ತೀವ್ರ ವಿವಾದಕ್ಕೆ ಒಳಗಾಗಿ ದೇಶಾದ್ಯಂತ ಪ್ರತಿಭಟನೆಗೆ ಸಾಕ್ಷಿಯಾಗಿರುವ ರೈತ ವಿರೋಧಿ ಮತ್ತು ಕಾರ್ಪೊರೇಟ್ ಸ್ನೇಹಿ ಎಂದು ವಿರೋಧ ಪಕ್ಷಗಳು ಆರೋಪಿಸಿರುವ ಮೂರು ವಿವಾದಾತ್ಮಕ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಈ ಮಸೂದೆಗಳು ರೈತರನ್ನು ಸ್ವಾವಲಂಬಿಗಳನ್ನಾಗಿಸುತ್ತೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೇ, 12ಕ್ಕಿಂತ ಹೆಚ್ಚು ವಿರೋಧ ಪಕ್ಷಗಳು ಮಸೂದೆಗೆಗೆ ಒಪ್ಪಿಗೆ ಸೂಚಿಸದಂತೆ ರಾಷ್ಟ್ರಪತಿ ಕೋವಿಂದ್ರನ್ನು ಒತ್ತಾಯಿಸಿದ್ದರು. ಆದರೆ, ಈಗ ರಾಷ್ಟ್ರಪತಿಯವರು ಆಡಳಿತ ಪಕ್ಷದ ಮಾತಿಗೆ ಒಪ್ಪಿಗೆ ನೀಡಿ ಮಸೂದೆಗಳಿಗೆ ಸಹಿ ಹಾಕಿದ್ದಾರೆ.
ಮಸೂದೆಗಳನ್ನು ವಿರೋಧಿಸಿ ಸೆ.25ರಂದು ಭಾರತ್ ಬಂದ್ಗೆ ಕರೆ ನೀಡಲಾಗಿತ್ತು. ಕರ್ನಾಟಕದಲ್ಲಿ ಮಸೂದೆಗಳ ವಿರುದ್ಧ ನಾಳೆ (ಸೆ.28) ಪ್ರತಿಭಟನೆ, ಕರ್ನಾಟಕ ಬಂದ್ ನಡೆಯಲಿದೆ. ಬಂದ್ಗೆ ಕಾಂಗ್ರೆಸ್, ಜೆಡಿಎಸ್, ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ: ಬಹುಮತವಿಲ್ಲದೆ ನಿಯಮಗಳ ಉಲ್ಲಂಘನೆ..?
ಶಿರೋಮಣಿ ಅಕಾಲಿ ದಳ (ಎಸ್ಎಡಿ) ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಒಕ್ಕೂಟದಿಂದ ಹೊರಬಂದಿದೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನ್ನು ಲೋಕಸಭೆಯಲ್ಲಿ ಸೆ.17 ರಂದು ಅಂಗೀಕರಿಸಲಾಯಿತು. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಸೆಪ್ಟೆಂಬರ್ 13 ರಂದು ಅಂಗೀಕರಿಸಲಾಗಿದೆ.