
ತಮ್ಮ ಮೇಲಿನ ಆಪಾದನೆಯ ವಿಚಾರಣೆಯನ್ನು ನ್ಯಾಯಮೂರ್ತಿ ಅರುಣ್ ಮಿಶ್ರ ಅವರಿಲ್ಲದ ಪೀಠಕ್ಕೆ ಒಪ್ಪಿಸಬೇಕು ಮತ್ತು ಶಿಕ್ಷೆಯ ಸ್ವರೂಪ- ಪ್ರಮಾಣದ ಪ್ರಕಟಣೆಯನ್ನು ಮರುವಿಮರ್ಶಾ ಅರ್ಜಿಯ ವಿಚಾರಣೆ ನಡೆಯುವವರೆಗೆ ಮುಂದೂಡಬೇಕು ಎಂಬುದಾಗಿ ಪ್ರಶಾಂತ್ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಗೆ ಬೆಲೆ ಸಿಕ್ಕೀತೇ, ನಿವೃತ್ತ ನ್ಯಾಯಮೂರ್ತಿಗಳು ಸುಪ್ರೀಮ್ ಕೋರ್ಟಿಗೆ ಬೋಧಿಸಿರುವ ವಿವೇಕ ಕೆಲಸ ಮಾಡೀತೇ ಕಾದು ನೋಡಬೇಕಿದೆ.
ಇದನ್ನೂ ಓದಿ: ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್
ಸಂವಿಧಾನದ ರಕ್ಷಣೆ ಎನ್ನುವುದು ವ್ಯಕ್ತಿಗತವಾಗಿ ಹಾಗೂ ವೃತ್ತಿಯಿಂದ ಬರಬೇಕು. ಈ ದಿಸೆಯಲ್ಲಿ ಯಾವುದು ನನ್ನ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆಯೋ ಅದರ ಒಂದು ಸಣ್ಣ ಪ್ರಯತ್ನ ನನ್ನ ಟ್ವೀಟ್ಗಳಾಗಿವೆ.
ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್


