ಇತ್ತೀಚೆಗೆ ಕರ್ನಾಟಕದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು, “ತಾಲಿಬಾನ್ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುತ್ತಿದೆ” ಎಂದು ಹೇಳಿದರೆ, ಮಧ್ಯಪ್ರದೇಶದ ಬಿಜೆಪಿ ನಾಯಕ ರಾಮ್ ರತನ್ ಪಯಾಲ್, “ನಿಮಗೆ ಕಡಿಮೆ ಬೆಲೆಯ ಪೆಟ್ರೋಲ್, ಡೀಸೆಲ್ ಬೇಕಾದರೆ ಅಫ್ಘಾನಿಸ್ತಾನಕ್ಕೆ ಹೋಗಿ” ಎಂದಿದ್ದರು.
“ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ (ಗ್ಯಾಸ್, ಡೀಸೆಲ್, ಪೆಟ್ರೋಲ್) ಬೆಲೆ ನಿರಂತರ ಏರುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ 50 ರೂ ಏರಿಕೆ ಕಂಡಿದೆ. ಯಾರಾದರೂ ನಾಗರಿಕರು ಪ್ರಶ್ನಿಸಿದರೆ, ’ನೀನು ಅಫ್ಘಾನಿಸ್ತಾನಕ್ಕೆ ಹೋಗು. ಆ ದೇಶ ಚೆನ್ನಾಗಿದೆ’ ಎನ್ನುವುದು ಶುರುವಾಗಿದೆ. ಇದಕ್ಕಿಂತ ಮೊದಲು ಸರ್ಕಾರವನ್ನು ಪ್ರಶ್ನಿಸಿದರೆ, ’ಪಾಕಿಸ್ತಾನಕ್ಕೆ ಹೋಗು, ನೀನು ದೇಶದ್ರೋಹಿ ಎನ್ನುತ್ತಿದ್ದರು. ಈಗ ತಾಲಿಬಾನ್ ಅಧಿಕಾರ ಹಿಡಿದುಕೊಂಡಿದ್ದಾರೆ. ತಾಲಿಬಾನ್ಗೂ ಭಾರತಕ್ಕೂ ಯಾವ ಸಂಬಂಧಗಳಿವೆ, ತಾಲಿಬಾನ್ ಕುರಿತು ನಮ್ಮ ಒಕ್ಕೂಟ ಸರ್ಕಾರದ ನಿಲುವೇನು ಎಂಬುದು ಸಾಮಾನ್ಯ ಜನರಿಗೆ ತಿಳಿಯದು. ಆದರೂ ತಾಲಿಬಾನ್ ಹೆಸರನ್ನು ಮುಂದೊಡ್ಡಿ, ಪ್ರಶ್ನಿಸುವವರ ಬಾಯಿ ಮುಚ್ಚಿಸಲಾಗುತ್ತಿದೆ…”
ಇದು ಕತ್ರಿಗುಪ್ಪೆಯ ನಿವಾಸಿ ಪುರುಷೋತ್ತಮ್ ಅವರೊಬ್ಬರ ಹೇಳಿಕೆಯಲ್ಲ. ಬೆಲೆ ಏರಿಕೆಯನ್ನು ಪ್ರಶ್ನಿಸಿದ ಪ್ರತಿಯೊಬ್ಬರೂ ಟ್ರಾಲ್ ಪಡೆಯಿಂದ ಎದುರಿಸಬೇಕಾದ ಮೂದಲಿಕೆ ಅದು. ಹೋಗಲಿ ಬಿಡಿ, ಟ್ರಾಲ್ ಪಡೆಯ ವಾದವನ್ನು ಮನ್ನಿಸಿಯೇ ಮುನ್ನಡೆಯೋಣವೆಂದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲದಾಗಿದೆಯೆಲ್ಲ!
