2019 ರಲ್ಲಿ ಆಮ್ ಆದ್ಮಿ ಪಕ್ಷದಲ್ಲಿದ್ದ ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಹರಿಬಿಟ್ಟಿದ್ದ ವೀಡಿಯೊ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿದ್ದಕ್ಕಾಗಿ ದೂರಸಂಪರ್ಕ ಇಲಾಖೆ ಅಧಿಕಾರಿ ಆಶಿಶ್ ಜೋಶಿ ದಂಡನೆಗೆ ಒಳಗಾಗಿದ್ದು ಅವರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಅವರನ್ನು ಅಮಾನತುಗೊಳಿಸಿದ್ದ ಇಲಾಖೆಯ ಆದೇಶವನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ರದ್ದುಗೊಳಿಸಿದ್ದಾರೆ.
ಅವರನ್ನು ಮತ್ತೇ ದೂರಸಂಪರ್ಕ ಇಲಾಖೆಗೆ ನೇಮಿಸಲಾಗಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಅವರು ಯಾವುದೆ ಪ್ರತಿಕ್ರಿಯೆಗೆ ಸಿಗಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. 2019 ರಲ್ಲಿ ಕಪಿಲ್ ಮಿಶ್ರಾ ಅವರ ದ್ವೇಷ ಕಾರುವ ವಿಡಿಯೊ ಬಗ್ಗೆ ಆಶಿಶ್ ಜೋಶಿ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ‘ಅಗತ್ಯ ಬಿದ್ದರೆ, ಕಳೆದ ವರ್ಷ ಮಾಡಿದ್ದನ್ನು ಮತ್ತೆ ಮಾಡುತ್ತೇನೆ: ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ
ಕಪಿಲ್ ಮಿಶ್ರಾ 2019 ರ ಫೆಬ್ರವರಿ 24 ರಂದು ಟ್ವಿಟರ್ನಲ್ಲಿ ಕವಿತೆಯೊಂದನ್ನು ಓದಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದರು. ಅದರಲ್ಲಿ ಅವರು, “ದೇಶದ್ರೋಹಿಗಳ ವಿರುದ್ಧ ಯುದ್ಧ ಮಾಡುವುದಾಗಿ” ಪ್ರತಿಜ್ಞೆ ಮಾಡಿದ್ದರು.
ಅವರು ವಿಡಿಯೊದಲ್ಲಿ “ದೇಶದ್ರೋಹಿಗಳು” ಎಂದು ಪತ್ರಕರ್ತೆ ಬರ್ಖಾ ದತ್, ಹೋರಾಟಗಾರ್ತಿ ಕವಿತಾ ಕೃಷ್ಣನ್, ಶೆಹ್ಲಾ ರಶೀದ್, ರಾಜಕಾರಣಿ ನವಜೋತ್ ಸಿಂಗ್ ಸಿಧು ಮತ್ತು ನಟ ನಾಸಿರುದ್ದೀನ್ ಶಾ ಅವರ ಹೆಸರನ್ನು ಉಲ್ಲೇಖಿಸಿದ್ದರು. ಈ ವಿಡಿಯೊವನ್ನು ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು, ನಂತರ ಆಕ್ಷೇಪ ಬಂದದ್ದರಿಂದ ಅವನ್ನು ಡಿಲೀಟ್ ಮಾಡಿದ್ದರು.
Department of Telecommunications circular against the video uploaded by Mr. Kapil Mishra. It is copied to @DelhiPolice as it violates IPC and IT Act provisions. pic.twitter.com/tXJLK62QVa
— Shehla Rashid (@Shehla_Rashid) February 25, 2019
ಈ ಸಮಯ ಡೆಹ್ರಾಡೂನ್ನಲ್ಲಿ ಸಂವಹನ ಖಾತೆಯ ನಿಯಂತ್ರಕರಾಗಿದ್ದ ಆಶಿಶ್ ಜೋಶಿ ಕಳವಳ ವ್ಯಕ್ತಪಡಿಸಿ ದೆಹಲಿ ಪೊಲೀಸ್ ಕಮಿಷನರ್ ಆಗಿದ್ದ ಅಮೂಲ್ಯ ಪಟ್ನಾಯಕ್ಗೆ ಪತ್ರ ಬರೆದಿದ್ದರು. ಪತ್ರದಲ್ಲಿ, “ವೀಡಿಯೊ ವಿಷಯವು ಸ್ವಯಂ ವಿವರಣಾತ್ಮಕವಾಗಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯನ್ನು ಉಲ್ಲಂಘಿಸುತ್ತದೆ. ದ್ವೇಷ ಕಾರುವ ವಿಡಿಯೊ ಜನರನ್ನು ದಾಳಿ ಮಾಡಲು ಪ್ರೇರೇಪಿಸುತ್ತದೆ” ಎಂದು ಉಲ್ಲೇಖಿಸಿದ್ದರು.
ಇದನ್ನೂ ಓದಿ: 3 ತಿಂಗಳ ‘ಮೊಬೈಲ್ ಜರ್ನಲಿಸಂ’ ಕೋರ್ಸ್: ಅರ್ನಾಬ್ ಹಾದಿಯಲ್ಲಿ ಕಪಿಲ್ ಮಿಶ್ರಾ!
ಈ ಪತ್ರ 2019 ಫೆಬ್ರವರಿ 26 ರಂದು ವ್ಯಾಪಕವಾಗಿ ಹರಿದಾಡಿದ ನಂತರ ಅವರನ್ನು ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದರು.
ಸರ್ಕಾರದ ಲೆಟರ್ಹೆಡ್ ಅನ್ನು ದುರುಪಯೋಗಪಡಿಸಿಕೊಂಡು ಅಂದಿನ ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಪತ್ರ ಬರೆದಿದ್ದಕ್ಕಾಗಿ ದೂರಸಂಪರ್ಕ ಇಲಾಖೆಯು ಆಶಿಶ್ ಜೋಶಿಯನ್ನು ಅಮಾನತುಗೊಳಿಸಿತ್ತು ಹಾಗೂ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಕ್ಕಾಗಿ ಇಲಾಖೆಯು ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಕಪಿಲ್ ಮಿಶ್ರಾ ಕೊನೆಗೆ ಎಎಪಿ ತೊರೆದು ಬಿಜೆಪಿಯನ್ನು ಸೇರಿದ್ದರು. ಇದರ ನಂತರ ಅವರು ವಿವಾದಾತ್ಮಕ ಹೇಳಿಕೆ ನೀಡುವುದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 2020 ರಲ್ಲಿ ಈಶಾನ್ಯ ದೆಹಲಿಯ ಮೌಜ್ಪುರದಲ್ಲಿ ಕೋಮು ಹಿಂಸಾಚಾರ ಭುಗಿಲೇಳುವ ಮುನ್ನ ಅವರು ಮಾಡಿದ ಭಾಷಣದಿಂದಾಗಿ ಫೆಬ್ರವರಿಯಲ್ಲಿ ಕೋಮುಗಲಭೆ ಭುಗಿಲೆದ್ದತ್ತು ಎಂದು ಆರೋಪಿಸಲಾಗಿದೆ. ಇಡೀ ಗಲಭೆಯನ್ನು ಅವರೇ ಪ್ರಚೋದಿಸಿದ್ದರು ಎಂಬ ಆರೋಪ ಕೂಡಾ ಅವರ ಮೇಲಿದೆ.
ಇದನ್ನೂ ಓದಿ: ಆಪ್ ಮುಖಂಡರ ಮೇಲೆ ಆರೋಪ: ಬೇಷರತ್ ಕ್ಷಮೆ ಕೇಳಿದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