ಅಡುಗೆ ಅನಿಲದ ಬೆಲೆಯನ್ನೇ ನೋಡಿ. 2014ರಲ್ಲಿ 14.2 ಕೆ.ಜಿ. ಸಿಲಿಂಡರ್ ಸಬ್ಸಿಡಿ ಅಡುಗೆ ಅನಿಲ ದರ 410 ರೂ. ಇದ್ದದ್ದು, ಈಗ ಸದ್ಯದ ಆಡಳಿತದಲ್ಲಿ 882 ರೂಗಳಾಗಿದೆ. ಅಂದರೆ ಸುಮಾರು ಶೇ. 116ರಷ್ಟು ದರ ಏರಿಕೆಯಾಗಿದೆ. ಕಳೆದ ಒಂದೇ ತಿಂಗಳಿನಲ್ಲಿ 50 ರೂ ಹೆಚ್ಚಾದರೆ, ಕಳೆದ 9 ತಿಂಗಳಲ್ಲಿ 190 ರೂ ಹೆಚ್ಚಾಗಿದೆ. ಆದರೆ ಬಿಜೆಪಿ ನಾಯಕರು, 2014ಕ್ಕೆ ಹೋಲಿಸಿದರೆ ಈಗಿನ ಅನಿಲ ದರ ಕಡಿಮೆ ಇದೆ, ಆಗ 1241 ರೂ ಇತ್ತೆಂದು ಅರ್ಧ ಸುಳ್ಳು ಹೇಳುತ್ತಿದ್ದಾರೆ. ಆಗ 1241 ರೂ ಇದ್ದಿದ್ದು ಸಬ್ಸಿಡಿ ರಹಿತ ಗ್ಯಾಸ್ ಬೆಲೆ. ಸಬ್ಸಿಡಿ ಗ್ಯಾಸ್ ಬೆಲೆ ಆಗ 410 ರೂ ಇತ್ತು. ಆದರೆ ಈಗ ಸಬ್ಸಿಡಿ ಸಹಿತ ಬೆಲೆ 880 ರೂ.ಗಳನ್ನು ದಾಟಿರುವುದು ಹೇಗೆ ಎಂಬುದಕ್ಕೆ ಸರ್ಕಾರ ಉತ್ತರ ಕೊಡುವುದಿಲ್ಲ. 2020ರ ನಂತರ ಸಬ್ಸಿಡಿ ಹಣವೂ ಸಮರ್ಪಕವಾಗಿ ಜನರಿಗೆ ಬಂದಿಲ್ಲ ಎಂದು ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವರದಿ ಮಾಡಿವೆ.
ಕಳೆದ 10 ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಎಲ್ಪಿಜಿ ದರ ಬದಲಾಗಿರುವುದು

“26 ಮಿಲಿಯನ್ ಮೆಟ್ರಿಕ್ ಟನ್ನಷ್ಟು ದೇಶಕ್ಕೆ ಅಡುಗೆ ಅನಿಲ ಬೇಕು. ಅದರಲ್ಲಿ ಶೇ.50ರಷ್ಟನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ. ನಿರಂತರವಾಗಿ ಸಿಗಬಲ್ಲ 400 ಶತಕೋಟಿ ಮೆಟ್ರಿಕ್ ಟನ್ನಷ್ಟು ಅನಿಲದ ದಾಸ್ತಾನು ದೇಶದಲ್ಲಿ ಪತ್ತೆಯಾಗಿವೆ. ಅದನ್ನು ಹೊರತೆಗೆದು ಬಳಸಿದರೆ ಆಮದು ಮೇಲಿನ ಅವಲಂಬನೆ ಸಂಪೂರ್ಣವಾಗಿ ತಪ್ಪಲಿದೆ. ಅಂತಾರಾಷ್ಟ್ರೀಯ ಅನಿಲ ಸಮುಚ್ಛಯಗಳಲ್ಲಿ ಇರುವ ದರ ಪರಿಗಣಿಸಿ, ಡಾಲರ್ ರೂಪಾಯಿಯ ವಿನಿಮಯ ದರದ ಆಧಾರದಲ್ಲಿ ಅನಿಲ ದರ ನಿಗದಿ ಮಾಡಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಅಂತಾರಾಷ್ಟ್ರೀಯ ಅನಿಲ ದರದಲ್ಲಿ ಮತ್ತು ಡಾಲರ್ – ರೂಪಾಯಿ ವಿನಿಮಯದಲ್ಲಿ ದೊಡ್ಡಮಟ್ಟದ ಏರುಪೇರು ಕಂಡು ಬಂದಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಿಲ ದರ ಶೇ.25%ರಷ್ಟು ಕುಸಿದಿದೆ. ಅನಿಲ ಉತ್ಪಾದನೆಗೆ ಬೇಕಾದ ರಾಸಾಯನಿಕಗಳನ್ನು ದೊಡ್ಡ ಮಟ್ಟದಲ್ಲಿ ಆಮದು ಮಾಡುವ ಸೌದಿಯ ಅರಾಮ್ಕೋ ಕಂಪನಿ ನಿಗದಿ ಮಾಡಿರುವ ಬೆಲೆಯೂ ಕಡಿಮೆ ಇದೆ. ಶೇ.30ರಷ್ಟು ದರ ಜಿಗಿತ ಒಂದೇ ವರ್ಷದಲ್ಲಿ ಆಗುವಂತಹ ಯಾವುದೇ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿಲ್ಲ. ಖಾಸಗಿ ಸಂಸ್ಥೆಗಳು ಅನಿಲ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟಿರುವುದೇ ಇಷ್ಟು ಮಟ್ಟದ ಬೆಲೆ ಏರಿಕೆಗೆ ಕಾರಣ” ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರಾದ ಶಿವಸುಂದರ್.
ಅಡುಗೆ ಅನಿಲ ದರ ಏರಿಕೆ ಒಂದು ಸಮಸ್ಯೆಯಾದರೆ ಅಡುಗೆ ಎಣ್ಣೆಯ ದರವನ್ನೂ ನಿರಂತರವಾಗಿ ಏರಿಸುತ್ತಿರುವುದರಿಂದ ಜನಸಾಮಾನ್ಯರು ಜೀವನ ಸಾಗಿಸುವುದು ದುಬಾರಿಯಾಗಿದೆ.
ಬೇರೆ ಬೇರೆ ಗುಣಮಟ್ಟದ ಅಡುಗೆ ಎಣ್ಣೆಗಳು ಮಾರುಕಟ್ಟೆಯಲ್ಲಿದ್ದು, ಕೆಲವು ತಿಂಗಳಿಂದ ಅಡುಗೆ ಎಣ್ಣೆಯ ದರ ನಿರಂತರ ಏರಿಕೆಯಾಗುತ್ತಲೇ ಇದೆ. ಕಡಿಮೆ ಗುಣಮಟ್ಟದ ಅಡುಗೆ ಎಣ್ಣೆ ಲೀಟರ್ 85 ರೂ.ಗಳಿಂದ ರೂ.90ರವರೆಗೆ ಸಿಗುತ್ತಿತ್ತು. ಬೆಲೆ ಏರಿಕೆಯಿಂದಾಗಿ ಆಗಸ್ಟ್ ವೇಳೆಗೆ ಅದು 140 ರೂ. ಆಗಿತ್ತು. ಸೆಪ್ಟೆಂಬರ್ ವೇಳೆಗೆ 10 ರೂ. ಏರಿಕೆ ಮಾಡಲಾಗಿದ್ದು, ಈಗ 150 ರೂ. ಆಗಿದೆ. ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ, 140ರಿಂದ 150 ರೂ.ಗಳಿಗೆ ದೊರಕುತ್ತಿತ್ತು. ಈಗ 220 ರೂಗಳಿಂದ 230 ರೂವರೆಗೂ ಏರಿಕೆ ಕಂಡಿದೆ. ಇದರ ಜೊತೆಗೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನರು ಪರಿಹಾರ ಕಾಣದೆ ಕೈಚೆಲ್ಲಿ ಕೂರುವಂತಾಗಿದೆ.

“ಜನಗಳು ಬದಲಾದರೆ ಮಾತ್ರ ರಾಜಕಾರಣಿಗಳು ಬುದ್ಧಿ ಕಲಿಯುತ್ತಾರೆ. ಸರ್ಕಾರದ ವಕ್ತಾರರ ಮಾತುಗಳನ್ನು ಹಾಗೂ ಟ್ರಾಲ್ ಮತ್ತು ಐಟಿ ಸೇನೆಯ ಮಾತುಗಳನ್ನು ಅಮಾಯಕರು ಓದಿ, ಈ ಮುಖಂಡರು ಹೇಳಿದ್ದೇ ಸರಿ ಎಂದು ಭಾವಿಸುತ್ತಾರೆ. ತಾಲಿಬಾನ್ ಹೆಸರಲ್ಲಿ ಜನರು ಕಿತ್ತಾಡುತ್ತಿದ್ದರೆ ಅದು ಆಡಳಿತ ನಡೆಸುವವರಿಗೆ
ಲಾಭವಾಗುತ್ತಿದೆ. ಜನರು ಮಾತ್ರ ಎಂದಿನ ಬವಣೆಯಲ್ಲಿಯೇ ಇದ್ದಾರೆ” ಎಂದು ಕತ್ರಿಗುಪ್ಪೆಯ ಪುರುಷೋತ್ತಮ್ ಗಂಭೀರವಾಗಿ ಹೇಳುತ್ತಾರೆ.
ಇನ್ನಾದರೂ ಆಳುವ ಸರ್ಕಾರಗಳು ಜನರನ್ನು ಭಾದಿಸುತ್ತಿರುವ ಬೆಲೆ ಏರಿಕೆಯ ಬಗ್ಗೆ ಗಮನ ಹರಿಸುವರೇ?
ಇದನ್ನೂ ಓದಿ: ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣವಲ್ಲ, ಬಹಿರಂಗ ಚರ್ಚೆಗೆ ನಾವು ಸಿದ್ಧ: ಉಗ್ರಪ್ಪ ಸವಾಲು


